Advertisement

ಮುಹರ್ರಮ್: ಹಿಜರಿ ಶಖೆಯ ಪ್ರಥಮ ತಿಂಗಳು ಮಾತ್ರವಲ್ಲ​

10:18 AM Aug 20, 2021 | Team Udayavani |

ದೇವ ಸಂದೇಶವಾಹಕ ಮುಹಮ್ಮದರು ಮದೀನಕ್ಕೆ ವಲಸೆಹೋದ ದಿನವು ಇಸ್ಲಾಮೀ ಇತಿಹಾಸದ ಅತೀ ಪ್ರಧಾನ ಘಟನೆಯಾಗಿರುವುದರಿಂದ​ ಅದನ್ನು ಹಿಜರಿಶಖೆಯಾಗಿ ಆರಿಸಿಕೊಳ್ಳಲಾಯ್ತು.

Advertisement

ಮಾನಸಿಕ​ ಮತ್ತು ದೈಹಿಕ ಹಿಂಸೆಗಳ​ ನಂತರ​ ವಿರೋಧಿಗಳು ತನ್ನನ್ನು ಕೊಲ್ಲುವ ಸಂಚನ್ನೂ   ಹೆಣೆದಿರುವುದನ್ನು ಅರಿತ​ ಪೈಗಂಬರರು ಸತ್ಯ​, ಮಾನವೀಯತೆ ಹಾಗೂ ನ್ಯಾಯ​ದ, ಶಾಂತಿಯ​​ ಜೀವನವ್ಯವಸ್ಥೆಯ ​ಸ್ಥಾಪನೆಗಾಗಿ ಅಂತಿಮವಾಗಿ ಮನೆ ಹಾಗೂ ನಾಡನ್ನೂ ತೊರೆದು ತ್ಯಾಗ ಬಲಿದಾನಗಳ ಅದ್ವಿತೀಯ ಉದಾಹರಣೆಯಾಗಿ ಮೆಕ್ಕಾದಿಂದ ವಲಸೆ ಹೋದರು. ತನ್ನ​ ಮೇಲಿನ ​ ಅತೀವ ಪ್ರಾಮಾಣಿಕತೆಯ ವಿಶ್ವಾಸದಿಂದ ನೀಡಿದ್ದ ಶತ್ರು ಸಮೂಹದ್ದೇ ಅಮಾನತುಗಳನ್ನು ಸ್ವತ್ತುದಾರರಿಗೆ ಪಾವತಿಸುವಂತೆ ಸಹಕಾರಿಯಾಗಿದ್ದ ಅಲಿಯವರಿಗೆ ಒಪ್ಪಿಸುತ್ತಾರೆ.

ಅವರ ಆಗಿನ ಪ್ರಾರ್ಥನೆಯನ್ನು ಕುರಾನ್ ಈ ರೀತಿ ಉಲ್ಲೇಖಿಸುತ್ತದೆ. “ಓ ಪ್ರಭೂ! ನನ್ನನ್ನು ಎಲ್ಲಿಗೆ ಕೊಂಡೊಯ್ಯುದಿದ್ದರೂ ಸತ್ಯದೊಂದಿಗೆ ಒಯ್ಯು, ಎಲ್ಲಿಂದ ಹೊರಡಿಸುವುದಿದ್ದರೂ ಸತ್ಯಸಹಿತವೇ ಹೊರಡಿಸು ಮತ್ತು ನಿನ್ನ ಕಡೆಯಿಂದ ಒಂದು ಅಧಿಕಾರವನ್ನು ನನಗೆ ನೆರವಾಗಿಸು. ಸತ್ಯ ಬಂದು ಬಿಟ್ಟಿತು, ಮಿಥ್ಯ ಅಳಿದುಹೋಗುವಂತದ್ದೇ” (17: 80,81). ಈ ಸಾಹಸಮಯ ಮತ್ತು ಪರಿಶ್ರಮಭರಿತ ವಲಸೆಯು ಎಷ್ಟೊಂದು ವಿಜಯಪ್ರದವಾಗಿತ್ತುಯೆಂದು ಆಮೇಲೆ ಮದೀನದ ಆದರ್ಶಮಯ ಆಡಳಿತ ಸ್ಥಾಪನೆಯಿಂದ ಪ್ರಜ್ವಲಿಸಿತು.

