Advertisement

ರಾ.ಹೆ. ಇಲಾಖೆ, ನಗರಸಭೆ ಎಡವಟ್ಟು : ಜನರಿಗೆ ಇಕ್ಕಟ್ಟು

11:50 PM Jan 11, 2021 | Team Udayavani |

ಉಡುಪಿ: ಕೆಲವು ತಿಂಗಳುಗಳ ಹಿಂದೆ ಇಂದ್ರಾಣಿಗೆ ನಗರದ ಕೊಳಚೆ ನೀರು ಹರಿಸುವ ಸಮಸ್ಯೆ ಭುಗಿಲೆದ್ದಾಗ ಎಲ್ಲವನ್ನೂ ಸರಿಪಡಿಸುತ್ತೇವೆಂದು ಹೇಳಿದ್ದ ನಗರಸಭೆ ಆಡಳಿತ, ಈಗ ಮತ್ತೆ ತನ್ನ ಹಳೇ ಅಭ್ಯಾಸವಾಗಿ ವೆಟ್‌ವೆಲ್‌ನ ನೀರನ್ನು ಇಂದ್ರಾಣಿ ನದಿ ಮೂಲಕ ಕಡಲಿಗೆ ಸೇರಿಸುವುದನ್ನು ಮುಂದುವರಿಸಿದೆ.

Advertisement

ಎರಡು ವರ್ಷದ ಅನಂತರ ನಡೆದ ಮೊದಲ ನಗರಸಭೆ ಸಾಮಾನ್ಯ ಸಭೆಯಲ್ಲಿ ಜನಪ್ರತಿನಿಧಿಗಳು ಇಂದ್ರಾಣಿ ಬಗ್ಗೆ ಧ್ವನಿ ಎತ್ತಿದ್ದರೂ, ಇಲ್ಲಿಯವರೆಗೆ ಯಾವುದೇ ಸುಧಾರಣೆ ಕಂಡುಬಂದಿಲ್ಲ. ಸಮಸ್ಯೆಗೆ ಮುಕ್ತಿ ಸಿಗಲಿದೆ ಎನ್ನುವ ಆಸೆಯಲ್ಲಿದ್ದವರಿಗೆ ಮತ್ತೆ ನಿರಾಸೆಯಾಗಿದೆ.

ಉದಯವಾಣಿಯು ಹದಿನೈದು ದಿನಗಳ “ಮರೆತೇ ಹೋದ ಇಂದ್ರಾಣಿ’  ಅಧ್ಯಯನ ಸರಣಿ ಮೂಲಕ ಇಂದ್ರಾಣಿಗೆ ಸೇರುತ್ತಿರುವ ಕೊಳಚೆ ಕುರಿತ ಸಮಸ್ಯೆಯನ್ನು ಸವಿವರವಾಗಿ ವಿವರಿಸಿತ್ತು. ಈ ಹಿನ್ನೆಲೆಯಲ್ಲಿ ಎಚ್ಚೆತ್ತಿದ್ದ ನಗರಸಭೆಯು ವೆಟ್‌ವೆಲ್‌ನಲ್ಲಿ ಕೆಲವು ಮೂಲ ಸೌಕರ್ಯ, ದುರಸ್ತಿ ಇತ್ಯಾದಿ ಕೆಲಸವನ್ನುನಡೆಸಲು ಮುಂದಾಗಿತ್ತು. ಜನರೇಟರ್‌ ಗಳ ಖರೀದಿಗೂ ಟೆಂಡರ್‌ ಕರೆಯುವು ದಾಗಿ ತಿಳಿಸಿತ್ತು. ಕೆಲವು ದಿನ ಇಂದ್ರಾಣಿ ನದಿಯಲ್ಲಿ ಕೊಳಚೆ ಹರಿಯುವುದೂ ಕಡಿಮೆಯಾಗಿತ್ತು.

