Advertisement

ಮಹಿಳೆಯರನ್ನು ಸಂಘಟಿಸಿದ ಮಾತೃ ಕೀರ್ತನಾ

06:00 AM Jul 06, 2018 | Team Udayavani |

ನವವಿಧ ಭಕ್ತಿಯಲ್ಲಿ ಭಜನೆ-ಸಂಕೀರ್ತನೆಗೆ ಮಹತ್ವದ ಸ್ಥಾನವುಂಟು. ದಾಸತ್ವದ ಭಾವದಿಂದ ಮಾಡುವ ಭಗವಂತನ ಗುಣಗಾನವೇ ಇದರ ಸಾರವಾದರೂ ಸಾಮಾಜಿಕವಾಗಿ ಭಜನೆಯಿಂದು ಸಾಮುದಾಯಿಕ ಕ್ರಿಯಾಶೀಲತೆ ಹೆಚ್ಚಿಸುವಲ್ಲಿ ಮುಖ್ಯ ಪಾತ್ರ ವಹಿಸುತ್ತಿದೆ. ಮನೆಯಲ್ಲಿ ಮಕ್ಕಳು ಮರಿಗಳು ಸಂಜೆ ಹೊತ್ತು ಕುಳಿತು ಭಜನೆ ಮಾಡುವುದು ಒಂದು ಕಾಲದಲ್ಲಿದ್ದ ಸಂಪ್ರದಾಯ. ಎಲ್ಲೆಡೆ ಧಾರಾವಾಹಿಗಳೇ ಮೊಳಗುತ್ತಿರುವ ಇಂದಿನ ಸಂಧ್ಯಾ ಕಾಲಗಳಲ್ಲಿ ಭಜನೆ ಕೇವಲ ವಯಸ್ಸಾದವರ ಪ್ರವೃತ್ತಿಯಾಗಿ ಉಳಿದುಕೊಂಡಿದೆ. ಕೆಲವು ಸಮುದಾಯಗಳಲ್ಲಿ ಜನಪದ ಸಂಸ್ಕೃತಿಯ ಭಾಗವೇ ಆಗಿರುವಷ್ಟು ಪ್ರಚಲಿತವಾಗಿದ್ದ ಭಜನೆ ಇಂದು ವಿವಿಧ ಮಾಧ್ಯಮಗಳ ಮೇಲಾಟದಿಂದ ಹಿನ್ನೆಡೆ ಅನುಭವಿಸುತ್ತಿದೆ.

Advertisement

ಈ ಹಿನ್ನೆಲೆಯಲ್ಲಿ ಭಜನೆಯನ್ನು ಜನಪ್ರಿಯಗೊಳಿಸುವ ಸಲುವಾಗಿ ಇತ್ತೀಚಿಗೆ ಕಾಸರಗೋಡಿನ ಶ್ರೀ ವರದರಾಜ ವೆಂಕಟರಮಣ ದೇವಸ್ಥಾನದಲ್ಲಿ ನಡೆದ “ಮಾತೃ ಕೀರ್ತನಾ’ ಕಾರ್ಯಕ್ರಮ ಸ್ತುತ್ಯರ್ಹ. ಸಾಂಸ್ಕೃತಿಕ ಮತ್ತು ಸಾಮಾಜಿಕ ಕಳಕಳಿಯ ಸಂಸ್ಥೆಯಾದ ರಂಗಚಿನ್ನಾರಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇದನ್ನು ಸಂಘಟಿಸಿತ್ತು. ರಾಮಕೃಷ್ಣ ಕಾಟುಕುಕ್ಕೆ ಮತ್ತು ಜಯಾನಂದ ಕುಮಾರ್‌ ಹೊಸದುರ್ಗ ಇವರ ನೇತೃತ್ವದಲ್ಲಿ ಕಾಸರಗೋಡು, ಕಾಂಞಂಗಾಡ್‌, ಮಂಗಳೂರು, ಪುತ್ತೂರು ಮುಂತಾದ ಕಡೆಗಳಿಂದ ಬಂದ 35 ತಂಡಗಳ ಸುಮಾರು 500 ಮಹಿಳೆಯರು ದಾಸಕೀರ್ತನೆಯನ್ನು ಹಾಡಿದರು. ಅಪರಾಹ್ನ ಸಂಶೋಧಕಿ ಡಾ| ಕಾತ್ಯಾಯಿನಿ ಕುಂಜಿಬೆಟ್ಟು ಉಪನ್ಯಾಸ ನೀಡಿದರು.ಕೊನೆಗೆ ಭಜನೆಗಳನ್ನು ಹಾಡುವ ವಿಧಾನದ ಬಗ್ಗೆ ಖ್ಯಾತಗಾಯಕರಾದ ಶಂಕರ್‌ ಶ್ಯಾನುಭೋಗ್‌ ಪ್ರಾತ್ಯಕ್ಷಿಕೆ ನೀಡಿದರು.

ಮಾತೃಕೀರ್ತನಾ ಕಾರ್ಯಕ್ರಮದಲ್ಲಿ ಹೆಸರು ಕರೆದೊಡನೆ ವೇದಿಕೆ ಏರಿ ತಮ್ಮ ಸ್ಥಾನಗಳಲ್ಲಿ ಕುಳಿತು ಶ್ರದ್ಧಾಪೂರ್ವಕವಾಗಿ ಹಾಡಿದ್ದು ಕಂಡಾಗ ಮಹಿಳೆಯರಿಗೆ ಅವರ ಅಸ್ಮಿತೆಯನ್ನು ಉಳಿಸಿಕೊಳ್ಳುವುದರಲ್ಲಿ ಯಾವ ನಿರ್ಬಂಧವೂ ಲೆಕ್ಕವೇ ಅಲ್ಲ ಎನ್ನಿಸಿತು. ಕೊಟ್ಟ ಅವಕಾಶವನ್ನು ಉಪಯೋಗ ಪಡಿಸಿಕೊಂಡು ತಮ್ಮ ಒಗ್ಗಟ್ಟನ್ನು ಪ್ರತಿಭೆಯನ್ನು ಮೆರೆಸಬೇಕೆಂಬ ಹಂಬಲ ಎಲ್ಲರಲ್ಲಿಯೂ ಇತ್ತು.ಇಲ್ಲಿ ನಡೆದದ್ದು ಸ್ಪರ್ಧೆಯಲ್ಲ. ಆದರೆ ಸ್ಪರ್ಧಾ ಮನೋಭಾವದಿಂದಾಗಿ ಕಾರ್ಯಕ್ರಮ ಮೆರಗು ಪಡೆದುಕೊಂಡಿತ್ತು. ಮಾತೆಯರ ಭಜನೆಗೆ ಸತ್ಯನಾರಾಯಣ ಐಲ, ಜಗನ್ನಾಥ ಶೆಣೈ, ಪುರುಷೋತ್ತಮ ಕೊಪ್ಪಳ ಹಾಮೋನಿಯಂ ಮತ್ತು ಸುಜೀರ್‌ ಗಿರೀಶ್‌ ನಾಯಕ್‌ ಹಾಗೂ ಸಂತೋಷ ಶೆಣೈ ತಬ್ಲಾ ಸಾಥ್‌ ನೀಡಿದರು. ಚೇತೋಹಾರಿಯಾದ ನಿರೂಪಣೆ ಕಾರ್ಯಕ್ರಮವನ್ನು ಇನ್ನಷ್ಟು ಚಂದವಾಗಿಸಿತು. 

 ಸ್ಮಿತಾ ಶೆಣೈ

Advertisement

Udayavani is now on Telegram. Click here to join our channel and stay updated with the latest news.

Next