Advertisement

Kudremukha ವಲಯದಲ್ಲಿ ಇನ್ನಷ್ಟು ಸೂಕ್ಷ್ಮ ಪ್ರದೇಶಗಳು ಚಾರಣಕ್ಕೆ ಮುಕ್ತ?

12:55 AM Jun 24, 2024 | Team Udayavani |

ಮಂಗಳೂರು: ಪಶ್ಚಿಮ ಘಟ್ಟದ ಪರಿಸರ ಸೂಕ್ಷ್ಮ ತಾಣಗಳನ್ನು ಚಾರಣಕ್ಕೆ ತೆರೆದಿರಿಸಿದ ದುಷ್ಪರಿಣಾಮವನ್ನು ಅರಿತಿರುವ ಹೊರತಾಗಿಯೂ ಅರಣ್ಯ ಇಲಾಖೆ ಕುದುರೆಮುಖ ವಲಯದ ಅನೇಕ ಸ್ಥಳಗಳನ್ನು ಚಾರಣಕ್ಕೆ ಮುಕ್ತಗೊಳಿಸಲು ಹೊರಟಂತಿದೆ.

Advertisement

ಕೆಲವು ಸ್ಥಳೀಯ ಜನಪ್ರತಿನಿಧಿಗಳು ತಮ್ಮ ವೈಯುಕ್ತಿಕ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಈ ಚಾರಣಗಳನ್ನು ಆರಂಭಿಸಲು ಒತ್ತಾಸೆ ಹೂಡಿರುವುದು ತಿಳಿದುಬಂದಿದೆ.

ಪ್ರಸ್ತುತ ಇದಕ್ಕೆ ಪರಿಸರ ಪ್ರೇಮಿಗಳು ವಿರೋಧ ವ್ಯಕ್ತಪಡಿಸುತ್ತಿದ್ದು, ಯಾವುದೇ ಕಾರಣಕ್ಕೂ ಪರಿಸರ ಸೂಕ್ಷ್ಮ ತಾಣಗಳಿಗೆ ಅನುಮತಿ ನೀಡಬಾರದು ಎನ್ನುವ ಮನವಿಯನ್ನು ರಾಜ್ಯ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ನೀಡಿದ್ದಾರೆ.

ಕಳೆದ ಜನವರಿಯಲ್ಲಿ ಕುಮಾರ ಪರ್ವತಕ್ಕೆ ಒಂದೇ ದಿನ 4,000ಕ್ಕೂ ಅಧಿಕ ಮಂದಿ ಚಾರಣಿಗರು ಹೋಗಿ ಸಂಚಾರ ದಟ್ಟಣೆ ಉಂಟಾಗಿತ್ತು. ಅದನ್ನು ಮಾಧ್ಯಮಗಳಲ್ಲಿ ನೋಡಿದ್ದ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ತಾತ್ಕಾಲಿಕವಾಗಿ ಚಾರಣವನ್ನೇ ಸ್ಥಗಿತಗೊಳಿಸಿದ್ದರು.

ಎಳನೀರು, ಬಂಗಾರ ಪಲ್ಕೆ: ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಬರುವ ಎಳನೀರು ಜಲಪಾತ, ಬಂಗಾರಪಲ್ಕೆ ಹಾಗೂ ಸೂಜಿಕಲ್ಲು ಗುಡ್ಡಗಳನ್ನು ಸಾರ್ವಜನಿಕ ಪ್ರವೇಶಕ್ಕಾಗಿ ತೆರೆಯಲು ಯೋಜಿಸಲಾಗುತ್ತಿರುವ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಈ ಸ್ಥಳಗಳು ಪಶ್ಚಿಮ ಘಟ್ಟಗಳ ಜೀವ ವೈವಿಧ್ಯ ಹಾಟ್‌ಸ್ಪಾಟ್‌ಗೆ ಸೇರಿವೆ. ಅಲ್ಲದೆ ಆನೆ ಕಾರಿಡಾರ್‌ನ ಭಾಗವೂ ಆಗಿವೆ. ಒಮ್ಮೆ ಚಾರಣಿಗರನ್ನು ಒಳಗೆ ಬಿಟ್ಟಲ್ಲಿ ಕುಮಾರ ಪರ್ವತ, ಕುದುರೆಮುಖ, ನೇತ್ರಾವತಿ ಶಿಖರದಂತೆ ಇವೂ ಅನಗತ್ಯವಾಗಿ ಮಾನವನ ಒತ್ತಡಕ್ಕೆ ಒಳಗಾಗಲಿವೆ. ಮಾಲಿನ್ಯ ಒಂದೆಡೆಯಾದರೆ, ದೊಡ್ಡ ಸಂಖ್ಯೆಯಲ್ಲಿನ ಚಾರಣಿಗರಿಂದ ಪರಿಸರದ ಸಮತೋಲನವೂ ಹದಗೆಡಲಿದೆ ಎಂದು ಸ್ಥಳೀಯ ಪರಿಸರ ಸಂಘಟನೆಯಾದ “ಪರಿಸರ ತಪಸ್ಸು’ ಇದರ ಸಂಚಾಲಕ ಪವನ್‌ ಕಾಕತ್ಕರ್‌ ಅವರು ಕಳವಳ ವ್ಯಕ್ತಪಡಿಸಿದ್ದಾರೆ.