ಶಾರದಾ ವೆಟ್‌ವೆಲ್‌  :

ವಿವಿಧ ಭಾಗಗಳಿಂದ ಹರಿದು ಬರುವ ಕೊಳಚೆ ನೀರು ನೇರವಾಗಿ ಶಾರದಾ ವೆಟ್‌ವೆಲ್‌ಗೆ ಸೇರುತ್ತದೆ. ಇಲ್ಲಿಂದ ಕೊಳಚೆ ನೀರನ್ನು ಪಂಪ್‌ ಮಾಡಿ ನೇರವಾಗಿ ಎಸ್‌ಟಿಪಿಗೆ ಬಿಡಲಾಗುತ್ತದೆ. ಇದೇ ಮಾರ್ಗದಲ್ಲಿ ನಾಲ್ಕೈದು ವರ್ಷಗಳ ಹಿಂದೆ ರಾ.ಹೆ. ಇಲಾಖೆಯು ಯಾವುದೇ ಪರ್ಯಾಯ ವ್ಯವಸ್ಥೆ ಕಲ್ಪಿಸದೆ ನಿಟ್ಟೂರು ಎಸ್‌ಟಿಪಿಗೆ ಹೋಗುವ ಯುಜಿಡಿ ಪೈಪ್‌ನ ಮೇಲೆಯೇ ಫ್ಲೈಓವರ್‌ ನಿರ್ಮಿಸಿದೆ.

Advertisement

ನಗರಸಭೆ ಏನು ಮಾಡುತ್ತಿತ್ತು? :

ಇದೀಗ ಹೆದ್ದಾರಿ ಕರಾವಳಿ ಫ್ಲೈ ಓವರ್‌ನಡಿ 32 ವರ್ಷಗಳ ಹಿಂದೆ ಹಾಕಲಾದ ಯುಜಿಡಿ ಪೈಪ್‌ಲೈನ್‌ ಒಡೆದು ಹೋಗಿದೆ. ಈ ಹಿಂದೆ ಕಾಮಗಾರಿ ಮಾಡಿದ ರಾ.ಹೆ. ಇಲಾಖೆಯು ಯುಜಿಡಿ ಮಾರ್ಗವನ್ನು ಬದಲಾಯಿಸಬೇಕಿತ್ತು. ಆ ಸಂದರ್ಭ ನಗರಸಭೆಯು ಪಟ್ಟು ಹಿಡಿದು ಕಾಮಗಾರಿಯನ್ನು ಸ್ಥಗಿತ ಗೊಳಿಸಿ ಯುಜಿಡಿ ಮಾರ್ಗವನ್ನು ಬದಲಾಯಿಸಬೇಕಿತ್ತು. ಆದರೆ ಅಂದಿನ ಅಧಿಕಾರಿಗಳು ಮೌನವಾಗಿದ್ದರು. ಏನನ್ನೂ ಹೇಳಲಿಲ್ಲ. ಹಾಗಾಗಿ ರಾಷ್ಟ್ರೀಯ ಹೆದ್ದಾರಿ ಇಲಾಖೆಯವರು ತಮ್ಮ ಕೆಲಸವಾದರೆ ಸಾಕೆಂದು ಫ್ಲೈ ಓವರ್‌ ನಿರ್ಮಿಸಿದ್ದರು. ಈಗ ಕೊಳಚೆ ನೀರು ಇಂದ್ರಾಣಿ ಒಡಲು ಸೇರುವಂತಾಗಿದೆ ಎಂಬುದು ಸ್ಥಳೀಯರ ದೂರು.

