ಕಲಬುರಗಿ: ಚಿಂಚೋಳಿ ತಾಲೂಕಿನ ಚಂದನಕೇರಾ ಗ್ರಾಮದಲ್ಲಿ ನಡೆದ ಕಲ್ಲು ತೂರಾಟ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರು ಹಾಜರಿರದಿದ್ದಲ್ಲಿ ಶಾಸಕ ಡಾ. ಅವಿನಾಶ ಜಾಧವ್ ಜೀವಂತವಾಗಿರುತ್ತಿರಲಿಲ್ಲ ಎಂದು ಸಂಸದ ಡಾ.ಉಮೇಶ ಜಾಧವ್ ತಿಳಿಸಿದರು.
ಬಿಜೆಪಿ ಪಕ್ಷದ ಕಚೇರಿಯಲ್ಲಿ ಕರೆಯಲಾದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಚಂದನಕೇರಾ ಕಲ್ಲು ತೂರಾಟ ಘಟನೆಯಲ್ಲಿ ಕಾಂಗ್ರೆಸ್ ರಾಜಕೀಯವಾಗಿ ಬಳಸಿಕೊಳ್ಳಲಾಗುತ್ತಿದೆ. ಕಲ್ಲು ತೂರಾಟ ಮೊದಲೇ ಷಡ್ಯಂತ್ರ ಕೂಡಿದೆ. ಕಲ್ಲು ತೂರಾಟ ಮಾಡಬೇಕೆಂಬ ಉದ್ದೇಶದಿಂದ ಇಲ್ಲ ಸಲ್ಲದ ಕಥೆಗಳನ್ನು ಕಟ್ಟಲಾಗುತ್ತಿದೆ. ಕಲ್ಲು ತೂರಾಟದ ಸಂದರ್ಭದಲ್ಲಿ ಶಾಸಕರಲ್ಲದೇ ನಾಲ್ಕೈದು ಕಾರ್ಯಕರ್ತರ ಹೆಣಗಳು ಬೀಳುತ್ತಿದ್ದವು ಎಂದು ಆತಂಕ ವ್ಯಕ್ತಪಡಿಸಿದರು.
ಶಾಸಕ ಪ್ರಿಯಾಂಕ್ ಖರ್ಗೆ ಡಾ. ಬಿ.ಆರ್. ಅಂಬೇಡ್ಕರ್ ಹೆಸರು ಮುಂದೆ ಮಾಡಿಕೊಂಡು ಸಮಾಜದೊಳಗೆ ಅಶಾಂತಿ ಮೂಡಿಸಲು ಮುಂದಾಗಿರುವುದು ಅಕ್ಷಮ್ಯ ಅಪರಾಧವಾಗಿ ಎಂದು ಆಕ್ರೋಶ ವ್ಯಕ್ತಪಡಿಸಿದರು
ಶಾಸಕರಿಂದ ಡಾ. ಅಂಬೇಡ್ಕರ್ ನಾಮಫಲಕಕ್ಕೆ ಅವಮಾನ ಆಗಿಲ್ಲ. ಕಾಂಗ್ರೆಸ್ ಗೆ ಸೋಲಿನ ಭೀತಿಯಿಂದ ಕಳೆದ ಕೆಲವು ದಿನಗಳಿಂದ ಷಡ್ಯಂತ್ರ ರೂಪಿಸುತ್ತಾ ಬರಲಾಗುತ್ತಿದೆ. ಕೊನೆಗೆ ಚಂದನಕೇರಾದಲ್ಲಿ ಸಮಾಜ ಎತ್ತಿ ಕಟ್ಟುವ ಹುನ್ನಾರ ನಡೆಸಿ ಅಶಾಂತಿಗೆ ಕಾರಣವಾಗಿದೆ. ಶಾಸಕ ಪ್ರಿಯಾಂಕ್ ಡಾ. ಬಿ.ಆರ್ ಅಂಬೇಡ್ಕರ್ ತಮ್ಮ ಮನೆಯ ಆಸ್ತಿ ಎಂದು ತಿಳಿದುಕೊಂಡಿದ್ದಾರೆ. ಅಂಬೇಡ್ಕರ್ ಅವರು ದೇಶದ 140 ಜನರ ಆಸ್ತಿ. ಸಂವಿಧಾನ ಬಗ್ಗೆ ಮಾತನಾಡುವ ಶಾಸಕ ಪ್ರಿಯಾಂಕ್ ಖರ್ಗೆ, ದಲಿತರ ಓಣಿಗೆ ಬಂದರೆ ತಿರುಗಾಡಲು ಬಿಡುವುದಿಲ್ಲ ಎಂಬುದಾಗಿ ಪ್ರಚೋದನಕಾರಿ ಹೇಳಿಕೆ ನೀಡಿರುವುದು ಸಂವಿಧಾನ ವಿರೋಧಿಯಾಗಿದೆ. ಆದ್ದರಿಂದ ಶಾಸಕ ಪ್ರಿಯಾಂಕ್ ಖರ್ಗೆ ವಿರುದ್ದ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಬೇಕೆಂದು ಆಗ್ರಹಿಸಿದರು.
