Advertisement

ಮೂಲ್ಕಿ ಸುಂದರ್‌ರಾಮ್‌ ಶೆಟ್ಟಿ ಕಾಲೇಜು ಮುಂಬಯಿ:ವಾರ್ಷಿಕೋತ್ಸವ

02:19 PM Jan 31, 2018 | |

ಮುಂಬಯಿ: ನಮ್ಮ ಸಂಘದ ಹಳೆ ವಿದ್ಯಾರ್ಥಿಗಳಲ್ಲಿರುವ ಅದಮ್ಯ ಉತ್ಸಾಹ, ಸ್ಫೂರ್ತಿ ಕಂಡು ಅತ್ಯಂತ ಸಂತಸವಾಗುತ್ತಿದೆ. ಸಂಘಟನೆಯು ವರ್ಷದಿಂದ ವರ್ಷಕ್ಕೆ ಬೆಳೆಯುತ್ತಿರುವ ಜತೆಗೆ ಶಿರ್ವದ ನಮ್ಮ ಕಾಲೇಜಿನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಂಘವು ಸದಾ ಶ್ರಮಿಸುತ್ತಿದೆ ಎಂದು ಮೂಲ್ಕಿ ಸುಂದರ್‌ರಾಮ್‌ ಶೆಟ್ಟಿ ಕಾಲೇಜು ಶಿರ್ವ ಹಳೆ ವಿದ್ಯಾರ್ಥಿ ಸಂಘ ಮುಂಬಯಿ ಇದರ ಅಧ್ಯಕ್ಷ ಉದಯ್‌ ಸುಂದರ್‌ ಶೆಟ್ಟಿ ಅವರು ನುಡಿದರು.

Advertisement

ಜ. 26 ರಂದು ಸಂಜೆ ಮಲಾಡ್‌ ಪೂರ್ವ ನ್ಯೂಲಿಂಕ್‌ ರೋಡ್‌ನ‌ಲ್ಲಿರುವ ಹೊಟೇಲ್‌ ಸಾಯಿಪ್ಯಾಲೇಸ್‌ ಗ್ರಾÂಂಡ್‌ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಜರಗಿದ ಮೂಲ್ಕಿ ಸುಂದರ್‌ರಾಮ್‌ ಶೆಟ್ಟಿ ಕಾಲೇಜು ಹಳೆ ವಿದ್ಯಾರ್ಥಿ ಸಂಘದ 8ನೇ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಶಿರ್ವದ ಮೂಲ್ಕಿ ಸುಂದರ್‌ರಾಮ್‌ ಶೆಟ್ಟಿ ಕಾಲೇಜಿನಲ್ಲಿ ಕಲಿತ ವಿದ್ಯಾರ್ಥಿಗಳಿಂದು ವಿವಿಧ ಕ್ಷೇತ್ರಗಳಲ್ಲಿ ಉನ್ನತ ಸ್ಥಾನದಲ್ಲಿದ್ದು ಕಾಲೇಜಿನ ಕೀರ್ತಿಯನ್ನು ವಿಶ್ವದೆಲ್ಲೆಡೆ ಹಬ್ಬಿಸಿದ್ದಾರೆ. ಮುಂದೆಯೂ ಕೂಡಾ ಇಲ್ಲಿ ಕಲಿತ ವಿದ್ಯಾರ್ಥಿಗಳು ನಾರಾಯಣ ಮೂರ್ತಿ, ಅಂಬಾನಿ ಸಹೋದರರಂತೆ ಮುಂದೆ ಬರಬೇಕು ಎಂಬುವುದು ನಮ್ಮ ಆಶಯವಾಗಿದೆ. ಶಿಕ್ಷಕರು ವಿದ್ಯಾರ್ಥಿಗಳನ್ನು ಉತ್ತಮ ಪ್ರಜೆಗಳನ್ನಾಗಿಸುವಲ್ಲಿ ಪ್ರಯತ್ನಿಸಿದರೆ ಶಾಲೆಗೂ,  ಶಿಕ್ಷಕರಿಗೂ ಕೀರ್ತಿ ಬರುತ್ತದೆ. ಕಾಲೇಜಿನಲ್ಲಿ ಕಾರ್ಯಚಟುವಟಿಕೆಗಳು ಹೆಚ್ಚಾಗಬೇಕು. ಇಂದಿನ ದಿನಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿರುವ ಬಗ್ಗೆ ಕಾಲೇಜಿನ ಶಿಕ್ಷಕರು ಸಂಶೋಧಿಸುವ ಅಗತ್ಯವಿದೆ.  ಹಳೆ ವಿದ್ಯಾರ್ಥಿ ಪರಿವಾರದ ಬಗ್ಗೆ ಸಂಘವು ಸದಾ ಗಮನ ಹರಿಸುತ್ತಿದೆ. ಯಾವುದೇ ಸಮಸ್ಯೆಗಳು ಎದುರಾದಾಗ ಅದನ್ನು ಬಗೆಹರಿಸಲು ಸಂಸ್ಥೆಯೊಂದಿಗೆ ಸಂಪರ್ಕ ಹೊಂದಿರೆಂದು ಸದಸ್ಯರಿಗೆ ಕಿವಿಮಾತು ಹೇಳಿದರು.

