ಬೆಂಗಳೂರು: ಖಾಲಿ ಇರುವ ಕ್ಷೇತ್ರಗಳಿಗೆ ನನ್ನ ಹೆಸರು ಜೋಡಿಸುವ ಕೆಲಸ ಮಾಧ್ಯಮಗಳಲ್ಲಿ ಆಗುತ್ತಿದೆ. ಅದರಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಹೇಳಿದ್ದಾರೆ.
ಜೆ.ಪಿ.ನಡ್ಡಾ ಅವರನ್ನು ದಿಲ್ಲಿಯಲ್ಲಿ ಭೇಟಿ ಮಾಡಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ರಾತ್ರಿ ಸಿಇಸಿ ಸಭೆ ಬಳಿಕ ಏನಾಗಲಿದೆ ಎಂಬುದನ್ನು ನೋಡುತ್ತೇನೆ. ನಾಳೆಯವರೆಗೆ ಇಲ್ಲೇ ಇರಲು ಹೇಳಿದ್ದಾರೆ. ಅವಕಾಶ ಸಿಕ್ಕರೆ ಅಮಿತ್ ಶಾ ಅವರನ್ನೂ ಭೇಟಿ ಮಾಡುತ್ತೇನೆ ಎಂದರು.
ನನ್ನನ್ನು ಮನವೊಲಿಸಲು ಕರೆದಿರಲಿಲ್ಲ. ನನ್ನ ಮನಸ್ಸಿ ನಲ್ಲಿರುವ ಅನುಮಾನಗಳನ್ನು ಬಗೆಹರಿಸಲು ಕರೆದಿದ್ದರು. ಒಂದು ಸುದೀರ್ಘ ಚರ್ಚೆ ನಡೆ ಯಿತು. ಮಂಡ್ಯ ಹಾಗೂ ಕರ್ನಾಟಕ ರಾಜಕಾರಣದ ಬಗ್ಗೆ ಚರ್ಚೆ ಆಯಿತು. ನನ್ನ ಕಾಳಜಿಯನ್ನು ವ್ಯಕ್ತಪಡಿಸಿದ್ದೇನೆ. ಅವರೂ ಒಂದಿಷ್ಟು ಸಲಹೆಗಳನ್ನು ಕೊಟ್ಟರು. ಇನ್ನೂ ಅಂತಿಮ ನಿರ್ಧಾರವಾಗಿಲ್ಲ. ನೀವು ನಿಶ್ಚಿಂತರಾಗಿರಿ ಪಕ್ಷ ನಿಮ್ಮೊಂದಿಗಿದೆ ಎಂಬ ಭರವಸೆ ಕೊಟ್ಟಿದ್ದಾರೆ ಎಂದರು.
ಮೋದಿ ಅವರಿಗೆ ನಿಮ್ಮ ಬಗ್ಗೆ ತುಂಬಾ ಭರವಸೆ, ಒಳ್ಳೆಯ ಗೌರವ ಇದೆ. ನಿಮ್ಮಂತಹ ನಾಯಕರು ಪಕ್ಷಕ್ಕೆ ಬೇಕು ಎಂಬ ಅಭಿಪ್ರಾಯ ಇದೆ. ನಮ್ಮ ನಿರ್ಧಾರ ಅಂತಿಮಗೊಂಡ ಬಳಿಕ ತಿಳಿಸುತ್ತೇವೆ ಎಂದು ನಡ್ಡಾ ತಿಳಿಸಿದ್ದಾರೆ. ಬಿಜೆಪಿ ಸ್ಥಾನ ಉಳಿಸಿಕೊಳ್ಳಬೇಕು ಎಂಬುದು ನನ್ನ ನಿಲುವು. ವಿಧಾನಸಭೆ ಚುನಾವಣೆಯಲ್ಲಿ ಕಷ್ಟಪಟ್ಟು ಮಂಡ್ಯದಲ್ಲಿ ಪಕ್ಷ ಕಟ್ಟುತ್ತೇವೆ. ಮಂಡ್ಯಕ್ಕೆ ಬಿಜೆಪಿಯ ಸಂಸದರೇ ಸಿಗುವುದಕ್ಕೆ ಅವಕಾಶವಾಗುತ್ತದೆ ಎಂದು ಮನವರಿಕೆ ಮಾಡಿಕೊಟ್ಟಿದ್ದೇನೆ ಎಂದರು.
ಚಿಕ್ಕಬಳ್ಳಾಪುರದಿಂದ ಕಣಕ್ಕೆ ಇಳಿಯುವಂತೆ ಸಲಹೆ ವ್ಯಕ್ತವಾಗಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿ ಸಾಕಷ್ಟು ಊಹಾಪೋಹ ಇದೆ. ಯಾವ ಕ್ಷೇತ್ರ ಖಾಲಿ ಇದ್ದರೂ ನನ್ನ ಹೆಸರು ಜೋಡಿಸುವ ಕೆಲಸ ಮಾಧ್ಯಮಗಳಲ್ಲಿ ಆಗುತ್ತಿದೆ ಎಷ್ಟೇ ಎಂದರು