Advertisement

ಕಳೆಗುಂದಿದ್ದ ಸರ್ಕಾರಿ ಶಾಲೆಗೆ ಕಾಯಕಲ್ಪ

01:15 PM Mar 11, 2020 | Naveen |

ಮೂಡಿಗೆರೆ: 1979ರಲ್ಲಿ ಪ್ರಾರಂಭವಾದ ತಾಲೂಕಿನ ದಾರದಹಳ್ಳಿ ಸರ್ಕಾರಿ ಪ್ರೌಢಶಾಲೆ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯೆಯ ಮೂಲಕ ಜೀವನ ಕಟ್ಟಿಕೊಟ್ಟ ಗುರುಕುಲ ಎನ್ನಬಹುದು. ಕಳೆಗುಂದಿದ್ದ ಶಾಲೆಗೆ ಬೆಂಗಳೂರಿನ ಯೂಥ್ಸ್ ಫಾರ್‌ ಸೇವಾ ಹಾಗೂ ರೆಫನೇಟಿವ್‌ ಸಾಫ್ಟ್‌ವೇರ್‌ ಎನ್‌ಜಿಒ ಸಂಸ್ಥೆ ಸದಸ್ಯರು ಕಾಯಕಲ್ಪ ನೀಡಿದ್ದಾರೆ.

Advertisement

ಹಲವರ ಬದುಕಿಗೆ ದಾರಿದೀಪವಾಗಿ ಅಕ್ಷರ ದಾನ ಮಾಡಿದ ಇಲ್ಲಿನ ಶಾಲೆಯ ಕಟ್ಟಡ ಕಾಲಕ್ಕೆ ತಕ್ಕಂತೆ ಹಾಳಾಗುತ್ತಾ ಬಂದಿತ್ತು. ಸುಣ್ಣ-ಬಣ್ಣ ಕಾಣದೆ ವರ್ಷಗಳೇ ಕಳೆದಿದ್ದ ಶಾಲೆಗೆ ಪುನರ್‌ ನವೀಕರಣದ ಮೂಲಕ ಮರುಜೀವ ನೀಡುವಂತೆ ಗ್ರಾಮಸ್ಥರ ಆದಿಯಾಗಿ ಎಲ್ಲರೂ ಸರ್ಕಾರ ಹಾಗೂ ಜನಪ್ರತಿ ನಿಧಿಗಳನ್ನು ಒತ್ತಾಯ ಮಾಡುತ್ತಲೇ ಬಂದಿದ್ದರು. ಆದರೆ, ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಮಹಾಮಳೆಯಿಂದಾಗಿ ಶಾಲೆಯ ಕಟ್ಟಡ ಬೀಳುವ ಹಂತಕ್ಕೆ ಬಂದು ನಿಂತಿತ್ತು. ಶಾಲೆಗೆ ಸಂಬಂಧವೇ ಇಲ್ಲದವರಿಂದ ಇಂದು ಶಾಲೆಗೆ ಹೊಸ ರೂಪ ಸಿಕ್ಕಿದೆ. ಅಲ್ಲಲ್ಲಿ ಕಿತ್ತುಬಂದಿದ್ದ ಗೋಡೆಗಳ ಮೇಲ್ಪದರ, ಕಿಲುಬು ಹಿಡಿದಿದ್ದ ಕಿಟಕಿ-ಬಾಗಿಲುಗಳು, ಪಾಠ ಹೇಳಿಕೊಡಲು ಬಳಸುವ ಬೋರ್ಡ್‌ಗಳು ಸೇರಿದಂತೆ ಹಲವು ಮೂಲಭೂತ ಸೌಕರ್ಯಗಳನ್ನು ಬಳಸಲು ಯೋಗ್ಯವಾಗುವಂತೆ ಸರಿಪಡಿಸಲಾಗಿದೆ. ಇದರಿಂದಾಗಿ ಶಾಲೆಗೆ ಬದುಕುವ ಚೈತನ್ಯ ಬಂದಿದೆ. ಇದೆಲ್ಲವನ್ನೂ ಕಂಡ ಶಾಲಾ ಮಕ್ಕಳ ಕಣ್ಣುಗಳಲ್ಲಿ ಹೊಸ ಭರವಸೆಯ ಕೋಮಿಂಚು ಮೂಡಿದೆ.

