Advertisement

ಜ.14ರಿಂದ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ

05:02 PM Dec 21, 2017 | Team Udayavani |

ಮೈಸೂರು: ಮೈಸೂರು ರಂಗಾಯಣ ಪ್ರತಿ ವರ್ಷ ಆಯೋಜಿಸುವ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ ಈ ಬಾರಿ ವಲಸೆ ಶೀರ್ಷಿಕೆಯಡಿ ಜನವರಿ 14ರಿಂದ 21ರವರೆಗೆ ನಡೆಯಲಿದೆ. ಪ್ರತಿ ವರ್ಷದಂತೆ ಸಂಕ್ರಾಂತಿಯ ದಿನದಂದೇ ಆರಂಭವಾಗುವ ಈ ಉತ್ಸವವು ನಾಟಕ, ವಿಚಾರ ಸಂಕಿರಣ, ಜಾನಪದ ಕಲೆಗಳ ಪ್ರದರ್ಶನ, ಪುಸ್ತಕ ಮೇಳ, ಕರಕುಶಲ ಮೇಳ, ಚಲನಚಿತ್ರೋತ್ಸವ, ಬೀದಿ
ನಾಟಕ ಹೀಗೆ ತನ್ನೆಲ್ಲಾ ಸಾಂಸ್ಕೃತಿಕ ವೈವಿಧ್ಯತೆಯಿಂದ ನಾಡಿನ ಜನತೆಗೆ ರಸದೌತಣ ನೀಡಲಿದೆ ಎಂದು ರಂಗಾಯಣ ನಿರ್ದೇಶಕಿ ಭಾಗೀರಥಿಬಾಯಿ ಕದಂ ತಿಳಿಸಿದ್ದಾರೆ.

Advertisement

ವಲಸೆ ಶೀರ್ಷಿಕೆ: ಈ ವರ್ಷದ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವವನ್ನು ವಲಸೆ ಶೀರ್ಷಿಕೆ ಯಡಿ ಸಂಘಟಿಸಲಾಗುತ್ತಿದೆ. ಜಗತ್ತಿನಾದ್ಯಂತ ಮನುಷ್ಯರನ್ನೂ ಒಳಗೊಂಡಂತೆ ಜೀವರಾಶಿಯ ಸಹಜ ಜೀವನದ ನೆಲೆಗೆ ಬೇರೆ ಬೇರೆ ಆತಂಕಗಳು ಎದುರಾಗುತ್ತಿರುವ ಈ ಸಂದರ್ಭದಲ್ಲಿ ಅನೇಕ ಸಮುದಾಯಗಳು ತಮ್ಮ ಬದುಕಿನ ನೆಲೆ ಕಂಡು ಕೊಳ್ಳಲು ಒಂದೆಡೆಯಿಂದ ಮತ್ತೂಂದೆಡೆಗೆ ವಲಸೆ ಹೋಗುವುದು ನಿರಂತರವಾಗಿ ನಡೆಯುತ್ತಿದೆ. ಈ ಸಂದರ್ಭದಲ್ಲಿ ಪ್ರಚಲಿತ ವಿಷಯಗಳಿಗೆ ಸಂವೇದಿ
ಸುವ ಆಶಯದಿಂದ ಬಹುರೂಪಿಗೆ ಈ ಶೀರ್ಷಿಕೆ ಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಬಹುರೂಪಿ ನಾಟಕೋತ್ಸವ ನಾಡಿನ ಹೆಮ್ಮೆಯ
ಉತ್ಸವವಾಗಿದ್ದು, ಕಳೆದ 17ನೇ ವರ್ಷಗಳಿಂದ ದೇಶದಾದ್ಯಂತ ನೂರಾರು ಬೇರೆ ಬೇರೆ ಭಾಷೆಯ ನಾಟಕಗಳಲ್ಲದೆ, ಬೇರೆ ಬೇರೆ ದೇಶದ ನಾಟಕಗಳ ಪ್ರದರ್ಶನಕ್ಕೆ ವೇದಿಕೆಯಾಗಿದೆ. ಅಲ್ಲದೇ ರಾಜ್ಯದ ಬೇರೆ ಬೇರೆ ಪ್ರದೇಶದಲ್ಲಿ ರಂಗ ಸೇವೆಯಲ್ಲಿ ತೊಡಗಿರುವ ಅನೇಕ ಹವ್ಯಾಸಿ ರಂಗತಂಡಗಳ ನಾಟಕಗಳು ಪ್ರದರ್ಶನಗೊಂಡಿವೆ. 

