Advertisement

ಕುಸಿದ ನೀರಿನ ಮಟ್ಟ; ಉಪ್ಪು ನೀರು ನುಗ್ಗುವ ಸಾಧ್ಯತೆ

10:12 AM Sep 24, 2018 | Team Udayavani |

ಬಜಪೆ: ಮಳವೂರು ಬಹು ಗ್ರಾಮ ಕುಡಿಯುವ ನೀರು ಯೋಜನೆಯ ವೆಂಟೆಡ್‌ ಡ್ಯಾಂ ನೀರಿನ ಮಟ್ಟ ಕುಸಿದಿದ್ದು ಕುಡಿಯುವ ನೀರಿಗೆ ಆಪತ್ತು ಬರುವ ಸನ್ನಿವೇಶ ಎದುರಾಗಿದೆ. ಡ್ಯಾಂನ ನೀರು ಮತ್ತು ಹರಿಯುವ ನೀರಿನ ಮಟ್ಟ ಕೇವಲ ಒಂದು ಅಡಿಯಷ್ಟೇ ಏರುಪೇರು. ಇಲ್ಲಿಗೆ ತುರ್ತಾಗಿ ಹಲಗೆ ಹಾಕದಿದ್ದಲ್ಲಿ ಉಪ್ಪು ನೀರು ಕುಡಿಯುವ ನೀರಿನೊಂದಿಗೆ ಸೇರಿ ಕುಡಿಯುವ ನೀರಿಗೆ ಆಪತ್ತು ಎದುರಾಗಲಿದೆ.

Advertisement

ಮೊದಲಿಗೆ 7 ಗ್ರಾ.ಪಂ.ನ 11 ಗ್ರಾಮಗಳಿಗೆ ಮಳವೂರು ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಬಳಿಕ ಸೂರಿಂಜೆ, ಕೊಳಂಬೆ ಸೌಹಾರ್ದ ನಗರ, ದೇಲಂತಬೆಟ್ಟು ಸಹಿತ 14 ಗ್ರಾಮಗಳಿಗೆ ಈ ಕುಡಿಯುವ ನೀರಿನ ಯೋಜನೆ ವಿಸ್ತರಿಸಿದೆ. ಒಟ್ಟು 80 ಕಿಂಡಿಗಳಿದ್ದು 320 ಹಲಗೆಗಳಿವೆ. ಗುರುಪುರ ನದಿಗೆ ಹಾಕಲಾದ ಈ ವೆಂಟೆಡ್‌ ಡ್ಯಾಂಗೆ ನೀರಿನ ಹರಿವು ನೋಡಿ ಕಳೆದ ನವೆಂಬರ್‌ ತಿಂಗಳಲ್ಲಿ ಹಲಗೆ ಹಾಕಲಾಗಿತ್ತು. ಆದರೆ ಈ ಬಾರಿ ನೀರಿನ ಮಟ್ಟ ಒಮ್ಮೆಲೇ ತಗ್ಗಿದ ಕಾರಣ ಒಂದು ವಾರದೊಳಗೆ ಮತ್ತೆ ಹಲಗೆ ಹಾಕಬೇಕಾದ ಅನಿವಾರ್ಯತೆ ಇದೆ.

ತಿಂಗಳಲ್ಲೇ ಇಳಿದ ನೀರಿನ ಮಟ್ಟ
ಒಂದೇ ತಿಂಗಳಲ್ಲಿ ನದಿಯ ನೀರಿನ ಮಟ್ಟ 8 ಅಡಿ ಇಳಿದಿದೆ. ಆ.16ಕ್ಕೆ ವೆಂಟೆಡ್‌ ಡ್ಯಾಂ ಮೇಲಿಂದ ಹರಿಯುತ್ತಿದ್ದ ನೀರು ಈಗ 8 ಅಡಿಯಷ್ಟು ತಗ್ಗಿದ್ದು ವೆಂಟೆಡ್‌ ಡ್ಯಾಂ ಹಲಗೆ ಹಾಕುವಲ್ಲಿ ಕೇವಲ ಒಂದು ಅಡಿಯಷ್ಟು ನೀರಿದೆ.

ಗ್ರಾಮೀಣ ಕುಡಿಯುವ ನೀರು, ನೈರ್ಮಲ್ಯ ಸಮಿತಿಗೆ ಆಯ್ಕೆ
ಸೆ.15ಕ್ಕೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಸಮಿತಿಗೆ ಆಯ್ಕೆ ನಡೆದಿದೆ. ಜೋಕಟ್ಟೆ ಗ್ರಾ.ಪಂ. ಅಧ್ಯಕ್ಷರು ಈ ಸಮಿತಿಯ ಅಧ್ಯಕ್ಷರು. ಪೆರ್ಮದೆ ಗ್ರಾ.ಪಂ.ಅಧ್ಯಕ್ಷರು ಈ ಸಮಿತಿಯ ಉಪಾಧ್ಯಕ್ಷರಾಗಿದ್ದಾರೆ. ಡ್ಯಾಂ ಬಗ್ಗೆ ಪ್ರತಿ ತಿಂಗಳು ಸಭೆ ಕರೆದು ಚರ್ಚೆಸಿ ನಿರ್ವಹಣೆ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ. ಕೊಳಂಬೆ ಸೌಹಾರ್ದನಗರ ಮಾತ್ರ ನಗರ ಉತ್ತರ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಗೆ ಬರುತ್ತಿದ್ದು ಉಳಿದೆಲ್ಲ ಮೂಲ್ಕಿ- ಮೂಡಬಿದಿರೆ ಕ್ಷೇತ್ರದ ವ್ಯಾಪ್ತಿಯು ಈ ಯೋಜನೆಯನ್ನು ಅವಲಂಬಿಸಿದೆ.

ನೀರಿನ ಮಟ್ಟ ಕಡಿಮೆ
ಗ್ರಾ.ಪಂ.ವ್ಯಾಪ್ತಿಯ ಬಾವಿ, ಕೆರೆಗಳಲ್ಲಿ ನೀರಿನ ಮಟ್ಟ ಕಡಿಮೆಯಾಗಿದೆ. ಮಾರ್ಚ್‌, ಎಪ್ರಿಲ್‌ ತಿಂಗಳಲ್ಲಿ ನೀರು ಹರಿಯುವ ತೋಡುಗಳಲ್ಲಿ ನೀರಿನ ಹರಿವು ಈಗಾಗಲೇ ಕಡಿಮೆಯಾಗಿದ್ದು ಶೀಘ್ರದಲ್ಲೇ ಬತ್ತಲಿದೆ. 15 ದಿನಗಳೊಳಗೆ ಮಳೆ ಬಾರದೇ ಇದ್ದಲ್ಲಿ ಮಳವೂರು ವೆಂಟೆಡ್‌ ಡ್ಯಾಂಗೆ ಹಲಗೆ ಹಾಕಲೇಬೇಕು. ಉಪ್ಪು ನೀರು ಕುಡಿಯುವ ನೀರಿಗೆ ಸೇರದಂತೆ ಎಚ್ಚರ ವಹಿಸಬೇಕಾಗಿದೆ.
ಗಣೇಶ್‌ ಅರ್ಬಿ, ಮಳವೂರು
  ಗ್ರಾ.ಪಂ.ಅಧ್ಯಕ್ಷ

Advertisement

‡ ಸುಬ್ರಾಯ ನಾಯಕ್‌ ಎಕ್ಕಾರು

Advertisement

Udayavani is now on Telegram. Click here to join our channel and stay updated with the latest news.

Next