Advertisement

ಪುರಸಭೆ ನಗರೋತ್ಥಾನ ಕಾಮಗಾರಿ ವಿಳಂಬ

02:28 PM Dec 09, 2019 | Team Udayavani |

ಗಜೇಂದ್ರಗಡ: ಕಿತ್ತು ಹೋದ ಡಾಂಬರ, ಅರ್ಧಂಬರ್ಧ ಜೋಡಿಸಿರುವ ಇಂಟರಲಾಕ್‌, ಅರ್ಧಕ್ಕೆ ನಿಂತ ಮುಖ್ಯ ರಸ್ತೆಯ ಕಾಮಗಾರಿಯಿಂದ ಗಜೇಂದ್ರಗಡ ಅಭಿವೃದ್ಧಿಗೆ ಮಂಕು ಕವಿದಿದೆ. ಇದರಿಂದ ಯಾರೊಬ್ಬರೂ ಹೇಳ್ಳೋರುಕೇಳ್ಳೋರಿಲ್ಲ. ಪರಿಸ್ಥಿತಿ ಹೀಗಿದ್ದರೂ ಜಿಲ್ಲಾಡಳಿತ ಮೌನಕ್ಕೆ ಶರಣಾಗಿದೆ.

Advertisement

ಪಟ್ಟಣದಲ್ಲಿ ಕಳೆದ ಎರಡು ವರ್ಷದ ಹಿಂದೆಯೇ ಪುರಸಭೆ ನಗರೋತ್ಥಾನ ಯೋಜನೆಯಡಿ 2016-17ನೇ ಸಾಲಿನಲ್ಲಿ 6.37 ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಅಂದಿನ ಶಾಸಕ ಜಿ.ಎಸ್‌. ಪಾಟೀಲ ಚಾಲನೆ ನೀಡಿದ್ದರು. ಅಂದು ಪ್ರಾರಂಭವಾದ ಕಾಮಗಾರಿ ಈ ವರೆಗೂಪೂರ್ಣಗೊಂಡಿಲ್ಲ. ಕೈಗೆತ್ತಿಕೊಂಡ ಕಾಮಗಾರಿಗಳು ಹಾಳಾಗಿದ್ದು, ಸಾರ್ವಜನಿಕರು ನರಕಯಾತನೆ ಅನುಭವಿಸುವಂತಾಗಿದೆ.

ಅರ್ಧಕ್ಕೆ ನಿಂತ ರಸ್ತೆ ಕಾಮಗಾರಿ: ಪಟ್ಟಣದ ಹುಡೇದ ಮಹಾಲಕ್ಷ್ಮೀ ವೃತ್ತದಿಂದ ಹಿಡಿದು ಉದ್ಯಾನವನದವರೆಗಿನ ಮುಖ್ಯರಸ್ತೆ, ಚಿನಿವಾಲರ ಪ್ಲಾಟ್‌, ಮತ್ತು ಕುಷ್ಟಗಿ ರಸ್ತೆಗೆ ಸಂಪರ್ಕಿಸುವ ರಸ್ತೆಗಳ ಕಾಮಗಾರಿ ಕೈಗೆತ್ತಿಕೊಂಡು ವರ್ಷಗಳೇ ಕಳೆದಿದೆ. ಆದರೆ ಕಾಮಗಾರಿ ಮಾತ್ರ ಅರ್ಧಕ್ಕೆ ನಿಂತಿದೆ. ಮುಖ್ಯ ರಸ್ತೆಯಲ್ಲಿ ದೊಡ್ಡ ಜಲ್ಲಿ ಕಲ್ಲು ಹಾಕಿ ಕೈ ಬಿಟ್ಟಿರುವ ಗುತ್ತಿಗೆದಾರರ ವಿಳಂಬ ನೀತಿಯಿಂದಾಗಿ ವಾಹನ ಸವಾರರು ಸ್ಥಳೀಯ ಮತ್ತು ಜಿಲ್ಲಾಡಳಿತಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ. ಈಗಾಗಲೇ ಬಜರಂಗದಳ ವೃತ್ತದಿಂದ ಹಿಡಿದು ಚೌಕಿಮಠದವರೆಗೆ ಡಾಂಬರೀಕರಣ ಮಾಡಲಾಗಿದೆ. ಕಾಮಗಾರಿ ಕೈಗೊಂಡ ಕೆಲ ತಿಂಗಳಲ್ಲಿಯೇ ಅಲ್ಲಲ್ಲಿ ಡಾಂಬರ ಕಿತ್ತು ಹೋಗಿದ್ದು, ಕಳಪೆ ಕಾಮಗಾರಿಗೆ ಸಾರ್ವಜನಿಕರ ಆಕ್ರೋಶ ವ್ಯಕ್ತವಾಗುತ್ತಿದೆ.