ಕರ್ಬಲಾದ ಯುದ್ಧ​:

ಮುಹರ್ರಮ್ ಇನ್ನೂ ಹಲವಾರು ಘಟನೆಗಳಿಗೂ ಸಾಕ್ಷ್ಯ ವಹಿಸಿದೆ. ಅದರಲ್ಲಿ ಅತ್ಯಂತ ಪ್ರಮುಖವಾಗಿರುವುದು ಕರ್ಬಲಾದ ಯುದ್ಧ​. ಖಿಲಾಫತ್ ಎಂಬುದು ಇಸ್ಲಾಮಿನಲ್ಲಿ ಪ್ರಜಾಪ್ರಭುತ್ವ ಪದ್ಧತಿಯ ಮೂಲಕ ಆಡಳಿತಗಾರನ ಆಯ್ಕೆ. ಭೂಮಿಯ ಮೇಲೆ ಸೃಷ್ಟಿಕರ್ತನ ಪ್ರತಿನಿಧಿಯೆಂಬ ಅರ್ಥವೂ ಖಲೀಫ ಪದಕ್ಕಿದೆ. ಪ್ರವಾದಿ ಸಂಗಾತಿಗಳಲ್ಲಿ ಒಬ್ಬರಾಗಿದ್ದ ಮುಆವಿಯರವರು ತನ್ನ ನಂತರ ಮಗ ಯಝೀದ್ ನನ್ನು ಅರಸ​ನನ್ನಾಗಿ ನೇಮಿಸಿ ವಂಶಾಡಳಿತಕ್ಕೆ ಆಸ್ಪದ ನೀಡಿದರು.  ಇದು ಇಸ್ಲಾಮಿನ ಇತಿಹಾಸದಲ್ಲಿ ಒಂದು ಸೈದ್ಧಾಂತಿಕ   ಪ್ರಮಾದ ಮತ್ತು ಗಂಭೀರ ಸ್ವರೂಪದ ತಪ್ಪಿನ ಆರಂಭವಾಗಿತ್ತು. ಪ್ರವಾದಿಯಿಂದ ಸ್ಥಾಪಿತ​    ಮತ್ತು ಸಂಗಡಿಗರ ಮುಂದುವರಿದ ಖಿಲಾಫತ್ ಆಡಳಿತವು ಪ್ರಜಾಪ್ರಭುತ್ವದ ವ್ಯವಸ್ಥೆಯಿಂದ​   ವಂಶಾಡಳಿತ​ ಮತ್ತು ನಿರಂಕುಶ​  ಸರ್ವಾಧಿಕಾರದೆಡೆ  ಹೋಗುವುದರ  ಕಂಡು  ಪ್ರವಾದಿಯವರ  ಮೊಮ್ಮಗ ಹುಸೈನ್ ರವರು  ರಾಷ್ಟ್ರ  ಮತ್ತು ಅದರ ಸಂಪತ್ತು ಸರ್ವ ಪ್ರಜೆಗಳ ಹಕ್ಕು,  ಅದು  ಯಾರದೇ ಪಿತ್ರಾರ್ಜಿತ ಸ್ವತ್ತಲ್ಲವೆಂದು ಬಂಡಾಯವೆದ್ದರು, ತೀವ್ರ ವಿರೋಧದ  ಹೊರತಾಗಿಯೂ ಯಝೀದ್ ಅಧಿಕಾರವನ್ನು ತ್ಯಜಿಸದಿದ್ದಾಗ ತನ್ನವರಿಂದಲೇ ಅಸಹಕಾರವಿದ್ದರೂ ಹಝ್ರತ್ ಹುಸೈನ್ ರು ಲೆಕ್ಕಿಸಲಿಲ್ಲ​; ಯುದ್ಧಸಾರಿದರು. ಶಕ್ತ ಆಡಳಿತದ  ವಿರುದ್ಧ ಬಂಡಾಯವು ಅಪಾರ ರಕ್ತಪಾತ ಮತ್ತು ಸಾವುಗಳಿಗೆ ಆಸ್ಪದವೆಂದನ್ನು ಮುಂದೆ ಕಂಡೂ ಸ್ವಾರ್ಥಕ್ಕಾಗಿ ಪಲಾಯನುಕ್ಕಿಂತ ಒಂದು  ಉದಾತ್ತ ಉದ್ದೇಶದ ಹಾದಿಯಲ್ಲಿ ಹುತಾತ್ಮತೆಯು ಶ್ರೇಷ್ಠತೆಯಾಗಿದೆಯಂಬುದು  ಅವರ  ನಿಲುವಾಗಿತ್ತು. ಆ ಯುದ್ಧದಲ್ಲಿ ಆದ ನಾಶನಷ್ಟಗಳು ಅಪಾರ​. ತನ್ನ ಪ್ರಾಣವನ್ನೂ ತನ್ನ ಇಡೀ ಕುಟುಂಬವನ್ನೇ ಒಂದು ಆದರ್ಶಕ್ಕಾಗಿ ತ್ಯಾಗಬಲಿದಾನಗಳನ್ನು ನೀಡಿದರು. ಅನ್ಯಾಯದ ವಿರುದ್ಧ ಸದಾ ಹೋರಾಡಬೇಕೆನ್ನುವ ತನ್ನ ತಾತನ ಹಾದಿಯಲ್ಲಿ ಒಂದು ಉದಾಹರಣೆಯನ್ನು ಲೋಕದ ಮುಂದೆ  ಪ್ರಾಯೋಗಿಕವಾಗಿ  ತೋರಿಸಿದರು.  ಹುತಾತ್ಮರಾದರು. ತಪ್ಪುಗಳ ವಿರುದ್ಧ ಸಂಘರ್ಷ ಮತ್ತ ಸತ್ಯಕ್ಕಾಗಿ ಹೋರಾಡುವುದೇ ಜಿಹಾದ್ ಆಗಿದೆ.

