Advertisement

ಪುರಸಭೆ ಆವರಣದಲ್ಲಿ ಜೆಡಿಎಸ್‌ ಧರಣಿ

12:39 PM Jul 25, 2019 | Team Udayavani |

ಮೂಡಲಗಿ: ಪುರಸಭೆಯ 2018-19 ಸಾಲಿನಲ್ಲಿ 8 ವಾರ್ಡ್‌ಗಳಿಗೆ ಅವಶ್ಯ ಮೂಲಭೂತ ಸೌಲಭ್ಯ ಒದಗಿಸಿ ಕಾಮಗಾರಿ ಕೈಗೆತ್ತಿಕೊಳ್ಳದಿರುವುದು ಹಾಗೂ ಪುರಸಭೆ ಅಧಿಕಾರಿಗಳ ತಾರತಮ್ಯ ನೀತಿ ಖಂಡಿಸಿ ಬುಧವಾರ ಪುರಸಭೆ ಆವರಣದಲ್ಲಿ ಜೆಡಿಎಸ್‌ ಸದಸ್ಯರು ಮತ್ತು ಸಾರ್ವಜನಿಕರಿಂದ ಹಮ್ಮಿಕೊಂಡ ಧರಣಿ ಸತ್ಯಾಗ್ರಹ ಗುರುವಾರ ಮುಂದುವರಿದಿದೆ.

Advertisement

ಬೆಳಗ್ಗೆ ಪಟ್ಟಣದ ಕಲ್ಮೇಶ್ವರ ವೃತ್ತದಿಂದ ಜೆಡಿಎಸ್‌ ಸದಸ್ಯರು, ನೂರಾರು ಸಾರ್ವಜನಿಕರು ಪುರಸಭೆ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗುತ್ತ ಮೆರವಣಿಗೆ ಮೂಲಕ ಸಾಗಿ ಪುರಸಭೆ ಮುಂಭಾಗದಲ್ಲಿ ಮಹಾತ್ಮ ಗಾಂಧೀಜಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಧರಣಿ ಪ್ರಾರಂಭಿಸಿದರು.

ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಮಾತನಾಡಿ, 2019-20ನೇ ಸಾಲಿನ ವಿವಿಧ ಕಾಮಗಾರಿಯನ್ನು ಬಿಜೆಪಿ ಗೆದ್ದಿರುವ ಅಭ್ಯರ್ಥಿಗಳ ವಾರ್ಡ್‌ಗಳಲ್ಲಿ ಕೈಗೊಂಡು ಪುರಸಭೆ ಅಧಿಕಾರಿಗಳು ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ವಿಧಾನಸಭೆ ಚುನಾವಣೆ ಪೂರ್ವದಲ್ಲಿ ಪುರಸಭೆಯ 23 ವಾರ್ಡ್‌ಗಳಿಗೆ ಕಾಮಗಾರಿ ಕ್ರಿಯಾಯೋಜನೆ ಮಾಡಲಾಗಿತ್ತು. ವಿಧಾನಸಭಾ ಚುನಾವಣೆಗೆ ನೀತಿ ಸಂಹಿತೆ ಜಾರಿಯಾದ ಕಾರಣ ಕಾಮಾಗಾರಿ ನಡೆಯಲಿಲ್ಲ. ನಂತರ ನಡೆದ ಪುರಸಭೆ ಚುನಾವಣೆಯಲ್ಲಿ ಜೆಡಿಎಸ್‌ ಪಕ್ಷವೂ 8 ಸ್ಥಾನ ಪಡೆದ ಕಾರಣ ರಾಜಕೀಯ ಉದ್ದೇಶದಿಂದ 2018-19ನೇ ಸಾಲಿನಲ್ಲಿ ವಾರ್ಡ್‌ ಸಂಖ್ಯೆ 3, 4, 6, 7, 9, 10, 17 ಮತ್ತು 19ಗಳಲ್ಲಿ ಸಾರ್ವಜನಿಕರಿಗೆ ಮೂಲ ಸೌಲಭ್ಯ ಒದಗಿಸುವ ಅಭಿವೃದ್ಧಿ ಕಾಮಗಾರಿ ಕೈಗೊಂಡಿರುವುದಿಲ್ಲ ಎಂದು ಆಪಾದಿಸಿದರು.

