Advertisement

30 ವರ್ಷಗಳಿಂದ ಅಭಿವೃದ್ಧಿ ಕಾಣದ ಮಣ್ಣಿನ ರಸ್ತೆ

09:36 PM Dec 03, 2019 | Lakshmi GovindaRaju |

ಗೋಳಿಯಂಗಡಿ: “ಈ ರಸ್ತೆಯಾಗಿ ಸರಿ ಸುಮಾರು 30 ವರ್ಷಗಳಾಗಿವೆ. ಈಗಲೂ ಮಣ್ಣಿನ ರಸ್ತೆಯಾಗಿಯೇ ಇದೆ. ಇಷ್ಟು ವರ್ಷಗಳು ಕಾದದ್ದು ಸಾಕು. ಇನ್ನು ಈ ರಸ್ತೆ ಡಾಮರೀಕರಣವಾಗುವವರೆಗೆ ನಾವು ಯಾರೂ ಯಾವುದೇ ಚುನಾವಣೆಯಲ್ಲಿ ಮತದಾನ ಹಾಕದೇ ಬಹಿಷ್ಕರಿಸುತ್ತೇವೆ’.
ಇದು ಹೆಂಗವಳ್ಳಿ ಗ್ರಾ.ಪಂ. ವ್ಯಾಪ್ತಿಯ ಕಂಕಂಗೋಳಿ ಹಾಗೂ ಸುರ್ಗಿಜೆಡ್ಡು ಗ್ರಾಮಸ್ಥರು ತಮ್ಮ ಹದಗೆಟ್ಟ ರಸ್ತೆಯ ದುಃಸ್ಥಿತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ರೀತಿ. ಈ ರಸ್ತೆಯ ಡಾಮರೀಕರಣ ಆಗುವವರೆಗೆ ನಾವು ಯಾವುದೇ ಚುನಾವಣೆಯಲ್ಲಿ ಪಾಲ್ಗೊಳ್ಳುವುದಿಲ್ಲ. ಇಲ್ಲಿನ ಎಲ್ಲರೂ ಕೂಡ ಎಲ್ಲ ಮತದಾನವನ್ನು ಬಹಿಷ್ಕರಿಸುತ್ತೇವೆ ಎನ್ನುವುದಾಗಿ ಎಚ್ಚರಿಕೆ ಸಂದೇಶ ಸಾರುವ ಬ್ಯಾನರ್‌ ಅನ್ನು ಕೂಡ ಅಳವಡಿಸಿದ್ದಾರೆ.

Advertisement

ಯಾವ ರಸ್ತೆ?
ಹೆಂಗವಳ್ಳಿ ಗ್ರಾ.ಪಂ. ವ್ಯಾಪ್ತಿಯ ಯಳಂತೂರು ಸಮೀಪದ ಸೇತುವೆಯಿಂದ ಸ್ವಲ್ಪ ಮುಂದಕ್ಕೆ ತೆರಳಿದಾಗ ಸಿಗುವ ಕಂಕಂಗೋಳಿ ಳಿ, ಸುರ್ಗಿಜೆಡ್ಡುವಿಗೆ ಸಂಚರಿಸುವ ಸುಮಾರು 3 ಕಿ.ಮೀ. ಉದ್ದದ ರಸ್ತೆ ಇದಾಗಿದೆ. ರಸ್ತೆ ನಿರ್ಮಾಣಗೊಂಡು 30 ವರ್ಷಗಳಾಗಿದ್ದು, ಇನ್ನೂ ಕೂಡ ಈ ರಸ್ತೆಗೆ ಡಾಮರು ಭಾಗ್ಯ ಒದಗಿ ಬಂದಿಲ್ಲ.

100ಕ್ಕೂ ಮಿಕ್ಕಿ ಮನೆಗಳು
ಹೆಂಗವಳ್ಳಿ ಗ್ರಾಮದಲ್ಲಿ ಬರುವ ಈ ಕಂಕಂಗೋಳಿ ಳಿ ಹಾಗೂ ಸುರ್ಗಿಜೆಡ್ಡುವಿನಲ್ಲಿ ಅಂದಾಜು 100 ಕ್ಕೂ ಮಿಕ್ಕಿ ಮನೆಗಳಿದ್ದು, ಸಾವಿರಾರು ಮಂದಿ ಇದೇ ಮಾರ್ಗವನ್ನು ಆಶ್ರಯಿಸಿದ್ದಾರೆ. ಇವರಿಗೆ ಗೋಳಿಯಂಗಡಿ ಪೇಟೆ, ಹೆಂಗವಳ್ಳಿ ಗ್ರಾ.ಪಂ. ಕಚೇರಿ, ಹಾಲಾಡಿ, ಕುಂದಾಪುರಕ್ಕೆ ತೆರಳಲು ಇದೇ ರಸ್ತೆಯನ್ನು ಅವಲಂಬಿಸಿದ್ದಾರೆ.