Advertisement

ಮೋಸಸ್ ಮತ್ತು ಸಂಗಾತಿಗಳನ್ನು ಸಮುದ್ರವನ್ನು ಸೀಳಿ ದೇವನು ಪಾರುಗೊಳಿಸಿದುದು

ಇನ್ನೊಂದು ಪ್ರಮುಖ ಘಟನೆಯೂ ಈ ತಿಂಗಳಲ್ಲೇ ನಡೆದಿದೆ. ಈಜಿಪ್ತ್ ನ ಫರೋಹ ಬನೀ ಇಸ್ರಾಈಲ್ ಸಮುದಾಯವನ್ನು ತನ್ನ ಗುಲಾಮರಾಗಿಸಿಕೊಂಡಿದ್ದನು. ಪ್ರವಾದಿ ಮೂಸೆಸ್ ಅವರಿಗೆ ನ್ಯಾಯಒದಗಿಸಲಿಕ್ಕಾಗಿ ಆ ಸರ್ವಾಧಿಕಾರಿಯೊಂದಿಗೆ ದೀರ್ಘಕಾಲದವರೆಗೆ ಹೋರಾಡಿಕೊಂಡು  ಬಂದಿದ್ದರು. ದಬ್ಬಾಳಿಕೆ ಹೆಚ್ಚಾದಾಗ ಬನೀ ಇಸ್ರಾಈಲ್ ಸಮುದಾಯವನ್ನು ಜೊತೆಗೂಡಿಸಿ ಮೋಸಸ್ ಈಜಿಪ್ತ್ ಬಿಟ್ಟು ಹೊರಡುತ್ತಾರೆ.

ಫರೋಹ ಸೇನೆಯೊಂದಿಗೆ ಬೆನ್ನಟ್ಟಿಕೊಂಡು ಬಂದಾಗ ಸಮುದ್ರ ಎದುರಾಗುತ್ತದೆ. ಮೋಸಸ್ ಮತ್ತು ಸಂಗಾತಿಗಳಿಗೆ ಅಡಕತ್ತರಿಯಲ್ಲಿ ಸಿಕ್ಕಿಕೊಂಡ ಪರಿಸ್ಥಿತಿ. ಆಗ ಮೋಸಸ್ ರಿಗೆ ಕೈಯಲ್ಲಿರುವ ಲಾಠಿಯನ್ನು ಸಮುದ್ರಕ್ಕೆ ಸ್ಪರ್ಶಿಸುವಂತೆ ದೇವನಿಂದ ಆದೇಶವಾಗುತ್ತದೆ. ಅದ್ಭುತ ಪವಾಡವಾಗಿ ಸಮುದ್ರದೊಳಗೆ ಹೋಳಾಗಿ ರಾಜರಸ್ತೆಯೇ ನಿರ್ಮಾಣವಾಗುತ್ತದೆ. ಆಗ ಮೋಸಸ್ ಮತ್ತು ಸಂಗಾತಿಗಳು ಆ ದಾರಿಯಲ್ಲಿ ಸಾಗಿ ಇನ್ನೊಂದು ದಡ ಸೇರುತ್ತಾರೆ. ಹಿಂಬಾಲಿಸಿ ಬಂದ ಫರೋಹ ಮತ್ತು ಸೇನೆ ಸಮುದ್ರದ ಮಧ್ಯ ತಲುಪಿದಾಗ ಸಮುದ್ರ ಒಂದಾಗುತ್ತದೆ.

