Advertisement

ಮೂಡಲಗಿ: ಭಕ್ತರ ಸಂಕಷ್ಟ ಪರಿಹರಿಸುವ ಹಳ್ಳೂರವ್ವಾ-9 ದಿನಗಳ ಕಾಲ ಜಾತ್ರೆ

06:29 PM May 23, 2023 | Team Udayavani |

ಮೂಡಲಗಿ: ಕರ್ನಾಟಕದಲ್ಲಿ ಶತಮಾನಗಳ ಅನೇಕ ಶಕ್ತಿ ದೇವತೆಗಳ ದೇವಾಲಯಗಳಿವೆ. ಇಂಥ ಅನೇಕ ಪುಣ್ಯ ಕ್ಷೇತ್ರಗಳಲ್ಲಿ ಒಂದಾದ ಶ್ರೀ ಮಹಾಲಕ್ಷ್ಮೀ ಹಾಗೂ ದ್ಯಾಮವ್ವಾ ಎಂಬ ಹೆಸರಿನಲ್ಲಿರುವ ದೇವಸ್ಥಾನವು ಒಂದು. ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಹಳ್ಳೂರ ಗ್ರಾಮದಲ್ಲಿ ಸಾಕ್ಷಾತ್ ಮಹಾಲಕ್ಷ್ಮೀ ಯೇ ಇಲ್ಲಿ ಬಂದು ನೆಲೆಸಿದ್ದಾಳೆ ಎಂಬುವುದು ಇಲ್ಲಿಯ ಜನರ ನಂಬಿಕೆ.

Advertisement

ಒಂದು ಆಕಳು ಪ್ರತಿನಿತ್ಯ ಹಳ್ಳದ ಹುಣಸೆ ಮರಗಳ ವನದಲ್ಲಿ ಇರುವ ಹಾವಿನ ಹುತ್ತಿನೊಳಗೆ ಹಾಲು ನೀಡುವುದನ್ನು ಆಕಳು ಕಾಯುವ ಬಾಲಕ ನೋಡಿ ಹುತ್ತವನ್ನು ಅಗೆದು ನೋಡಿದಾಗ ಎರಡು ಮೂರ್ತಿಗಳ ವಿಗ್ರಹ ಕಂಡ ಬಾಲಕ ಆಚ್ಚರ್ಯನಾಗಿ ಅಲ್ಲಿಂದ ಓಡಿ ಬಂದು ಗ್ರಾಮಸ್ಥರಿಗೆ ತಿಳಿಸಿದ ನಂತರ ಗ್ರಾಮಸ್ಥರು ಆ ಸ್ಥಳಕ್ಕೆ ಹೋಗುವಷ್ಟರಲ್ಲಿ ಹಾವಿನ ಹುತ್ತದ ಹತ್ತಿರ ಒಬ್ಬಳು ಅಜ್ಜಿಯನ್ನು ನೋಡಿ ನೀನು ಯಾರು ಎಂಬು ಗ್ರಾಮಸ್ಥರು ಪ್ರಶ್ನಿಸಿದರಂತೆ, ಆ ಅಜ್ಜಿ ನಿಮ್ಮ ಹಳ್ಳಗಳ ಹಳವಿನ ಊರದ ಅವ್ವಾ ಹಳ್ಳೂರವ್ವಾ ಎಂದು ಹೇಳಿದಳಂತೆ ಹಾಗೂ ಗ್ರಾಮಸ್ಥರಿಗೆ ಹುತ್ತದಲ್ಲಿರುವ ವಿಗ್ರಹಗಳನ್ನು ಇಲ್ಲೇ ಸ್ಥಾಪನೆ ಮಾಡಿ ಎಂದು ಸೂಚಿಸಿದಳಂತೆ. ಅದರಂತೆ ಗ್ರಾಮಸ್ಥರು ಆ ಮೂರ್ತಿಗಳನ್ನು ಅಲ್ಲಿಯೇ ಸ್ಥಾಪನೆ ಮಾಡಿದರು ಎಂಬ ಪ್ರತೀತಿ. ಆದರೆ ಇಲ್ಲಿವರೆಗೂ ಹಳ್ಳೂರ ಎಂಬ ಹೆಸರು ಹೇಗೆ ಬಂತು ಅನೋದಕ್ಕೆ ನಿಖರವಾದ ಉತ್ತರ ಸಿಕ್ಕಿಲ್ಲ.