ಸಂಘದ ಮಾರ್ಗದರ್ಶಕ ಡಾ| ಶ್ರೀಧರ ಶೆಟ್ಟಿ ಅವರು ಮಾತನಾಡಿ, ಇಂದಿನ ಸ್ನೇಹ ಸಮ್ಮಿಲನಕ್ಕೆ ವಿಶೇಷವಾದ ಮಾಂತ್ರಿಕ ಶಕ್ತಿಯಿದೆ. ಸುಮಾರು 25 ವರ್ಷಗಳ ಹಿಂದಿನ ಘಟನೆಗಳನ್ನು ಮೆಲುಕು ಹಾಕಲು ಸಹಾಯಕವಾಗಿದೆ. ಶಿರ್ವ ಕಾಲೇಜು ಆಲದ ಮರದೆತ್ತರಕ್ಕೆ ಬೆಳೆದು ನಿಂತಿದೆ. ಮುಂದಿನ ದಿನಗಳಲ್ಲೂ ಆದಾಯದ ಮೂಲವಾಗುತ್ತದೆ. ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯ ದೊರೆತರೆ ಅವರ ಬದುಕು ಹಸನಾಗುತ್ತದೆ. ಉದಯ್‌ಸುಂದರ್‌ ಶೆಟ್ಟಿ ಅವರ ಪರಿಶ್ರಮ  ಸಾರ್ಥಕವಾಗುತ್ತಿದೆ ಎಂದರು.

ಗೌರವ ಅತಿಥಿಯಾಗಿ ಪಾಲ್ಗೊಂಡ ಮೂಲ್ಕಿ ಸುಂದರ್‌ರಾಮ್‌ ಶೆಟ್ಟಿ ಕಾಲೇಜು ಶಿರ್ವ ಇದರ ಪ್ರಾಂಶುಪಾಲ ಪ್ರೊ| ಕರುಣಾಕರ ನಾಯಕ್‌ ಅವರು ಮಾತನಾಡಿ, ಸುಮಾರು 38 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದ ಎಂಎಸ್‌ಆರ್‌ಎಸ್‌ ಕಾಲೇಜಿನ ಅಭಿವೃದ್ಧಿಗಾಗಿ ಹೊರನಾಡ ಮುಂಬಯಿಯಲ್ಲಿರುವ ಹಳೆವಿದ್ಯಾರ್ಥಿ ಸಂಘವು ಕಳೆದ ಎಂಟು ವರ್ಷಗಳ ಹಿಂದೆ ಸ್ಥಾಪನೆಯಾಗಿ ವಿಶೇಷ ಸೇವೆಯನ್ನು ಸಲ್ಲಿಸುತ್ತಿದೆ. ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಉದಯ್‌ ಸುಂದರ್‌ ಶೆಟ್ಟಿ ಅವರ ದೂರದೃಷ್ಟಿಯ ಚಿಂತನೆ ಹಾಗೂ ಅವರ ಸಾರಥಿಯಾಗಿ ಸಂಘಕ್ಕೆ ಸದಾ ಮಾರ್ಗದರ್ಶನ ನೀಡುತ್ತಿರುವ ಡಾ| ಶ್ರೀಧರ್‌ ಶೆಟ್ಟಿ ಅವರ ಪ್ರೇರಣೆ ಹಾಗೂ ಸದಸ್ಯರ ಸಹಕಾರದಿಂದ ಸಂಸ್ಥೆಗೆ ಜೀವತುಂಬಿ ಬಂದಿದೆ ಎಂದು ನುಡಿದರು.