ಹೇಳ್ಳೋರಿಲ್ಲಕೇಳ್ಳೋರಿಲ್ಲ: ನಗರೋತ್ಥಾನ ಯೋಜನೆಯಡಿ ಪಟ್ಟಣದ ವಿವಿಧ ವಾರ್ಡುಗಳಲ್ಲಿನ ರಸ್ತೆ ಡಾಂಬರೀಕರಣ, ಚರಂಡಿ ನಿರ್ಮಾಣ ಕಾಮಗಾರಿಗಳ ಆರಂಭದ ದಿನದಿಂದ ಹಿಡಿದು ಈ ವರೆಗೂ ಸಂಬಂಧ ಪಟ್ಟ ಇಲಾಖೆ ಅಧಿ ಕಾರಿಗಳು ಸ್ಥಳಕ್ಕೆ ಭೇಟಿ ನೀಡುವುದಾಗಲಿ, ಕಾಮಗಾರಿ ಪರಿಶೀಲಿಸುವುದಾಗಲಿ ಮಾಡಿಲ್ಲ. ಹೀಗಾಗಿ ಗುತ್ತಿಗೆದಾರರು ಲಾಭಕ್ಕಾಗಿ ಹಾಗೂ ಬೇಕಾಬಿಟ್ಟಿ ಕಾಮಗಾರಿ ನಡೆಸುತ್ತಿದ್ದಾರೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.

ನಗರೋತ್ಥಾನ ಯೋಜನೆಯಡಿ ಕೈಗೊಳ್ಳುವ ಕಾಮಗಾರಿಗಳನ್ನು ನಿಯಮಾವಳಿ ಪ್ರಕಾರ ಚಾಲನೆ ನೀಡಿದ ಒಂಭತ್ತು ತಿಂಗಳಲ್ಲಿ ಪೂರ್ಣಗೊಳಿಸಬೇಕು. ಆದರೆ ಪಟ್ಟಣದಲ್ಲಿನ ಕಾಮಗಾರಿಗಳಿಗೆ ಇಲಾಖೆ ನಿಯಮಾವಳಿ ಅನ್ವಯಿಸುತ್ತದೆಯೋಇಲ್ಲವೋ ಎನ್ನುವ ಅನುಮಾನ ಮೂಡುತ್ತಿದೆ. ಇದರಿಂದ ಬೇಸತ್ತ ಜನರು ತಮ್ಮ ಅಂಗಡಿ, ಮನೆಗಳ ಮುಂದೆ ಸ್ವತಃ ತಾವೇ ಇಂಟರಲಾಕ್‌ ಜೋಡಣೆ ಮಾಡಿಕೊಳ್ಳುತ್ತಿರುವ ದೃಶ್ಯ ಸಾಮಾನ್ಯವಾಗಿದೆ.

Advertisement

ಗುತ್ತಿಗೆದಾರರು ಮಾಡುವ ಪ್ರಲಾಪಕ್ಕೆ ಶಾಲೆ ಮಕ್ಕಳು ಸಹ ಶಾಲೆ ಮುಂದಿನ ರಸ್ತೆ ಬದಿಗೆ ಇಂಟರಲಾಕ್‌ ಜೋಡಣೆ ಮಾಡಿಕೊಳ್ಳುತ್ತಿರುವುದು ವ್ಯವಸ್ಥೆ ಲೋಪಕ್ಕೆ ಹಿಡಿದ ಕೈಗನ್ನಡಿ. ಸರ್ಕಾರಗಳು ಕಚ್ಚಾರಸ್ತೆ ಮುಕ್ತ ಪಟ್ಟಣವನ್ನಾಗಿಸುವ ನಿಟ್ಟಿನಲ್ಲಿ ಕೋಟ್ಯಂತರ ಅನುದಾನ ಬಿಡುಗಡೆ ಮಾಡಿ, ನಿಗದಿತ ಕಾಲಮಿತಿಯಲ್ಲಿ ಕಾಮಗಾರಿ ಮುಗಿಸಬೇಕೆಂದು ಗುತ್ತಿಗೆದಾರರಿಗೆ ನಿಯಮ ಹೇರಿದರೂ ಸಹ ಗುತ್ತಿಗೆದಾರರು ಕಮೀಷನ್‌ ಆಮಿಷಕ್ಕಾಗಿ ಮತ್ತೂಬ್ಬರಿಗೆ ಕಾಮಗಾರಿ ನೀಡುವ ಮೂಲಕ ಅಭಿವೃದ್ಧಿ ಹಿನ್ನಡೆಗೆ ಕಾರಣರಾಗುತ್ತಿದ್ದಾರೆ ಎನ್ನುವ ಆರೋಪ ಕೂಡ ಕೇಳಿ ಬರುತ್ತಿವೆ. ಅವ್ಯವಸ್ಥೆ ಆಗರವಾಗಿರುವ ಗಜೇಂದ್ರಗಡ ಅಭಿವೃದ್ಧಿ ಕುರಿತು ಕೂಡಲೇ ಜಿಲ್ಲಾ ಧಿಕಾರಿ ಮತ್ತು ಜಿಲ್ಲಾ ಯೋಜನಾ ನಿರ್ದೇಶಕರು ಪಟ್ಟಣಕ್ಕೆ ಭೇಟಿ ನೀಡಿ, ಅರ್ಧಕ್ಕೆ ನಿಂತಿರುವ ಕಾಮಗಾರಿ ಕುರಿತು ಕ್ರಮ ಕೈಗೊಳ್ಳಬೇಕೆನ್ನುವುದು ಸಾರ್ವಜನಿಕರ ಒತ್ತಾಯವಾಗಿದೆ.

 

-ಡಿ.ಜಿ. ಮೋಮಿನ್‌

Advertisement

Udayavani is now on Telegram. Click here to join our channel and stay updated with the latest news.

Next