ನಂತರ ದಿನಗಳಲ್ಲಿ ಹಳ್ಳಗಳ ಊರು ಹಳ್ಳೂರು ಹಾಗೂ ಶಿವಾಪೂರ, ಕಪ್ಪಲಗುದ್ದಿ ಗ್ರಾಮಗಳಲ್ಲಿ ಹಸುಗಳಿಗೆ ಕಾಲಬೇಣೆ ಬಾಯಿಬೇಣೆ ಜಾಸ್ತಿಯಾಗಿ ಹಸುಗಳು ಸಾವನ್ನಪ್ಪುತ್ತಿರುವ ಹಿನ್ನೆಲೆ ಆ ವನದಲ್ಲಿ ನೆಲೆಸಿರುವ ದೇವಿ ಬಳಿ ಗ್ರಾಮಸ್ಥರು ಮೊರೆ ಹೋದ ಸಂದರ್ಭದಲ್ಲಿ ಗ್ರಾಮಸ್ಥರಿಗೆ ದೇವಿಯ ವಿಗ್ರಹದಿಂದ ಒಂದು ವಾಣಿ ಬಂದು ಈ ಘಟನೆಗೆ ಒಂದು ಪರಿಹಾರ ನೀಡುತ್ತೇನೆ. ನನ್ನ ಹೆಸರಿನ ಮೇಲೆ ಒಂದು ಕೋಣವನ್ನು ಬಿಡಬೇಕು. ಆ ಕೋಣಕ್ಕೆ ಯಾವಾಗ 12 ವರ್ಷಗಳಾಗುತ್ತದೆಯೋ ಆ ವರ್ಷದಲ್ಲಿ 9
ದಿನಗಳ ಕಾಲ ಅನ್ನಸಂರ್ತಪಣೆ ಮಾಡಬೇಕು ಎಂದು ವಾಣಿ ಕೇಳಿತಂತೆ ಆವಾಗ ಗ್ರಾಮಸ್ಥರು ವಾಣಿಯಂತೆ ಗ್ರಾಮಸ್ಥರು ಪತ್ರಿ 12 ವರ್ಷಕೊಮ್ಮೆ ಆ ದೇವಿಯ ಜಾತ್ರೆ ಮಾಡುವ ಮೂಲಕ ದೇವಸ್ಥಾನಕ್ಕೆ ಬಂದ ಭಕ್ತರಿಗೆ ಅನ್ನ ಸಂತರ್ಪಣೆ ಮಾಡುವಂತ ಸಂಪ್ರದಾಯ ಇದಾಗಿದೆ.

ಹಳ್ಳೂರ, ಕಪ್ಪಲಗುದ್ದಿ, ಶಿವಾಪೂರ ಗ್ರಾಮದ ಜನರು ಸೇರಿ ಅದ್ಧೂರಿಯಾಗಿ ಪ್ರತಿ 12 ವರ್ಷಕೊಮ್ಮೆ ನಡೆಯುವ ತಾಯಿಯ ಜಾತ್ರಾ ಮಹೋತ್ಸವದಲ್ಲಿ ಅಂಗವಾಗಿ ಒಂಬತ್ತು ದಿನಗಳ ಕಾಲ ಅನೇಕ ಕಾರ್ಯಕ್ರಮಗಳನ್ನು ಜರುಗುತ್ತವೆ. ಸುತ್ತಮುತ್ತಲಿನ ಗ್ರಾಮಸ್ಥರು ದೇವಿ ಜಾತ್ರೆಯಲ್ಲಿ ಭಾಗವಹಿಸುವ ಮೂಲಕ ತಾಯಿ ಕೃಪೆಗೆ ಪಾತ್ರರಾಗುತ್ತಾರೆ.

