Advertisement

ದೊಡ್ಡಬಳ್ಳಾಪುರ ನಗರಸಭೆ: ಸೂಕ್ತ ಅಭ್ಯರ್ಥಿಗಳ ಹುಡುಕಾಟ

03:35 PM Aug 13, 2021 | Team Udayavani |

ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ನಗರಸಭೆಗೆ ಸೆ.3ರಂದು ಚುನಾವಣೆ ನಡೆಸಲು ದಿನಾಂಕ ನಿಗದಿಯಾಗಿದೆ. ಈಗಾಗಲೇ ಆಕಾಂಕ್ಷಿಗಳ ಪಟ್ಟಿಗಳನ್ನು ಪ್ರಮುಖ ರಾಜಕೀಯ ಪಕ್ಷಗಳು ಪಡೆದಿದ್ದರೂ, ಸೂಕ್ತ ಅಭ್ಯರ್ಥಿಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಚುನಾವಣೆಯಲ್ಲಿ ಅಭ್ಯರ್ಥಿಗಳ ವರ್ಚಸ್ಸಿನೊಂದಿಗೆ ಪಕ್ಷಗಳ ಪ್ರಭಾವವನ್ನು ಅಲ್ಲಗೆಳೆಯುವಂತಿಲ್ಲ.

Advertisement

ರಾಜ್ಯದ ಆಡಳಿತ ಪಕ್ಷದ ಹಿಡಿತಕ್ಕೆ ಸಿಗದ ನಗರಸಭೆ: 2007ರಲ್ಲಿ ನಡೆದ ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ -12, ಜೆಡಿಎಸ್‌
– 11, ಬಿಜೆಪಿ-4, ಕನ್ನಡ ಪಕ್ಷ-2, ಸಿಪಿಎಂ-1, ಸ್ವತಂತ್ರ-1 ಗೆಲುವು ಸಾಧಿಸಿ, ಬಹುಮತ ಬರದೇ ಇತರೆ ಪಕ್ಷಗಳ ಬೆಂಬಲದೊಂದಿಗೆ ಕಾಂಗ್ರೆಸ್‌ ಅಧಿಕಾರ ಹಿಡಿದಿತ್ತು. 2008ರಲ್ಲಿ ಕಾಂಗ್ರೆಸ್‌ನಿಂದ ಶಾಸಕರಾಗಿದ್ದ ಜೆ.ನರಸಿಂಹಸ್ವಾಮಿ ಆಪರೇಷನ್‌ ಕಮಲಕ್ಕೆ ಒಳಗಾಗಿ ಬಿಜೆಪಿ ಸೇರಿದ್ದರು. ಅನಂತರ 2013ರಲ್ಲಿ ನಡೆದ ಚುನಾವಣೆಯಲ್ಲಿ ಜೆಡಿಎಸ್‌ – 14, ಬಿಜೆಪಿ -6, ಕಾಂಗ್ರೆಸ್‌ – 4, ಕನ್ನಡ ಪಕ್ಷ- 2, ಸ್ವತಂತ್ರ ಅಭ್ಯರ್ಥಿಗಳು- 5 ಗೆಲುವು ಸಾಧಿಸಿ ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತ ಇಲ್ಲದೆ ಅತಂತ್ರ ಸ್ಥಿತಿ ನಿರ್ಮಾಣವಾಗಿದ್ದರಿಂದ ಜೆಡಿಎಸ್‌ ಪ್ರಮುಖ
ಪಕ್ಷವಾಗಿ ಐದು ವರ್ಷದಲ್ಲಿ 3 ಜನ ಅಧ್ಯಕ್ಷರು ಆಗುವಂತಾಗಿತ್ತು.

