Advertisement

ಮುಡಾ: ಸಿದ್ದು ವಿರುದ್ಧ ರಾಜ್ಯಪಾಲರ prosecution ಅನುಮತಿ ಸಿಎಂ ಸ್ಥಾನಕ್ಕೆ ಮುಳುವಾಗಬಹುದೇ?

06:29 PM Aug 17, 2024 | Team Udayavani |

ಇಲ್ಲಿ ಬಹು ಮುಖ್ಯವಾಗಿ ಚರ್ಚೆಗೆ ಬರುವ ವಿಚಾರವೆಂದರೆ ಒಂದು ರಾಜ್ಯದ ಮುಖ್ಯಮಂತ್ರಿ ಮೇಲಿನ ಆಪಾದನೆ ಮೇಲಿನ ವಿಚಾರಣೆಗೆ ರಾಜ್ಯಪಾಲರು ಒಪ್ಪಿಗೆ ನೀಡಬೇಕೇ? ನೀಡ ಬಾರದೆ? ಇದು ರಾಜ್ಯಪಾಲರ ಕಾರ್ಯ ವ್ಯಾಪ್ತಿಯಲ್ಲಿ ಬರುತ್ತದೊ ? ಇಲ್ಲವೊ? ಇದು ಬರೇ ರಾಜ್ಯಪಾಲರ ನಿರ್ಧಾರವೇ ಅಥವಾ ಕೇಂದ್ರ ಸರ್ಕಾರದ ನಿದೇ೯ಶನವೇ? ವಿಚಾರಣೆಗೆ ಅನುಮತಿ ಕೊಟ್ಟ ತಕ್ಷಣವೇ ಮುಖ್ಯ ಮಂತ್ರಿಗಳ ಹುದ್ದೆಗೆ ಕಾನೂನಾತ್ಮಕ ತೊಡಕಿದೆಯಾ.?.ಮುಖ್ಯ ಮಂತ್ರಿಗಳು ರಾಜೀನಾಮೆಕೊಡದ್ದಿದ್ದರೆ ಮುಂದಿನ ಪರಿಣಾಮಗಳೇನು?ಇವೆಲ್ಲವನ್ನೂ ಕೂಡಾ ಕೂಲಂಕಷವಾಗಿ ಚಚೆ೯ ಮಾಡ ಬೇಕಾದ ಪ್ರಸಂಗ ನಮ್ಮ ರಾಜ್ಯದಲ್ಲಿ ಸೃಷ್ಟಿಯಾಗಿದೆ.

Advertisement

|ಮೈಸೂರಿನ ನಗರಾಭಿವೃದ್ಧಿ ಮಂಡಳಿಯಲ್ಲಿ ಮುಖ್ಯ ಮಂತ್ರಿಗಳು ಪ್ರಭಾವ ಬೀರಿ ತಮ್ಮ ಪತ್ನಿಯ ಖಾತೆಗೆ ಹೆಚ್ಚಿನ ಬೆಲೆಯ ಹೌಸ್ ಸೈಟ್‌ನ್ನು ಪರ್ಯಾಯವಾಗಿ ಕಾನೂನು ಮೀರಿ ಪಡೆದಿದ್ದಾರೆ ಅನ್ನುವ ತೀವ್ರವಾದ ಆಪಾದನೆಯನ್ನು ತಮ್ಮ ಸ್ವಂತ ಜಿಲ್ಲೆಯಲ್ಲಿಯೇ ಎದುರಿಸ ಬೇಕಾದ ಪ್ರಸಂಗ ಮುಖ್ಯಮಂತ್ರಿ ಸಿದ್ದರಾಮಯ್ಯ ನವರಿಗೆ ಬಂದಿದೆ.ಈ ಕುರಿತಾಗಿ ಖಾಸಗಿಯಾಗಿ ಸಾಮಾಜಿಕ ಕಾರ್ಯಕರ್ತ ಅಬ್ರಹಾಮ್, ಸ್ನೇಹಮಯಿ ಕೃಷ್ಣ ಕೇೂಟಿ೯ಗೂ ದೂರು ಸಲ್ಲಿಸಿದ್ದಾರೆ ಮತ್ತು ಲೇೂಕಾಯುಕ್ತಕ್ಕೂ ದೂರು ಸಲ್ಲಿಸಿದ್ದಾರೆ.