ಶಾರದಾದಿಂದ ಇಂದ್ರಾಣಿಗೆ :

ಪ್ರಸ್ತುತ ಫ್ಲೈ ಓವರ್‌ ಅಗೆದು ಯುಜಿಡಿ ಪೈಪ್‌ಲೈನ್‌ ದುರಸ್ತಿ ಮಾಡಲು ಅಸಾಧ್ಯ. ಈ ಹಿನ್ನೆಲೆಯಲ್ಲಿ ಫ್ಲೈ ಓವರ್‌ಅಡಿಯ ಯುಜಿಡಿ ಪೈಪ್‌ಲೈನ್‌ ಸ್ಥಗಿತಗೊಳಿಸಲಾಗಿದೆ. ಇದರಿಂದ ಶಾರದಾ ವೆಟ್‌ವೆಲ್‌ನಿಂದ ಪಂಪ್‌ ಆಗಿ ನಿಟ್ಟೂರು ಎಸ್‌ಟಿಪಿಗೆ ಹೋಗಬೇಕಾದ ಕೊಳಚೆ ನೀರು ಇಂದ್ರಾಣಿಗೆ ಬಿಡಲಾಗುತ್ತಿದೆ. ಈ ಪೈಪ್‌ಲೈನ್‌ ಸ್ಥಗಿತಗೊಳಿಸಿ, ಹೊಸ ಮಾರ್ಗದ ಪೈಪ್‌ಲೈನ್‌ ಅಳವಡಿಸಿದರೆ ಮಾತ್ರ ಸಮಸ್ಯೆಗೆ ಪರಿಹಾರ ಎನ್ನುತ್ತಾರೆ ಅಧಿಕಾರಿಗಳು.

ಕೈಚೆಲ್ಲಿದ ರಾ.ಹೆ. ಇಲಾಖೆ!  :

ಪ್ರಸ್ತುತ ಫ್ಲೈಒವರ್‌ನಡಿ ಯುಜಿಡಿ ದುರಸ್ತಿಗೆ ಸಂಬಂಧಿಸಿದಂತೆ ನಗರಸಭೆ ಅಧಿಕಾರಿಗಳು ರಾ.ಹೆ. ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರೂ ಹೆದ್ದಾರಿಯನ್ನು ಅಗೆಯಲು ಸಾಧ್ಯವಿಲ್ಲ ಎನ್ನುವುದಾಗಿ ರಾ.ಹೆ. ಅಧಿಕಾರಿಗಳು ತಿಳಿಸುತ್ತಿದ್ದಾರೆ. ಒಂದು ವೇಳೆ ಹೆದ್ದಾರಿಗೆ ಸಂಬಂಧಿಸಿದ ಯಾವುದೇ ಕಾಮಗಾರಿ ನೀವು ಕೈಗೆತ್ತಿಗೊಂಡರೆ ಕಾನೂನು ತೊಡಕು ಉಂಟಾಗುತ್ತದೆ ಎಂದು ಹೇಳಿ ಕೈ ಚೆಲ್ಲಿದ್ದಾರೆ ಎನ್ನುತ್ತಾರೆ ನಗರಸಭೆ ಅಧಿಕಾರಿಗಳು.

ಮೂರು ವರ್ಷದ ಹಿಂದೆ ರಾ.ಹೆ. ಇಲಾಖೆಯು ಫ್ಲೈ ಓವರ್‌ ಪಕ್ಕದಲ್ಲಿ ಡಮ್ಮಿ ಪೈಪ್‌ಲೈನ್‌ ಹಾಕಿದ್ದಾರೆ. ಪ್ರಸ್ತುತ ಅದರೊಳಗೆ ಹೊಸ ಪೈಪ್‌ಲೈನ್‌ ಹಾಕಬೇಕು. ಈಗಾಗಲೇ ಮಂಗಳೂರಿನಿಂದ ಪೈಪ್‌ ತರಿಸಲಾಗುತ್ತಿದೆ. ಪೈಪ್‌ ಬಂದ ತತ್‌ಕ್ಷಣ ತುರ್ತು ಟೆಂಡರ್‌ ಕರೆದು ಸಮರೋಪಾದಿಯಲ್ಲಿ ಕೆಲಸ ನಡೆಸಲಾಗುತ್ತದೆ. ಮೋಹನ್‌ ರಾಜ್‌, ಎಇಇ, ನಗರಸಭೆ ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next