Advertisement

ನಗರದ ಬಹುತೇಕ ಐಷಾರಾಮಿ ಹೊಟೇಲ್‌ಗ‌ಳಲ್ಲಿ ಸುರಕ್ಷತೆ ವ್ಯವಸ್ಥೆಯೇ ಇಲ್ಲ!

03:59 PM Jan 22, 2020 | mahesh |

ಮಹಾನಗರ: ವಿಮಾನ ನಿಲ್ದಾಣದಲ್ಲಿ ಬಾಂಬ್‌ ಸ್ಫೋಟಕ ವಸ್ತು ಪತ್ತೆಯಾದ ಬಳಿಕ ಇದೀಗ ನಗರದ ಸುರಕ್ಷತೆ, ಭದ್ರತೆ ಬಗ್ಗೆ ಹಲವು ಸವಾಲು ಎದುರಾಗಿದೆ. ನಗರದ ಬಹುತೇಕ ವಸತಿ ಗೃಹ-ಹೊಟೇಲ್‌ ಮತ್ತಿತರ ಕಡೆಗಳಲ್ಲಿ ಸುಧಾರಿತ ರೀತಿಯ ಭದ್ರತಾ ವ್ಯವಸ್ಥೆಯೇ ಇಲ್ಲ.

Advertisement

ಈ ಹಿನ್ನೆಲೆಯಲ್ಲಿ ಒಂದುವೇಳೆ ಮಂಗಳೂರಿನಂಥ ನಗರಕ್ಕೂ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಲು ಬಂದು ಇಲ್ಲಿನ ವಸತಿ ಗೃಹ ಅಥವಾ ಇನ್ನಿತರ ವಾಸ್ತವ್ಯ ತಾಣ ಗಳಲ್ಲಿರುವ ಭದ್ರತಾ ಲೋಪದ ದುರುಪಯೋಗಡಿಸಿಕೊಳ್ಳುವ ಅಪಾಯವಿದೆ. ಇದೀಗ ಇಲ್ಲಿನ ಏರ್‌ಪೋರ್ಟ್‌ನಲ್ಲಿ ಬಾಂಬ್‌ ಪತ್ತೆಯಾಗಿರುವುದು ಮಂಗಳೂರು ಮಾತ್ರವಲ್ಲ; ಇಡೀ ಕರಾ ವಳಿ ಭಾಗಕ್ಕೆ ಎಚ್ಚರಿಕೆಯ ಘಂಟೆ ಬಾರಿಸಿದ್ದು, ಎಲ್ಲೆಲ್ಲಿ ಭದ್ರತೆ ಹೆಚ್ಚಿಸುವುದಕ್ಕೆ ನಿರ್ಲಕ್ಷ್ಯ ವಹಿಸಲಾಗಿದೆಯೋ ಅಂಥ ಕಡೆಗಳಲ್ಲಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಅಳವಡಿಸಿ ಕೊಳ್ಳು ವುದಕ್ಕೆ ಸಂಬಂಧಪಟ್ಟವರು ಇನ್ನಾ ದರೂ ಗಮನಹರಿಸಬೇಕೆಂಬುದು “ಸುದಿನ’ ಆಶಯ. ಈ ದೃಷ್ಟಿಯಲ್ಲಿ ನೋಡಿದಾಗ ಮಂಗಳೂರಿನಲ್ಲಿರುವ ಬಹುತೇಕ ಲಾಡ್ಜ್- ಹೊಟೇಲ್‌, ಪಿಜಿಗಳಲ್ಲಿ ಅಪಾಯಕಾರಿ ವಸ್ತುಗಳನ್ನು ಗುರುತಿ ಸುವ ವ್ಯವಸ್ಥೆ ಇಲ್ಲ.