ಮುಖ್ಯ ಮಂತ್ರಿಗಳ ಮೇಲಿನ ಆಪಾದನೆಯಾದ ಕಾರಣ ತನಿಖೆ ಮಾಡ ಬೇಕಾದರೆ ರಾಜ್ಯದ ಸಾಂವಿಧಾನಿಕ ಮುಖ್ಯಸ್ಥರಾದ ರಾಜ್ಯಪಾಲರ ಅನುಮತಿಯೂ ಬೇಕಾಗುತ್ತದೆ..ಈಗ ಇದನ್ನೆಲ್ಲಾವನ್ನು ಅಳೆದು ತೂಗಿ ರಾಜ್ಯ ಪಾಲರ ಕಚೇರಿಯಿಂದ ತನಿಖೆ ನಡೆಸಲು ಅನುಮತಿ ಸಿಕ್ಕಿದೆ. ಹಾಗಾದರೆ ರಾಜ್ಯಪಾಲರು ಯಾರೊ ಒಬ್ಬ ಖಾಸಗಿ ವ್ಯಕ್ತಿ ಕೊಟ್ಟ ಅರ್ಜಿಯ ಮೇಲೆ ಒಬ್ಬ ಚುನಾಯಿತ ಸರ್ಕಾರದ ಮುಖ್ಯಮಂತ್ರಿ ಮೇಲೆ ತನಿಖೆಗೆ ಅನುಮತಿಕೊಡುವುದು ಸರಿಯೇ? ಹೀಗೆ ಹತ್ತು ಹಲವು ಅಜಿ೯ಗಳು ಬರುತ್ತಾ ಇರುತ್ತದೆ ಇದಕ್ಕೆಲ್ಲ ರಾಜ್ಯಪಾಲರು ಒಪ್ಪಿಗೆ ಕೊಡುತ್ತಾರೆಯೆ? ಈ ಹಿಂದೆ ಯಾರೆಲ್ಲ ವಿಚಾರಗಳಲ್ಲಿ ಒಪ್ಪಿಗೆ ಕೊಟ್ಟಿದ್ದಾರೆ ಅಥವಾ ಕೊಟ್ಟಿಲ್ಲ..ಅನ್ನುವುದು ಕೂಡಾ ಇಂದು ಬಹುಮುಖ್ಯವಾಗಿ ಚರ್ಚೆಗೆ ಗ್ರಾಸವಾಗಿದೆ.

ಒಪ್ಪಿಗೆ ಕೊಡ ಬಾರದು ಅನ್ನುವ ವಿಚಾರ ಎಲ್ಲಿಯೂ ಇಲ್ಲ.ತೀವ್ರವಾದ ಆಪಾದನೆ ಮುಖ್ಯಮಂತ್ರಿ ಇರ ಬಹುದು ಯಾರೇ ಸರಕಾರಿ ಅಧಿಕಾರಿಗಳ ಮೇಲೆ ಬಂದಾಗ ಈ ವಿಚಾರಣೆಗೆ ಅನುಮತಿ ನೀಡುವ ಅಧಿಕಾರ ರಾಜ್ಯಪಾಲರಿಗೆ ಇದೆ. ಆದರೆ ಇದನ್ನು ರಾಜಕೀಯ ಅಸ್ತ್ರವಾಗಿ ಬಳಸುವುದು ಖಂಡಿತವಾಗಿಯೂ ಸರಿ ಅಲ್ಲ ಅನ್ನುವುದು ಮೊದಲಿನಿಂದಲೂ ಕೇಳಿ ಬಂದ ಚಚೆ೯ಯೂ ಹೌದು. ಮಾತ್ರವಲ್ಲ ರಾಜ್ಯಪಾಲರುಗಳ ವಿರುದ್ಧವಾಗಿ ಮೂಡಿ ಬಂದ ಅಪಸ್ವರಗಳು ಹೌದು.ಇದು ನಮ್ಮ ರಾಜ್ಯದಲ್ಲಿಯೇ ಸಾಕಷ್ಟು ಬಾರಿ ನಡೆದಿದೆ. ಹಾಗಾಗಿಯೇ ರಾಜ್ಯ ಪಾಲರುಗಳು ಅಂದರೆ ಸಂವಿಧಾನದ ಕುರುಡು ಕೂಸು ಅನ್ನುವ ಟೀಕೆಯ ಮಾತು ಕೂಡ ಇದೆ.

