Advertisement

ಹೇಮಾವತಿ ನದಿ ತೀರದಲ್ಲಿ ಮಹಾಗಣಪತಿ ಉತ್ಸವಕ್ಕೆ ಸಿದ್ಧತೆ

12:47 PM Jan 24, 2020 | Naveen |

ಮೂಡಿಗೆರೆ: ಹೇಮಾವತಿ ನದಿ ಉಗಮ ಸ್ಥಾನ ಮೂಡಿಗೆರೆ ತಾಲೂಕಿನ ಜಾವಳಿಯಲ್ಲಿ ನದಿ ಪಕ್ಕದಲ್ಲೇ ಇರುವ ಭಕ್ತರು ಹಾಗೂ ನಿಸರ್ಗ ಆರಾಧಕರನ್ನು ಕೈಬೀಸಿ ಕರೆಯುವ ವಿಘ್ನನಿವಾರಕ ಶ್ರೀ ಮಹಾಗಣಪತಿ ದೇವಸ್ಥಾನಲ್ಲಿ ಜ.28ರಂದು ನಡೆಯುವ ಮಹಾಗಣಪತಿ ಉತ್ಸವಕ್ಕೆ ಸಕಲ ಸಿದ್ಧತೆಗಳು ಭರದಿಂದ ನಡೆಯುತ್ತಿವೆ.

Advertisement

ನದಿ ಮೂಲ ಮತ್ತು ಋಷಿ ಮೂಲ ಹುಡುಕಬಾರದು ಎಂಬ ನಾಣ್ಣುಡಿಯಂತೆ, ಹೇಮಾವತಿ ನದಿ ಮೂಲದ ಜಾಡು ಕೂಡ ಕುತೂಹಲ ಮೂಡಿಸುತ್ತದೆ. ಶ್ರೀ ಮಹಾಗಣಪತಿ ದೇವಸ್ಥಾನದ ಸನ್ನಿಧಾನದಲ್ಲಿ ಹನಿಯ ರೂಪದಲ್ಲಿ ತೊಟ್ಟಿಕ್ಕುವ ಹೇಮಾವತಿ ಜಾವಳಿ ಗ್ರಾಮದ ಬೆಟ್ಟದ ಮೇಲಿಂದ ಇಳಿದು ನದಿಯಾಗಿ ಹರಿದು ಮೂಡಿಗೆರೆ ಮತ್ತು ಹಾಸನ ಸೇರಿದಂತೆ ನಾಲ್ಕು ಜಿಲ್ಲೆಗಳ ರೈತರ ಪಾಲಿನ ಜೀವದಾತೆಯಾಗಿದ್ದಾಳೆ.

ಹಲವು ವಿಶೇಷಗಳ ಹೇಮಾವತಿ ನದಿ ಮೂಲವಾದ ಜಾವಳಿಯ ಬೆಟ್ಟದಲ್ಲಿ ಪ್ರತಿವರ್ಷ ನಡೆಯುವ ಉತ್ಸವಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾಗುತ್ತಾರೆ. ಈ ಬಾರಿ ಜ.28ರಂದು ಜಾತ್ರೆ ನಡೆಯಲಿದ್ದು, ದೇವಸ್ಥಾನದ ಉತ್ಸವ ಸಮಿತಿ ಅಧ್ಯಕ್ಷ ಪ್ರವೀಣ್‌.ಎ. ಗುರ್ಜಾರ್‌ ಅವರ ಸಹಯೋಗದಲ್ಲಿ ಭರದ ಸಿದ್ಧತೆ ನಡೆದಿದೆ. ಜಾತ್ರೆ ಅಂಗವಾಗಿ ಶ್ರೀ ಮಹಾಗಣಪತಿ ಹೋಮ,
ಪಂಚಾಮೃತ ಅಭಿಷೇಕ, ಮಹಾ ಮಂಗಳಾರತಿ, ಅನ್ನದಾನ, ಪಲ್ಲಕ್ಕಿ ಉತ್ಸವ ನಡೆಯಲಿದೆ. ಸಮಿತಿ ಸದಸ್ಯರು, ಸ್ಥಳೀಯರು ಹಾಗೂ ದೂರದ ಊರುಗಳಿಂದ ಸಾವಿರಾರು ಜನ ಉತ್ಸವದಲ್ಲಿ ಪಾಲ್ಗೊಂಡು ಪುನೀತರಾಗುತ್ತಾರೆ.

