Advertisement

‘ಗುರು’ಡಿಕೆ ಶಿವಕುಮಾರ್ ಗೆ ಚಮಕ್ ಕೊಟ್ಟ ಮುನಿರತ್ನ: ಕೆಲಸ ಮಾಡಿದ ಮುನಿರತ್ನ ‘ಮೌನ’

10:43 AM Nov 11, 2020 | keerthan |

ಬೆಂಗಳೂರು: ರಾಜರಾಜೇಶ್ವರಿ ನಗರ ಉಪಚುನಾವಣೆಯಲ್ಲಿ ಬಿಜೆಪಿ ಕಾಂಗ್ರೆಸ್‌ ನಡುವೆ ನೇರ ಸ್ಪರ್ಧೆ ನಡೆದಂತೆ ಕಂಡರೂ ನಿರೀಕ್ಷೆಯಂತೆ ಬಿಜೆಪಿ ಅಭ್ಯರ್ಥಿ ಮುನಿರತ್ನ ಕಳೆದ ಬಾರಿಗಿಂತಲೂ ಹೆಚ್ಚಿನ ಅಂತರದಿಂದ ಗೆಲುವು ಸಾಧಿಸುವ ಮೂಲಕ ತಮ್ಮ “ಗುರು’ ಡಿ.ಕೆ.ಶಿವಕುಮಾರ್‌ಗೆ ಚೆಕ್‌ ಕೊಟ್ಟಿದ್ದಾರೆ.

Advertisement

ಮುನಿರತ್ನ ಕಾಂಗ್ರೆಸ್‌ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮೈತ್ರಿ ಸರ್ಕಾರ ಪತನಗೊಳ್ಳಲು ಕಾರಣೀಕರ್ತರಾಗಿದ್ದರು. ಅವರ ವಿರುದ್ಧ ಮೂಲ ಬಿಜೆಪಿಗರಲ್ಲಿಯೂ ಅಸಮಾಧಾನವಿತ್ತು. ಮೂಲ ಬಿಜೆಪಿಗರ ಅಸಮಾಧಾನ ಹಾಗೂ ಪಕ್ಷಾಂತರದ ವಿರುದ್ಧ ಜನರ ಮನಸ್ಸು ಗೆಲ್ಲುವಲ್ಲಿ ಕಾಂಗ್ರೆಸ್‌ ನಾಯಕರು ವಿಫ‌ಲರಾಗಿದ್ದಾರೆ.

ರಾಜರಾಜೇಶ್ವರಿ ನಗರದಲ್ಲಿ ಕಾಂಗ್ರೆಸ್‌ ದಿ.ಡಿ.ಕೆ.ರವಿ ಪತ್ನಿ ಕುಸುಮಾರನ್ನು ಅಚ್ಚರಿಯ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿತ್ತು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹಾಗೂ ಸಂಸದ ಡಿ.ಕೆ.ಸುರೇಶ್‌ ಈ ಚುನಾವಣೆಯಲ್ಲಿ ಮುನಿರತ್ನ ವಿರುದ್ಧ ಗೆಲ್ಲಲೇಬೇಕೆಂದು ಪಣ ತೊಟ್ಟು ಇಬ್ಬರೂ ಕಾಲಿಗೆ ಚಕ್ರಕಟ್ಟಿಕೊಂಡು ಕ್ಷೇತ್ರದಲ್ಲಿ ಚುನಾವಣೆ ಎದುರಿಸಿದರು.

ಈ ಚುನಾವಣೆಯಲ್ಲಿ ಡಿ.ಕೆ.ಶಿವಕುಮಾರ್‌ ಜ್ಯೋತಿಷಿ ನಂಬಿ ಮಹಿಳಾ ಅಭ್ಯರ್ಥಿಯನ್ನು ಹಾಕಿ ಗೆಲುವಿನ ಕನಸು ಕಂಡಿದ್ದರು ಎನ್ನಲಾಗಿದೆ. ಆದರೆ, ಬಿಜೆಪಿ ಅಭ್ಯರ್ಥಿ ಮುನಿರತ್ನ ಕಾಂಗ್ರೆಸ್‌ ಅಭ್ಯರ್ಥಿ ಹಾಗೂ ಕಾಂಗ್ರೆಸ್‌ ನಾಯಕರ ವಿರುದ್ಧ ಅನಗತ್ಯ ಹೇಳಿಕೆಗಳನ್ನು ನೀಡದೇ ತಮ್ಮ ಪ್ರಚಾರ ಕಾರ್ಯದಲ್ಲಿ ಅಭಿವೃದ್ಧಿ ಪರ ವಿಷಯಗಳನ್ನು ಮುಂದಿಟ್ಟು ಮತಕೇಳಿ ಜನರ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾದರು.

ಇದನ್ನೂ ಓದಿ:ಬಿಹಾರ ಚುನಾವಣೋತ್ತರ ಸಮೀಕ್ಷೆ ತಲೆಕೆಳಗಾಗಲು ಕಾರಣವೇನು ? ಇಲ್ಲಿದೆ ತಜ್ಞರ ಅಭಿಪ್ರಾಯ