ಹಿಂದಿನ ಮುಖ್ಯಮಂತ್ರಿಗಳಾದ ಯಡಿಯೂರಪ್ಪನವರ ಸಂದರ್ಭದಲ್ಲಿ ಕೂಡಾ ಇದೇ ಬಿಜೆಪಿ ಅಂದಿನ ರಾಜ್ಯಪಾಲರು ತನಿಖೆಗೆ ಅನುಮತಿ ಕೊಟ್ಟಾಗ ಬೀದಿಗೆ ಬಂದು ವಿರೋಧಿಸಿದ್ದನ್ನು ಕಂಡಿದ್ದೇವೆ..ಮಾತ್ರವಲ್ಲ ಇದೇ ಕಾಂಗ್ರೆಸ್ ರಾಜ್ಯಪಾಲರ ಅನುಮತಿಯನ್ನು ಸ್ವಾಗತಿಸಿದನ್ನು ನೋಡಿದ್ದೇವೆ.ಒಟ್ಟಿನಲ್ಲಿ ಈ ರಾಜ್ಯಪಾರುಗಳದ್ದು ತುಂಬಾ ಕಷ್ಟದ ಕೆಲಸ. ಕೇಂದ್ರದಲ್ಲಿ ಒಂದು ಪಕ್ಷದ ಸರ್ಕಾರವಿದ್ದು ರಾಜ್ಯದಲ್ಲಿ ಇನ್ನೊಂದು ಪಕ್ಷದ ಸರ್ಕಾರವಿದ್ದಾಗ ಈ ರಾಜ್ಯಪಾಲರುಗಳು‎ ತುಂಬಾ ಆತಂತ್ರ ಸ್ಥಿತಿಯಲ್ಲಿ ಸಿಲುಕುವುದಂತೂ ವಾಸ್ತವಿಕ ಸತ್ಯ.ಇಲ್ಲಿ ಕೂಡಾ ಆದದ್ದು ಇದೆ ಕಥೆ..

Advertisement

ಈ ರಾಜ್ಯ ಪಾಲರಿಗೆ ಅನುಮತಿ ನೀಡಲು ಮನಸ್ಸು ಇಲ್ಲದಿದ್ದರು ಸಹ ಕೇಂದ್ರದ ಒತ್ತಡ ಖಂಡಿತವಾಗಿಯೂ ಇದೆ . ಇದರಲ್ಲಿ ಯಾವುದೇ ಸಂಶಯವಿಲ್ಲ.ಈ ಎಲ್ಲಾ ಸಂದರ್ಭದಲ್ಲಿ ರಾಜ್ಯ ಪಾಲರುಗಳು ತುಂಬಾ ಅಸಹಾಯಕರಾಗಿಯೇ ಇರುತ್ತಾರೆ.ಬಹು ಹಿಂದೆ ತಮಿಳುನಾಡಿನಲ್ಲಿ ನಡೆದ ಒಂದು ಘಟನೆ ನೆನಪಾಗುತ್ತದೆ.ಅಂದು ಕೇಂದ್ರದಲ್ಲಿ ಎನ್.ಡಿ.ಯೇ.ಸರ್ಕಾರ ಅಡ್ವಾಣಿ ಯವರು ಗೃಹ ಸಚಿವರು.ತಮಿಳುನಾಡಿನಲ್ಲಿ ಎ.ಐ.ಡಿ.ಎಂ.ಕೆ. ಮುಖ್ಯಮಂತ್ರಿ ಜಯಲಲಿತಾ ಮುಖ್ಯಮಂತ್ರಿ. ಅಂದಿನ ಕೇಂದ್ರ ಸರಕಾರಕ್ಕೆ ತಮಿಳುನಾಡಿನ ಡಿ.ಎಂ.ಕೆ.ನಾಯಕ ಕರುಣಾನಿಧಿಯವರ ಬೆಂಬಲ.ಈ ಕರುಣಾನಿಧಿಯವರಿಗೆ ಈ ಜಯಲಲಿತಾರನ್ನು ಹೇಗಾದರೂ ಮಾಡಿ ಅಧಿಕಾರದಿಂದ ಕೆಳಗಿಳಿಸಲೇ ಬೇಕೆಂಬ ಹಠ..