Advertisement

ಸ್ಥಳೀಯ ಬೇಡಿಕೆಯ ನೆಪ?
ಇಲ್ಲಿ ಚಾರಣ ಆರಂಭಿಸಲು ಸ್ಥಳೀಯರ ಒತ್ತಾಯ ಇದೆ ಎನ್ನುವ ನೆಪವನ್ನು ಮುಂದಿಡಲಾಗುತ್ತಿದ್ದು, ಉಳ್ಳವರಿಂದ ಹೋಮ್‌ಸ್ಟೇ ಉದ್ಯಮಕ್ಕೆ ಪೂರಕವಾಗಿ ಆರ್ಥಿಕ ಲಾಭಕ್ಕಾಗಿ ಮಾಡುತ್ತಿರುವ ಸಾಧ್ಯತೆಗಳಿವೆ ಎನ್ನುತ್ತಾರೆ ಪರಿಸರ ಪ್ರಿಯರು.

ಬಂಗಾರಪಲ್ಕೆ ಪ್ರದೇಶವು ಬಹಳ ಆಳವಾದ ಜಾಗವಾಗಿದ್ದು, ಇದಕ್ಕೆ ಸರಿಯಾದ ದಾರಿಗಳಿಲ್ಲ. ಇಲ್ಲಿ ಈ ಹಿಂದೆ ಮಣ್ಣು ಕುಸಿದು ಯುವಕನೊಬ್ಬ ಸಾವನ್ನಪ್ಪಿದ್ದ. ಇದು ಅಪಾಯಕಾರಿ ಎನ್ನುವ ಹಣೆಪಟ್ಟಿಯನ್ನೂ ಪಡೆದುಕೊಂಡಿದ್ದು, ಚಾರಣಕ್ಕೆ ಸೂಕ್ತವಲ್ಲ ಎನ್ನುವುದು ಅವರ ಅಭಿಪ್ರಾಯ.

ಹೊಸ ಸ್ಥಳಗಳ ಸೇರ್ಪಡೆ ಪರಿಶೀಲನೆಯಲ್ಲಿ
ಕುದುರೆಮುಖ ಅರಣ್ಯ ವ್ಯಾಪ್ತಿಯ 2-3 ಹೊಸ ಸ್ಥಳಗಳನ್ನು ಚಾರಣಕ್ಕೆ ಸೇರಿಸಲು ಸ್ಥಳೀಯರಿಂದ ಒತ್ತಾಯವಿದೆ. ಅದೇ ರೀತಿ ಹಲವರ ವಿರೋಧವೂ ಇದೆ. ಆದರೆ ಜವಾಬ್ದಾರಿಯುತರಿಗೆ ನಿಯಂತ್ರಿತ ವಾಗಿ ಚಾರಣಕ್ಕೆ ಅವಕಾಶ ಮಾಡಿಕೊಡಬೇಕು ಎನ್ನುವುದು ಇಲಾಖೆಯ ಅಭಿಪ್ರಾಯ. ಕುದುರೆಮುಖ ವಲಯದ ಧಾರಣಾ ಶಕ್ತಿಯ ಅನ್ವಯ ದಿನಕ್ಕೆ 300 ಮಂದಿಗೆ ಮಾತ್ರ ಗರಿಷ್ಠ ಅನುಮತಿ ನೀಡಲಾಗುತ್ತಿದೆ. ಇದೇಮಿತಿಯಲ್ಲಿ ಹೊಸ ಸ್ಥಳಗಳಿಗೂ ಅನುಮತಿ ಕೊಡುವ ಬಗ್ಗೆ ಸದ್ಯ ಚರ್ಚೆ ನಡೆಯು ತ್ತಿದ್ದು, ಅಂತಿಮ ತೀರ್ಮಾನ ತೆಗೆದುಕೊಂಡಿಲ್ಲ ಎಂದು ಕುದುರೆ ಮುಖ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವರಾಮ್‌ ಬಾಬು ಅವರು “ಉದಯವಾಣಿ’ಗೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next