ಗೌರವ ಅತಿಥಿಯಾಗಿ ಆಗಮಿಸಿದ ಕುಂದಾಪುರ ಭಂಡಾರ್‌ಕಾರ್ì ಕಲಾ ಮತ್ತು ವಿಜ್ಞಾನ ಕಾಲೇಜಿನ ಅಸೋಸಿಯೇಟ್‌ ಪ್ರೊ| ಡಾ| ರೇಖಾ ವಿ.  ಬನ್ನಾಡಿ ಅವರು ಮಾತನಾಡಿ, ಈ ಹಿಂದೆ ಎಂಎಸ್‌ಆರ್‌ಎಸ್‌ ಸಂಸ್ಥೆಯಲ್ಲಿ ಕೇವಲ ನಾಲ್ಕು ವರ್ಷ ಪಾಠ ಮಾಡಿದ ತಾನು ಅಲ್ಲಿ ವಿದ್ಯಾರ್ಥಿಗಳಿಗೆ ಕಲಿಸಿದ್ದಕ್ಕಿಂತ ಕಲಿತಿರುವುದೆ ಹೆಚ್ಚು. ಎಂಎಸ್‌ಆರ್‌ಎಸ್‌ನಲ್ಲಿದ ಕಳೆದ ಕ್ಷಣಗಳು ನನ್ನ ಚಿತ್ತಭಿತ್ತಿಯಲ್ಲಿ ಹಸಿರಾಗಿ ನಿಂತಿದೆ. ನನ್ನ ವಯಸ್ಸಿಗಿಂತ ಹೆಚ್ಚು ವಯಸ್ಸಿನ ವಿದ್ಯಾರ್ಥಿಗಳಿಗೆ ಪಾಠ ಹೇಳಿದ ನೆನಪನ್ನು ಎಳೆ ಎಳೆಯಾಗಿ ವಿವರಿಸಿ, ಇಲ್ಲಿ ಪ್ರೀತಿ, ಲವಲವಿಕೆ, ಜೀವನೋತ್ಸಾಹದ ಛಲದ ಜೊತೆಗೆ ಆತ್ಮವಿಶ್ವಾಸ ಕಂಡುಕೊಂಡೆ ಎಂದು ನುಡಿದು, ಹಳೆವಿದ್ಯಾರ್ಥಿಗಳ ಇಷ್ಟು ಭವ್ಯ, ದಿವ್ಯ ವಾರ್ಷಿಕೋತ್ಸವ ಆಚರಿಸುತ್ತಿರುವುದನ್ನು ಕಂಡು ಎದೆ ತುಂಬಿ ಬಂದಿದೆ ಎಂದರು.