ಭಕ್ತರ ಬೇಡಿಕೆ ಈಡೇರಿಸುವ ದೇವತೆ: ದೇವಸ್ಥಾನಕ್ಕೆ ಬಂದ ಭಕ್ತರ ಕಷ್ಟಗಳನ್ನು ಪರಿಹರಿಸುತ್ತ ತಾಯಿ ಮಹಾಲಕ್ಷ್ಮೀ ಗ್ರಾಮದಲ್ಲಿ ನೆಲೆಸಿದ್ದಾಳೆ. ಮಕ್ಕಳ ಇಲ್ಲದ ಮಹಿಳೆಯರು ದೇವಿಗೆ ಹರಿಕೆ ಹೊತ್ತು, ಮಕ್ಕಳ ಪಡೆದಿಯುವ ಅನೇಕ ಪವಾಡುಗಳನ್ನು ಇಲ್ಲಿ
ಕಾಣಬಹುದು. ಪ್ರತಿ ಮಂಗಳವಾರ ಮತ್ತು ಶುಕ್ರವಾರ ದೇವಿಗೆ ವಿಶೇಷ ಪೂಜೆಗಳು ನಡೆಯುತ್ತದೆ. ದೇವಿಗೆ ಹಸಿರು ಸೀರೆ, ಹಸಿರು ಬಳೆ ಹಾಗೂ ದೀರ್ಘ‌ದಂಡ ನಮ್ಮಸ್ಕಾರ, ಆಳು ಮಕ್ಕಳಿಗೆ ಅನ್ನ ಸಂತರ್ಪಣೆ ಮಾಡುತ್ತೇನೆ ನನ್ನ ಕಷ್ಟಗಳನ್ನು ಬಗೆಹರಿಸು ಎಂದು
ಹರಕೆ ಮಾಡಿಕೊಳ್ಳಬಹುದು ಎಂದು ಭಕ್ತಾ ದಿಗಳು ಹೇಳುವ ಮಾತುಗಳು.

Advertisement

ಊರು ಗ್ರಾಮಗಳಲ್ಲಿ ಸಂಭ್ರಮದ ಕಳೆ: ಹಳ್ಳೂರ, ಕಪ್ಪಲಗುದ್ದಿ, ಶಿವಾಪೂರ ಗ್ರಾಮದಲ್ಲಿ ತಾಯಿ ದ್ಯಾಮವ್ವಾದೇವಿ ಹಾಗೂ ಮಹಾಲಕ್ಷ್ಮೀ ದೇವಿಯ 12 ವರ್ಷಕೊಮ್ಮೆ ಜರಗುವ ಜಾತ್ರಾ ಮಹೋತ್ಸವದ ಹಿನ್ನೆಲೆ ಇಡೀ ಗ್ರಾಮಗಳೇ ಅಲಂಕಾರಗೊಂಡಿವೆ. ಪ್ರತಿ ಮನೆ ಮನೆಗಳು ಬಣ್ಣ ಬಣ್ಣಗಳಿಂದ ಅಲಂಕೃತವಾಗಿರುವುದನ್ನ ನೋಡುಗರ ಮನ ಸೆಳೆಯುತ್ತಿವೆ, ಗ್ರಾಮಗಳ ಯುವಕ-ಯುವತಿಯರು ಜಾತ್ರೆಯನ್ನು ನೋಡಲು ಉತ್ಸಾಹಕರಾಗಿದ್ದಾರೆ.

ಶಿಕ್ಷಣ ಕ್ರಾಂತಿ: ಒಂದು ನಗರ, ಪಟ್ಟಣ, ಹಳ್ಳಿ ಸಮೃದ್ಧಿಯಾಗಿ ಬೆಳಯಬೇಕಾದರೇ ಶಿಕ್ಷಣದ ಅವಶ್ಯಕತೆ ಬಹುಮುಖ್ಯ, ಅದರಲ್ಲೂ ತಾಲೂಕಿನ ಹಳ್ಳೂರ ಗ್ರಾಮ ಬ್ರಿಟಿಷರ್‌ ಆಡಳಿತಾವಧಿಯಲ್ಲೇ ಶಿಕ್ಷಣ ಕ್ರಾಂತಿ ಮೂಡಿಸಿದೆ ಹೆಗ್ಗಳಿಕೆಗೆ ಪಾತ್ರವಾಗಿದೆ. ಸನ್‌ 1885ರಲ್ಲಿ ಶ್ರೀ ಮಧ್ವಾಚಾರ್ಯ ಗೋಟೆಯವರು ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ತಮ್ಮ ಸಸತ ಪ್ರಯತ್ನ ಹಾಗೂ ಬ್ರಿಟಿಷರ್‌ ಅಧಿಕಾರಿಗಳ ಮನವೋಲಿಸಿ ಧರ್ಮಶಾಲೆಯನ್ನ ಪ್ರಾರಂಭಿಸಿ ತಾವೇ ಸ್ವತ ಮುಖ್ಯೋಪಾಧ್ಯಯರಾಗಿ 1885ರಿಂದ 1890ರವರೆಗೂ ಮಕ್ಕಳಲ್ಲಿ ಶಿಕ್ಷಣದ ಬೀಜ ಬಿತ್ತಿದ ಮಹಾನ್‌ ವ್ಯಕ್ತಿ. ಮೊದಲು ಈ ಶಾಲೆಗೆ ಶಿವಾಪೂರ, ಖಾನಟ್ಟಿ, ಮುನ್ಯಾಳ, ನೀರಲಕೋಡಿ, ಕಪ್ಪಲಗುದ್ದಿ ಸೇರಿದಂತೆ ಅನೇಕ ಹಳ್ಳಿಗಳಿಗೆ ಹಳ್ಳೂರ ಗ್ರಾಮ ಶಿಕ್ಷಣದ ಕೇಂದ್ರವಾಗಿತ್ತು.

