Advertisement

ಕಾಂಗ್ರೆಸ್‌ ಗಿಮಿಕ್‌ಗಳನ್ನು ಜನ ನಂಬಲ್ಲ​​​​​​​

06:15 AM Apr 17, 2018 | |

ಬೆಂಗಳೂರು: ಸುದೀರ್ಘ‌ 60 ವರ್ಷ ಆಡಳಿತ ನಡೆಸಿರುವ ಕಾಂಗ್ರೆಸ್‌ ರಾಜ್ಯದಲ್ಲಿ ನಾಲ್ಕೂವರೆ ವರ್ಷ ಸುಮ್ಮನಿದ್ದು, ನಂತರ ಕನ್ನಡ ಧ್ವಜ, ಲಿಂಗಾಯತ ವೀರಶೈವ ಪ್ರತ್ಯೇಕ ಧರ್ಮ ವಿಚಾರ ಪ್ರಸ್ತಾಪಿಸಿದೆ. ಆದರೆ,  ಈ ವಿಚಾರಗಳು ಜನರಲ್ಲಿ ವಿಶ್ವಾಸಾರ್ಹತೆ ಮೂಡುವುದಿಲ್ಲ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಮುರಳೀಧರರಾವ್‌ ಹೇಳಿದರು.

Advertisement

ಬೆಂಗಳೂರು ಪ್ರಸ್‌ಕ್ಲಬ್‌ ಹಾಗೂ ವರದಿಗಾರರ ಕೂಟ ಸೋಮವಾರ ಹಮ್ಮಿಕೊಂಡಿದ್ದ ಸಂವಾದದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ  ಈ ಬಾರಿಯ ಚುನಾವಣೆಯನ್ನು ಬಿಜೆಪಿ ಕಾಂಗ್ರೆಸ್‌ ಸರ್ಕಾರದ ಕಾರ್ಯವೈಖರಿ, ವೈಫ‌ಲ್ಯಗಳ ಆಧಾರದ ಮೇಲೆ ಎದುರಿಸಲಿದೆ ಎಂದು ತಿಳಿಸಿದರು.

ಕಳೆದ ಕೆಲ ವರ್ಷಗಳಲ್ಲಿ ನಡೆದ ಚುನಾವಣೆಗಳಲ್ಲಿ ಬಿಜೆಪಿಯು ಕಾಂಗ್ರೆಸ್‌ ಪಕ್ಷವನ್ನು ಮಣಿಸಿದ್ದು, ಬಿಜೆಪಿ ಸರ್ಕಾರಗಳು ರಚನೆಯಾಗಿವೆ. ಕರ್ನಾಟಕದಲ್ಲಿ ಆಡಳಿತ ವಿರೋಧಿ ಅಲೆ ಇದೆ. ರಾಜ್ಯ ಸರ್ಕಾರದ ವೈಫ‌ಲ್ಯಗಳ ಬಗ್ಗೆ ಈಗಾಗಲೇ ಚಾರ್ಜ್‌ಶೀಟ್‌ ಬಿಡುಗಡೆ ಮಾಡಿ ವೈಫ‌ಲ್ಯಗಳನ್ನು ಜನತೆಗೆ ತಿಳಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ತಿಳಿಸಿದರು.

ಪ್ರಮುಖ ಕ್ಷೇತ್ರಗಳಲ್ಲಿ ವೈಫ‌ಲ್ಯ
ಕಾಂಗ್ರೆಸ್‌ ಸರ್ಕಾರ ಪ್ರಮುಖವಾಗಿ ಕೃಷಿ ಹಾಗೂ ರೈತರ ಸಂಕಷ್ಟ ನಿವಾರಿಸುವಲ್ಲಿ ವಿಫ‌ಲವಾಗಿದೆ. ಕರ್ನಾಟಕ ಹಿಂದೆಂದೂ ಕಾಣದಷ್ಟರ ಮಟ್ಟಿಗೆ ಕಾನೂನು ಮತ್ತು ಸುವ್ಯವಸ್ಥೆ ಹಾಳಾಗಿದೆ. ಮತಬ್ಯಾಂಕ್‌ ರಾಜಕಾರಣವನ್ನೇ ಮುಂದುವರಿಸಿರುವ ಕಾಂಗ್ರೆಸ್‌ ರಾಷ್ಟ್ರ ವಿರೋಧಿ ಸಂಘಟನೆಗಳಾದ ಎಸ್‌ಡಿಪಿಐ, ಪಿಎಫ್ಐ ಸಂಸ್ಥೆಗಳೊಂದಿಗೆ ಮಾತುಕತೆ ನಡೆಸುತ್ತದೆ. ಕಾಂಗ್ರೆಸ್‌ ಆಡಳಿತಾವಧಿಯಲ್ಲಿ ಭ್ರಷ್ಟಾಚಾರ ಮೇರೆ ಮೀರಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಮಗೆ ಎರಡು ಅನುಕೂಲ
ಪ್ರಧಾನಿ ನರೇಂದ್ರ ಮೋದಿ ಅವರು ಕಾರ್ಯವೈಖರಿ ಹಾಗೂ ಭ್ರಷ್ಟಾಚಾರಮುಕ್ತ ಆಡಳಿತ ಜನ ಮೆಚ್ಚುಗೆಗೆ ಪಾತ್ರವಾಗಿದೆ. ಜತೆಗೆ ಯಡಿಯೂರಪ್ಪನವರು ರಾಜ್ಯದ ಪ್ರಭಾವಿ ನಾಯಕರಾಗಿದ್ದು, ಅವರ ಹೋರಾಟ, ಸಂಘಟನೆಯು ಪಕ್ಷದ ಗೆಲುವಿಗೆ ಅನುಕೂಲವಾಗಲಿದೆ ಎಂದು ಹೇಳಿದರು.