Advertisement

ಇನ್ನೋರ್ವ ಗೌರವ ಅತಿಥಿ ಎಂಎಸ್‌ಆರ್‌ಎಸ್‌ ಕಾಲೇಜಿನ ಪುರಾತತ್ವ ಸಂಶೋಧನಾ ವಿಭಾಗದ ಪ್ರೊ| ಮುರುಗೇಶ್‌ ಟಿ. ಅವರು ಮಾತನಾಡಿ, ಎಂಎಸ್‌ಆರ್‌ಎಸ್‌ನ ನನ್ನ ವಿದ್ಯಾರ್ಥಿಗಳು ಇಂದು ಬದುಕಿನಲ್ಲಿ ಎತ್ತರದ ಸ್ಥಾವನ್ನೇರಿದನ್ನು ಕಂಡು ಸಂತಸವಾಗುತ್ತಿದೆ. ಒಬ್ಬ ಶಿಕ್ಷಕನಾಗಿ ನಾನು ನನ್ನ ಕರ್ತವ್ಯವನ್ನು ಮಾಡಿದ್ದೇನೆ. ಗುರುವಾದವನು ವಿದ್ಯಾರ್ಥಿಗಳಿಗೆ ಕಲಿಸುವುದರ ಜೊತೆಗೆ ಅನ್ನಕೊಟ್ಟ ಶಿಕ್ಷಣ ಸಂಸ್ಥೆಯ ಋಣವನ್ನು ತೀರಿಸಲು ಮುಂದಾಗಬೇಕು. ತುಳುನಾಡಿನ ಮಣ್ಣಿನ ಶಕ್ತಿಯನ್ನು ನಾವು ಮರೆಯಬಾರದು. ಇತ್ತೀಚೆಗೆ ನಿಂಜೂರಿನ ದೈವಸ್ಥಾನದಲ್ಲಿ ನಾಲ್ಕು ತುಳು ಶಾಸನಗಳನ್ನು ಪತ್ತೆಹಚ್ಚಲಾಗಿದೆ. ಎಂಎಸ್‌ಆರ್‌ಎಸ್‌ನ ಧೀಶಕ್ತಿ ಡಾ| ಶ್ರೀಧರ ಶೆಟ್ಟಿ, ಅಧ್ಯಕ್ಷ ಉದಯ್‌ಸುಂದರ್‌ ಶೆಟ್ಟಿ ಅವರ ಪರಿಶ್ರಮಕ್ಕೆ ಕೃತಜ್ಞತೆ ಸಲ್ಲಿಸಿದರು.

ಆರಂಭದಲ್ಲಿ ಅಧ್ಯಕ್ಷ ಉದಯ್‌ಸುಂದರ್‌ ಶೆಟ್ಟಿ, ಸಂಘದ ಸಲಹೆಗಾರರುಗಳಾದ ಡಾ| ಶ್ರೀಧರ ಶೆಟ್ಟಿ, ನಿತ್ಯಾನಂದ ಹೆಗ್ಡೆ, ಅನಿಲ್‌ ಶೆಟ್ಟಿ ಏಳಿಂಜೆ, ಶರತ್‌ ಶೆಟ್ಟಿ, ಸತೀಶ್‌ ಶೆಟ್ಟಿ ಪೆನಿನ್ಸೂಲಾ, ಇನ್ನಬೀಡು ರವೀಂದ್ರ ಶೆಟ್ಟಿ, ಎಸ್‌. ಎಂ. ಭಟ್‌ ಹಾಗೂ ಗಣ್ಯರು, ಪದಾಧಿಕಾರಿಗಳು ಜ್ಯೋತಿ ಪ್ರಜ್ವಲಿಸಿ ಸಮಾರಂಭಕ್ಕೆ ಚಾಲನೆ ನೀಡಿದರು. ಸಂಸ್ಥೆಯ ಉಪಾಧ್ಯಕ್ಷ ವಸಂತ್‌ ಎನ್‌. ಶೆಟ್ಟಿ ಪಲಿಮಾರು ಸ್ವಾಗತಿಸಿ ಅತಿಥಿಗಳನ್ನು ಪರಿಚಯಿಸಿದರು.