ಇಲ್ಲಿನ ಗ್ರಾಮ ಪಂಚಾಯತ್‌ನವರು ವರ್ಷಕ್ಕೊಂದು ಬಾರಿ ರಸ್ತೆಯ ಹೊಂಡಗಳಿಗೆ ಮಣ್ಣು ಹಾಕಿ, ನಮ್ಮ ಕಣ್ಣಿಗೆ ಮಣ್ಣೆರಚಿ ಹೋಗುತ್ತಾರೆ. ಆದರೆ ಮತ್ತೆ ಈ ಕಡೆ ಗಮನವೇ ಕೊಡುವುದಿಲ್ಲ. ಜನಪ್ರತಿನಿಧಿಗಳು ಚುನಾವಣೆ ಸಂದರ್ಭ ಬಂದಾಗ ಮಾಡಿಕೊಡುತ್ತೇವೆ ಎಂದು ಹೇಳುತ್ತಾರೆ. ಮತ್ತೆ ಈ ಕಡೆ ಬರುವುದೇ ಇಲ್ಲ ಎನ್ನುವುದಾಗಿ ಗ್ರಾಮಸ್ಥರು ಆರೋಪಿಸಿದ್ದಾರೆ.

ಬ್ಯಾನರ್‌ ಹರಿದ ಕಿಡಿಗೇಡಿಗಳು
ರಸ್ತೆಯ ಅವ್ಯವಸ್ಥೆಯನ್ನು ಖಂಡಿಸಿ, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಕಾರ್ಯವೈಖರಿಯನ್ನು ವಿರೋಧಿಸಿ, ಈ ರಸ್ತೆ ಅಭಿವೃದ್ಧಿಯಾಗುವವರೆಗೆ ನಾವು ಯಾವ ಚುನಾವಣೆ ಬಂದರೂ ಮತ ಹಾಕುವುದಿಲ್ಲ ಎನ್ನುವ ಎಚ್ಚರಿಕೆ ಸಂದೇಶ ಸಾರುವ ಬ್ಯಾನರ್‌ವೊಂದನ್ನು ರವಿವಾರ ಇಲ್ಲಿನ ಗ್ರಾಮಸ್ಥರು ಹಾಕಿದ್ದರು. ಆದರೆ ಸೋಮವಾರ ಬೆಳಗ್ಗೆಯಷ್ಟರಲ್ಲಿ ಈ ಬ್ಯಾನರನ್ನು ಯಾರೋ ಕಿಡಿಗೇಡಿಗಳು ಹರಿಹಾಕಿದು ವಿಕೃತಿ ಮೆರೆದಿದ್ದಾರೆ.

Advertisement

ಹೊತ್ತುಕೊಂಡೇ ಹೋಗಬೇಕು
ಈ ರಸ್ತೆಯ ದುಃಸ್ಥಿತಿಯಿಂದಾಗಿ ಯಾವ ವಾಹನದವರು ಕೂಡ ಇಲ್ಲಿಗೆ ಬಾಡಿಗೆಗೆ ಬರುವುದಿಲ್ಲ. ಯಾರಿಗಾದರೂ ಅನಾರೋಗ್ಯ ಉಂಟಾದರೆ ಅವರನ್ನು ಸುಮಾರು 3 ಕಿ.ಮೀ. ವರೆಗೆ ಹೊತ್ತುಕೊಂಡೇ ಹೋಗಬೇಕು. ಮಳೆಗಾಲದಲ್ಲಂತೂ ಭಾರೀ ಕಷ್ಟವಾಗುತ್ತದೆ. ಈ ಬಗ್ಗೆ ಶಾಸಕರಿಗೆ 3-4 ಬಾರಿ ಮನವಿ ಮಾಡಿದ್ದೇವೆ. ಇನ್ನು ಹೀಗೆ ಆದಲ್ಲಿ ನಾವು ಮತದಾನ ಬಹಿಷ್ಕರಿಸುತ್ತೇವೆ.
– ರಾಜೇಶ್‌ ಸುರ್ಗಿಜೆಡ್ಡು, ಸ್ಥಳೀಯರು

ಮೀಸಲು ಅರಣ್ಯ: ಸರಕಾರಕ್ಕೆ ಪತ್ರ
ಈ ರಸ್ತೆಯ ಅಭಿವೃದ್ಧಿಗೆ ಸಾಕಷ್ಟು ಬಾರಿ ಪ್ರಯತ್ನಗಳನ್ನು ಮಾಡಲಾಗಿದೆ. ಮೀಸಲು ಅರಣ್ಯ ಪ್ರದೇಶದಲ್ಲಿ ಬರುವುದರಿಂದ ಡಾಮರೀಕರಣ ಕಷ್ಟ. ಈ ಕಾರಣದಿಂದಾಗಿಯೇ ಕಳೆದ ಬಾರಿ 5 ಕೋ.ರೂ. ಮಂಜೂರಾಗಿತ್ತು. ಆದರೆ ಈ ಸಮಸ್ಯೆಯಿಂದ ತಡೆ ಹಿಡಿಯಲಾಗಿದೆ. ಈ ಬಗ್ಗೆ ಹಿಂದಿನ ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಸಮಸ್ಯೆಯನ್ನು ತಿಳಿಸಲಾಗಿದೆ. ಅವರು ಸರಕಾರಕ್ಕೆ ಪತ್ರ ಬರೆಯುವುದಾಗಿ ತಿಳಿಸಿದ್ದಾರೆ. ಪಂಚಾಯತ್‌ನಿಂದಲೂ ಸರಕಾರಕ್ಕೆ ಪತ್ರ ಬರೆಯಲು ತಿಳಿಸಿದ್ದೇನೆ. ಸರಕಾರದ ಮಧ್ಯಪ್ರವೇಶದ ನಿರೀಕ್ಷೆಯಲ್ಲಿದ್ದೇವೆ.
– ಸುಪ್ರೀತಾ ಉದಯ ಕುಲಾಲ್‌, ಜಿ.ಪಂ. ಸದಸ್ಯರು

ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next