ಇತಿಹಾಸದ ಪುಟಗಳಲ್ಲಿ ಜಾವಳಿ ನಂಟು: ಈ ಸ್ಥಳದ ಬಗ್ಗೆ ಪುರಾಣದಲ್ಲೂ ಉಲ್ಲೇಖಗಳಿವೆ. ಸತ್ಯಕಾಮನೆಂಬ ಹುಡುಗ ಜ್ಞಾನಿಗಳಾದ ಗೌತಮ ಮಹರ್ಷಿ ಅವರ ಬಳಿಗೆ ಹೋಗಿ, ತನ್ನನ್ನು ಶಿಷ್ಯನನ್ನಾಗಿ ಸ್ವೀಕರಿಸುವಂತೆ ವಿನಂತಿಸಿದನಂತೆ. ಗೌತಮ ಮಹರ್ಷಿಗಳು ಆತನ ಗೋತ್ರ ವಿಚಾರಿಸಿದಾಗ ಅವನಿಗೆ ಅದು ತಿಳಿಯದೇ ಇದ್ದುದ್ದರಿಂದ ಆತನ ತಾಯಿ ಜಾವಾಲಿ ಬಳಿ ವಿಚಾರಿಸಿ ಬಾ ಎನ್ನುತ್ತಾರೆ. ತಾಯಿಗೂ ಕೂಡ ತಿಳಿಯದೇ ಇದ್ದುದರಿಂದ ಗೋತ್ರದ ವಿಚಾರ ತನಗೂ, ತನ್ನ ತಾಯಿಗೂ ಅರಿತಿಲ್ಲವೆಂದು ಹೇಳುತ್ತಾನೆ. ಆಗ ಮಹರ್ಷಿಯು ಸತ್ಯಕಾಮನ ಪೂರ್ವಾಪರ ಮೊದಲೇ ತಿಳಿದುಕೊಂಡು ಸತ್ಯಕಾಮನನ್ನು ಶಿಷ್ಯನನ್ನಾಗಿ ಸ್ವೀಕರಿಸುತ್ತಾರೆ.