ಹೌದು, “ಯೂಥ್ಸ್ ಫಾರ್‌ ಸೇವಾ ಹಾಗೂ ರೆಫನೇಟಿವ್‌ ಸಾಫ್ಟ್‌ವೇರ್‌’ ಎಂಬ ಎನ್‌ಜಿಒ ಸಂಸ್ಥೆ ದಾರದಹಳ್ಳಿ ಶಾಲೆಯ ಮರುಜನ್ಮಕ್ಕೆ ಕಾರಣವಾಗಿದೆ. ಕೇವಲ ದುಡ್ಡು ಮಾಡುವ ಉದ್ದೇಶದಿಂದ ಎನ್‌ಜಿಒ ಸಂಸ್ಥೆಗಳನ್ನು ಹುಟ್ಟುಹಾಕಿ, ಸಾರ್ವಜನಿಕರಿಂದ ಹಣ ಪೀಕುವ ಸಂಸ್ಥೆಗಳ ಸಾಲಿಗೆ ಸೇರದೆ ಸಮಾಜಮುಖೀ ಕಾರ್ಯಗಳತ್ತ ಒಲವು ತೋರಿಸುತ್ತಾ ಸದ್ದಿಲ್ಲದೇ ಕೆಲಸ ನಿರ್ವಹಿಸುತ್ತಿರುವ “ಯೂಥ್ಸ್ ಫಾರ್‌ ಸೇವಾ ಸಂಸ್ಥೆ’ಯ ಕಾರ್ಯಕ್ಕೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಗ್ರಾಮಸ್ಥರೇ ಇದು ನಮ್ಮ ಊರಿನ ಶಾಲೆಯಾ ಎಂದು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವ ಮಟ್ಟಕ್ಕೆ ಶಾಲೆಯ ವಾತಾವರಣ ಬದಲಾಗಿದೆ.

ಹೊರಗಿನ ಶಾಲೆಯಿಂದ ದಾರದಹಳ್ಳಿ ಶಾಲೆಗೆ ವರ್ಗಾವಣೆಯಾಗಿ ಬಂದ ಮುಖ್ಯ ಶಿಕ್ಷಕ ಅನಂತ್‌ ಶಾಲೆಯ ಪರಿಸ್ಥಿತಿಯನ್ನು ಕಂಡು ತನ್ನ ಸ್ನೇಹಿತರ ಬಳಿ ವಿವರಿಸಿದ್ದರು. ವಿಷಯ ತಿಳಿದ ಯೂಥ್ಸ್ ಫಾರ್‌ ಸೇವಾ ಹಾಗೂ ರೆಫನೇಟಿವ್‌ ಸಾಫ್ಟ್‌ ವೇರ್‌ ಇಂಜಿನಿಯರುಗಳು ಕೂಡಲೇ ಕಾರ್ಯ ಪ್ರವೃತ್ತರಾಗಿ ಶಾಲೆಯ ಚಿತ್ರಣವನ್ನೇ ಬದಲಾಯಿಸಿಬಿಟ್ಟಿದ್ದಾರೆ.