ಕುರಾನ್ ಈ ರೀತಿ ಹೇಳುತ್ತದೆ: “ನಾವು ಬನೀಇಸ್ರಾಈಲರನ್ನು ಸಮುದ್ರ   ದಾಟಿಸಿ ಕೊಂಡೊಯ್ದೆವು. ಅನಂತರ ಫಿರೌನನೂ ಅವನ ಸೇನೆಯೂ ದಂಗೆ ವಿದ್ವೇಶಗಳನ್ನು   ಉದ್ದೇಶವಾಗಿರಿಸಿಕೊಂಡು ಅವರನ್ನು ಬೆನ್ನಟ್ಟಿದರು. ಕೊನೆಗೆ ಫಿರೌನನು ಮುಳುಗುತ್ತಿರುವಾಗ   ಹೀಗೆಂದನು, ‘ಬನೀಇಸ್ರಾಈಲರು ವಿಶ್ವಾಸವಿಟ್ಟಿರುವ ದೇವನ ಹೊರತು ಅನ್ಯ ದೇವನಿಲ್ಲವೆಂದು  ನಾನು ಒಪ್ಪಿಕೊಂಡೆನು ಮತ್ತು ನಾನೂ ಶರಣಾಗುವವರಲ್ಲಾಗಿರುತ್ತೇನೆ. ‘ಈಗ ವಿಶ್ವಾಸವಿಡುತೀಯಾ? ವಸ್ತುತಃ ಇದಕ್ಕೆ ಮುಂಚಿನವರೆಗೂ ನೀನು ಆಜ್ಞೋಲ್ಲಂಘನೆ   ಮಾಡುತ್ತಲಿದ್ದೆ ಮತ್ತು ಕಿಡಿಗೇಡಿಗಳಲ್ಲಾಗಿದ್ದೆ. ನಿಶ್ಚಯವಾಗಿಯೂ ನಮ್ಮ ನಿದರ್ಶನಗಳ ಬಗ್ಗೆ ಅಲಕ್ಷರಾಗಿರುವವರು ಬಹುಸಂಖ್ಯೆಯಲ್ಲಿದ್ದರೂ ನೀನು ಮುಂದಿನ ತಲೆಮಾರುಗಳಿಗೆ  ಎಚ್ಚರಿಕೆಯ ದ್ಯೋತಕವಾಗಿರುವಂತೆ ನಾವಿನ್ನು ನಿನ್ನ ಶವವನ್ನು ಮಾತ್ರ ಸುರಕ್ಷಿತರಾಗಿಸುವೆವು (10 : 90 – 92). ಈಜಿಪ್ತ್ ನ ವಸ್ತುಸಂಗ್ರಹದಲ್ಲಿ ಮೃತದೇಹವು ಸುರಕ್ಷಿತವಾಗಿದೆ.  ಒಂದು ಸಮುದಾಯವನ್ನು ಗುರಿಯಾಗಿಸಿ ಅನ್ಯಾಯ ದೌರ್ಜನ್ಯ ಮಿತಿಮೀರಿದಾಗ ಇಂತಹ ಪರಿಣಾಮಗಳನ್ನು ಚರಿತ್ರೆಯಲ್ಲಿ ಕಾಣಬಹುದಾಗಿದೆ.