ಗೌತಮ ಮಹರ್ಷಿಗಳುಸತ್ಯಕಾಮನಿಗೆ ಬ್ರಹ್ಮೋಪದೇಶ ಮಾಡಿ 300 ಗೋವುಗಳನ್ನು ನೀಡಿ ಇವುಗಳ ಸಂಖ್ಯೆ 1000 ಆಗುವ ತನಕ ನೋಡಿಕೊಳ್ಳಲು ಆಜ್ಞಾಪಿಸುತ್ತಾರೆ. ಗುರು ಕೊಟ್ಟ ಹಸುಗಳೊಂದಿಗೆ ತಪಸ್ಸಿಗೆ ತೆರಳುತ್ತಾನೆ. ಹಾಗೆ ತಪಸ್ಸಿಗೆ ಕುಳಿತ ಬೆಟ್ಟವೇ ಜಾವಳಿ ಸಮೀಪದ ಹೇಮಾವತಿ ಬೆಟ್ಟ. ಆತನು ಸ್ಥಾಪಿಸಿದ ಆಶ್ರಮದ ವಾತಾವರಣದಲ್ಲಿ ನೀರಿಲ್ಲ ಎಂದು ಗಮನಕ್ಕೆ ಬಂದ ಸತ್ಯಕಾಮನಿಗೆ ಶಿವನ ಶಿರದಿಂದ ಗಂಗೆಯನ್ನು ಕರುಣಿಸುವಂತೆ ಪಾರ್ವತಿಯನ್ನು ಪ್ರಾರ್ಥಿಸಿದ್ದರಿಂದ ದೇವಿ ಪಾರ್ವತಿ ಪ್ರತ್ಯಕ್ಷಳಾದಾಗ ಸತ್ಯಕಾಮನು ಹಸುಗಳಿಗೆ ಕುಡಿಯಲು ನೀರಿಲ್ಲ ಎಂದು ಉತ್ತರಿಸುತ್ತಾನೆ. ದಟ್ಟ ಅರಣ್ಯದ ಮಧ್ಯೆ ಹಿಮ ಮತ್ತು ಮಂಜುಗೆಡ್ಡೆ ಪ್ರತ್ಯಕ್ಷವಾದುವು. ಹಿಮವು ನೀರಾಗಿ ಹರಿದು ಒಣ ಭೂಮಿ ಫಲವತ್ತತೆಯಾಗಲಿ ಎಂದು ಅಜ್ಞಾಪಿಸಿದಾಗ ಹಿಮವು ಕರಗಿ ನೀರಾಗಿ ಹಿಮವಾಹಿನಿಯಾಯಿತು ಎಂಬುದು ಇಲ್ಲಿನ ನಂಬಿಕೆ. ಮುಂದೆ ಸತ್ಯಕಾಮನು ಸ್ಥಾಪಿಸಿದ ಆಶ್ರಮ ಜಾವಾಲಿ ಎಂದಾಯಿತು. ಕಾಲಕ್ರಮೇಣ ಜಾವಳಿ ಎಂದು ಬದಲಾಯಿತು ಎಂಬುದು ಇತಿಹಾಸಕಾರರ ಅಭಿಪ್ರಾಯ.

Advertisement

ನದಿ ಮೂಲದ ದೇವಸ್ಥಾನಕ್ಕೆ ಹೊಸ ದಾರಿ: ಹೇಮಾವತಿಯ ನದಿ ಮೂಲ ಮತ್ತು ಶ್ರೀ ಮಹಾಗಣಪತಿ ದೇವಸ್ಥಾನಕ್ಕೆ ಸಾಗಲು ರಸ್ತೆ ಕಿರಿದಾಗಿದ್ದು, ಜಾವಳಿಯಿಂದ ಹಿಂದೆ ರಾಜ್ಯ ಹೆದ್ದಾರಿಯಲ್ಲಿಯೇ ಬಾಳೂರಿನಿಂದ 2 ಕಿಮೀ ಅಂತರದಲ್ಲಿ ರಸ್ತೆ ನಿರ್ಮಾಣ ಮಾಡಲಾಗಿತ್ತು. ಆದರೆ ಆ ರಸ್ತೆ ಕಿರಿದಾಗಿದ್ದರಿಂದ ವಾಹನಗಳು ಸಾಗಲು ವಾಹನ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿತ್ತು. ಈ ಬಾರಿ ಉತ್ಸವಕ್ಕೆ ಸಾಗಲು ಜಾವಳಿಯ ಗ್ರಾ.ಪಂ. ಸಮೀಪದ ರಸ್ತೆಯಲ್ಲಿ ಉತ್ತಮವಾದ ರಸ್ತೆ ನದಿಮೂಲಕ್ಕೆ ಯಾವುದೇ ಅಡಚಣೆಯಾಗದಂತೆ ನಿರ್ಮಿಸಲಾಗಿದೆ. ಜಾವಳಿ ಊರಿನಿಂದ 2 ಕಿ.ಮೀ. ಕ್ರಮಿಸಿದರೆ ದೇವಸ್ಥಾನಕ್ಕೆ ನೇರವಾಗಿ ತೆರಳಬಹುದು. ಬಾಳೂರಿನಿಂದ 2 ಕಿ.ಮೀ. ಅಂತರದ ಎಡಗಡೆಯ ರಸ್ತೆಯಲ್ಲೂ ಹೇಮಾವತಿಗೆ ಸಾಗಬಹುದು.