ಈ ಹಿಂದೆ ಮಂಗಳೂರಿನಲ್ಲಿ ವಸತಿ ಸಮುಚ್ಚಯವೊಂದರಲ್ಲಿ ಪ್ಲ್ಯಾಟ್ ಅನ್ನು ಬಾಡಿಗೆಗೆ ಪಡೆದುಕೊಂಡು ಬಾಂಬ್‌ ತಯಾರಿಸಿ ಬೇರೆಡೆ ಸ್ಫೋಟಕಕ್ಕೆ ಸಂಚು ರೂಪಿಸಿದ್ದರು. ಹೊರ ರಾಜ್ಯ, ವಿದೇಶಗಳಿಂದ ನಗರಕ್ಕೆ ನೂರಾರು ಮಂದಿ ಪ್ರತಿದಿನ ಆಗಮಿ ಸುತ್ತಿದ್ದು, ಪ್ರಮುಖ ಹೊಟೇಲ್‌ಗ‌ಳಲ್ಲಿ ರೂಂ ಬುಕ್‌ ಮಾಡುತ್ತಾರೆ. ಹೊಟೇಲ್‌ಗೆ ಆಗಮಿಸುವ ವೇಳೆ ಆ ವ್ಯಕ್ತಿಯಲ್ಲಿ ಯಾವುದಾದರೂ ಅನುಮಾನಾಸ್ಪದ ವಸ್ತುಗಳಿವೆಯೇ ಎಂಬುದನ್ನು ಪತ್ತೆಹಚ್ಚಬಲ್ಲ “ಮೆಟಲ್‌ ಡಿಟೆಕ್ಟರ್‌’ನಂಥ ಸಾಧನ ನಗರದ ಬಹು ತೇಕ ಐಶಾರಾಮಿ ಹೊಟೇಲ್‌ಗ‌ಳಲ್ಲಿ ಇಲ್ಲ. ಕಳೆದ ವರ್ಷವಷ್ಟೇ ದ್ವೀಪ ರಾಷ್ಟ್ರವಾದ ಶ್ರೀಲಂಕಾದ ರಾಜಧಾನಿ ಕೊಲಂಬೋದ ಪಂಚ  ತಾರಾ ಹೊಟೇಲ್‌ಗ‌ಳಾದ ಶಾಂಗ್ರಿಲಾ, ಸಿನ್ನಮೋನ್‌ ಗ್ರಾಂಡ್‌ ಮತ್ತು ಕಿಂಗ್ಸ್‌ ಬರಿಗಳನ್ನು ಗುರಿಯಾಗಿಸಿಕೊಂಡು ಅದೇ ಹೊಟೇಲ್‌ನಲ್ಲಿ ವಾಸ್ತವ್ಯ ಹೂಡಿಕೊಂಡು ಸರಣಿ ಬಾಂಬ್‌ ಸ್ಫೋಟಕ್ಕೆ ಉಗ್ರರು ಸಂಚು ರೂಪಿಸಿದ್ದರು. ಅದಾದ ಬಳಿಕ ಮಂಗಳೂರಿನ ವಸತಿಗೃಹಗಳಲ್ಲಿಯೂ ಕಟ್ಟುನಿಟ್ಟಿನ ಮುನ್ನೆ ಚ್ಚರಿಕಾ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಕೇಳಿಬಂದಿತ್ತು. ಆದರೂ ನಗರದ ಹೊಟೇಲ್‌ಗ‌ಳಲ್ಲಿ ಇನ್ನೂ ಅಂಥ ವ್ಯವಸ್ಥೆ ಅಳವಡಿಸಲಾಗಿಲ್ಲ.

ಕೆಲವೊಂದು ಕಡೆ ಮೆಟಲ್‌ ಡಿಟೆಕ್ಟರ್‌ನಂಥ ವ್ಯವಸ್ಥೆ ಇದ್ದರೂ ಅದು ಸಮಪರ್ಕವಾಗಿ ಪಾಲನೆಯಾಗುತ್ತಿಲ್ಲ.
“ನಮ್ಮ ಹೊಟೇಲ್‌ನಲ್ಲಿ ಮೆಟಲ್‌ ಡಿಟೆಕ್ಟರ್‌ ಇಲ್ಲವಾದರೂ, ಸುತ್ತಲೂ ಸಿ.ಸಿ. ಕೆಮರಾಗಳಿವೆ. ಇದೀಗ ಮತ್ತಷ್ಟು ಭದ್ರತೆ ಕೈಗೊಳ್ಳಲಾಗುತ್ತಿದೆ. ರೂಂ ಕೇಳಿ ಆಗಮಿಸುವ ಮಂದಿಯ ಗುರುತು ಚೀಟಿ ಕಡ್ಡಾಯವಾಗಿ ಪಡೆದುಕೊಳ್ಳುತ್ತಿದ್ದೇವೆ. ಅನುಮಾನಾಸ್ಪದ ವ್ಯಕ್ತಿಗಳಿಗೆ ರೂಂ ಬಾಡಿಗೆಗೆ ನೀಡುವುದಿಲ್ಲ’ ಎಂದು ನಗರದ ಪ್ರತಿಷ್ಠಿತ ಖಾಸಗಿ ಹೊಟೇಲ್‌ವೊಂದರ ಸಿಬಂದಿ “ಉದಯವಾಣಿ ಸುದಿನ’ಕ್ಕೆ ತಿಳಿಸಿದ್ದಾರೆ.

