Advertisement

Udupi; ತಾಯಿ, ಶಿಶು ಮರಣ ಆಗದಂತೆ ಎಚ್ಚರ ವಹಿಸಿ: ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾಕುಮಾರಿ

12:12 AM Jan 17, 2024 | Team Udayavani |

ಉಡುಪಿ: ಪ್ರಸವ ಪೂರ್ವ ಹಾಗೂ ಪ್ರಸವ ಅನಂತರದಲ್ಲಿ ತೆಗೆದುಕೊಳ್ಳಬೇಕಾದ ಆರೈಕೆ ಕ್ರಮಗಳ ಅರಿವು ಮೂಡಿಸುವುದು ಹಾಗೂ ಆರೋಗ್ಯ ಸೇವೆಗಳನ್ನು ನೀಡುವುದರೊಂದಿಗೆ ಜಿಲ್ಲೆಯಲ್ಲಿ ತಾಯಿ ಮತ್ತು ಶಿಶು ಮರಣಕ್ಕೆ ಸಂಬಂಧಿಸಿದ ಯಾವುದೇ ಪ್ರಕರಣಗಳು ಆಗದಂತೆ ಎಚ್ಚರ ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾಕುಮಾರಿ ಹೇಳಿದರು.

Advertisement

ರಜತಾದ್ರಿಯ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಆರೋಗ್ಯ ಇಲಾಖೆಯ ಸಾಮಾಜಿಕ ಸವಲತ್ತುಗಳ ಸಮನ್ವಯ ಸಮಿತಿ ಸಭೆ, ಟಿ.ಬಿ. ಫೋರಂ ಸಮಿತಿ ಸಭೆ, ಜಿಲ್ಲಾ ಮಟ್ಟದ ಲಸಿಕಾ ಕಾರ್ಯಪಡೆ ಸಲಹ ಸಮಿತಿ ಸಭೆ, ಜಿಲ್ಲಾ ಕಣ್ಗಾವಲು ಸಮಿತಿ ಸಭೆ, ಜಿಲ್ಲಾ ಖಾಸಗಿ ವೈದ್ಯಕೀಯ ಸಂಸ್ಥೆಗಳ ನೋಂದಣಿ ಪ್ರಾಧಿಕಾರದ ಆಸ್ಪತ್ರೆಗಳ ನೋಂದಣಿ ಮತ್ತು ಕುಂದುಕೊರತೆ ನಿವಾರಣೆ ಸಭೆ ಹಾಗೂ ವಿವಿಧ ಸಮಿತಿ ಸಭೆಗಳ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಗರ್ಭಿಣಿಯರಿಗೆ ಆರಂಭದಲ್ಲಿಯೇ ತಾಯಿಕಾರ್ಡನ್ನು ವಿತರಿಸಿ, ನಿಯಮಿತ ಆರೋಗ್ಯ ತಪಾಸಣೆಗೆ ಬಂದಾಗ ಅವರಲ್ಲಿರುವ ತೊಡಕುಗಳನ್ನು ಪ್ರಾರಂಭದಲ್ಲಿಯೇ ಗುರುತಿಸಿ, ಚಿಕಿತ್ಸೆ ನೀಡಬೇಕು. ಹೆರಿಗೆ ಸಮಯದಲ್ಲಿ ತೊಡಕು ಉಂಟಾದಲ್ಲಿ ಉನ್ನತ ಮಟ್ಟದ ಚಿಕಿತ್ಸೆಗಾಗಿ ಶಿಫಾರಸು ಮಾಡಿದಾಗ ತುರ್ತು ಸಿಬಂದಿಯೊಂದಿಗೆ ಮೇಲ್ಮಟ್ಟದ ಆಸ್ಪತ್ರೆಗೆ ವರ್ಗಾಯಿಸಬೇಕು. ವರ್ಗಾಯಿಸುವ ಸಂಬಂಧ ದೂರವಾಣಿ ಮೂಲಕ ಮೇಲ್ಮಟ್ಟದ ಆಸ್ಪತ್ರೆಗೆ ಮುಂಚಿತವಾಗಿ ತಿಳಿಸಿ, ಚಿಕಿತ್ಸೆ ಒದಗಿಸಲು ಮುಂದಾಗಬೇಕು ಎಂದರು.

ಕೋವಿಡ್‌: ಮುನ್ನೆಚ್ಚರಕ್ಕೆ ಸೂಚನೆ
ಜಿಲ್ಲೆಯಲ್ಲಿ ಈವರೆಗೆ 1,954 ಕೋವಿಡ್‌ ಪರೀಕ್ಷೆಗಳನ್ನು ನಡೆಸಲಾಗಿದ್ದು, 2 ಕೋವಿಡ್‌ ಪ್ರಕರಣಗಳು ಜಿಲ್ಲೆಯ ಗಡಿ ಭಾಗದಲ್ಲಿ ಕಂಡುಬಂದಿವೆ. ರೋಗಿಗಳಿಗೆ ಚಿಕಿತ್ಸೆ ನೀಡಲು ಅಗತ್ಯವಿರುವ ಪ್ರತ್ಯೇಕ ಬೆಡ್‌ಗಳು, ಐಸಿಯುಸೇರಿದಂತೆ ಆಕ್ಸಿಜನ್‌ ವ್ಯವಸ್ಥೆ ಅಗತ್ಯವಿರುವ ಔಷಧ ದಾಸ್ತಾನುಗಳನ್ನು ಇಟ್ಟುಕೊಂಡು ಚಿಕಿತ್ಸೆ ನೀಡುವಂತೆ ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.