ಅಂತೂ ಕೊನೆಗೂ ಕೇಂದ್ರ ಸರಕಾರದ ಮೇಲೇ ಒತ್ತಡ ಹಾಕುವ ಪ್ರಯತ್ನ ಮಾಡಿದರು.ಕೊನೆಗೂ ಈ ಒತ್ತಾಯಕ್ಕೆ ಮಣಿಯಲೇ ಬೇಕಾದ ಪರಿಸ್ಥಿತಿ ಬಿಜೆಪಿ ನಾಯಕರಿಗೆ ಬಂತು. ಅಂದು ತಮಿಳುನಾಡು ನಾಡಿನ ರಾಜ್ಯ ಪಾಲೆಯಾಗಿದ್ದವರು ಮುಸ್ಲಿಂ ಲೇಡಿ ಬೇಗಂ ರವರು. ಈ ಬೇಗಂರವರಿಗೆ ಕೇಂದ್ರದಿಂದ ಒಂದು ಮೌಖಿಕವಾದ ಸಂದೇಶ ಬಂತು ಏನೆಂದರೆ ತಮಿಳುನಾಡಿನಲ್ಲಿ ಜಯಲಲಿತಾ ಸರ್ಕಾರ ಆರಾಜಕತೆ ಸೃಷ್ಟಿ ಮಾಡಿದೆ ಅನ್ನುವ ಒಂದು ವಾಕ್ಯ ದ ಪತ್ರ ಬರೆಯುವಂತೆ ಕೇಳಿಕೊಂಡಿತ್ತು ಅಂದಿನ ಕೇಂದ್ರ ಗೃಹ ಇಲಾಖೆ.ಆದರೆ ಆದ ಕಥೆಯೇ ಬೇರೆ..ಅದಾಗಲೇ ಈ ಜಯ ಅಮ್ಮ ಈ ಬೇಗಂ ಅಮ್ಮ ತುಂಬಾ ಸ್ನೇಹಿತರಾಗಿ ಬಿಟ್ಟಿದ್ದರು..

ಅಂದು ಈ ಬೇಗಂ ಮೇಡಂ ಕೇಂದ್ರಕ್ಕೆ ಕಳುಹಿಸಿದ ಪತ್ರ ಹೇಗಿತ್ತು ಅಂದರೆ “ತಮಿಳುನಾಡಿನಲ್ಲಿ ಜಯಲಲಿತಾ ಸರ್ಕಾರ ತುಂಬಾ ಚೆನ್ನಾಗಿ ಕೆಲಸ ಮಾಡುತ್ತಿದೆ” ಇದನ್ನು ಓದಿದ ಗೃಹ ಇಲಾಖೆ ಸಚಿವಾಲಯದ ಮೂಲಕ ಇನ್ನೊಂದು ಪತ್ರ ಬೇಗಂರಿಗೆ ಬಂತು. ಬೇಗಂ ನೀವು ಬೇಗ ಡಿಲ್ಲಿಗೆ ಬನ್ನಿ..ಅಂದೇ ಈ ಬೇಗಂ ರಾಜಿನಾಮೆ ಕೊಟ್ಟು ಮನೆಗೆ ಹೇೂದರು.ಇಂದು ಅಷ್ಟೇ ಅಂದು ಅಲ್ಲಿ ಕರುಣಾನಿಧಿ ಇಂದು ಇಲ್ಲಿ ಕುಮಾರ ಸ್ವಾಮಿಯ ಒತ್ತಡಕ್ಕೆ ರಾಜ್ಯ ಪಾಲರಿಗೆ ಮೌಖಿಕ ಸಂದೇಶ ಬಂದಿರ ಬೇಕು.?ಒಂದು ವೇಳೆ ನಮ್ಮ ಮುಗ್ದ ರಾಜ್ಯ ಪಾಲರು ಅನುಮತಿ ನೀಡದೇ ಹೇೂಗಿದ್ದರೆ ಇಷ್ಟರಲ್ಲಿಯೇ ದೆಹಲಿ ತಲುಪಬೇಕಿತ್ತೊ ಏನೊ?
ಸಿದ್ದರಾಮಯ್ಯ ಮುಖ್ಯ ಮಂತ್ರಿಗಳ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಾ?ಕಾನೂನಿನ ದೃಷ್ಟಿಯಿಂದ ಕೊಡ ಬೇಕಾಗಿಲ್ಲ..ನೈತಿಕತೆಯ ಪ್ರಶ್ನೆ ಬಂದರೆ ಕೊಟ್ಟರೂ ಆಶ್ಚರ್ಯ ಪಡ ಬೇಕಾಗಿಲ್ಲ.