ಸ್ವಾತಂತ್ರ್ಯ ದೊರಕಿದ ನಂತರದಲ್ಲಿ ಧರ್ಮಶಾಲೆಗೆ ಮುಖ್ಯೋಪಾಧ್ಯಯರಾಗಿ ಎಂ.ಸಿ.ಪಾಟೀಲ್‌ ನೇಮಕವಾದ ನಂತರ ಆಗಿನ ಬೆಳಗಾವಿಯ ಡಿಸ್ಟ್ರಿಕ್‌ ಸ್ಕೂಲ್‌ ಬೋರ್ಡ್‌ನ ಸದಸ್ಯರಾಗಿ ಶಾಲೆ ಕಟ್ಟಡಕ್ಕಾಗಿ ಆರು ಸಾವಿರ ಮಂಜೂರು ಮಾಡಿಸಿಕೊಂಡರು ಆದರೆ ಸ್ಥಳದ ಅವಶ್ಯಕತೆಯಿಂದ ಆಗಿನ ಹಿರಿಯರಾದ ಶಂಕರೆಪ್ಪ ಸಂತಿ, ಹಾಲಪ್ಪ ಮಗದುಮ್ಮ, ಹಣಮಗೌಡ ಪಾಟೀಲ, ಬಸಪ್ಪ ಅನಂತಪೂರ ಹೀಗೆ ಅನೇಕರು ಸೇರಿ ಗ್ರಾಮದಲ್ಲಿ ದೇಣಿಗೆ ಎತ್ತಿ ಬೋಳನ್ನವರ ಕುಟುಂಬಕ್ಕೆ ಸೇರಿ ಒಂದು ಎಕರೆ 30 ಗುಂಟೆ ಆಸ್ತಿಯನ್ನು ದಾನವನ್ನಾಗಿ ನೀಡಿದರಿಂದ ಐದು ಕೊಠಡಿಗಳ ಶಾಲೆಯನ್ನು ಕಟ್ಟಿ ಅದರ ಉದ್ಘಾಟನೆಗೆ ಆಗಿನ ಮೈಸೂರು ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಬಿ.ಡಿ.ಜತ್ತಿಯವರ ಅಮೃತ ಹಸ್ತದಿಂದ ಉದ್ಘಾಟಿಸಲಾಗಿತ್ತು. ಅಂದಿನಿಂದಲೂ ಇಲ್ಲಿಯವರೆಗೂ ಉತ್ತಮವಾದ ಶಾಲೆಯಾಗಿ ಬೆಳೆದು ನಿಂತಿದೆ. ಶಿಕ್ಷಣಕ್ಕೆ ಮಾತ್ರವಲ್ಲದೇ ಜನಪದ ಕಲೆಗಳಿಗೆ ಕೂಡ ಹಳ್ಳೂರ ಗ್ರಾಮ ಹೆಸರುವಾಸಿಯಾಗಿದೆ.

ಸೋಬಾನ, ಖರ್ಬಲ್‌ ಹಾಡು-ದಂಗಲ್‌, ಆಲಾವಿ ಕುಣಿತ, ಡೊಳ್ಳು ಕುಣಿತ, ಹರತಿ ಹಾಡು, ತೋಗಲು ಗೊಂಬೆಯಾಟ, ಜೋಕುಮಾರ ಹಾಡು, ಹಲಗೆ ಕಲೆ, ಭಜನಾ ತಂಡ, ಕಬ್ಬಡಿ, ಕುದರಿ ಸೋಗು, ಜಾನಪದ ಶೆ„ಲಿಯ ಕಲೆಗಳು ಹೀಗೆ ಹತ್ತುರು ಕಲೆಗಳು ಗ್ರಾಮದಲ್ಲಿ ಕಾಣಬಹದು. ಹಾಗೂ ಸಿದ್ದು ಮಹಾರಾಜರು ಎಂಬಾತ ಸಾವಿರಾರೂ ಭಕ್ತಿಗೀತೆಗಳನ್ನು ರಚಿಸಿ, ಹಾಡುಗಳನ್ನು ಬೀಡುಗಡೆ ಮಾಡಿದ್ದಾರೆ. ಇದರ ಜೊತೆಗೆ ರಾಜಕೀಯ ಕ್ಷೇತ್ರದಲ್ಲಿಯೂ ಸಹ ಉತ್ತಮವಾದ ಭವಿ‌ಷ್ಯವನ್ನು ಗ್ರಾಮ ಕಂಡುಕೊಂಡಿದೆ.

