Advertisement

MUDA Scam: ಸಿದ್ದರಾಮಯ್ಯಗೆ ವಿಚಾರಣೆ ಅನಿವಾರ್ಯ; ಸಿಎಂ ಮುಂದಿನ ನಡೆ ಏನು?

11:47 PM Aug 17, 2024 | Team Udayavani |

ಬೆಂಗಳೂರು: ಸಿದ್ದರಾಮಯ್ಯ ಅವರ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯಿದೆಯ ಸೆಕ್ಷನ್‌ 17(ಎ) ಪ್ರಕಾರ ರಾಜ್ಯಪಾಲರು ಅಭಿಯೋಜನೆಗೆ ಅನುಮತಿ ನೀಡಿರುವುದರಿಂದ ವಿಚಾರಣೆಯಿಂದ ತಪ್ಪಿಸಿಕೊಳ್ಳುವುದಕ್ಕೆ ಸಿದ್ದರಾಮಯ್ಯ ಅವರಿಗೆ ಅಸಾಧ್ಯವಾಗಬಹುದು ಎಂದೇ ಕಾನೂನು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Advertisement

ರಾಜ್ಯಪಾಲರು ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಸೆಕ್ಷನ್‌ 19(ಎ) ಪ್ರಕಾರ ಅನುಮತಿ ನೀಡಿದ್ದರೆ ನೇರವಾಗಿ ಇದನ್ನು ಪ್ರಶ್ನಿಸುವುದಕ್ಕೆ ಅವಕಾಶವಿರುತ್ತಿತ್ತು. ಆದರೆ 17(ಎ) ಪ್ರಕಾರ ನೀಡಿರುವುದರಿಂದ ದೂರುದಾರ ಅಭಿಯೋಜನಾ ಅನುಮತಿ ಪತ್ರದೊಂದಿಗೆ ನ್ಯಾಯಾಲಯಕ್ಕೆ ಹಾಜರಾಗಿ ವಿಚಾರಣೆಗೆ ಅನುಮತಿ ಕೋರಬಹುದು. ಆಗ ನ್ಯಾಯಾಲಯ ಖಾಸಗಿ ದೂರು ದಾಖಲಿಸಿಕೊಂಡು ಸೆಕ್ಷನ್‌ 202 ಅಡಿಯಲ್ಲಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಚಾರಣೆ ನಡೆಸಿ ವರದಿ ಕೊಡಿ ಎಂದು ಲೋಕಾಯುಕ್ತ ಅಥವಾ ಪೊಲೀಸ್‌ಗೆ ಸೂಚನೆ ನೀಡಬಹುದು. ಹೀಗಾಗಿ ವಿಚಾರಣೆ ಅನಿವಾರ್ಯವಾಗಿ ಪರಿಣಮಿಸುತ್ತದೆ.

ಈ ಹಂತದಲ್ಲಿ ದೂರುದಾರನ ಪ್ರಮಾಣೀಕೃತ ಹೇಳಿಕೆ, ಆರೋಪಿತ ಸ್ಥಾನದಲ್ಲಿರುವವರಿಗೆ ಸಮನ್ಸ್‌ ಇತ್ಯಾದಿ ಪ್ರಕ್ರಿಯೆಗಳು ನಡೆಯಲೇಬೇಕಾಗುತ್ತದೆ. ಇದೆಲ್ಲ ಆದ ಬಳಿಕ ದೂರುದಾರ ಮತ್ತೆ ರಾಜ್ಯಪಾಲರಿಂದ ಅಭಿಯೋಜನಾ ಅನುಮತಿ ಕೇಳಬೇಕಾಗುತ್ತದೆ. ಆಗ 19(ಎ) ಪ್ರಕಾರ ರಾಜ್ಯಪಾಲರು ಅನುಮತಿ ನೀಡಬೇಕಾಗುತ್ತದೆ.

ಈ ಪ್ರಕರಣ ಸಂಬಂಧ ಒಬ್ಬ ದೂರುದಾರ ಈಗಾಗಲೇ ನ್ಯಾಯಾಲಯದಲ್ಲಿ ಕೇವಿಯಟ್‌ ಸಲ್ಲಿಸಿದ್ದಾರೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಈಗಾಗಲೇ ವಿಚಾರಣೆ ನಡೆಯುತ್ತಿದ್ದು ರಾಜ್ಯಪಾಲರ ಅನುಮತಿ ಪ್ರತಿ ಹಾಜರುಪಡಿಸಿ ಖಾಸಗಿ ದೂರು ದಾಖಲಿಸಬಹುದಾಗಿದೆ. ಹೀಗಾಗಿ ಸಿದ್ದರಾಮಯ್ಯನವರು ಕಾನೂನು ಹೋರಾಟದಲ್ಲಿ ಸಮಗ್ರವಾಗಿ ರಾಜ್ಯಪಾಲರ ಅನುಮತಿ ಪ್ರಶ್ನಿಸುತ್ತಾರೋ ಅಥವಾ 17(ಎ) ಪ್ರಶ್ನಿಸುತ್ತಾರೋ ಎಂಬ ಕುತೂಹಲ ಸೃಷ್ಟಿಯಾಗಿದೆ.