Advertisement

ಕಾಂಗ್ರೆಸ್‌ ಆರಂಭ ದಿಂದಲೂ ಮುನಿರತ್ನ ಅವರು ಅಕ್ರಮ ಮಾಡಿದ್ದಾರೆ. ಎನ್ನುವುದಕ್ಕೆ ಹೆಚ್ಚಿನ ಆದ್ಯತೆ ನೀಡಿ ಅದನ್ನೇ ಪ್ರಚಾರದ ವಸ್ತುವನ್ನಾಗಿ ಮಾಡಿಕೊಂಡಿತು. ಆದರೆ, ಮುನಿರತ್ನ ಅದ್ಯಾವುದಕ್ಕೂ ಹೆಚ್ಚು ತಲೆ ಕೆಡಿಸಿಕೊಳ್ಳದೇ ನೇರವಾಗಿ ಜನರನ್ನು ತಲುಪುವ ಪ್ರಯತ್ನ ನಡೆಸಿದ್ದು, ಅವರನ್ನು ಗೆಲುವಿನ ದಡಕ್ಕೆ ಸೇರಿಸಿದಂತೆ ಕಾಣಿಸುತ್ತದೆ. ಮೂಲ ಬಿಜೆಪಿಗರು ಅಸಮಾಧಾನಗೊಂಡು ದೂರ ಉಳಿದಿದ್ದರೂ, ಆ ಬಗ್ಗೆಯೂ ಹೆಚ್ಚಿನ ತಲೆಕೆಡಿಸಿಕೊಳ್ಳದೇ ತನ್ನದೇ ಆದ ಮತದಾರರನ್ನು ನಂಬಿ ಕೆಲಸ ಮಾಡಿದ್ದು, ಮುನಿರತ್ನರನ್ನು ಜನರು ಕೈ ಹಿಡಿಯುವಂತೆ ಮಾಡಿದೆ.

ಈ ಚುನಾವಣೆಯಲ್ಲಿ ಜೆಡಿಎಸ್‌ ಕೃಷ್ಣಮೂರ್ತಿ ಅವರನ್ನು ಅಭ್ಯರ್ಥಿ ಹಾಕುವ ಮೂಲಕ ಆರಂಭದಲ್ಲಿಯೇ ತ್ರಿಕೋನ ಸ್ಪರ್ಧೆಯಿಂದ ಹಿಂದೆ ಸರಿದ ಸೂಚನೆ ನೀಡಿತ್ತು. ಜೆಡಿಎಸ್‌ನ ಈ ಕಾರ್ಯತಂತ್ರ ಬಿಜೆಪಿಗೆ ವರವಾಗಿ ಪರಿಣಮಿಸಿದಂತೆ ಕಾಣಿಸುತ್ತದೆ. ಅಲ್ಲದೇ ತಮ್ಮ ವಿರುದ್ಧ ಎಷ್ಟೇ ಆರೋಪ ಮಾಡಿದ್ದರೂ ಕಾಂಗ್ರೆಸ್‌ ಅಭ್ಯರ್ಥಿಯ ಬಗ್ಗೆ ಅನಗತ್ಯ ಹಾಗೂ ಅವಮಾನಕರ ಹೇಳಿಕೆಗಳನ್ನು ನೀಡದೇ ಅಂತರ ಕಾಯ್ದುಕೊಂಡಿದ್ದು, ಮುನಿರತ್ನಗೆ ಪ್ಲಸ್‌ ಆದಂತಿದೆ.

ಇದನ್ನೂ ಓದಿ: ಶಿರಾ’ದಲ್ಲಿ ‘ರಾರಾ’ಜಿಸಿದ ಕಮಲ: ಬಿಎಸ್ ವೈ ಮತ್ತಷ್ಟು ಭದ್ರ, ಕೈ ರಣತಂತ್ರ ಛಿದ್ರ

ಡಿ.ಕೆ. ಶಿವಕುಮಾರ್‌ ಕ್ಷೇತ್ರದ ಎಲ್ಲ ಸಮುದಾಯಗಳ ವಿಶ್ವಾಸ ಗಳಿಸುವುದಕ್ಕೆ ಹೆಚ್ಚಿನ ಆದ್ಯತೆ ನೀಡದೇ ಒಕ್ಕಲಿಗ ಸಮುದಾಯವನ್ನೇ ಹೆಚ್ಚಾಗಿ ನಂಬಿಕೊಂಡು ಅದೇ ಸಮುದಾಯದ ಮತಗಳನ್ನು ಒಗ್ಗೂಡಿಸಲು ಹೆಚ್ಚಿನ ಶ್ರಮ ಹಾಕಿದ್ದು, ಇತರ ಸಮುದಾಯಗಳ ಮತಗಳು ಕಾಂಗ್ರೆಸ್‌ಗಿಂತ ಬಿಜೆಪಿ ಕಡೆಗೆ ಹೆಚ್ಚು ಒಲಿಯಲು ಕಾರಣವಾದಂತೆ ಕಾಣಿಸುತ್ತಿದೆ.

ಬಿಜೆಪಿ ಕಾಂಗ್ರೆಸ್‌ ಎನ್ನುವುದಕ್ಕಿಂತಲೂ ಡಿ.ಕೆ.ಶಿವಕುಮಾರ್‌ ಹಾಗೂ ಮುನಿರತ್ನ ನಡುವಿನ ಹೋರಾಟದಂತೆ ಬಿಂಬಿತವಾಗಿದ್ದ ರಾಜರಾಜೇಶ್ವರಿ ನಗರದಲ್ಲಿ ಡಿ.ಕೆ.ಶಿವಕುಮಾರ್‌ ಅವರ ಕಾರ್ಯತಂತ್ರವನ್ನು ಬುಡಮೇಲು ಮಾಡಿ, ಮುನಿರತ್ನ ಜಯದ ಮಾಲೆ ಧರಿಸುವ ಮೂಲಕ ಡಿ.ಕೆ. ಶಿವಕುಮಾರ್‌ ತಮ್ಮ ರಾಜಕೀಯ ಕಾರ್ಯತಂತ್ರಗಳನ್ನು ಬದಲಾಯಿಸಿಕೊಳ್ಳುವಂತೆ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next