Advertisement

ಬರ ಭೀಕರ: ಸಂತೆಗಳತ್ತ ದನ ಕರು

01:35 PM Jul 08, 2019 | Naveen |

ದೇವಪ್ಪ ರಾಠೊಡ
ಮುದಗಲ್ಲ
: ಮೇವ್‌ ಸಿಗಾಂಗಿಲ್ರಿ. ನೀರು ಕುಡಿಸೋದ್‌ ಕಷ್ಟ ಆಗ್ಯಾದ್ರಿ. ದನಕರ ಸಾಕೂದ್‌ ಭಾಳ್‌ ಕಷ್ಟ ಐತ್ರಿ. ಆದಕ್‌ ಮಾರಾಕ್‌ ಹತ್ತಿವ್ರಿ. ವರ್ಷ ಗಟ್ಟಲೇ ಸಾಕಿದ ಹಸು, ಎತ್ತುಗಳನ್ನು ಇನ್ನು ಮುಂದೆ ಸಾಕುವುದು ಅಸಾಧ್ಯ ಎಂದು ನಿರ್ಧರಿಸಿ ಮಾರಾಟ ಮಾಡಲು ಸಂತೆಗಳತ್ತ ಹೆಜ್ಜೆ ಇಡುತ್ತಿರುವ ರೈತರ ನೊವಿನ ನುಡಿಗಳಿವು. ನಾಲ್ಕೈದು ತಿಂಗಳಿಂದ ಮಳೆ ಇಲ್ಲದೆ ಭೂಮಿಯಲ್ಲಿ ಮೇವು ಬೆಳೆದಿಲ್ಲ. ಕಳೆದ ವರ್ಷ ಬೆಳೆದಿದ್ದ ಮೇವು ಇಲ್ಲಿಯತನಕ ಸಾಕಾಯಿತು. ಆದರೆ ಈಗ ದನಕರಗಳಿಗೆ ಮೇವಿಲ್ಲ. ನೀರು ಇಲ್ಲ. ಹೀಗಾಗಿ ಎತ್ತುಗಳನ್ನು ಮಾರಾಟ ಮಾಡುತ್ತಿದ್ದೇವೆ ಎನ್ನುತ್ತಾರೆ ರೈತ ಹುಲಗಪ್ಪ.

Advertisement

ಈಗ ಲಿಂಗಸುಗೂರು ತಾಲೂಕಿನ ವಿವಿಧೆಡೆ ಜಾನುವಾರುಗಳ ಮಾರಾಟ ಜೋರಾಗಿಯೇ ನಡೆದಿದೆ. ಭೀಕರ ಬರಗಾಲದಲ್ಲಿ ತಮ್ಮ ಜಾನುವಾರುಗಳನ್ನು ಸಾಕಲಾಗದೆ ರೈತರು ಸಿಕ್ಕಷ್ಟು ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಇದರ ಲಾಭ ಪಡೆಯುತ್ತಿರುವ ದಲ್ಲಾಳಿಗಳು ಅಗ್ಗದ ದರದಲ್ಲಿ ಜಾನುವಾರುಗಳನ್ನು ಖರೀದಿಸಿ ಬೇರೆ ಜಿಲ್ಲೆ, ಹೊರ ರಾಜ್ಯಗಳಿಗೆ ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ.

ಕಳೆದ ವರ್ಷ ಮುಂಗಾರು-ಹಿಂಗಾರು ಸಂಪೂರ್ಣ ವಿಫಲವಾಗಿದ್ದರಿಂದ ಮೇವು-ನೀರಿನ ಕೊರತೆ ಉಂಟಾಗಿದೆ. ಹಳ್ಳ-ಕೊಳ್ಳ, ತೆರೆದ ಬಾವಿ, ಚೆಕ್‌ಡ್ಯಾಂಗಳಲ್ಲಿನ ನೀರು ಬತ್ತಿ ಹೋಗಿದೆ. ಇಷ್ಟು ದಿನ ಒಣಮೇವು ಹಾಕಿ ಜಾನುವಾರುಗಳನ್ನು ಸಾಕಿ ಸಲುಹಿದ್ದೇವೆ. ಇನ್ನು ಮುಂದೆ ದನಕರುಗಳನ್ನು ಸಾಕುವುದು ದುಸ್ಥರವಾಗುತ್ತದೆ. ಮಾರಾಟ ಮಾಡದೆ ಬೇರೆ ದಾರಿ ಇಲ್ಲ ಎನ್ನುತ್ತಾನೆ. ಬನ್ನಿಗೋಳ ಗ್ರಾಮದ ರೈತ ಅಮರಪ್ಪ.

ಲಿಂಗಸುಗೂರು ತಾಲೂಕನ್ನು ಬರ ಪೀಡಿತ ಪ್ರದೇಶ ಎಂದು ಸರಕಾರ ಘೋಷಣೆ ಮಾಡಿದೆ. ತಾಲೂಕಿಗೆ ಜಿಲ್ಲಾಧಿಕಾರಿಗಳು ಬರ ಪರಿಹಾರ ನೀಡುತ್ತಾರೆ. ಶಾಸಕರ ನೇತೃತ್ವದಲ್ಲಿ ಟಾಸ್ಕ್ಫೋರ್ಸ್‌ ಸಮಿತಿ ಬರ ಕಾಮಗಾರಿ ಕೈಗೊಳ್ಳಲಿದೆ. ಮೇವು ಸಂಗ್ರಹ ಸೇರಿದಂತೆ, ಖಾತ್ರಿ ಯೋಜನೆ, ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಉಪವಿಭಾಗಾಧಿಕಾರಿ ರಾಜಶೇಖರ ಪತ್ರಿಕೆಗೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next