ಹೋಂ ಸ್ಟೇಗಳಿಗೂ ನಿಯಮವಿದೆ ನಗರದಲ್ಲಿ ಸುಮಾರು 25ಕ್ಕೂ ಮಿಕ್ಕಿ ಅಧಿಕೃತ ಹೋಂ ಸ್ಟೇಗಳಿವೆ. ಅಲ್ಲದೆ ಇತ್ತೀಚಿನ ದಿನಗಳಲ್ಲಿ ಕೆಲವೊಂದು ಅನಧಿಕೃತ ಹೋಂಸ್ಟೇಗಳೂ ತಲೆ ಎತ್ತಿವೆ. ಹೋಂ ಸ್ಟೇಗಳಲ್ಲಿಯೂ ಭದ್ರತೆ ಬಗ್ಗೆ ಸಂಬಂಧಪಟ್ಟ ಇಲಾಖೆ ಗಮನ ನೀಡಬೇಕಿದೆ. ಹೋಂ ಸ್ಟೇಗೆ ಅನುಮತಿ ಪತ್ರ ಪಡೆಯಲು ಪೊಲೀಸ್‌ ಇಲಾಖೆ, ಸ್ಥಳೀಯಾಡಳಿತ ಸಂಸ್ಥೆಗಳಿಂದ ನಿರಾಪೇಕ್ಷಣ ಪತ್ರ ಆವಶ್ಯಕವಾಗಿದೆ. ಪಾಲಿಕೆ ವ್ಯಾಪ್ತಿಯಾದರೆ ಮಂಗಳೂರು ಪೊಲೀಸ್‌ ಆಯಕ್ತರು, ಪಾಲಿಕೆ, ಇದರ ಹೊರಗಿನ ವ್ಯಾಪ್ತಿಯಾದರೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ, ಗ್ರಾ.ಪಂ., ನಗರಸಭೆ, ಪುರಸಭೆಯಿಂದ ನಿರಾಕ್ಷೇಪಣೆ ಪತ್ರವನ್ನು ಕಡ್ಡಾಯವಾಗಿ ಪಡೆಯಬೇಕಿದೆ.

Advertisement

ಪ್ರತಿ ಪ್ರವಾಸಿಗರಿಂದ ಗುರುತುಚೀಟಿ ಪಡೆದೇ ವಸತಿ ಸೌಲಭ್ಯ ನೀಡಬೇಕು. ಹೋಂ ಸ್ಟೇಗೆ ಬರುವ ಅತಿಥಿಗಳ ವಿವರ ಬಗ್ಗೆ ನೋಂದಣಿ ಪುಸ್ತಕ, ಇಲೆಕ್ಟ್ರಾನಿಕ್‌ ಮಾಧ್ಯಮದ ಮೂಲಕ ಗಣಕೀಕರಣ ಗೊಳಿಸಬೇಕು ಎಂಬ ನಿಯಮ ಹೋಂ ಸ್ಟೇಗಳಿಗಿದ್ದು, ಪಾಲನೆ ಮಾಡದವರ ವಿರುದ್ಧ ಕಠಿನ ಕ್ರಮ ಕೈಗೊಳ್ಳಬೇಕಿದೆ.