Advertisement

ಲಕ್ಷಾಂತರ ಜನರ ಅಭಿಪ್ರಾಯ, ಸಲಹೆ ಪಡೆದು ಪ್ರಣಾಳಿಕೆ ಸಿದ್ಧವಾಗುತ್ತಿದೆ. ಮುಖ್ಯವಾಗಿ ರಾಜ್ಯದಲ್ಲಿ ಸಮರ್ಪಕವಾಗಿ ಜಾರಿಯಾಗದ ಕೇಂದ್ರ ಸರ್ಕಾರದ ಜನಪ್ರಿಯ ಕಲ್ಯಾಣ ಕಾರ್ಯಕ್ರಮಗಳಿಗೆ ಒತ್ತು ನೀಡಲಾಗುವುದು. ಕನ್ನಡ, ಸಂಸ್ಕೃತಿ, ಪ್ರವಾಸೋದ್ಯಮಕ್ಕೂ ಆದ್ಯತೆ ನೀಡಿ ಸಂಸ್ಕೃತಿ ಮೂಲಕವೇ ಜನರ ಸಮಸ್ಯೆಗಳನ್ನು ನಿವಾರಿಸುವ ಪರಿಕಲ್ಪನೆ ರೂಪಿಸಲಾಗುವುದು ಎಂದು ಹೇಳಿದರು.

ಮಠ- ಮಂದಿರಗಳಿಗೆ ಆತಂಕವಿಲ್ಲ
ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರು “ಚುನಾವಣಾ ಹಿಂದು’. ರಾಜ್ಯ ಕಾಂಗ್ರೆಸ್‌ ಸರ್ಕಾರವು ಈ ಹಿಂದೆ ಮಠ, ಮಂದಿರಗಳನ್ನು ಸರ್ಕಾರದ ನಿಯಂತ್ರಣಕ್ಕೆ ಪಡೆಯಲು ಪ್ರಯತ್ನಿಸಿತ್ತು. ಆದರೆ ಬಿಜೆಪಿ ಎಂದಿಗೂ ಮಠ, ಮಂದಿರಗಳನ್ನು ಸರ್ಕಾರದ ನಿಯಂತ್ರಣಕ್ಕೆ ತರುವುದಿಲ್ಲ. ಈ ಬಗ್ಗೆ ಮಠ- ಮಂದಿರಗಳಿಗೆ ಆತಂಕವೂ ಬೇಡ. ಬೆಂಗಳೂರನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವ ಭರವಸೆ ನೀಡಲಾಗುವುದು ಎಂದು ಹೇಳಿದರು.