ಗೌರವ ಪ್ರಧಾನ ಕಾರ್ಯದರ್ಶಿ ಜಗದೀಶ್‌ ಬಿ. ಶೆಟ್ಟಿ ಸಂಸ್ಥೆಯ ವಾರ್ಷಿಕ ವರದಿ ವಾಚಿಸಿದರು. ಗೌರವ ಕೋಶಾಧಿಕಾರಿ ಸಿಎ ರವಿರಾಜ್‌ ಶೆಟ್ಟಿ ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. ಇದೇ ಸಂದರ್ಭದಲ್ಲಿ ಅತಿಥಿ-ಗಣ್ಯರುಗಳನ್ನು ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆಯನ್ನಿತ್ತು  ಗೌರವಿಸಲಾಯಿತು.

ಎಂಎಸ್‌ಆರ್‌ಎಸ್‌ ಹಳೆವಿದ್ಯಾರ್ಥಿ ಸಾಧಕರಾದ ಕೋಡು ದಿವಾಕರ ಶೆಟ್ಟಿ ದುಬೈ, ಬಿ. ಎಂ. ರವೀಂದ್ರ ರಾವ್‌ ಅವರನ್ನು  ಗಣ್ಯರು ಅಭಿನಂದಿಸಿದರು. ಸತೀಶ್‌ ಶೆಟ್ಟಿ ಕುತ್ಯಾರ್‌ ಅವರು ಸಮ್ಮಾನಿತರನ್ನು ಪರಿಚಯಿಸಿದರು. ಸಮ್ಮಾನಿತರು ಮಾತನಾಡಿ ಕೃತಜ್ಞತೆ ಸಲ್ಲಿಸಿದರು. ಅಕ್ಷಯ್‌ ಉದಯ್‌ ಶೆಟ್ಟಿ ಅವರನ್ನು ಗೌರವಿಸಲಾಯಿತು.

ಎಸ್‌ಎಸ್‌ಸಿ, ಎಚ್‌ಎಸ್‌ಸಿ, ಪದವಿ ಹಾಗೂ ಇನ್ನಿತರ ಪರೀಕ್ಷೆಗಳಲ್ಲಿ ಅತ್ಯುಚ್ಚ ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಪ್ರತಿಭಾ ಪುರಸ್ಕಾರನ್ನಿತ್ತು ಗೌರವಿಸಲಾಯಿತು. ವಾರ್ಷಿಕ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಸಂಸ್ಥೆಯ ಸದಸ್ಯೆ ಸಂಜೀವಿನಿ ಅವರು ವಿದ್ಯಾರ್ಥಿಗಳ ಯಾದಿಯನ್ನು ಓದಿದರು. ಜತೆ ಕೋಶಾಧಿಕಾರಿ ಸಚ್ಚಿದಾನಂದ ಶೆಟ್ಟಿ ಅವರು ಬಹುಮಾನಿತರ ಯಾದಿಯನ್ನು ವಾಚಿಸಿದರು. ವೇದಿಕೆಯಲ್ಲಿ ಗೌರವ ಕಾರ್ಯದರ್ಶಿ ಜಗದೀಶ್‌ ಬಿ. ಶೆಟ್ಟಿ, ಗೌರವ ಕೋಶಾಧಿಕಾರಿ ಸಿಎ ರವಿರಾಜ್‌ ಶೆಟ್ಟಿ, ಉಪ ಕಾರ್ಯಾಧ್ಯಕ್ಷರುಗಳಾದ ಖಾಂದೇಶ್‌ ಭಾಸ್ಕರ್‌ ಶೆಟ್ಟಿ, ಅಶೋಕ್‌ ಶೆಟ್ಟಿ, ವಸಂತ್‌ ಎನ್‌. ಶೆಟ್ಟಿ, ಮೋಹನ್‌ ಶೆಟ್ಟಿ, ಜತೆ ಕಾರ್ಯದರ್ಶಿ ಸಂದೀಪ್‌ ಎಸ್‌. ಶೆಟ್ಟಿ, ಜತೆ ಕೋಶಾಧಿಕಾರಿ ಸಚ್ಚಿದಾನಂದ ಶೆಟ್ಟಿ, ಸಂಚಾಲಕ ವಾಲ್ಟರ್‌ ಮಥಾಯಸ್‌, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಬುನಾ ಎಸ್‌. ಶೆಟ್ಟಿ ಉಪಸ್ಥಿತರಿದ್ದರು.