ಸಿ.ಸಿ. ಕೆಮರಾ ಹೆಚ್ಚಳಕ್ಕೆ ಆದ್ಯತೆ
ನಗರದಲ್ಲಿ ಭದ್ರತೆಯ ದೃಷ್ಟಿಯಿಂದ ಅಪಾರ್ಟ್‌ಮೆಂಟ್‌, ಬಹುಮಹಡಿ ಕಟ್ಟಡ, ವಾಣಿಜ್ಯ ಕಟ್ಟಡ ಸಹಿತ ಪ್ರಮುಖ ಜಂಕ್ಷನ್‌ಗಳಲ್ಲಿ ಸದ್ಯ ಎರಡು ಸಾವಿರಕ್ಕೂ ಮಿಕ್ಕಿ ಸಿಸಿ ಕೆಮರಾಗಳಿವೆ. ಸಾರ್ವಜನಿಕ ಸ್ಥಳಗಳಲ್ಲಿ ಒಟ್ಟು 210 ಹೆಚ್ಚುವರಿ ಸಿಸಿ ಕೆಮರಾಗಳನ್ನು ಇತ್ತೀಚೆಗೆಯಷ್ಟೇ ಅಳವಡಿಸಲಾಗಿತ್ತು.

ಸ್ಮಾರ್ಟ್‌ಸಿಟಿ ಯೋಜನೆಯ ಮೊದಲ ಹಂತದಲ್ಲಿ ನಗರದ 15 ಜಂಕ್ಷನ್‌ಗಳಲ್ಲಿ ಸ್ಮಾರ್ಟ್‌ ಫೋಲ್‌ಗ‌ಳಲ್ಲಿ 75 ಕೆಮರಾಗಳನ್ನು ಅಳವಡಿಸಲಾಗುತ್ತಿದೆ. ಪ್ರತೀ ಜಂಕ್ಷನ್‌ಗಳಲ್ಲಿಯೂ 360 ಡಿಗ್ರಿ ಸುತ್ತ ಸುತ್ತುವ ಕೆಮರಾ ಸಹಿತ ಪ್ರತೀ ಜಂಕ್ಷನ್‌ನ ಒಂದು ಸ್ಮಾರ್ಟ್‌ಫೋಲ್‌ನಲ್ಲಿ ಒಟ್ಟಾರೆ 5 ಕೆಮರಾಗಳು ಇರಲಿದ್ದು, ಸದ್ಯದಲ್ಲಿಯೇ ಕಾರ್ಯಾಚರಿಸಲಿವೆ.

ಕಾರ್ಯಾಚರಣೆಗೆ ಸಿದ್ಧ
ರಾಜ್ಯ ಸಾರ್ವಜನಿಕರ ಸುರಕ್ಷಾ ಕಾಯ್ದೆ ಅನ್ವಯ ನಗರದ ಎಲ್ಲ ವಾಣಿಜ್ಯ ಕಟ್ಟಡಗಳು, ಬಸ್‌ ನಿಲ್ದಾಣ, ಶಿಕ್ಷಣ ಸಂಸ್ಥೆಗಳು, ಬಹುಮಹಡಿ ಕಟ್ಟಡ, ವಸತಿ ಸಮುಚ್ಚಯ, ಕಚೇರಿಗಳಲ್ಲಿ ಸಿಸಿ ಕೆಮರಾ ಅಳವಡಿಸಬೇಕು. ಸಾರ್ವಜನಿಕ ಸೇವೆ ಒದಗಿಸುವ ಅಥವಾ ಹೆಚ್ಚು ಜನ ಸೇರುವ ಎಲ್ಲ ಸರಕಾರಿ ಮತ್ತು ಖಾಸಗಿ ಸಂಘ – ಸಂಸ್ಥೆಗಳು, ಅಂಗಡಿ-ಮುಂಗಟ್ಟು ಕಟ್ಟಡಗಳಲ್ಲಿ ಸಿಸಿ ಕೆಮರಾ ಕಡ್ಡಾಯವಾಗಿ ಅಳವಡಿಸಬೇಕು ಎಂದು ರಾಜ್ಯ ಸರಕಾರ ಈ ಹಿಂದೆಯೇ ಸೂಚಿಸಿತ್ತು. ನಿಯಮ ಪಾಲನೆ ಮಾಡದವರ ವಿರುದ್ಧ ಪೊಲೀಸ್‌ ಇಲಾಖೆ ಕಠಿನ ಕ್ರಮಕ್ಕೆ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.

