Advertisement

75ರಲ್ಲಿ 25ರ ತಾರುಣ್ಯ ಬಂದ ಸತ್ಯಕತೆ

01:20 AM May 07, 2022 | Team Udayavani |

ತಂದೆತಾಯಿಯನ್ನು ಹೊತ್ತುಕೊಂಡು ಯಾತ್ರೆ ನಡೆಸಿದ ಶ್ರವಣಕುಮಾರನ ಕತೆಯನ್ನು “ಇರಬಹುದು’, “ಕಟ್ಟುಕತೆ’ ಎಂಬಷ್ಟಕ್ಕೆ ನಿಲ್ಲಿಸಿ ನಮ್ಮ ಪಾಡಿಗೆ ನಾವು ಹೋಗಬಹುದು. ಆದರೆ ಕಮ್ಯೂನಿಸ್ಟ್‌ ಲೇಖಕ ತಾನು ಕಂಡ ಆಧುನಿಕ ಶ್ರವಣಕುಮಾರನ ಕತೆ ವಿವರಿಸುವಾಗ ನಂಬದಿರಲು ಸಾಧ್ಯವೆ?.

Advertisement

ಸಮರೇಶ ಬಸು ಒಬ್ಬ ಹೆಸರಾಂತ ಬಂಗಾಲಿ ಲೇಖಕ. 1924ರಿಂದ 1988ರ ವರೆಗೆ  ಜೀವಿಸಿದ್ದ ಬಸು ಹುಟ್ಟಿದ್ದು ಇಂದಿನ ಬಾಂಗ್ಲಾದೇಶದ ಢಾಕಾದಲ್ಲಿ, ಬೆಳೆದು ನೆಲೆಸಿದ್ದು ಕೋಲ್ಕತಾ ಪರಿಸರದಲ್ಲಿ. ಬಡತನವನ್ನೇ ಜೀವನದ ಊರುಗೋಲನ್ನಾಗಿ ಮಾರ್ಪಡಿಸಿಕೊಂಡ ಸಾಧಕರು. ಅಂದರೆ ಲೇಖನ ಸಾಹಿತ್ಯಕ್ಕೆ ಬಡತನವನ್ನು ಚೆನ್ನಾಗಿ ದುಡಿಸಿಕೊಂಡರು. ಒಂದು ಕಾಲದಲ್ಲಿ ತಲೆ ಮೇಲೆ ಮೊಟ್ಟೆಯನ್ನು ಇಟ್ಟು ಮಾರಿದ, ಕನಿಷ್ಠ ದಿನಗೂಲಿ ನೌಕರನಾಗಿ, ಫಿರಂಗಿ ಕಾರ್ಖಾನೆಯಲ್ಲಿ ದುಡಿದ ಬಡತನದ ಅನುಭವ ಇತ್ತು. ಕಾರ್ಮಿಕ ಸಂಘಟನೆ ಮತ್ತು ಕಮ್ಯೂನಿಸ್ಟ್‌ ಪಕ್ಷದಲ್ಲಿ ಸಕ್ರಿಯರಾಗಿದ್ದರು. 1949-50ರಲ್ಲಿ ಇವರನ್ನು ಜೈಲಿಗೆ ಹಾಕಿದಾಗ ಜೈಲಿನಲ್ಲಿಯೇ “ಉತ್ತರಂಗ’ ಎಂಬ ಪ್ರಥಮ ಕೃತಿಯನ್ನು ರಚಿಸಿದರು. ಜೈಲಿನಿಂದ ಬಿಡುಗಡೆಗೊಂಡ ಬಳಿಕ ವೃತ್ತಿಪರ ಬರೆಹಗಾರರಾದರು. 200 ಸಣ್ಣಕತೆಗಳು, 100 ಕಾದಂಬರಿಗಳನ್ನು ಬರೆದರು. ಬರವಣಿಗೆಯಲ್ಲಿ ರಾಜಕೀಯ ಚಟುವಟಿಕೆಯಿಂದ ಹಿಡಿದು ಕಾರ್ಮಿಕರು, ಲೈಂಗಿಕತೆ ವರೆಗೂ ಇತ್ತು.  ಪುರಾಣ ಕ್ಷೇತ್ರವನ್ನೂ ಬಿಟ್ಟವರಲ್ಲ. “ಶಂಬ’ ಹೆಸರಿನಲ್ಲಿ ಪುರಾಣ ಮತ್ತು ಇತಿಹಾಸಗಳನ್ನು ಮರುಚಿಂತನೆಗೆ ಒಳಪಡಿಸಿದರು. ಇವರಿಗೆ ಮನಮುಟ್ಟಿದ ಘಟನೆ ಮೇ 8ರಂದು (ನಾಳೆ) ಆಚರಣೆಯಾಗುತ್ತಿರುವ ವಿಶ್ವ ತಾಯಂದಿರ ದಿನಕ್ಕೆ ಅನ್ವಯವಾಗುತ್ತದೆ.