ಸ್ವಾತಂತ್ರ್ಯ ಹೋರಾಟಗಾರರು: ಗ್ರಾಮದಲ್ಲಿ ಶಂಕರೆಪ್ಪ ಸಂತಿ, ನಿಂಗಪ್ಪ ಬೆಣರ್ಚಿಮರಡಿ, ಯಮನವ್ವ ಬೋಳನ್ನವರ, ಅಪ್ಪಣ್ಣ ಸಿದ್ದಾಪೂರ, ರಾಮಪ್ಪ ಸಂತಿ, ಮಹಾಲಿಂಗಪ್ಪ ಉಳ್ಳಾಗಡ್ಡಿ ಮುಂತಾದವರು ಸ್ವಾತಂತ್ರ್ಯ ಹೋರಾಟದಲ್ಲಿ ಇದ್ದವರು. ಇವರಲ್ಲಿ ಒಬ್ಬರು ಬ್ರಿಟಿಷ ಅಧಿಕಾರಿಗಳ ವಿರುದ್ಧ ರೊಚ್ಚಿಗೆದ್ದು, ಒಬ್ಬ ಬ್ರಿಟಿಷ ಅಧಿಕಾರಿಯ ಮೂಗನೇ ಕತ್ತರಿಸಿದ ವಿಷಯ ಇಂದಿಗೂ ಗ್ರಾಮದಲ್ಲಿ ಉಳಿದುಕೊಂಡಿದೆ.

ಗ್ರಾಮದ ವಿಸ್ತೀರ್ಣ: ಮೂಡಲಗಿ ಪಟ್ಟಣದಿಂದ 8 ಕಿ.ಮೀ ಅಂತರದಲ್ಲಿರುವ ಈ ಗ್ರಾಮ ಸುಮಾರು 1738.65 ಹೆಕ್ಟೇರ್‌ ಪ್ರದೇಶ ಭೂಮಿಯನ್ನು ಹೊಂದಿದ್ದು, ಇಲ್ಲಿ ವ್ಯವಸಾಯದ ಜೊತೆಗೆ ಹೈನುಗಾರಿಕೆಗೆ ಹೆಚ್ಚಿನ ಮಹತ್ವ ನೀಡುತ್ತಾರೆ. ಕಬ್ಬು, ಅರಿಶಿಣ, ಗೋವಿನ ಜೋಳ, ಜೋಳ, ಗೋಧಿ, ಸದಕು, ಕಾಯಿಪಲ್ಲೆ, ಹೀಗೆ ಅನೇಕ ತರನಾದ ಬೆಳಗಳನ್ನು ಬೆಳೆಯುತ್ತಾರೆ.

ಪ್ರಮುಖ ದೇವಸ್ಥಾನಗಳು: ಗ್ರಾಮದಲ್ಲಿ ಮಹತ್ವ ಪಡೆದ ಮಹಾಲಕ್ಷ್ಮೀ ದೇವಿ ಹಾಗೂ ದ್ಯಾಮವ್ವಾದೇವಿ ದೇವಸ್ಥಾನ, ಹಳ್ಳದರಂಗ, ಮಲ್ಲಿಕಾರ್ಜುನ ದೇವಸ್ಥಾನ, ಬಸವೇಶ್ವರ ದೇವಸ್ಥಾನ, ಮಾರುತಿ ದೇವಸ್ಥಾನ, ಜೈನ ಬಸ್ತಿ ಇಷ್ಟು ದೊಡ್ಡ ದೇವಸ್ಥಾನಗಳಿವೆ, ಈ ಎಲ್ಲ ದೇವಸ್ಥಾನಗಳಿಗೆ ಬೇರೆ ಬೇರೆ ಜಿಲ್ಲೆಗಳಿಂದ ಭಕ್ತರು ಆಗುಮಿಸುತ್ತಾರೆ.

*ಕೆ.ಬಿ.ಗಿರೆಣ್ಣವರ

Advertisement

Udayavani is now on Telegram. Click here to join our channel and stay updated with the latest news.

Next