ಬಹುರೂಪಿ ಉತ್ಸವದಲ್ಲಿ ದೇಶದ ಬೇರೆ ಬೇರೆ ರಾಜ್ಯಗಳ ವಿವಿಧ ಭಾಷೆಗಳ 9 ನಾಟಕಗಳು ಹಾಗೂ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ
ಕನ್ನಡ ನಾಟಕಗಳು ಮತ್ತು 6ಏಕವ್ಯಕ್ತಿ ನಾಟಕಗಳು ಪ್ರದರ್ಶನಗೊಳ್ಳಲಿವೆ. ಜನವರಿ 14ರಂದೇ ಆರಂಭವಾಗುವ ಅಂತಾ
ರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಸಾಕ್ಷ್ಯಚಿತ್ರಗಳನ್ನು ಒಳಗೊಂಡಂತೆ ಪ್ರತಿ ದಿನ 3 ಚಲನಚಿತ್ರಗಳಂತೆ ಬೇರೆ ಬೇರೆ ಭಾಷೆಯ ಸುಮಾರು 24 ಚಲನಚಿತ್ರಗಳು ಪ್ರದರ್ಶನಗೊಳ್ಳಲಿವೆ.

ಉದ್ಘಾಟನೆ: ಜನವರಿ 20 ಮತ್ತು 21 ರಂದು ನಡೆಯಲಿರುವ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ದೇಶದ ಬೇರೆ ಬೇರೆ ಭಾಗಗಳಿಂದ ಆಗಮಿಸುವ ಸಾಧಕರು, ರಂಗತಜ್ಞರು ತಮ್ಮ ವಿಚಾರಗಳನ್ನು ಮಂಡಿಸಲಿದ್ದಾರೆ. ಇದೇ ಪ್ರಥಮ ಬಾರಿಗೆ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವಕ್ಕೆ ಯುವ ಸಮೂಹವನ್ನು ಆಕರ್ಷಿ ಸುವ ದೃಷ್ಟಿಯಿಂದ ಮೈಸೂರು ಜಿಲ್ಲೆಯ ಆಯ್ದ ಕಾಲೇಜುಗಳ ವಿದ್ಯಾರ್ಥಿಗಳ ತಂಡಕ್ಕೆ ವಿವಿಧ ಜಾನಪದ ಕಲೆಗಳನ್ನು ಪ್ರದರ್ಶಿಸಲು ವೇದಿಕೆ ಕಲ್ಪಿಸಲಾಗಿದ್ದು, ಅವರಿಗೆ ತರಬೇತಿ ನೀಡಲು ತಜ್ಞರನ್ನು ನೇಮಿಸಲಾಗಿದೆ.

2018ರ ಜನವರಿ 14ರಂದು ಉದ್ಘಾಟನೆಗೊಳ್ಳುವ ಈ ನಾಟಕೋತ್ಸವದಲ್ಲಿ ಪ್ರತಿದಿನ ಬೀದಿನಾಟಕ, ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರದಿಂದ ಪ್ರಾಯೋಜಿಸಲ್ಪಡುವ ವಿವಿಧ ರಾಜ್ಯಗಳ ಜಾನಪದ ತಂಡಗಳಿಂದ ಕಲಾಪ್ರದರ್ಶನ, ಕಾಲೇಜು ವಿದ್ಯಾರ್ಥಿಗಳ ತಂಡದಿಂದ ಜಾನಪದ ಕಲಾ ಪ್ರದರ್ಶನಗಳಲ್ಲದೆ ಭೂಮಿಗೀತ, ಕಲಾಮಂದಿರ, ಕಿರುರಂಗಮಂದಿರಗಳಲ್ಲಿ ಕ್ರಮವಾಗಿ ಸಂಜೆ 6.30,
7 ಹಾಗೂ 7.30ಕ್ಕೆ ನಾಟಕಗಳು ಪ್ರದರ್ಶನಗೊಳ್ಳಲಿವೆ ಎಂದು ಮಾಹಿತಿ ನೀಡಿದರು.

Advertisement

ಬಹುರೂಪಿ ನಾಟಕೋತ್ಸವ ಆಯೋಜನೆ ಸಂಬಂಧ ಬುಧವಾರ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ರಂದೀಪ್‌ ಡಿ., ರಂಗಾಯಣ ನಿರ್ದೇಶಕಿ ಭಾಗೀರಥಿಬಾಯಿ ಕದಂ, ಜಂಟಿ ನಿರ್ದೇಶಕ ಮಲ್ಲಿಕಾರ್ಜುನ ಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್‌.ಚೆನ್ನಪ್ಪ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next