ಸಮರೇಶರ ಕುಂಭಮೇಳಾನುಭವ: ಸಮರೇಶ ಬಸು ಅವರಿಗೆ ದೇವರಲ್ಲಿ ಭಕ್ತಿ ಇಲ್ಲದಿದ್ದರೂ ಬರವಣಿಗೆ ದೃಷ್ಟಿಯಿಂದ 1952ರಲ್ಲಿ ಕುಂಭಮೇಳಕ್ಕೆ ಹೋದರು. ಅನುಭವಗಳೇ ಯಶಸ್ವೀ ಲೇಖಕರಿಗೆ ಆಧಾರವಲ್ಲವೆ? ಅಲ್ಲಿ ಕಂಡ ಒಂದು ದೃಶ್ಯ ಮರೆಯಲಾಗದ್ದಾಯಿತು. 75 ವರ್ಷದ ಹಿರಿಯರೊಬ್ಬರು 90 ವರ್ಷದ ಹಿರಿಯಾಕೆಯನ್ನು ಹೊತ್ತುಕೊಂಡು ಬರುತ್ತಿದ್ದರು. ಸಮರೇಶ ಬಸು ಅವರಿಗೆ ಕುತೂಹಲ ಮೂಡಿ ಅವರನ್ನು ಮಾತನಾಡಿಸಿದರು. ಚಿಕ್ಕ ಪ್ರಾಯದಲ್ಲಿದ್ದಾಗ ತಾಯಿಯನ್ನು ಕುಂಭಮೇಳಕ್ಕೆ ಕರೆದೊಯ್ಯುತ್ತೇನೆಂದು ಮಾತುಕೊಟ್ಟಿದ್ದ. ಬದುಕು ಸವೆಸುವ ಹೊಯ್ದಾಟದಲ್ಲಿ ಇದು ಸಾಧ್ಯವಾಗಿರಲಿಲ್ಲ. ತಾಯಿಗೆ ಕೊಟ್ಟ ಮಾತನ್ನು ಈಡೇರಿಸಬೇಕೆಂದುಕೊಂಡ. ತಾಯಿಗೆ ವಯೋಸಹಜವಾಗಿ ನಡೆಯಲು ಆಗುತ್ತಿರಲಿಲ್ಲ. ತನಗೂ 75ರ ವಯಸ್ಸು. ಇದೇನೂ ತಾಯಿಯನ್ನು ಹೊತ್ತುಕೊಂಡು ಬರುವ ವಯಸ್ಸಲ್ಲ.