ಇದನ್ನೂ ಓದಿ:46 ಕೋಟಿಗೆ ಐಷಾರಾಮಿ ಫ್ಲ್ಯಾಟ್ ಮಾರಾಟ ಮಾಡಿದ ನಟ ಅಭಿಷೇಕ್ ಬಚ್ಚನ್

ನಗರಸಭೆ ಚುನಾವಣೆ ವೇಳೆಗೆ ನಗರದಲ್ಲಿ ವಿಧಾನಸಭೆಯ ಚುನಾವಣೆ ಸನಿಹದಲ್ಲಿದ್ದು, ಯಾವ ಪಕ್ಷ ಗೆಲ್ಲುವುದು ಎನ್ನುವ ಕಾತುರವಿರುತ್ತಿತ್ತು. ಮೇ 2018ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಕಾಂಗ್ರೆಸ್‌ ಪಕ್ಷದಿಂದ ಟಿ.ವೆಂಕಟರಮಣಯ್ಯ ಆಯ್ಕೆಯಾದಾಗ ಕಾಂಗ್ರೆಸ್‌- ಜೆಡಿಎಸ್‌ ಮೈತ್ರಿ ಸರ್ಕಾರವಿತ್ತು. ಆಗ ನಗರಸಭೆ ಚುನಾವಣೆ ನಡೆದಿದ್ದರೆ, ಆಡಳಿತ ಪಕ್ಷದ ಅಲೆ ಇರುತ್ತಿತ್ತು. ಈಗ ಮೈತ್ರಿ ಸರ್ಕಾರ ಪತನವಾಗಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ. ಕ್ಷೇತ್ರದಲ್ಲಿ ಕಾಂಗ್ರೆಸ್‌ ಶಾಸಕರಿದ್ದಾರೆ. ಈಗ ಚುನಾವಣೆ ಘೋಷಣೆಯಾಗಿದ್ದು, ರಾಜ್ಯದ ಆಡಳಿತ ಪಕ್ಷ ಹಾಗೂ ಶಾಸಕರು ಗೆದ್ದಿರುವ ಪಕ್ಷಗಳು ಬೇರೆಯಾಗಿ ನಗರಸಭೆಯಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬರುತ್ತದೆ ಎನ್ನುವ ಕುತೂಹಲ ಸಹಜವಾಗಿದೆ.

ಅಭ್ಯರ್ಥಿಗಳಿಗಾಗಿ ಶೋಧ: ಪ್ರಮುಖ ಪಕ್ಷಗಳು ಅಭ್ಯರ್ಥಿಗಳ ಪಟ್ಟಿ ತರಿಸಿಕೊಂಡಿದ್ದರೂ ಇನ್ನೂ ಯಾರಿಗೆ ಟಿಕೆಟ್‌ ನೀಡುವುದು ಎಂದು ನಿರ್ಧಾರವಾಗಿಲ್ಲ. ಸಾಮಾನ್ಯ, ಹಿಂದುಳಿದ ವರ್ಗ ಎ ಪುರುಷರ ಮೀಸಲು ಸ್ಥಾನಗಳಿಗೆ ಎಲ್ಲಾ ಪಕ್ಷಗಳಲ್ಲಿ ಹೆಚ್ಚಿನ ಆಕಾಂಕ್ಷಿಗಳಿದ್ದು, ಪಕ್ಷದ ವರಿಷ್ಠರಿಗೆ ಯಾರಿಗೆ ಟಿಕೆಟ್‌ ನೀಡುವುದು ಎನ್ನುವುದು ತಲೆ ಬಿಸಿಯಾಗಿದೆ.ಆ.16ರಂದುಜಿಲ್ಲಾಧಿಕಾರಿಗಳು ಅಧಿಸೂಚನೆ ಹೊರಡಿಸಲಿದ್ದು, ನಾಮಪತ್ರ ಸಲ್ಲಿಸಲು ಆ.23 ಕೊನೆಯ ದಿನವಾಗಿದೆ.

Advertisement

ನಾಮಪತ್ರ ಸಲ್ಲಿಸಲು ಕಾಲಾವಕಾಶ ಕಡಿಮೆಯಿರುವುದರಿಂದ ಆದಷ್ಟು ಬೇಗ ಅಭ್ಯರ್ಥಿಗಳ ಆಯ್ಕೆ ಅಂತಿಮಗೊಳಿಸ ಬೇಕಿದೆ. ಇಲ್ಲವಾದರೆ ನಾಮಪತ್ರ ಸಲ್ಲಿಸಲು ಬೇಕಾದ ಜಾತಿ ಪ್ರಮಾಣ ಪತ್ರ, ಇತರೆ ದಾಖಲೆ ಗಳನ್ನು ಸಿದ್ಧಪಡಿಸಿಕೊಳ್ಳಲು ತಡವಾಗುತ್ತದೆ ಎನ್ನುತ್ತಾರೆ ಟಿಕೆಟ್‌ ಆಕಾಂಕ್ಷಿಗಳು.