ಸಂಸ್ಥೆಯ ಹಳೆವಿದ್ಯಾರ್ಥಿ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿತು.  ಸುರೇಶ್‌ ಶೆಟ್ಟಿ ಶಿಬರೂರು ಇವರಿಂದ ಗಾಯನ ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮವನ್ನು ಸಚ್ಚಿದಾನಂದ ಶೆಟ್ಟಿ ಸೂಡ ಹಾಗೂ ಸಭಾ ಕಾರ್ಯಕ್ರಮವನ್ನು ಸತೀಶ್‌ ಶೆಟ್ಟಿ ಕುತ್ಯಾರ್‌ ನಿರೂಪಿಸಿದರು. ಸಂಘದ ಸದಸ್ಯೆ ಜ್ಯೋತಿ ವಂದಿಸಿದರು. 

ಪ್ರತಿಯೊಂದು ಶಿಕ್ಷಣ ಸಂಸ್ಥೆಯಲ್ಲಿ ಹಳೆ ವಿದ್ಯಾರ್ಥಿ ಸಂಘಟನೆಗಳು ಹುಟ್ಟಿ ಕೊಳ್ಳುವುದು ಸಹಜ. ಇದು ತಾವು ಕಲಿತ ಸಂಸ್ಥೆಯ ಬಗ್ಗೆ ವಿದ್ಯಾರ್ಥಿಗಳಿಗಿರುವ ಅಭಿಮಾನವನ್ನು ಸೂಚಿಸುತ್ತದೆ. ಕೇವಲ ಸಂಸ್ಥೆ ಕಟ್ಟಿದರಷ್ಟೇ ಸಾಲದು. ಆ ಸಂಸ್ಥೆಯಿಂದ ಶಿಕ್ಷಣ ಸಂಸ್ಥೆಗೆ ಏನಾದರೂ ಸಹಾಯ ಸಿಗಬೇಕು. ಮೂಲ್ಕಿ ಸುಂದರ್‌ರಾಮ್‌ ಶೆಟ್ಟಿ ಕಾಲೇಜು ಶಿರ್ವ ಹಳೆವಿದ್ಯಾರ್ಥಿ ಸಂಘವು ಇದಕ್ಕೆ ಭಿನ್ನವಾಗಿದೆ. ಕಾಲೇಜಿಗೆ ನೆರವಾಗುವುದರ ಜೊತೆಗೆ ಹಳೆವಿದ್ಯಾರ್ಥಿ ಪರಿವಾರದ ಸಮಸ್ಯೆಗಳಿಗೂ ಸ್ಪಂದಿಸುತ್ತಿರುವುದು ಸ್ವಾಗತಾರ್ಹ ವಿಚಾರವಾಗಿದೆ. ಹಳೆವಿದ್ಯಾರ್ಥಿ ಸಂಘವು ಉದಯ್‌ ಸುಂದರ್‌ ಶೆಟ್ಟಿ ಅವರ ನೇತೃತ್ವದಲ್ಲಿ ಡಾ| ಶ್ರೀಧರ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವುದು ಅಭಿನಂದನೀಯವಾಗಿದೆ. 
– ಚಂದ್ರಹಾಸ ಕೆ. ಶೆಟ್ಟಿ (ಉಪಾಧ್ಯಕ್ಷರು : ಬಂಟರ ಸಂಘ ಮುಂಬಯಿ).

ಚಿತ್ರ-ವರದಿ : ಪ್ರೇಮನಾಥ್‌ ಶೆಟ್ಟಿ ಮುಂಡ್ಕೂರು.

Advertisement

Udayavani is now on Telegram. Click here to join our channel and stay updated with the latest news.

Next