ಕೊಟ್ಟ ಮಾತು ಉಳಿಸಿಕೊಳ್ಳಲು ಹೆಗಲ ಮೇಲೆ ತಾಯಿಯನ್ನು ಹೊತ್ತು ಬಂದಿದ್ದ. ಅದೂ ಬರಿಗಾಲಿನ ಸೇವೆ. ಪ್ರಾಯಃ ಬರಿಗಾಲ ನಡಿಗೆ ಆ ಕಾಲದಲ್ಲಿ ಸಹಜವಾಗಿದ್ದಿರಬಹುದು. ಹೈಹೀಲ್ಡ್‌ ಚಪ್ಪಲಿ, ಒಬ್ಬೊಬ್ಬರಿಗೂ ರಾಶಿರಾಶಿ ಚಪ್ಪಲಿ ಇರುವ ಇಂದಿನ ಕಾಲದಲ್ಲಿಯೂ ಚಪ್ಪಲಿ ಹಾಕಿ ನಡೆಯಲು ಬಾರದ ಹಿರಿಯರನೇಕರು ನಮ್ಮ ನಡುವೆ ಇರುವಾಗ ಆ ಕಾಲದ ಸಮಾಜ ಹೇಗಿದ್ದಿರಬಹುದು? ನಡೆದೂ ನಡೆದು ಕಾಲಿನಲ್ಲಿ ರಕ್ತ ಒಸರುತ್ತಿತ್ತು. ಆ ವ್ಯಕ್ತಿಯ ಸಾಹಸ ಮತ್ತು ಬದ್ಧತೆಯನ್ನು ನೋಡಿ ಸಮರೇಶರ ಮನ ಕಲುಕಿತು. ಆ ಹಿರಿಯನ ಕಾಲಿಗೆ ಅಂಟಿಕೊಂಡಿದ್ದ ರಕ್ತಮಿಶ್ರಿತ ಧೂಳನ್ನು ಸಮರೇಶ ಬಸು ಹಣೆಗೆ ಹಚ್ಚಿಕೊಂಡರು. ಈ ಘಟನೆ ಬಸು ಮೇಲೆ ಗಾಢವಾದ ಪರಿಣಾಮ ಬೀರಿತು. ಕಾವ್ಯನಾಮ “ಕಾಲಕೂಟ’ ಎಂದಾಯಿತು. “ಅಮೃತಕುಂಭೇರ್‌ ಸಾಧನೆ’ ಕೃತಿ ಹೊರಬಂತು. ಇದು ಬಸು ಅವರಿಗೆ ಬಹಳಷ್ಟು ಜನಪ್ರಿಯತೆಯನ್ನು ತಂದಿತ್ತಿತು. ಇದು ಆತ್ಮಕಥನ ಶೈಲಿನಲ್ಲಿ ಕುಂಭಮೇಳದ ದೃಶ್ಯಗಳನ್ನು ಚಿತ್ರಿಸುವ ಕೃತಿಯಾಗಿದೆ. ಅನಂತರ ಜೀವನದ ಸಂಸ್ಕೃತಿ, ಧರ್ಮ ಹೀಗೆ ವಿವಿಧ ಆಯಾಮಗಳನ್ನು ಚಿತ್ರಿಸುವ ಕೃತಿಗಳು ಹೊರಬಂದು ಭಾರತಾದ್ಯಂತ ಜನಪ್ರಿಯತೆ ಗಳಿಸಿದವು. ಜೀವಿತಾವಧಿಯುದ್ದಕ್ಕೂ ಘಟನೆಯನ್ನು ಸ್ಮರಿಸಿಕೊಳ್ಳುತ್ತಿದ್ದರು. “ಇಂತಹ ವ್ಯಕ್ತಿಗಳು ಜಗತ್ತಿನಲ್ಲಿ ಎಲ್ಲಿಯಾದರೂ ಕಾಣಸಿಗಬಹುದೆ?’ ಎಂದು ಹೇಳುತ್ತಿದ್ದರು.

ಹಿಂದಿನ-ಇಂದಿನ ತಾಯಂದಿರ ದಿನ: ಆಧುನಿಕವಾಗಿ ಆಚರಣೆಯಾಗುತ್ತಿರುವ ವಿಶ್ವ ತಾಯಂದಿರ ದಿನ 1907ರಲ್ಲಿ ಆರಂಭವಾಯಿತು. ಈಗ ದಿನಾಚರಣೆಗಳಿಗೆ ಒಂದೊಂದು ದಿನ ಸಾಲದು ಎಂಬ ಸ್ಥಿತಿ ಇದೆ. ಒಂದೇ ದಿನ ಎರಡು-ಮೂರು ದಿನಾಚರಣೆಗಳು ಸಂಭವಿಸಲೂಬಹುದು. ವಿಶ್ವ ತಾಯಂದಿರ, ವಿಶ್ವ ತಂದೆಯರ, ಶಿಕ್ಷಕರ ದಿನಾಚರಣೆಗೆ ಮುನ್ನವೇ “ಮಾತೃ ದೇವೋ ಭವ’, “ಪಿತೃ ದೇವೋ ಭವ’, “ಆಚಾರ್ಯ ದೇವೋಭವ’ ಎಂದು ಸಾರಿದ ನಾಡಿದು. ಇದಕ್ಕೆ ದಿನ ವಿಶೇಷಗಳಿಲ್ಲ. ಎಲ್ಲ ದಿನಗಳೂ ತಾಯಿ, ತಂದೆ, ಗುರುಗಳನ್ನು ಸ್ಮರಿಸಬೇಕೆಂದು ಸಾರಿದ ಸಂಸ್ಕೃತಿ ನಮ್ಮದು. ಈಗ ಒಂದು ದಿನದ ಆಚರಣೆಗೆ ಮುಂದಾಗಿದ್ದೇವೆ.