ಪ್ರಸಕ್ತ 2019-20ನೇ ಸಾಲಿನ ವಿವಿಧ ಅನುದಾನದಡಿ ಜೆಡಿಎಸ್‌ ಗೆದ್ದಿರುವ 8 ವಾರ್ಡ್‌ಗಳಿಗೆ ರಸ್ತೆ, ಚರಂಡಿ, ಶೌಚಾಲಯ ಅಭಿವೃದ್ಧಿ ಕಾಮಗಾರಿ ಪ್ರಾರಂಭಿಸುವವರೆಗೂ ಚುನಾಯಿತ ಪ್ರತಿನಿಧಿಗಳು, ಸಾರ್ವಜನಿಕರು ಪುರಸಭೆ ಆವರಣದಲ್ಲಿ ಧರಣಿ ಸತ್ಯಾಗ್ರಹ ನಡೆಸಲೂ ತೀರ್ಮಾನಿಸಲಾಗಿದೆ. ಅಲ್ಲದೇ ಮೂಡಲಗಿ ಪುರಸಭೆ ಅಭಿಯಂತ‌ ಎಂ.ಎಚ್. ದೊಡಮನಿ ಅವರನ್ನು ಅನಧಿಕೃತ ಗೈರು ಹಾಜರಿಯಿಂದಾಗಿ ಜಿಲ್ಲಾಧಿಕಾರಿಗಳು ಇತ್ತೀಚೆಗೆ ಕರ್ತವ್ಯದಿಂದ ಅಮಾನತು ಮಾಡಿದ್ದಾರೆ. ಇವರು ಕಾರ್ಯ ನಿರ್ವಹಿಸಿದ ಸಂದರ್ಭದಲ್ಲಿ ಕೈಗೊಂಡ ಕಾಮಗಾರಿಗಳು ಕಳಪೆಯಾಗಿರಬಹುದು, ಕಾಮಗಾರಿಗಳ ಗುಣಮಟ್ಟ ಪರಿಶೀಲಿಸಿ ಹಣ ಬಿಡುಗಡೆ ಮಾಡುವಂತೆ ಅವರು ಒತ್ತಾಯಿಸಿದರು.

Advertisement

ತಾರತಮ್ಯ ಬೇಡ: ಪುರಸಭೆ ಸದಸ್ಯ ಈರಣ್ಣ ಕೊಣ್ಣೂರ ಮಾತನಾಡಿ, ಪುರಸಭೆ ಚುನಾವಣೆಯಲ್ಲಿ 8 ಜೆಡಿಎಸ್‌ ಅಭ್ಯರ್ಥಿಗಳು ಗೆದ್ದು ಬಂದಿರುವುದು ಇವರಿಗೆ ನುಂಗಲಾರದ ತುತ್ತಾಗಿದೆ. ಅದಕ್ಕಾಗಿ ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ ಎಂದರು.

ಗುರು ಗಂಗನ್ನವರ ಮಾತನಾಡಿ, ಅಧಿಕಾರಿಗಳು ರಾಜಕೀಯ ಮಾಡಬಾರದು. ರಾಜಕೀಯ ಮಾಡುವುದಾದರೆ ಕರ್ತವ್ಯಕ್ಕೆ ರಾಜೀನಾಮೆ ನೀಡಿ ರಾಜಕೀಯ ಕ್ಷೇತ್ರಕ್ಕೆ ಬನ್ನಿ ಎಂದ ಅವರು, ಸಾರ್ವಜನಿಕರ ಸೇವೆ ಮಾಡಲು ನಿಮ್ಮನ್ನು ನಿಯೋಜಿಸಲಾಗಿದೆ. ಇದನ್ನು ಬಿಟ್ಟು ರಾಜಕೀಯ ಮಾಡಿದರೆ ಮುಂದಿನ ದಿನಗಳಲ್ಲಿ ಕಠಿಣ ಪರಿಸ್ಥಿತಿ ಎದುರಿಸಬೇಕಾಗಬಹುದು ಎಂದು ಎಚ್ಚರಿಸಿದರು.

ಉಗ್ರ ಹೋರಾಟದ ಎಚ್ಚರಿಕೆ: ಚನ್ನಪ್ಪ ಅಥಣಿ ಮಾತನಾಡಿ, ಜೆಡಿಎಸ್‌ ಗೆದ್ದಿರುವ ಪುರಸಭೆಯ 8 ವಾರ್ಡ್‌ಗಳಲ್ಲಿ ಅವಶ್ಯವಿರುವ ಮೂಲಭೂತ ಸೌಲಭ್ಯ ಒದಗಿಸಲು ಶೀಘ್ರ ಕಾಮಗಾರಿ ಕೈಗೊಳ್ಳಬೇಕು. ವಿಳಂಬವಾದಲ್ಲಿ ಪುರಸಭೆಗೆ ಬೀಗ ಜಡಿದು ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.