ಭದ್ರತೆ ದೃಷ್ಟಿಯಿಂದ ಅಗತ್ಯ
ನಗರದ ಹೆಚ್ಚಿನ ವಸತಿಗೃಹಗಳಲ್ಲಿ ಮೆಟಲ್‌ ಡಿಟೆಕ್ಟರ್‌ ಇಲ್ಲ. ಈ ಬಗ್ಗೆ ಕಡ್ಡಾಯ ಎಂದು ಯಾವುದೇ ಇಲಾಖೆಯಿಂದ ಮಾಹಿತಿ ಬಂದಿಲ್ಲ.ಆದರೂ ಭದ್ರತೆ ದೃಷ್ಟಿಯಿಂದ ಇದು ಅಗತ್ಯವಿದ್ದು, ಈ ಬಗ್ಗೆ ಹೊಟೇಲ್‌ ಮಾಲಕರ ಸಂಘದಲ್ಲಿ ಚರ್ಚೆ ಮಾಡಲಾಗುವುದು.
– ಕುಡಿ³ ಜಗದೀಶ್‌ ಶೆಣೈ,  ಹೊಟೇಲ್‌ ಮಾಲಕರ ಸಂಘದ ಅಧ್ಯಕ್ಷ

ಮೆಟಲ್‌ ಡಿಟೆಕ್ಟರ್‌ ಅಳವಡಿಕೆ
ನಗರದಲ್ಲಿ ಭದ್ರತೆಗೆ ಹೆಚ್ಚಿನ ಗಮನ ನೀಡಲಾಗಿದೆ. ಅತೀ ಹೆಚ್ಚು ಜನ ಸೇರುವಂತಹ ಪ್ರದೇಶದಲ್ಲಿ ಮೆಟಲ್‌ ಡಿಟೆಕ್ಟರ್‌, ಸಿಸಿ ಕೆಮರಾ ಅಳವಡಿಸಲಾಗಿದೆ. ಯಾವೆಲ್ಲ ಪ್ರದೇಶಗಳಲ್ಲಿ ಮೆಟಲ್‌ ಡಿಟೆಕ್ಟರ್‌ ಅಳವಡಿಸಲಾಗಿಲ್ಲ ಎಂದು ಗುರುತಿಸಿ, ಅವರಿಗೆ ಸೂಚನೆ ನೀಡುತ್ತೇವೆ.
 - ಲಕ್ಷ್ಮೀ ಗಣೇಶ್‌, ಡಿಸಿಪಿ ಅಪರಾಧ ಮತ್ತು ಸಂಚಾರ ವಿಭಾಗ

ನಿರಾಕ್ಷೇಪಣಾ ಪತ್ರ ಪಾಲಿಕೆ ಜವಾಬ್ದಾರಿ
ನಗರದಲ್ಲಿರುವ ಹೋಂ ಸ್ಟೇಗಳಿಗೆ ಪರಿಶೀಲನೆ ನಡೆಸಿ ನಿರಾಕ್ಷೇಪಣಾ ಪತ್ರ ನೀಡುವುದು ಮಾತ್ರ ಮಹಾನಗರ ಪಾಲಿಕೆ ಜವಾಬ್ದಾರಿ. ಹೋಂ ಸ್ಟೇಗಳಲ್ಲಿ ನಿಯಮ ಪಾಲನೆಯಾಗದಿದ್ದರೆ ಅವುಗಳ ಮೇಲೆ ಪೊಲೀಸ್‌ ಇಲಾಖೆ ಕಾರ್ಯಾಚರಣೆ ನಡೆಸುತ್ತದೆ.
 - ಶಾನಾಡಿ ಅಜಿತ್‌ ಕುಮಾರ್‌ ಹೆಗ್ಡೆ, ಪಾಲಿಕೆ ಆಯುಕ್ತ

Advertisement

Udayavani is now on Telegram. Click here to join our channel and stay updated with the latest news.

Next