ಸಾಮಾನ್ಯವಾಗಿ ಎಂಎನ್‌ಸಿ ಕಂಪೆನಿಗಳಲ್ಲಿ ಕೆಲಸ ಮಾಡುವ ವೃತ್ತಿಪರರು ವೀಕೆಂಡ್‌ ಬಂದರೆ ಸಾಕು ಮೋಜು-ಮಸ್ತಿ ಮಾಡೋಣ ಅನ್ನೂರೇ ಜಾಸ್ತಿ. ಆದರೆ, ಯೂಥ್ಸ್ ಫಾರ್‌ ಸೇವಾ ಹಾಗೂ ರೆಫನೇಟಿವ್‌ ಸಾಫ್ಟ್‌ವೇರ್‌ ಎನ್‌ಜಿಒ ಸಂಸ್ಥೆ ವೀಕೆಂಡ್‌ನ‌ಲ್ಲಿ ಶಾಲೆಯೊಂದನ್ನು ಉಳಿಸುವ ಕಾಯಕಕ್ಕೆ ಮುಂದಾಗಿರುವುದು ಇತರರಿಗೆ ಮಾದರಿ.

Advertisement

ತಿಂಗಳಿಗೆ ಲಕ್ಷಾಂತರ ರೂ. ಸಂಬಳ ಪಡೆಯುತ್ತೇವೆ ಎನ್ನುವ ಅಹಂಕಾರ ಇಲ್ಲದೇ ಹಳ್ಳಿಗರ ಜೊತೆಗೆ ಜನಸಾಮಾನ್ಯರ ರೀತಿ ಬೆರೆತು ಶಾಲೆಗೆ ಅವಶ್ಯವಿದ್ದ ಕಾರ್ಯಗಳನ್ನು ಮಾಡಿಕೊಟ್ಟಿರುವುದು ಸಂತಸ ತಂದಿದೆ ಎಂದು ಗ್ರಾಮದ ಹಿರಿಯ ಮಂಜುನಾಥ್‌ ಗೌಡ ಅವರು ಸಂತಸ ವ್ಯಕ್ತಪಡಿಸಿದರು.

ಕೆಲಸದ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ಇಂಜಿನಿಯರ್‌ ರಮ್ಯಾ ಅವರು, ನಾನೂ ಕೂಡ ಕನ್ನಡ ಶಾಲೆಯಲ್ಲಿ ವ್ಯಾಸಂಗ ಮಾಡಿರೋದು. ಕನ್ನಡ ನಮ್ಮ ಹೆಮ್ಮೆ. ಇದು ನಮ್ಮ ಶಾಲೆ ಅಲ್ಲದಿರಬಹುದು. ಆದರೆ, ಕನ್ನಡ ನಾಡಿನಲ್ಲಿರುವ ನಮ್ಮ ಕನ್ನಡ ಶಾಲೆ. ನಾವೆಲ್ಲಾ ಹವಾ ನಿಯಂತ್ರಿತ ಆಫೀಸುಗಳಲ್ಲಿ ಕುಳಿತು ಕೆಲಸ ಮಾಡುತ್ತೇವೆ. ಆದರೆ ಕನಿಷ್ಟ ಸೌಲಭ್ಯವಿಲ್ಲದೆ ಮಳೆ-ಛಳಿ-ಬಿಸಿಲು ಎನ್ನದೇ ಹಗಲಿಡೀ ಕುಳಿತು ಪಾಠ ಕೇಳುವ ಮಕ್ಕಳ ಪರಿಸ್ಥಿತಿ ಕಂಡು ಬೇಸರವಾಯಿತು. ಶಾಲಾ ದಿಗಳಲ್ಲಿ ನಾವೂ ಕೂಡ ಇಂತಹುದೇ ಪರಿಸ್ಥಿಯನ್ನು ಕಂಡಿರುವುದರಿಂದ ನಮ್ಮ ಹಳೆಯ ನೆನಪುಗಳು ಮರುಕಳಿಸಿದವು.

ನಮಗೆ ಇದ್ದಂತಹ ಕಷ್ಟ ಇಂದಿನ ಮಕ್ಕಳಿಗೆ ಬೇಡ ಎಂದು ಈ ಕಾರ್ಯಕ್ಕೆ ಮುಂದಾಗಿದ್ದೇವೆ. ಇನ್ನು ಮುಂದೆಯೂ ಇಂತಹ ಶಾಲೆಗಳನ್ನು ಗುರುತಿಸಿ ಕೈಲಾದಷ್ಟು ಅನುಕೂಲತೆ ಕಲ್ಪಿಸಿಕೊಡುತ್ತೇವೆ ಎಂದರು.