ರಾಹುಲ್‌ ಗಾಂಧಿಯವರು ಅಭಿವೃದ್ಧಿ ವಿಚಾರ ಚರ್ಚಿಸುವ ಬದಲಿಗೆ ಮೋದಿಯವರ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಕಾಂಗ್ರೆಸ್‌ನ ನಕಾರಾತ್ಮಕ ಪ್ರಚಾರ ಫ‌ಲ ನೀಡುವುದಿಲ್ಲ. “ಭೇಟಿ ಬಚಾವೋ ಭೇಟಿ ಪಡಾವೋ’ ಯೋಜನೆ ಯಶಸ್ವಿಯಾಗಿ ನಡೆದಿದೆ. ಕೆಲ ಸಮೀಕ್ಷೆಗಳಲ್ಲಿ ಬಿಜೆಪಿ ಗಳಿಸಲಿರುವ ಸ್ಥಾನಗಳ ಬಗ್ಗೆ ತಪ್ಪು ಅಂದಾಜು ನಡೆದಿರುವಂತಿದೆ. ಈ ಹಿಂದೆ ಉತ್ತರಪ್ರದೇಶ, ತ್ರಿಪುರಾ ಇತರೆ ವಿಧಾನಸಭೆ ಚುನಾವಣೆಗಳಲ್ಲೂ ಪಕ್ಷದ ಬಗ್ಗೆ ಇದೇ ರೀತಿಯ ತಪ್ಪು ಅಂದಾಜು ನಡೆದಿತ್ತು. ಪಕ್ಷವು ತನ್ನ ಗುರಿ ತಲುಪುವ ಪ್ರಯತ್ನದ ವೇಗವನ್ನು ಹೆಚ್ಚಿಸಿಕೊಂಡು ಕಾರ್ಯಪ್ರವೃತ್ತವಾಗಿದೆ ಎಂದು ಹೇಳಿದರು.

ದೇಶದಲ್ಲಿ 60 ವರ್ಷ ಆಡಳಿತ ನಡೆಸಿದ ಕಾಂಗ್ರೆಸ್‌ ಮಹದಾಯಿ ವಿವಾದ ಬಗೆಹರಿಸಬಹುದಿತ್ತು. ಜಲವಿವಾದಗಳು ಮುಂದೆ ರಾಷ್ಟ್ರ ಮಟ್ಟದಲ್ಲಿ ಮಹತ್ತರ ಚರ್ಚೆಗೆ ಬರಲಿವೆ. ಮಹದಾಯಿ ವಿಚಾರವೂ ಗಂಭೀರವಾಗಿದ್ದು, ಸಮಸ್ಯೆ ಬಗೆಹರಿಸಲು ಬಿಜೆಪಿಯು ಕಾಲಮಿತಿಯ ಪರಿಹಾರ ಹುಡುಕಲಿದೆ. ಅತ್ಯಾಚಾರ ಘಟನೆಗಳು ಎಲ್ಲೆಡೆ ಸಂಭವಿಸುತ್ತಿವೆ. ಇವುಗಳನ್ನು ಹತ್ತಿಕ್ಕುವ ವಿಚಾರದಲ್ಲಿ ಬಿಜೆಪಿ ಬದ್ಧತೆ ಪ್ರದರ್ಶಿಸಿದೆ. ಎಂದಿಗೂ ಇಂತಹ ಕೃತ್ಯಗಳನ್ನು ಸಮರ್ಥಿಸುವ, ಸುಮ್ಮನೆ ಕೂರು ಧೋರಣೆ ತೋರಿಲ್ಲ ಎಂದು ಮುರಳೀಧರರಾವ್‌ ಹೇಳಿದರು.

ಕೊನೆಯ ವಾರ ಮೋದಿ ಪ್ರಚಾರ
ಏಪ್ರಿಲ್‌ ಕೊನೆಯ ವಾರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ರಾಜ್ಯದಲ್ಲಿ ಪ್ರಚಾರದಲ್ಲಿ ಪಾಲ್ಗೊಳ್ಳಲಿದ್ದಾರೆ. ರಾಜ್ಯದ ಹಲವೆಡೆ 15ಕ್ಕೂ ಹೆಚ್ಚು ರ್ಯಾಲಿಗಳನ್ನು ನಡೆಸಲಿದ್ದಾರೆ ಎಂದು ಮುರಳೀಧರರಾವ್‌ ಹೇಳಿದರು.

ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರಿಗೆ ಕರ್ನಾಟಕದಲ್ಲೂ ಸಾಕಷ್ಟು ಹಿಂಬಾಲಕರಿದ್ದಾರೆ. ನಾಥ ಸಂಪ್ರದಾಯದ ಆದಿತ್ಯನಾಥರಿಗೆ ಆದಿಚುಂಚನಗಿರಿ ಮಠ, ಒಕ್ಕಲಿಗರು, ಒಕ್ಕಲಿಗರೇತರ ಹಿಂಬಾಲಕರಿದ್ದಾರೆ. ಅಂತವರ ವಿರುದ್ಧ ಕೆಟ್ಟ ಪದಗಳನ್ನು ಬಳಸುವುದು ಕಾಂಗ್ರೆಸ್‌ಗೆ ಮಾತ್ರ ಸಾಧ್ಯ. ರಾಜಕೀಯವಾಗಿ ವಿರೋಧಿಸಲಿ. ಆದರೆ ಈ ರೀತಿಯ ಪದ ಪ್ರಯೋಗ ಸರಿಯಲ್ಲ. ಇದನ್ನು ಜನರೂ ಒಪ್ಪುವುದಿಲ್ಲ ಎಂದು ಮುರಳೀಧರರಾವ್‌ ಹೇಳಿದರು.