Advertisement

ಮಾತು-ಬದುಕಿನ ತಾಳಮೇಳ: ದೊಡ್ಡ ದೊಡ್ಡ ಹುದ್ದೆಯಲ್ಲಿ ಅಲಂಕರಿಸಿದ ಮಕ್ಕಳ ಮರ್ಜಿಯಿಂದ ಮನೆಯಲ್ಲಿ ಏಕಾಂಗಿಯಾಗಿರುವ, ವೃದ್ಧಾಶ್ರಮದಲ್ಲಿರುವ ತಂದೆ, ತಾಯಿಗಳ ಸ್ಥಿತಿ ಇನ್ನೂ ಘನಗಂಭೀರ. ಇಂತಹ ಸ್ಥಿತಿಯಲ್ಲಿಯೂ ತನ್ನ ಮಗ, ಮಗಳು ಅಮೆರಿಕದಲ್ಲಿದ್ದಾರೆ, ಆಸ್ಟ್ರೇಲಿಯಾದಲ್ಲಿದ್ದಾರೆಂದು ಬೀಗುವ ತಂದೆತಾಯಿಗಳಿಗೂ ಕೊರತೆ ಏನಿಲ್ಲ. ಹೆತ್ತವರಿಂದಲೇ ಈ ಹಂತ ಮುಟ್ಟಿದ್ದೇವೆಂಬ ನೆನಪು ಮಕ್ಕಳಿಗೂ ಇಲ್ಲ, ಅಂತಹ ಸಂಸ್ಕಾರವನ್ನು ಹೆತ್ತವರೇ ಕೊಟ್ಟಿದ್ದಾರೆನ್ನಿ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ “ಯಾಕಾದರೂ ಬದುಕಿದ್ದಾರೆ’ ಎಂದು ಹೇಳುವವರೂ ಇದ್ದಾರೆನ್ನುವುದು ಉತ್ಪ್ರೇಕ್ಷೆಯಲ್ಲ. ಈಗಂತೂ ಫೋಟೋ ಪೋಸ್‌ ಕೊಟ್ಟು, ಸ್ಟೇಟಸ್‌ನಲ್ಲಿ ಹಾಕಿದಷ್ಟೂ ಮನತಣಿಯದು. ಅತ್ತ ಹೆಣ ಇರುವಾಗಲೇ ಇತ್ತ ಹಣ-ಆಸ್ತಿಗಾಗಿ ನಡೆಯುವ ಮುಸುಕಿನ ಒಳ- ಹೊರಗಿನ ಕದನದ ನಡುವೆ ಸತ್ತ ಬಳಿಕ ಹರಿಯುವ ಕೃತಕ ಕಣ್ಣೀರು, ಮದುವೆಯಂತಹ ಸಮಾರಂಭಗಳಲ್ಲಿ ಕಂಡುಬರುವ ಕೃತಕ ನಗುವಿನ ಕಿಲಕಿಲ ಸದ್ದಿಗೆ ಯಾವುದೇ ಅರ್ಥವಿರುವುದಿಲ್ಲ. ಬದುಕಿದಂತೆ ನುಡಿಯುತ್ತಿರಬೇಕು ಅಥವಾ ನುಡಿದಷ್ಟಕ್ಕೆ ತಕ್ಕುನಾಗಿ ಬದುಕಬೇಕು ಎಂಬ ನೀತಿ ಅಳವಡಿಸಿಕೊಂಡರೆ ಉಳಿದೆಲ್ಲವೂ ಸ್ವಸ್ಥವಾಗುತ್ತದೆ.

ದೈವತ್ವವೆಲ್ಲಿ?: ನಮ್ಮೆಲ್ಲರ ಬಹುತೇಕ ಬದ್ಧತೆಯು ಲಾಭದ ಮೇಲೆ ಅವಲಂಬಿತವಾಗಿರುತ್ತದೆ. ಕುಂಭಮೇಳದಲ್ಲಿ ಕಂಡುಬಂದ ವ್ಯಕ್ತಿಯ ಬದ್ಧತೆಯೊಂದಿಗೆ ನಿಸ್ಪೃಹತೆ (ಗೀತೆಯಲ್ಲಿ ಕೃಷ್ಣ ಹೇಳಿದಂತೆ ಫ‌ಲಾಪೇಕ್ಷೆ ಇರದ ನಿಷ್ಕಾಮ ಕರ್ಮ) ಇರುವುದರಿಂದಲೇ ಬೆಲೆ ಕಟ್ಟಲಾಗದು. ಬೆಲೆ ಕಟ್ಟಲಾಗದ್ದೇ ದೈವತ್ವವಿರಬಹುದಲ್ಲವೆ? ಇಲ್ಲವಾದರೆ ದೈವತ್ವ ಇನ್ನೆಲ್ಲಿ ಇರುವುದು? ಹೀಗಾಗಿಯೇ ಸಮರೇಶರ ಚಿತ್ತವನ್ನು ಈ ದೃಶ್ಯ ಸೆರೆ ಹಿಡಿಯಿತು, ಆತನ ಪಾದದ ಧೂಳಿ ಹಣೆ ಮೇಲೇರಿತು. ಕಮ್ಯೂನಿಸ್ಟನ ಹಣೆಗೆ ಈ ಧೂಳು ಪ್ರಸಾದವಾಯಿತು.

-ಮಟಪಾಡಿ ಕುಮಾರಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next