ಅಧ್ಯಕ್ಷ-ಉಪಾಧ್ಯಕ್ಷರ ಮೀಸಲು:ಈಗಾಗಲೇ ಅಧ್ಯಕ್ಷ-ಉಪಾಧ್ಯಕ್ಷರ ಮೀಸಲು ಪ್ರಕಟವಾಗಿದ್ದು, ಅಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗ ‘ಎ’ ಮಹಿಳೆ, ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಸ್ಥಾನ ಮೀಸಲಿರಿಸಲಾಗಿದೆ. ಅಧ್ಯಕ್ಷ-ಉಪಾಧ್ಯಕ್ಷರ ಸ್ಥಾನದ ಆಕಾಂಕ್ಷಿಗಳು ಇದಕ್ಕೆ ಪೂರಕವಾಗಿ ತಯಾರಿ ಮಾಡಿಕೊಳ್ಳುವುದು ಸಹಜವಾಗಿದೆ

ತಮಗೆ ಇಂತಹ ವಾರ್ಡ್‌ ಬೇಕು ಎಂದು ಮೀಸಲಾತಿ ಬದಲಾವಣೆಗಾಗಿ ನ್ಯಾಯಾಲಯದ ಮೆಟ್ಟಿಲು ಏರುವುದರಲ್ಲಿ ಅರ್ಥವಿಲ್ಲ. ಚುನಾವಣೆಗಳಲ್ಲಿ ಹಣ,ಜಾತಿ ರಾಜಕೀಯದ ಪ್ರಭಾವದ ಬೆಳವಣಿಗೆಗಳಾಗುತ್ತಿರುವುದು ನೋವಿನ ಸಂಗತಿ. ವ್ಯಕ್ತಿಗಿಂತ ಪಕ್ಷ ಮುಖ್ಯ. ಪಕ್ಷದ ಕಾರ್ಯಕರ್ತರು, ವರಿಷ್ಠರೊಡನೆ ಚರ್ಚಿಸಿಅಭ್ಯರ್ಥಿಗಳನ್ನು ಕಣಕ್ಕಿಳಿಸುವ ನಿರ್ಧಾರಕೈಗೊಳ್ಳಲಾಗುವುದು.
-ಆರ್‌.ಚಂದ್ರತೇಜಸ್ವಿ, ಸಿಪಿಐ(ಎಂ), ಜಿಲ್ಲಾ ಮುಖಂಡ

ರಾಜ್ಯದಲ್ಲಿ ಆಡಳಿತ ಪಕ್ಷದಲ್ಲಿರುವವರ ಪರವಾಗಿ ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲಾತಿ ನಿರ್ಣಯಗೊಳ್ಳುವುದು ಸಹಜ. ಎಲ್ಲರಿಗೂ
ಸಮಾಧಾನವಾಗುವ ರೀತಿಯಲ್ಲಿ ಮೀಸಲಾತಿ ನಿಗದಿ ಮಾಡಲಾಗುವುದಿಲ್ಲ. ನ್ಯಾಯಾಲಯದಆದೇಶವನ್ನು ಮನ್ನಿಸಿ ಮೀಸಲಾತಿಯನ್ವಯ ಕನ್ನಡ ಪಕ್ಷದಿಂದ ನಗರಸಭೆಯ 4 ವಾರ್ಡ್‌ಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು.
– ಡಿ.ಪಿ.ಆಂಜಿನೇಯ, ಪ್ರಧಾನ ಕಾರ್ಯದರ್ಶಿ, ತಾಲೂಕು ಕನ್ನಡ ಪಕ್ಷ

-ಡಿ.ಶ್ರೀಕಾಂತ

Advertisement

Udayavani is now on Telegram. Click here to join our channel and stay updated with the latest news.

Next