ಬಿಜೆಪಿಯಲ್ಲಿ ಉಪ ಮುಖ್ಯಮಂತ್ರಿ ಪ್ರಸ್ತಾವ ಇಲ್ಲ
ಬಿಜೆಪಿ ಅಧಿಕಾರಕ್ಕೆ ಬಂದರೆ ಶ್ರೀರಾಮುಲು ಉಪ ಮುಖ್ಯಮಂತ್ರಿಯಾಗಲಿದ್ದಾರೆ ಎಂಬ ಮಾತುಗಳ ಬೆನ್ನಲ್ಲೇ ಸದ್ಯಕ್ಕೆ ಬಿಜೆಪಿಯಲ್ಲಿ ಉಪ ಮುಖ್ಯಮಂತ್ರಿ ವಿಚಾರದ ಪ್ರಸ್ತಾಪ ಸದ್ಯಕ್ಕಿಲ್ಲ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರ್‌ರಾವ್‌ ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರು ಪ್ರಸ್‌ಕ್ಲಬ್‌ ಹಾಗೂ ಬೆಂಗಳೂರು ವರದಿಗಾರರ ಕೂಟ ಜಂಟಿಯಾಗಿ ಆಯೋಜಿಸಿದ್ದ ಪತ್ರಿಕಾ ಸಂವಾದದಲ್ಲಿ ಪಾಲ್ಗೊಂಡಿದ್ದ ಅವರು ಶ್ರೀರಾಮುಲುಗೆ ಉಪ ಮುಖ್ಯಮಂತ್ರಿ ನೀಡಲಾಗುವುದಾ ಎಂಬ ಪ್ರಶ್ನೆಗೆ ಉತ್ತರಿಸಿ,  ಉಪ ಮುಖ್ಯಮಂತ್ರಿ ಮಾಡಿ ಎಂಬುದು ಒಳ್ಳೆಯ ಸಲಹೆ ಇರಬಹುದು. ಆದರೆ, ಅಂತಹ ಪ್ರಸ್ತಾಪ ಪಕ್ಷದ ಮುಂದಿಲ್ಲ ಎಂದು ಹೇಳಿದರು.

ಈವರೆಗೆ ಉಪಮುಖ್ಯಮಂತ್ರಿ ಸ್ಥಾನದ ಅಗತ್ಯತೆ ಕಂಡುಬಂದಿಲ್ಲ. ಶ್ರೀರಾಮುಲು ಅವರು ಪ್ರಭಾವಿ ನಾಯಕರು. ಅವರು ಅಭ್ಯರ್ಥಿ ಮಾತ್ರವಲ್ಲದೆ ಸ್ಟಾರ್‌ ಪ್ರಚಾರಕರಾಗಿದ್ದಾರೆ. 15-20 ದಿನ ರಾಜ್ಯಾದ್ಯಂತ ಸಂಚರಿಸಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಲಿದ್ದಾರೆ ಎಂದು ತಿಳಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಂತಿಮವಾಗಿ ಒಂದು ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಈ ಹಿಂದೆ ಎರಡು ಕ್ಷೇತ್ರಗಳಿಂದ ಸ್ಪರ್ಧಿಸಲು ಪ್ರಯತ್ನಿಸಿದ್ದು ಅವರಿಗಿದ್ದ ಸೋಲಿನ ಭೀತಿ ಜಗಜ್ಜಾಹೀರಾಯಿತು. ಸುರಕ್ಷಿತ ಕ್ಷೇತ್ರದ ಹುಡುಕಾಟ ನಡೆಸಿದ್ದು ಬಯಲಾಯಿತು. ಇದರಿಂದ ಸಿದ್ದರಾಮಯ್ಯನವರ ವರ್ಚಸ್ಸು ಕುಂದಿದೆ. ಅವರು ಎಲ್ಲಿಂದ ಸ್ಪರ್ಧಿಸಿದರೂ ಸೋಲಿಸುತ್ತೇವೆ .
– ಮುರಳೀಧರರಾವ್‌

Advertisement

Udayavani is now on Telegram. Click here to join our channel and stay updated with the latest news.

Next