ಪುರಸಭೆ ಸದಸ್ಯ ಶಿವಾನಂದ ಸಣ್ಣಕ್ಕಿ, ಮಲ್ಲಪ್ಪ ಮದುಗುಣಕಿ, ಮೋಯಿನ್‌ವುದ್ದಿನ್‌ ಪಾಟೇಲ, ವಿಜಯ ಪಾಟಿಲ ಮಾತನಾಡಿದರು.

ಪ್ರತಿಭಟನಾ ಸ್ಥಳಕ್ಕೆ ಬುಧವಾರ ಸಂಜೆ ಆಗಮಿಸಿದ ಜಿಲ್ಲಾ ನಗರಾಭಿವೃದ್ಧಿಕೋಶ ಸಹ ಕಾರ್ಯ ನಿರ್ವಾಹಕ ಅಧಿಕಾರಿ ಪಿ.ಜೆ. ಸೊಂಡುರೆ ಪ್ರತಿಭಟನಾಕಾರರ ಬೇಡಿಕೆ ಆಲಿಸಿ, ಸದ್ಯ ಪುರಸಭೆ ಮುಖ್ಯಾಧಿಕಾರಿ ವರ್ಗಾವಣೆಗೊಂಡಿದ್ದಾರೆ. ಮತ್ತು ಹೊಸ ಅಭಿಯಂತರನ್ನು ನೇಮಕವಾದರೂ ಇನ್ನೂ ಕರ್ತವ್ಯಕ್ಕೆ ಹಾಜರಾಗಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಒಂದು ವಾರ ಕಾಲಾವಕಾಶ ನೀಡುವಂತೆ ಮನವಿ ಮಾಡಿದರು.

ಆದರೆ ಪ್ರತಿಭಟನಾಕಾರು ಜಿಲ್ಲಾಧಿಕಾರಿ ಅಥವಾ ಪುರಸಭೆ ಆಡಳಿತಾಧಿಕಾರಿಗಳಾದ ಬೈಲಹೊಂಗಲ ಉಪ ವಿಭಾಗ ಅಧಿಕಾರಿಗಳು ಎಲ್ಲ ವಾರ್ಡ್‌ಗಳಿಗೆ ಸಮಾನ ಕಾಮಗಾರಿ ಕೈಗೊಳ್ಳುವ ಕ್ರಿಯಾಯೋಜನೆ ಸಿದ್ಧಪಡಿಸುವುದಾಗಿ ಲಿಖೀತವಾಗಿ ಬರೆದು ಕೊಡುವವರಿಗೆ ಧರಣಿ ಸತ್ಯಾಗ್ರಹ ಮುಂದುವರಿಸುವುದಾಗಿ ಪಟ್ಟು ಹಿಡಿದರು. ಇದರಿಂದ ಧರಣಿ ಸತ್ಯಾಗ್ರಹ ಗುರುವಾರವೂ ಮುಂದುವರಿಯಿತು. ಗುರುವಾರ ಸಂಜೆಯೊಳಗೆ ಲಿಖೀತ ಭರವಸೆ ನೀಡದಿದ್ದರೆ ಅಹೋರಾತ್ರಿ ಧರಣಿ ನಡೆಸುವುದಾಗಿ ಪ್ರತಿಭಟನಾಕಾರರು ಎಚ್ಚರಿಸಿದರು.

ಪುರಸಭೆ ಸದಸ್ಯರಾದ ಪರಪ್ಪ ಮುನ್ಯಾಳ, ಆದಂ ತಾಂಬೋಳಿ, ಪಾರ್ವತವ್ವಾ ಅಥಣಿ, ರೇಣುಕಾ ಹಾದಿಮನಿ, ಶಾಂತವ್ವಾ ಝಂಡೆಕುರುಬರ, ಸತ್ತೆವ್ವ ಅರಮನಿ, ಮಲ್ಲಪ್ಪ ತೇರದಾಳ, ಸಂಜು ಕಮತೆ, ಇರ್ಷಾದ ಇನಾಮದಾರ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next