ಚಿಕ್ಕಬಳ್ಳಾಪುರ: ತೀವ್ರ ಕುತೂಹಲ ಕೆರಳಿಸಿದ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಭಕ್ತರಹಳ್ಳಿಯ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕರ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ 7 ನಿರ್ದೇಶಕರು ಆಯ್ಕೆಯಾಗಿ ಸುಮಾರು 15 ವರ್ಷಗಳ ನಂತರ ಅಧಿಕಾರದ ಚುಕ್ಕಾಣಿ ಹಿಡಿಯಲು ಹಾದಿ ಸುಗಮ ಮಾಡಿಕೊಂಡಿದ್ದಾರೆ.
ಜಿದ್ದಾಜಿದ್ದು ಮತ್ತು ಸಮಬಲದ ಹೋರಾಟದಲ್ಲಿ ಕಾಂಗ್ರೆಸ್ ಪಕ್ಷದ ಬೆಂಬಲಿತರು 7 ಸ್ಥಾನಗಳನ್ನು ತಮ್ಮದಾಗಿಸಿಕೊಳ್ಳುವ ಮೂಲಕ 15 ವರ್ಷಗಳ ನಂತರ ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಚುಕ್ಕಾಣಿ ಕೈವಶ ಮಾಡಿಕೊಂಡಿದ್ದಾರೆ ಮತ್ತೊಂದಡೆ ಜೆಡಿಎಸ್ ಬೆಂಬಲಿತ 5 ನಿರ್ದೇಶಕರು ಚುನಾಯಿತರಾಗಿದ್ದು ಒಬ್ಬರು ಚುನಾವಣೆ ಮೊದಲೇ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಹಾಲು ಉತ್ಪಾದಕರ ಸಹಕಾರ ಸಂಘದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಜಯ ಸಾಧಿಸಿದ ಹಿನ್ನೆಲೆಯಲ್ಲಿ ಇಂದು ಭಕ್ತರಹಳ್ಳಿಯ ಶ್ರೀ ಆಚಿಜನೇಯಸ್ವಾಮಿ ಮತ್ತು ಶ್ರೀ ಶಿವನ ದೇವಾಲಯದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಮುಖಂಡರು ವಿಶೇಷ ಪೂಜೆ ಸಲ್ಲಿಸಿ ಸಿಹಿ ಹಂಚಿ ಪಟಾಕಿ ಸಿಡಿಸುವ ಮೂಲಕ ವಿಜಯೋತ್ಸವ ಆಚರಿಸಿ ಸಂಭ್ರಮಿಸಿದರು.
ಕೆಎಂಎಫ್ ಮತ್ತು ಕೋಚಿಮುಲ್ ನಿರ್ದೇಶಕ ಶ್ರೀನಿವಾಸ್ ರಾಮಯ್ಯ ಮಾತನಾಡಿ ಭಕ್ತರಹಳ್ಳಿಯ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರ ಶ್ರಮದಿಂದ ಮತ್ತು ಹಾಲು ಉತ್ಪಾದಕರ ಬೆಂಬಲದಿಂದ 15 ವರ್ಷಗಳ ನಂತರ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಅಧಿಕಾರದ ಚುಕ್ಕಾಣಿ ಕಾಂಗ್ರೆಸ್ ಪಕ್ಷಕ್ಕೆ ಲಭಿಸುವಂತಾಗಿದ್ದು, ಅದಕ್ಕಾಗಿ ಮತದಾರರನ್ನು ಅಭಿನಂದಿಸಿ ಕೋಚಿಮುಲ್ ಮತ್ತು ಕೆಎಂಎಫ್ನಿಂದ ದೊರೆಯುವ ಸೌಲಭ್ಯಗಳನ್ನು ಒದಗಿಸಲು ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.
ಕಾಂಗ್ರೆಸ್ನ ಹಿರಿಯ ಮುಖಂಡ ವೆಂಕಟಮೂರ್ತಿ ಹಾಗೂ ಹಾಪ್ಕಾಮ್ಸ್ ಮಾಜಿ ಅಧ್ಯಕ್ಷ ಬಿವಿ ಮುನೇಗೌಡ ಮಾತನಾಡಿ ಎಂಪಿಸಿಎಸ್ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತರು 7 ಸ್ಥಾನಗಳಲ್ಲಿ ಗೆಲುವು ಸಾಧಿಸಿ ಕಳೆದ 15 ವರ್ಷಗಳ ಹಿಂದೆ ಕೈ ತಪ್ಪಿದ ಅಧಿಕಾರವನ್ನು ಮತ್ತೊಮ್ಮೆ ಪಡೆದುಕೊಳ್ಳುವಂತಾಗಿದ್ದು ಅದಕ್ಕಾಗಿ ಮತದಾರರಾಗಿರುವ ಹಾಲು ಉತ್ಪಾದಕರಿಗೆ ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಎಂಪಿಸಿಎಸ್ ನಿರ್ದೇಶಕರಾದ ಆಲೇರಿ ನಾಗರಾಜ್, ಕೋಟೆ ಬಿಕೆ ಚನ್ನೇಗೌಡ, ಬಿಟಿ ನಾಗೇಶ್, ಅಶ್ವಥಮ್ಮ, ಬಿಎನ್ ಅನಿತಾ, ಎಕೆ ನಾರಾಯಣಪ್ಪ, ಬಿಕೆ ಗಂಗರೆಡ್ಡಿ, ಮುಖಂಡರಾದ ಬಿವಿ ಕೃಷ್ಣಪ್ಪ, ಬಿಕೆ ರಾಮಚಂದ್ರ, ಕೃಷ್ಣಪ್ಪ, ಗ್ರಾಮ ಪಂಚಾಯಿತಿ ಸದಸ್ಯ ಚಿದಾನಂದ್ಮೂರ್ತಿ, ಮಳ್ಳೂರು ಎಸ್ಎಫ್ಸಿಎಸ್ ನಿರ್ದೇಶಕ ಮುನಿರಾಜು, ಯುವ ಕಾಂಗ್ರಸ್ನ ಮಧುಗೌಡ, ಸುನೀಲ್, ಹೇಮಂತ್ಕುಮಾರ್,ಎಂಎಂ ದೇವರಾಜ್,ಬಿಕೆ ರಾಮಚಂದ್ರಪ್ಪ, ಎನ್ಎಸ್ಯುಐನ ವಿಶ್ವನಾಥ್ ಮತ್ತಿತರರು ಉಪಸ್ಥಿತರಿದ್ದರು.