ಗಣಪತಿ ಉತ್ಸವಕ್ಕೆ ಭರ್ಜರಿ ಸಿದ್ಧತೆ: ಜಾವಳಿಯ ಹೇಮಾವತಿ ಜಾತ್ರೆಗೆ ಇಲ್ಲಿಯ ಹಿರಿಯರಾದ ಪ್ರವೀಣ್‌.ಎ.ಗುರ್ಜಾರ್‌ ಅವರ ನೇತೃತ್ವದಲ್ಲಿ ನಡೆಯುವ ಸಿದ್ಧತೆಗಳಿಗೆ ನೆರವಾಗುತ್ತಾರೆ. ಊರಿನ ಪ್ರಮುಖರು, ಭಕ್ತರು ಕೂಡ ಕೈಜೋಡಿಸಿ ಉತ್ಸವದಲ್ಲಿ ವಿಶೇಷ ಪೂಜೆ ನಡೆಯಲು ಸಹಕರಿಸುತ್ತಾರೆ. ಜನವರಿ 28ರಂದು ಬೆಳಗ್ಗೆ 8 ಗಂಟೆಗೆ ಪೂಜಾ ಕೈಂಕರ್ಯ, ಪಲ್ಲಕ್ಕಿ ಉತ್ಸವಗಳನ್ನು ನಡೆಸಿ, ಸರ್ವ ಭಕ್ತರಿಗೂ ಅನ್ನಸಂತರ್ಪಣೆ ನೆರವೇರಿಸಲಾಗುತ್ತದೆ. ಸಾವಿರಾರು ಭಕ್ತರು ಹೇಮಾವತಿ ಉತ್ಸವದಲ್ಲಿ ಭಾಗವಹಿಸಿ ಗಣಪತಿ ಕೃಪೆಗೆ ಪಾತ್ರರಾಗುತ್ತಾರೆ.

ಪ್ರತಿ ವರ್ಷ ಹೇಮಾವತಿಯಲ್ಲಿ ಶ್ರದ್ಧಾ-ಭಕ್ತಿಯಿಂದ ಮಹಾಗಣಪತಿ ಉತ್ಸವ ನಡೆಯುತ್ತದೆ. ಪ್ರತಿ ವರ್ಷ ನಾನು ಈ ಉತ್ಸವದಲ್ಲಿ ಭಾಗವಹಿಸುತ್ತೇನೆ. ಉತ್ಸವ ಸಮಿತಿಯ ಪದಾಧಿಕಾರಿಗಳು ಜಾತ್ರಾ ಸಮಯದಲ್ಲಿ ಅಚ್ಚುಕಟ್ಟಾದ ವ್ಯವಸ್ಥೆ ಮಾಡಿರುತ್ತಾರೆ. ಸರ್ವ ಭಕ್ತರನ್ನು ಆಕರ್ಷಿಸುವ ಐತಿಹಾಸಿಕ ತಾಣ ಇದಾಗಿದೆ. ದೂರದ ಊರಿನಿಂದಲೂ ಪ್ರವಾಸಿಗರು ಹಾಗೂ ಭಕ್ತರು ಹೇಮಾವತಿಗೆ ಬಂದು ವಿಶೇಷ ಪೂಜೆ ಸಲ್ಲಿಸುತ್ತಾರೆ.
ಪರೀಕ್ಷಿತ್‌ ಜಾವಳಿ, ಸ್ಥಳೀಯರು

ಸುಧೀರ್‌ ಬಿ.ಟಿ

Advertisement

Udayavani is now on Telegram. Click here to join our channel and stay updated with the latest news.

Next