Advertisement

2 ಸಾವಿರ ರೂ. ಮರಳಿ ಕೇಳಿದ್ದಕ್ಕೆ ಹತ್ಯೆಗೈದ ಸ್ನೇಹಿತ

03:19 PM Aug 03, 2021 | Team Udayavani |

ಬೆಳಗಾವಿ: ಸಾಲ ನೀಡಿದ್ದ ಎರಡು ಸಾವಿರ ರೂ. ಮನೆಗೆ ಬಂದು ಮರಳಿ ಕೇಳಿದ್ದಕ್ಕೆ ಜೊತೆಗಾರನನ್ನೇ ಕುತ್ತಿಗೆ ಕೊಯ್ದು ಕೊಲೆ ಮಾಡಿರುವ ಘಟನೆ ಇಲ್ಲಿನ ವಡಗಾವಿ ಕ್ರಾಸ್‌ ಬಳಿ ಸೋಮವಾರ ಬೆಳ್ಳಂಬೆಳಗ್ಗೆ ನಡೆದಿದ್ದು, ಕೊಲೆಗೈದವನನ್ನು ಒಂದೇ ಗಂಟೆಯಲ್ಲಿ ಪೊಲೀಸರು ಬಂಧಿಸಿದ್ದಾರೆ.

Advertisement

ಅಂಬೇವಾಡಿ ಗ್ರಾಮದ ಭಾರತ ನಗರದ ಮಹಾದೇವ ಮಾರುತಿ ಜಾಧವ(50) ಎಂಬಾತ ಕೊಲೆಗೀಡಾದವ. ಕೊಲೆಗೈದಿರುವ ವಡಗಾಂವಿ ನಾಜರ್‌ ಕ್ಯಾಂಪ್‌ ನಿವಾಸಿ ಸೂರಜ ಪುಂಡಲೀಕ ಕೇದಾರಿಚೆ(35) ಎಂಬಾತನನ್ನು ಶಹಾಪುರ ಪೊಲೀಸರು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.

ಈ ಇಬ್ಬರೂ ಒಂದೇ ಕಡೆಗೆ ಗಾರೆ ಕೆಲಸ ಮಾಡುತ್ತಿದ್ದರು. ಕೆಲ ದಿನಗಳ ಹಿಂದೆ ಮಹಾದೇವ ಜಾಧವ ಬಳಿ ಸೂರಜ್‌ ಕೇದಾರಿಚೆ 2 ಸಾವಿರ ರೂ. ಸಾಲ ಪಡೆದುಕೊಂಡಿದ್ದನು. ಪದೇ ಪದೇ ಹಣ ಕೇಳಿದರೂ ಸೂರಜ ಕೊಟ್ಟಿರಲಿಲ್ಲ. ಸೋಮವಾರ ಬೆಳಗ್ಗೆ ಸೂರಜನ ಮನೆಗೆ ಹೋಗಿದ್ದ ಮಹಾದೇವ ಹಣ ಕೊಡುವಂತೆ ಕೇಳಿದ್ದಾನೆ. ನಂತರ ಇಬ್ಬರೂ ಒಂದು ಕಡೆ ಸಾರಾಯಿ ಕುಡಿದು ನಜರ್‌ ಕ್ಯಾಂಪ್‌ನತ್ತ ಹೊರಟಿದ್ದಾರೆ. ಮನೆಗೆ ಬಂದು ಹಣ ಕೇಳಿದ್ದಕ್ಕೆ ಸೂರಜ ಕುಪಿತಗೊಂಡಿದ್ದನು. ಇಬ್ಬರ ಮಧ್ಯೆಯೂ ಮತ್ತೆ ಜಗಳವಾಗಿದೆ. ಆಗ ಸೂರಜ್‌ ತನ್ನ ಬಳಿ ಇದ್ದ ರೆಡಿಯಮ್‌ ಕಟರ್‌ನಿಂದ ಮಹಾದೇವನ ಕುತ್ತಿಗೆಗೆ ಹೊಡೆದಾಗ ರಕ್ತಸ್ರಾವವಾಗಿ ಅಲ್ಲಿಯೇ ಕುಸಿದು ಬಿದ್ದಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದ ಮಹಾದೇವ ಸ್ಥಳದಲ್ಲಿಯೇ ಪ್ರಾಣ ಬಿಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೊಲೆಗೈದ ಸೂರಜ ಅಲ್ಲಿಂದ ಪರಾರಿಯಾಗಿದ್ದಾನೆ. ಕೂಡಲೇ ಶಹಾಪುರ ಇನ್ಸಪೆಕ್ಟರ್‌ ರಾಘವೇಂದ್ರ ಹವಾಲ್ದಾರ ಹಾಗೂ ಸಿಬ್ಬಂದಿ ಎಚ್ಚೆತ್ತುಕೊಂಡು ಆರೋಪಿಯನ್ನು ಕೇವಲ ಒಂದು ಗಂಟೆಯಲ್ಲಿಯೇ ಬಂಧಿಸಿದ್ದಾರೆ. ಈ ಕುರಿತು ಶಹಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next