ಯೂಥ್ಸ್ ಫಾರ್‌ ಸೇವಾ ಹಾಗೂ ರೆಫನೇಟಿವ್‌ ಸಾಫ್ಟ್‌ವೇರ್‌ ಇಂಜಿನಿಯರುಗಳ ಈ ಕೆಲಸಕ್ಕೆ ದಾರದಹಳ್ಳಿ ಗ್ರಾಮ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಅಪಾರ ಮೆಚ್ಚುಗೆ ವ್ಯಕ್ತವಾಗುವುದರ ಜೊತೆಗೆ, ಸಂಸದರ ಆದರ್ಶ ಗ್ರಾಮ ಯೋಜನೆಯಡಿ ದತ್ತು ಗ್ರಾಮವಾದ ದಾರದಹಳ್ಳಿ ಗ್ರಾಮದ ಶಾಲೆಯ ಅವ್ಯವಸ್ಥೆಯ ಬಗ್ಗೆ ಗಮನ ನೀಡದ ಸಂಸದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಗಿದೆ.

ಕರ್ನಾಟಕ ಜರ್ನಲಿಸ್ಟ್‌ ಯೂನಿಯನ್‌ ರಾಜ್ಯ ಕಾರ್ಯದರ್ಶಿ ಕೆಸವಳಲು ರಾಘವೇಂದ್ರ, ಶಾಲೆಯ ಮುಖ್ಯೋಪಾಧ್ಯಾಯ ಅನಂತ್‌, ಶಿಕ್ಷಕಿಯರಾದ ಅಶ್ವಿ‌ನಿ, ಮೀನಾ, ಹಳೆಯ ವಿದ್ಯಾರ್ಥಿ ಬ್ರಿಜೇಶ್‌ ಕಡಿದಾಳು, ಗ್ರಾಮಸ್ಥರಾದ ಸಂದೀಪ್‌, ಬೆಟ್ಟಿಗೆರೆ ಪ್ರಶಾಂತ್‌, ಜಯಪಾಲ್‌ ಅಭಿವೃದ್ಧಿ ಕಾರ್ಯಕ್ಕೆ ಜೊತೆಯಾದರು.

ಪ್ರಧಾನಿ ಮೋದಿ ಅವರ ಆಶಯವಾದ ಆದರ್ಶ ಗ್ರಾಮ ಯೋಜನೆಯಡಿ ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ದಾರದಹಳ್ಳಿ ಗ್ರಾಮವನ್ನು ದತ್ತು ನೀಡಲಾಗಿತ್ತು. ಆದರೆ, ಗ್ರಾಮ ಎಲ್ಲಿದೆ ಎನ್ನುವುದೇ ಅವರಿಗೆ ತಿಳಿದಿಲ್ಲ. ತಮಗೆ ಪರಿಚಯವೇ ಇಲ್ಲದ ಎನ್‌ಜಿಒ ಸಂಸ್ಥೆಯೊಂದು ಶಾಲೆಯ ಕೆಲಸ ಮಾಡುತ್ತಿರುವುದು ಶ್ಲಾಘನೀಯ. ಇನ್ನಾದರೂ ಜನಪ್ರತಿನಿಧಿಗಳು ಇಂತಹ ವಿಚಾರಗಳ ಕಡೆ ಗಮನ ಹರಿಸಬೇಕು ಎಂದರು.
ರಂಜನ್‌ ಅಜಿತ್‌ಕುಮಾರ್‌
ಜೆಡಿಎಸ್‌ ಜಿಲ್ಲಾಧ್ಯಕ್ಷರು

Advertisement

Udayavani is now on Telegram. Click here to join our channel and stay updated with the latest news.

Next