ಸಿದ್ದರಾಮಯ್ಯ ರಾಜೀನಾಮೆಯಿಂದ ಕಾಂಗ್ರೆಸ್ ಗೆ ಇನ್ನಷ್ಟು ಶಕ್ತಿ ಬರ ಬಹುದು. ಒಂದಿಷ್ಟು ಜಾತಿ ಸಮೀಕರಣದ ಲೆಕ್ಕಾಚಾರವುಾ ಆಗ ಬಹುದು. ಪ್ರಸ್ತುತ ಉಪಮುಖ್ಯ ಮಂತ್ರಿ ಡಿಕೆಶಿಯವರ ಮುಂದಿನ ಮುಖ್ಯಮಂತ್ರಿ ಹುದ್ದೆಗೆ ದಾರಿ ಸ್ವಲ್ಪ ಸುಗಮವಾಗಿದೆ ಅಂತಲೂ ಹೇಳ ಬಹುದು. ಅಂತೂ ಸಿದ್ದರಾಮಯ್ಯ ಸುಲಭವಾಗಿ ಅಧಿಕಾರ ಬಿಡುವುದಿಲ್ಲ. ಅದಕ್ಕೆ ಮುಖ್ಯ ಕಾರಣ ಇದು ಅವರ ಕೊನೆಯ ರಾಜಕೀಯ ಬದುಕಿನ ಮುಖ್ಯಮಂತ್ರಿ ಸ್ಥಾನವಾದ ಕಾರಣ ಈಗ ರಾಜೀನಾಮೆ ಕೊಟ್ಟು ಹೊರಗೆ ಹೋದರೆ ಅವರ ಹೆಸರಿನ ಮುಂದೆ ಒಂದು ಕಪ್ಪು ಚುಕ್ಕೆ ಶಾಶ್ವತವಾಗಿ ಕುಳಿತುಕೊಳ್ಳುತ್ತದೆ..ಇದುವರೆಗಿನ ಸಿದ್ದರಾಮಯ್ಯ ತಮ್ಮ ಸುದೀರ್ಘವಾದ ರಾಜಕೀಯ ಜೀವನದಲ್ಲಿ” ಶುದ್ಧರಾಮಯ್ಯ” ಅನ್ನುವ ಮಾತು ಕೇಳಿಸಿಕೊಂಡಿದ್ದು ಬಿಟ್ಟರೆ ಆಶುದ್ದ ಅನ್ನುವ ಮಾತು ಕೇಳಿಸಿಕೊಳ್ಳಲೇ ಇಲ್ಲ.ಈಗ ನಿವೃತ್ತಿಯ ಅಂಚಿನಲ್ಲಿ ಭ್ರಷ್ಟಾಚಾರದ ಕಿರೀಟ ಹೊತ್ತು ಅಧಿಕಾರದಿಂದ ವಿರಮಿಸಲು ಖಂಡಿತವಾಗಿಯೂ ಅವರ ಮನಸ್ಸು ಒಪ್ಪುವುದಿಲ್ಲ ..ಹಾಗಾಗಿ ಈ ಹಗರಣಕ್ಕೆ ಒಂದುಮುಕ್ತಿ ಹಾಡಿಯೇ ಮುಖ್ಯ ಮಂತ್ರಿ ಸಿದ್ದರಾಮಯ್ಯ ತೆರಳುವುದಂತೂ ಗ್ಯಾರಂಟಿ.

ಪ್ರೊ.ಕೊಕ್ಕರ್ಣೆ ಸುರೇಂದ್ರ ನಾಥ ಶೆಟ್ಟಿ ಉಡುಪಿ.

Advertisement

Udayavani is now on Telegram. Click here to join our channel and stay updated with the latest news.

Next