Advertisement

ಜೂ. 1ರಿಂದ ಮುಂಬೈ-ಗದಗ ರೈಲು ಸಂಚಾರ ಆರಂಭ

02:40 PM May 29, 2020 | Suhan S |

ಗದಗ: ಈಗಾಗಲೇ ಮಹಾರಾಷ್ಟ್ರದಿಂದ ಜಿಲ್ಲೆಗೆ ಆಗಮಿಸಿದ್ದವರಿಂದಲೇ ಜಿಲ್ಲೆಯಲ್ಲಿ ಕೋವಿಡ್‌-19 ಪಾಸಿಟಿವ್‌ ಪ್ರಕರಣಗಳು ಹೆಚ್ಚುತ್ತಿವೆ. ಈ ನಡುವೆ ಜೂ. 1ರಿಂದ ಮುಂಬೈ ಸಿಎಸ್‌ಟಿ ರೈಲ್ವೆ ನಿಲ್ದಾಣದಿಂದ ಗದಗಿಗೆ ಎಕ್ಸ್‌ಪ್ರೆಸ್‌ ರೈಲು ಸಂಚರಿಸಲಿದೆ. ಹೈರಿಸ್ಕ್ ವಲಯದಲ್ಲಿರುವ ಮಹಾರಾಷ್ಟ್ರದಿಂದ ಪ್ರತಿನಿತ್ಯ ಸಾವಿರಾರು ಜನರು ಆಗಮಿಸುವುದರಿಂದ ಜಿಲ್ಲೆಯ ಜನತೆಯಲ್ಲಿ ಆತಂಕ ಸೃಷ್ಟಿಸಿದೆ.

Advertisement

ಸುಮಾರು 2 ತಿಂಗಳ ಬಳಿಕ ಮುಂಬೈ-ಗದಗ ಮಾರ್ಗದಲ್ಲಿ ರೈಲು ಸಂಚಾರ ಆರಂಭವಾಗುತ್ತಿರುವುದು ಆಯಾ ಭಾಗದಲ್ಲಿ ಸಿಲುಕಿರುವ ವಲಸೆ ಕಾರ್ಮಿಕರು, ಕುಟುಂಬಗಳಿಗೆ ವರದಾನವಾಗಿದೆ. ಕೊರೊನಾ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ರೈಲು ಸಂಚಾರ ಸ್ಥಗಿತಗೊಂಡಿದ್ದರಿಂದ ಹೊರರಾಜ್ಯದ ಜನರಿಗೆ ಸಾರಿಗೆ ಸೌಲಭ್ಯವಿಲ್ಲದೇ, ಪರದಾಡುವಂತಾಗಿತ್ತು. ಆದರೆ ಮೇ 27ರಂದು ಸೆಂಟ್ರಲ್‌ ರೈಲ್ವೆ ಇಲಾಖೆ ಹೊರಡಿಸಿರುವ ಸುತ್ತೋಲೆಯಲ್ಲಿ ಜೂ. 1ರಿಂದ ಗದಗ-ಮುಂಬೈ ಛತ್ರಪತಿ ಶಿವಾಜಿ ಮಹಾರಾಜ್‌ ಟರ್ಮಿನಲ್‌ನಿಂದ ವಾಡಿ ಮಾರ್ಗವಾಗಿ ಪ್ರತಿದಿನ ಎಕ್ಸಪ್ರಸ್‌ ರೈಲು ಸಂಚರಿಸಲಿದೆ. ಜಿಲ್ಲಾಡಳಿತಕ್ಕೆ ಮಾಹಿತಿ ಇಲ್ಲ: ಮಹಾರಾಷ್ಟ್ರದ ಸೋಲಾಪುರ ಡಿವಿಜನಲ್‌ ಮ್ಯಾನೇಜರ್‌ ಅಜಯ್‌ ಕುಮಾರ್‌ ಅವರು ಕಲಬುರ್ಗಿ ಜಿಲ್ಲಾ ಧಿಕಾರಿಗೆ ಪತ್ರ ಬರೆದ ಪತ್ರದಲ್ಲಿ ಮುಂಬೈ ಸಿಎಸ್‌ಟಿ-ಗದಗ ಮಧ್ಯೆ ರೈಲು ಕಾರ್ಯಾಚರಣೆ ನಡೆಸುವ ಬಗ್ಗೆ ಪ್ರಸ್ತಾಪಿಸಿದ್ದಾರೆ. ವಿವಿಧ ರೈಲುಗಳು ವಾಡಿ ಮಾರ್ಗವಾಗಿ ಚಲಿಸಲಿವೆ. ಪ್ರಯಾಣಿಕರ ಹಿತದೃಷ್ಟಿಯಿಂದ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಕೋರಿದ್ದಾರೆ. ಆದರೆ ಈ ಬಗ್ಗೆ ಗದಗ ಜಿಲ್ಲಾಡಳಿತಕ್ಕೆ ಅಧಿಕೃತ ಮಾಹಿತಿ ಇಲ್ಲ ಎನ್ನಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ, ಮುಂಬೈ-ಗದಗ ನಡುವೆ ಜು. 1ರಿಂದ ರೈಲು ಆರಂಭಗೊಳ್ಳುವ ಬಗ್ಗೆ ಅಧಿಕೃತ ಮಾಹಿತಿ ಇಲ್ಲ. ನಾಳೆ ಈ ಬಗ್ಗೆ ಸಂಬಂಧಿಸಿದ ಇಲಾಖೆಯಿಂದ ಮಾಹಿತಿ ಪಡೆಯುತ್ತೇನೆ. ಹೊರ ರಾಜ್ಯದಿಂದ ಬಂದವರನ್ನು ಕ್ವಾರಂಟೈನ್‌ ಮಾಡಲು ಜಿಲ್ಲೆಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಶಾಲಾ-ಕಾಲೇಜು, ವಸತಿ ನಿಲಯಗಳಿವೆ. ಆದರೆ ಸರಕಾರದ ಆದೇಶ ಬಂದ ಬಳಿಕ ಮುಂದಿನ ಕ್ರಮ ಜರುಗಿಸಲಾಗುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next