Advertisement

ಅಗಲಿದ ಹಿರಿಯ ವಿದ್ವಾಂಸ ಗೋಪಾಲಕೃಷ್ಣ ಅಯ್ಯರ್‌

07:02 PM Jan 24, 2020 | mahesh |

ದಶಕಗಳ ಕಾಲ ಶುದ್ಧ ಶೈಲಿಯ ಕರ್ನಾಟಕ ಶಾಸ್ತ್ರೀಯ ಸಂಗೀತದ ವಿದ್ವಾಂಸರಾಗಿದ್ದ, ಮಂಗಳೂರು ಕೊಡಿಯಾಲಬೈಲಿನ ಕಲಾನಿಕೇತನದ ಬೆನ್ನೆಲುಬಾಗಿದ್ದ ವಿ| ಗೋಪಾಲಕೃಷ್ಣ ಅಯ್ಯರ್‌ ಇತ್ತೀಚೆಗೆ ಇಹಲೋಕ ತ್ಯಜಿಸಿದರು. ಅಂತರರಾಷ್ಟ್ರೀಯ ಖ್ಯಾತಿ ಪಡೆದವರೂ ಸೇರಿದಂತೆ ಸಾವಿರಾರು ಶಿಷ್ಯರನ್ನು ತಯಾರು ಮಾಡಿದ ಅವರು ಮಾತ್ರ ಕೊನೆವರೆಗೂ ಎಲೆಮರೆಯ ಹಣ್ಣಾಗಿಯೇ ಉಳಿದವರು.

Advertisement

ಕೇರಳದ ತ್ರಿಪುಣಿತ್ತುರದ ತಮಿಳು ಕುಟುಂಬದಲ್ಲಿ ಜನಿಸಿದ ಅವರು ಸಂಗೀತ ಶಿಕ್ಷಣ ಪಡೆದದ್ದು ತನ್ನ ತಂದೆ ಮತ್ತು ಸೋದರಮಾವ ವಿಶ್ವನಾಥ ಅಯ್ಯರ್‌ ಅವರಿಂದ. ಗೋಪಾಲಕೃಷ್ಣ ಅಯ್ಯರ್‌ ಮೂಲತಃ ವೇಣುವಾದಕರಾದರೂ ಅಷ್ಟೇ ಪ್ರಾವೀಣ್ಯವನ್ನು ಹಾಡುಗಾರಿಕೆಯಲ್ಲೂ ಹೊಂದಿದ್ದವರು. ಹೀಗಾಗಿ ಕೊಳಲು, ಹಾಡುಗಾರಿಕೆ ಎರಡನ್ನೂ ಅವರು ಕಲಾನಿಕೇತನದಲ್ಲಿ ಕಲಿಸುತ್ತಿದ್ದರು. ವಿದ್ಯಾರ್ಥಿಗಳಿಗೆ ಅವರು ಸ್ವಂತ ಕೈಬರಹದಲ್ಲಿ ಅಚ್ಚುಕಟ್ಟಾದ ಕನ್ನಡ ಸ್ವರಲಿಪಿ ಬಳಸಿ ಪಾಠಗಳನ್ನು ಬರೆದು ಕೊಡುತ್ತಿದ್ದರು. ಸಾಹಿತ್ಯ, ತಾಳ, ಕಾಲ, ಸ್ಥಾಯಿ ಎಲ್ಲವನ್ನೂ ಕರಾರುವಾಕ್ಕಾಗಿ ಹೊಂದಿರುತ್ತಿದ್ದ ಸ್ವರಲಿಪಿಯಿಂದಾಗಿ ಅಭ್ಯಾಸ ಮಾಡುವಾಗ ಪಾಠಗಳು ಟೇಪ್‌ ರೆಕಾರ್ಡರಿನಿಂದ ಹೊಮ್ಮಿದಂತೆ ಯಥಾವತ್ತಾಗಿ ಮೂಡಿಬರುತ್ತಿದ್ದವು. ಎಷ್ಟೇ ವಿದ್ಯಾರ್ಥಿಗಳಿದ್ದರೂ ಅವರವರ ಕಲಿಕೆಯ ಹಂತಕ್ಕೆ ಹೊಂದಿಕೊಂಡು ಬೇರೆ ಬೇರೆಯಾಗಿಯೇ ಹೇಳಿ ಕೊಡುವುದು ಅವರ ಪದ್ಧತಿಯಾಗಿತ್ತು.

ಏಸುದಾಸ್‌ ಮಂಗಳೂರಿನಲ್ಲಿ ಕಾರ್ಯಕ್ರಮ ನೀಡಲು ಬಂದರೆ ತಪ್ಪದೆ ಅಯ್ಯರ್‌ ಅವರನ್ನು ಭೇಟಿಯಾಗುತ್ತಿದ್ದರು. ಒಂದು ಸಲ ಕಚೇರಿ ನಡೆಸುವಾಗ ತಾಳ ತೋರಿಸಲು ಪಕ್ಕದಲ್ಲಿ ಕುಳ್ಳಿರಿಸಿಕೊಂಡಿದ್ದರು.

ಗೋಪಾಲಕೃಷ್ಣ ಅಯ್ಯರ್‌ ಆಕಾಶವಾಣಿಯ ಗ್ರೇಡೆಡ್‌ ಕಲಾವಿದರಾಗಿದ್ದು ಕಲ್ಲಿಕೋಟೆ ನಿಲಯದಿಂದ ನಿಯಮಿತವಾಗಿ ಅವರ ವೇಣುವಾದನ ಪ್ರಸಾರವಾಗುತ್ತಿತ್ತು. 1976ರಲ್ಲಿ ಮಂಗಳೂರು ನಿಲಯ ಆರಂಭವಾದ ಮೇಲೆ ಇಲ್ಲಿಂದ ಕಾರ್ಯಕ್ರಮ ನೀಡಲಾರಂಭಿಸಿದರು.

ದೈಹಿಕವಾಗಿ ಸದೃಢವಾಗಿಯೇ ಇದ್ದರೂ ಈಚಿನ ದಿನಗಳಲ್ಲಿ ಅವರ ಗ್ರಹಣ ಶಕ್ತಿ ತುಂಬಾ ಕಮ್ಮಿಯಾಗಿತ್ತು. ಎಂದೂ ಪ್ರಶಸ್ತಿಗಳ, ಬಿರುದುಗಳ ಬೆನ್ನತ್ತಿ ಹೋಗದಿದ್ದ ಅವರು ಸಹಸ್ರಾರು ಶಿಷ್ಯರ, ಅಭಿಮಾನಿಗಳ ಮನದಲ್ಲಿ ಸದಾ ನೆಲೆಸಿರುತ್ತಾರೆ.

Advertisement

ಚಿದಂಬರ ಕಾಕತ್ಕರ್‌, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next