ಕ್ಷಯರೋಗ ತಪಾಸಣೆ
2025ಕ್ಕೆ ಕ್ಷಯ ನಿರ್ಮೂಲನ ಭಾರತ ನಿರ್ಮಾಣಕ್ಕೆ ಪಣ ತೊಟ್ಟಿದ್ದು, ಇದನ್ನು ಯಶಸ್ವಿಗೊಳಿಸಬೇಕು. ಜಿಲ್ಲೆಯಲ್ಲಿ 32,576 ಜನರಲ್ಲಿ ಕ್ಷಯರೋಗ ತಪಾಸಣೆ ನಡೆಸಿದ್ದು, 1,578 ಕ್ಷಯರೋಗ ಪ್ರಕರಣಗಳು ಕಂಡುಬಂದಿವೆ. ಜಿಲ್ಲೆಯ 153 ಗ್ರಾ.ಪಂ.ಗಳಲ್ಲಿ 30 ಗ್ರಾ.ಪಂ.ಗಳನ್ನು ಕ್ಷಯಮುಕ್ತ ಗ್ರಾಮಗಳಾಗಿ ಶೀಘ್ರದಲ್ಲಿಯೇ ಘೋಷಿಸಲಾಗುವುದು. ರೋಗಿ ಪತ್ತೆಯಾದಲ್ಲಿ ಉತ್ತಮ ಚಿಕಿತ್ಸೆ ನೀಡಬೇಕು ಎಂದರು.

Advertisement

ಆಯುಷ್ಮಾನ್‌ ಅಡಿ ಸೂಕ್ತ ಚಿಕಿತ್ಸೆ ನೀಡಿ
ಆಯುಷ್ಮಾನ್‌ ಭಾರತ್‌ ಆರೋಗ್ಯ ಕಾರ್ಡಗಳನ್ನು ಅರ್ಹ ಫ‌ಲಾನುಭವಿಗಳಿಗೆ ತಪ್ಪದೇ ವಿತರಿಸಬೇಕು. ಜಿಲ್ಲಾ ಆಸ್ಪತ್ರೆಗಳು ಖಾಸಗಿ ಆಸ್ಪತ್ರೆಗಳಲ್ಲಿ ನೀಡುವಷ್ಟೇ ಚಿಕಿತ್ಸೆ ನೀಡಬೇಕು. ಖಾಸಗಿ ಆಸ್ಪತ್ರೆಗಳು ಸರಕಾರದ ನಿಯಮಾನುಸಾರ ಆಯುಷ್ಮಾನ್‌ ಭಾರತ್‌ ಆರೋಗ್ಯ ಕಾರ್ಡ್‌ ಹೊಂದಿರುವ ಫ‌ಲಾನುಭವಿಗಳಿಗೆ ಬೆಡ್‌ಗಳನ್ನು ಮೀಸಲಿರಿಸಿ, ಸೂಕ್ತ ಚಿಕಿತ್ಸೆ ನೀಡಬೇಕು ಎಂದರು.

ಎಡಿಸಿ ಮಮತಾ ದೇವಿ ಜಿ.ಎಸ್‌., ಡಿಎಚ್‌ಒ ಡಾ| ಐ.ಪಿ. ಗಡಾಧ್‌, ಜಿಲ್ಲಾ ಏಡ್ಸ್‌ ನಿಯಂತ್ರಣಾಧಿಕಾರಿ ಡಾ| ಚಿದಾನಂದ ಸಂಜು, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ| ಕೆ. ರಾಮರಾವ್‌, ಜಿಲ್ಲಾ ಕುಷ್ಟರೋಗ ನಿಯಂತ್ರಣ ಅಧಿಕಾರಿ ಡಾ| ಲತಾ ನಾಯಕ್‌, ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ| ಪ್ರಶಾಂತ್‌ ಭಟ್‌, ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ| ನಾಗರತ್ನಾ, ಡಾ| ಜೋಶ್ನಾ, ತಾಲೂಕು ವೈದ್ಯಾಧಿಕಾರಿಗಳು ಉಪಸ್ಥಿತರಿದ್ದರು.

ಸಾಮಾನ್ಯ ಹೆರಿಗೆಗೆ ಒತ್ತು ನೀಡಿ
ಜಿಲ್ಲೆಯಲ್ಲಿ 2023ರ ಜುಲೈಯಿಂದ ಡಿಸೆಂಬರ್‌ ಅಂತ್ಯದವರೆಗೆ 2 ತಾಯಿ ಮರಣ ಹಾಗೂ 51 ಶಿಶು ಮರಣ ಪ್ರಕರಣಗಳು ಉಂಟಾಗಿವೆ. ಮುಂದಿನ ದಿನಗಳಲ್ಲಿ ಇಂತಹ ಪ್ರಕರಣಗಳು ಆಗದಂತೆ ನೋಡಿಕೊಳ್ಳಬೇಕು. 2023 ರ ಎಪ್ರಿಲ್‌ನಿಂದ ಡಿಸೆಂಬರ್‌ ಅಂತ್ಯದವರೆಗೆ 9,169 ಹೆರಿಗೆಗಳಾಗಿದ್ದು, ಖಾಸಗಿಯಲ್ಲಿ 6,422, ಸರಕಾರಿ ಆಸ್ಪತ್ರೆಗಳಲ್ಲಿ 2,747 ಆಗಿದೆ, 3,902 ಸಾಮಾನ್ಯ ಹೆರಿಗೆ ಉಂಟಾದರೆ, 5,267 ಶಸ್ತ್ರ ಚಿಕಿತ್ಸೆ ಮೂಲಕ ಹೆರಿಗೆ ಮಾಡಿಸಲಾಗಿದೆ. ವೈದ್ಯರು ಸಾಮಾನ್ಯ ಹೆರಿಗೆ ಮಾಡಿಸಲು ಹೆಚ್ಚು ಒತ್ತು ನೀಡಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next