ಬೆಂಗಳೂರು: ರಸ್ತೆಬದಿ ನಿಲ್ಲಿಸಿದ್ದ ಕಾರಿನ ಗ್ಲಾಸ್ ಅನ್ನು ಹಾಡಹಗಲೇ ಹೊಡೆದ ದುಷ್ಕರ್ಮಿಗಳು 4 ಲಕ್ಷ ರೂ. ದೋಚಿ ಪರಾರಿಯಾದ ಘಟನೆ ಬಾಗಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಈ ಕುರಿತು ಕಾರು ಚಾಲಕ ಹರಿಲಾಲ್ ನಾಯಕ್ ಎಂಬಾತ ನೀಡಿರುವ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ದುಷ್ಕರ್ಮಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.
ಯಲಹಂಕದ ಬಿಲ್ಡರ್ ಡಿ.ರಾಜಶೇಖರ್ ರೆಡ್ಡಿ ಎಂಬುವವರ ಕಾರು ಚಾಲಕನಾಗಿ ಹರಿಲಾಲ್ ಕೆಲಸ ಮಾಡುತ್ತಿದ್ದಾರೆ. ಬುಧವಾರ ರಾಜಶೇಖರ್ ರೆಡ್ಡಿ ಅವರಿಗೆ ಹಣದ ಅವಶ್ಯಕತೆ ಇದ್ದುದ್ದರಿಂದ ತಮ್ಮ ಎಟಿಎಂ ಕಾರ್ಡ್ ನೀಡಿ ಹಣ ಡ್ರಾ ಮಾಡಿಕೊಂಡು ಬರುವಂತೆ ಹರಿಲಾಲ್ಗೆ ಸೂಚಿಸಿದ್ದರು.
ಬುಧವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಕಾರಿನಲ್ಲಿ ವಿನಾಯಕನಗರದ ಆಂಧ್ರಬ್ಯಾಂಕ್ ಎಟಿಎಂ ಕೇಂದ್ರದಲ್ಲಿ 4 ಲಕ್ಷ ರೂ. ಹಣ ಡ್ರಾ ಮಾಡಿಕೊಂಡು, ಬ್ಯಾಗ್ನಲ್ಲಿ ಇರಿಸಿಕೊಂಡು ಕಾರಿನಲ್ಲಿಟ್ಟಿದ್ದಾರೆ. ಬಳಿಕ ಸ್ವಲ್ಪದೂರ ಹೋದ ನಂತರ ರಸ್ತೆ ಬದಿ ಕಾರು ನಿಲ್ಲಿಸಿ ಎಳನೀರು ಕುಡಿಯಲು ಹೋಗಿದ್ದಾರೆ.
ಈ ವೇಳೆ ಬೈಕ್ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು, ಕಾರಿನ ಗ್ಲಾಸ್ ಓಡೆದು ಹಣದ ಬ್ಯಾಗ್ ಎತ್ತಿಕೊಂಡು ಪರಾರಿಯಾಗಿದ್ದಾರೆ. ಇದನ್ನು ಗಮನಿಸಿದ ಆಟೋ ಚಾಲಕ ಮೊಹಮದ್ ಇಲಾºಜ್ ಎಂಬಾತ ಕೂಗಿಕೊಂಡಿದ್ದು, ಹರಿಲಾಲ್ ಓಡಿಬಂದು ಬೈಕ್ನ್ನು ಕಾರಿನಲ್ಲಿ ಹಿಂಬಾಲಿಸಿದ್ದಾರೆ. ಆದರೆ, ದುಷ್ಕರ್ಮಿಗಳು ಸಿಗದೇ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಎಟಿಎಂ ಕೇಂದ್ರದಲ್ಲಿ ಹಣ ಡ್ರಾ ಮಾಡಿಕೊಳ್ಳುವಾಗ ಇಬ್ಬರು ಯುವಕರು ನೋಡುತ್ತಿದ್ದರು. ಅವರು ಹಣ ಡ್ರಾ ಮಾಡಿಕೊಳ್ಳಲು ಬಂದಿರಬಹುದು ಎಂದುಕೊಂಡಿದ್ದೆ. ಅವರೇ ಹಿಂಬಾಲಿಸಿ ಹಣ ದೋಚಿರಬಹುದು ಎಂದು ದೂರುದಾರ ಹರಿಲಾಲ್ ಹೇಳಿದ್ದಾರೆ. ಎಟಿಎಂ ಕೇಂದ್ರ ಹಾಗೂ ಘಟನಾ ಸ್ಥಳದ ಸಿಸಿ ಕ್ಯಾಮೆರಾ ಫೂಟೇಜ್ ಪಡೆದು ಪರಿಶೀಲನೆ ನಡೆಸುತ್ತಿದ್ದು, ಆರೋಪಿಗಳ ಬಂಧನಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.