Related Articles
ಸುದ್ದಿಗೋಷ್ಟಿಯಲ್ಲಿ ಉಪಸ್ಥಿತರಿದ್ದ ಸದ್ದಾ ಹುಸೇನ್ ಮಾತನಾಡಿ, ಘಟನೆ ಪೂರ್ವನಿಯೋಜಿತವಾಗಿ ರೂಪಿಸಲಾಗಿದೆ. ಇದರಲ್ಲಿ ಅಲ್ಪಸಂಖ್ಯಾತರ ಎನ್ನುವ ಮಾತೇ ಇಲ್ಲ ಎಂದು ಘಟನೆ ವಿವರಣೆ ನೀಡಿದರು.
ಸೋಲು ನಿಶ್ಚಿತ: ತಮ್ಮನ್ನು ಚಿಂಚೋಳಿ ಸಂಸದ ಎಂದು ಟೀಕಿಸಲಾಗುತ್ತಿದೆ. ಆದರೆ ಬರೀ ಪತ್ರಿಕಾ ಹೇಳಿಕೆ ನೀಡುತ್ತಾ ಬೆಂಗಳೂರಿನ ಸದಾಶಿವ ನಿವಾಸಿಯಾಗಿರುವ ಪ್ರಿಯಾಂಕ್ ಖರ್ಗೆ ಒಂದು ರಾತ್ರಿಯಾದರೂ ಕ್ಷೇತ್ರದಲ್ಲಿ ತಂಗಿದ್ದಾರೆಯೇ? ತಮ್ಮ ಮನೆಗೆ ಜನರು ರಾತ್ರಿ ಎರಡು ಗಂಟೆಗೆ ಬಂದು ಎಬ್ಬಿಸುತ್ತಾರೆ. ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಾರೆ. ಆದರೆ ಅವರು ರಾತ್ರಿ ಎರಡು ಗಂಟೆಗೆ ಎಬ್ಬಿಸಲು ಅವಕಾಶ ಕೊಡ್ತಾರೆಯೇ? ಅವರು ಸಾರ್ವಜನಿಕರ ಕೆಲಸ ಮಾಡಿದ್ದರೆ ಗುರುಮಿಠಕಲ್ ದಲ್ಲಿ ಏಕೆ ಜನರು ಮಹಾರಾಷ್ಟ್ರಕ್ಕೆ ಗೂಳೆ ಹೋಗುತ್ತಿರುತ್ತಾರೆ. ಇದೆಲ್ಲ ಜನರಿಗೆ ಮನವರಿಕೆಯಾಗಿದೆ. ಹೀಗಾಗಿ ಈ ಸಲ ಚಿತ್ತಾಪುರದಲ್ಲಿ ಸೋಲು ನಿಶ್ಚಿತ. ಕೆಲವು ಮುಖಂಡರು ಪಕ್ಷ ಬಿಟ್ಟಿರಬಹುದು. ಆದರೆ ಮತದಾರರು ಪಕ್ಣದಿಂದ ದೂರಾಗಿಲ್ಲ ಎಂದು ಸಂಸದ ಡಾ. ಉಮೇಶ ಜಾಧವ್ ತಿಳಿಸಿದರು.