ಯಹೂದಿಯರು ಫರೋಹನ ದಾಸ್ಯದಿಂದ ಮತ್ತು ಪವಾಡಸದೃಷವಾಗಿ ಪಾರುಗೊಳಿಸಿದುದರ   ಕೃತಜ್ಞತೆಯಾಗಿ ಒಂದು ದಿನದ ಉಪವಾಸ ​ಆಚರಿಸುತ್ತಾರೆಂದು ಪ್ರವಾದಿಯವರಿಗೆ ತಿಳಿದಾಗ,  ಹಾಗಾದರೆ ನಾವು ಎರಡು ದಿನ  ಉಪವಾಸ ಅಚರಿಸೋಣ, ಮೋಸಸ್ ರು ನಮಗೆ ಹೆಚ್ಚಿನ  ಪ್ರಸ್ತುತರೆಂದರು. ವಿವಿಧ ವಿಶೇಷತೆಗಳಿರುವುದರಿಂದ​ ಆ ದಿವಸಗಳ ಸ್ಮರಣೆಗಾಗಿ ಮುಸ್ಲಿಮರು  ಉಪವಾಸವಿಡುತ್ತಾರೆ. ರಮಝಾನ್ ನ ಮುಂಚೆ ಆಶೂರದ ಈ ಉಪವಾಸ ಕಡ್ಡಾಯವಾಗಿತ್ತು.

ಎಲ್ಲೆಲ್ಲಿ ಅಶಾಂತಿ ಇದೆಯೋ ಅದರ ಏಕೈಕ ಕಾರಣ ಅನ್ಯಾಯವೆಂಬುದನ್ನು ಸ್ಪಷ್ಟ ಮತ್ತು ವ್ಯಕ್ತವಾಗಿ ಗಮನಿಸಬಹುದಾಗಿದೆ. ನ್ಯಾಯದ​ ಬುನಾದಿ ಮೇಲಿರುವ​ ಜೀವನ ವ್ಯವಸ್ಥೆಯು   ಅಖಂಡ ಭೂಮಂಡಲ ಮತ್ತು ಅದರಲ್ಲಿರುವ ಚರಾಚರಗಳನ್ನು ಸೃಷ್ಟಿಸಿದ ಏಕೈಕ ಒಡೆಯ ನೀಡಿರುವ ಸಮಗ್ರ ಜೀವನ ಪದ್ಧತಿಯಾಗಿದೆ. ಅನ್ಯಾಯವನ್ನು ಅಳಿಸಿ ನ್ಯಾಯದ​, ಮಾನವೀಯತೆ​, ಶಾಂತಿಯ ಯಶಸ್ವೀ ಜೀವನವ್ಯವಸ್ಥೆಯ ಸ್ಥಾಪನೆ ಎಲ್ಲಾ ಪ್ರವಾದಿಗಳ ಮತ್ತು  ಮಹಾಪುರುಷರುಗಳ ಅಭಿಯಾನವಾಗಿತ್ತು. ಶ್ರೇಷ್ಠ ಉದ್ದೇಶಕ್ಕಾಗಿ ತ್ಯಾಗ ಬಲಿದಾನಗಳು ಅನಿವಾರ್ಯವೆಂಬುದನ್ನು ಆದರ್ಶ ನಾಯಕರ ಮಾದರಿಯಾಗಿದೆಯೆಂಬುದು ಇತ್ತೀಚೆಗಷ್ಟೇ  ಹಿಜರಿಶಕೆಯ  ಆಂತ್ಯದಲ್ಲಿ ಕಳೆದ ಬಕ್ರೀದ್ ನ ಪ್ರವಾದಿ ಅಬ್ರಹಾಮ್ ಮತ್ತು ಇಸ್ಮಾಯಿಲ್ ರ  ಜೀವನದ  ಸಂದೇಶದಲ್ಲೂ  ಸ್ಮರಿಸಿದೆವು.  ಹಿಜರಿಶಕೆಯ ಆರಂಭವೂ ಅಂತ್ಯವೂ ತ್ಯಾಗ ಬಲಿದಾನದ ಬದ್ಧತೆಯ ಆದರ್ಶವನ್ನು ನಮಗೆ ನೀಡುತ್ತದೆ.  ಸಮಾಜದ ನಿರ್ಮಾಣದಲ್ಲಿ,  ನ್ಯಾಯದ, ಮಾನವೀಯತೆಯ, ಶಾಂತಿಯ  ವ್ಯವಸ್ಥೆಯನ್ನು ಸ್ಥಾಪಿಸುವಲ್ಲಿ ತಂತಮ್ಮ  ಶಕ್ತ್ಯಾನುಸಾರ  ತ್ಯಾಗಬಲಿದಾನದಿಂದ ಜವಾಬ್ದಾರಿಯನ್ನು ನಾವು ನಿಭಾಯಿಸಬೇಕಾಗಿದೆ.

 ಆರೆಮ್ ಸಿದ್ದೀಕ್, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next