“ನಿರ್ದಿಷ್ಟವಾಗಿ ಹೇಳಬೇಕೆಂದರೆ ಇದು ಅಭಿಯೋಜನೆಗೆ ನೀಡಿದ ಅನುಮತಿಯಲ್ಲ, ರಾಜ್ಯಪಾಲರ ಮುಂದೆ ಇದ್ದ ದೂರಿನ ಆಧಾರದ ಮೇಲೆ ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಅಡಿ ಪೊಲೀಸರು ತನಿಖೆ ನಡೆಸುವುದಕ್ಕೆ ನೀಡಿದ ಅನುಮತಿ. 17(ಎ) ಪ್ರಕಾರ ಅನುಮತಿ ನೀಡಿರುವುದರಿಂದ ನಿರ್ದಿಷ್ಟ ಅರ್ಜಿ ಆಧರಿಸಿ ತನಿಖೆ ನಡೆಸುವುದಕ್ಕೆ ಪೊಲೀಸರಿಗೆ ಇದ್ದ ಅಡ್ಡಿ ನಿವಾರಣೆಯಾಗಿದೆ. ಇದರ ವಿರುದ್ಧ ಹೈಕೋರ್ಟ್‌ ಹಾಗೂ ಸುಪ್ರೀಂ ಕೋರ್ಟ್‌ನಲ್ಲಿ ರಿಟ್‌ ಅರ್ಜಿ ಸಲ್ಲಿಸಿ ಪ್ರಶ್ನಿಸುವುದಕ್ಕೆ ಅವಕಾಶವಿದೆ.” – ಬಿ.ವಿ. ಆಚಾರ್ಯ, ಹಿರಿಯ ನ್ಯಾಯವಾದಿ

“ಮುಖ್ಯಮಂತ್ರಿ ವಿರುದ್ಧ ಅಭಿಯೋಜನೆ ಕೋರಿ ದೂರು ಬಂದಾಗ ರಾಜ್ಯಪಾಲರು ತಮ್ಮ ವಿವೇಚನಾಧಿಕಾರವನ್ನು ಬಳಸುವುದಕ್ಕೆ ಅವಕಾಶವಿದೆ. ಅದಕ್ಕಾಗಿ ಅವರು ಸಂಪುಟದ ಸಲಹೆಯನ್ನು ಕಡ್ಡಾಯವಾಗಿ ಪಾಲಿಸಲೇಬೇಕು ಎಂದೇನೂ ಇಲ್ಲ. ಆದರೆ ರಾಜ್ಯಪಾಲರ ಈ ನಿರ್ಧಾರವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವುದಕ್ಕೂ ಅವಕಾಶವಿದೆ. ರಾಜ್ಯಪಾಲರ ನಡೆ ಹೇಗೆ ಕಾನೂನು ರೀತಿ ಇಲ್ಲ ಎಂದು ಮನವರಿಕೆ ಮಾಡಿಕೊಡುವುದಕ್ಕೆ ಹಾಗೂ ಕಾನೂನು ಹೋರಾಟ ಮಾಡುವುದಕ್ಕೆ ಅವಕಾಶವಿದೆ.”
– ಅಶೋಕ ಹಾರ್ನಳ್ಳಿ, ನಿವೃತ್ತ ಅಡ್ವೋಕೇಟ್‌ ಜನರಲ್‌

“ನನ್ನ ಕಾನೂನು ಅರಿವಿನ ಪ್ರಕಾರ 17(ಎ) ಪ್ರಕಾರ ರಾಜ್ಯಪಾಲರು ಅಭಿಯೋಜನೆ ನಡೆಸುವುದಕ್ಕೆ ಅನುಮತಿ ನೀಡಿರುವುದರಲ್ಲಿ ಯಾವುದೇ ತಪ್ಪಿಲ್ಲ. ಆದರೆ ಇದೇ ಕಾರಣಕ್ಕಾಗಿ ಅವರು ರಾಜೀನಾಮೆ ನೀಡಬೇಕು ಎಂದು ಕಾನೂನು ಹೇಳುವುದಿಲ್ಲ. ರಾಜೀನಾಮೆ ನೈತಿಕತೆಗೆ ಸಂಬಂಧಪಟ್ಟ ವಿಚಾರ. ಆದರೆ ಅಭಿಯೋಜನೆ ಪತ್ರವನ್ನು ಮುಂದಿಟ್ಟುಕೊಂಡು ಸಲ್ಲಿಕೆಯಾಗುವ ಖಾಸಗಿ ದೂರನ್ನು ನ್ಯಾಯಾಲಯ ಎತ್ತಿ ಹಿಡಿದಾಗ ಸಮಸ್ಯೆಯಾಗಬಹುದು. ಇದರ ಜತೆಗೆ ಈ ನಿರ್ಣಯವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸುವುದಕ್ಕೂ ಅವರಿಗೆ ಅಧಿಕಾರವಿದೆ.” – ಸಿ.ಎಚ್‌. ಹನುಮಂತರಾಯ, ಹಿರಿಯ ನ್ಯಾಯವಾದಿ

Advertisement

“ಈ ಪ್ರಕರಣದಲ್ಲಿ ಏನಾಗಬಹುದು ಎಂದು ಇದಮಿತ್ಥಂ ಎನ್ನಲು ಸಾಧ್ಯವಿಲ್ಲ. ಕಾನೂನು ಹೋರಾಟ ಎಂದಾಗ ಹತ್ತು ಹಲವು ಸಾಧ್ಯತೆಗಳು ಇರುತ್ತವೆ. ಸದ್ಯಕ್ಕೆ ಸಿದ್ದರಾಮಯ್ಯನವರ ಮುಂದೆ ಇರುವ ಅವಕಾಶಗಳ ಪೈಕಿ ರಾಜ್ಯಪಾಲರ ನಿರ್ಣಯವನ್ನು ಪ್ರಶ್ನಿಸುವುದಾಗಿರಬಹುದು. ಇದಕ್ಕೆ ಅವಕಾಶವಿದೆ.”  – ಉದಯ ಹೊಳ್ಳ, ರಾಜ್ಯ ಸರಕಾರದ ನಿವೃತ್ತ ಅಡ್ವೊಕೇಟ್‌ ಜನರಲ್‌

Advertisement

Udayavani is now on Telegram. Click here to join our channel and stay updated with the latest news.

Next