Advertisement

ಆಲಮಟ್ಟಿಗೆ ಒಳಹರಿವು ಹೆಚ್ಚಳ

03:49 PM Jul 10, 2020 | Suhan S |

ಆಲಮಟ್ಟಿ: ಕೃಷ್ಣೆಯ ಉಗಮಸ್ಥಾನ ಹಾಗೂ ಜಲಾನಯನ ಪ್ರದೇಶದಲ್ಲಿ ಹೆಚ್ಚು ಮಳೆ ಸುರಿಯುತ್ತಿರುವುದರಿಂದ ಆಲಮಟ್ಟಿ ಜಲಾಶಯದ ಒಳಹರಿವು ಹೆಚ್ಚಳವಾಗಿದೆ.

Advertisement

ಆಲಮಟ್ಟಿಯ ಲಾಲ ಬಹದ್ದೂರ ಶಾಸ್ತ್ರಿ ಜಲಾಶಯಕ್ಕೆ ವಾಡಿಕೆಗಿಂತಲೂ ಮುಂಚಿತವಾಗಿ ಅಂದರೆ ಜೂನ್‌ ಮೊದಲ ವಾರದಲ್ಲಿಯೇ ಒಳಹರಿವು ಆರಂಭವಾಗಿ ನಂತರ ಇಳಿಕೆಯಾಗಿತ್ತು. ಈಗ ಮತ್ತೆ ಮಂಗಳವಾರದಿಂದ ಏರಿಕೆಯಾಗುತ್ತಿದೆ. ಕರ್ನಾಟಕ ವಿದ್ಯುತ್‌ ಉತ್ಪಾದನಾ ಕೇಂದ್ರದ ಆಲಮಟ್ಟಿಯ ಜಲವಿದ್ಯುದಾಗಾರದ ಮೂಲಕ ಕೃಷ್ಣಾ ಭಾಗ್ಯ ಜಲನಿಗಮದ ಅಧಿ ಕಾರಿಗಳು ಬುಧವಾರದಿಂದ 10 ಸಾವಿರ ಕ್ಯೂಸೆಕ್‌ ನೀರನ್ನು ವಿದ್ಯುತ್‌ ಉತ್ಪಾದನಾ ಘಟಕದಿಂದ ಕೃಷ್ಣಾನದಿ ಪಾತ್ರಕ್ಕೆ ಬಿಡುತ್ತಿರುವುದರಿಂದ 55 ಮೆ.ವ್ಯಾ.ನ ಐದು ಘಟಕ ಹಾಗೂ 15 ಮೆ.ವ್ಯಾ. ಘಟಕಗಳಲ್ಲಿ 55 ಮೆ.ವ್ಯಾ.ನ ಎರಡು ಘಟಕಗಳಿಂದ ವಿದ್ಯುತ್‌ ಉತ್ಪಾದನೆ ಆರಂಭಗೊಂಡಿದೆ.

ಇನ್ನು ಆರಿದ್ರಾ ಹಾಗೂ ಪುನರ್ವಸು ಮಳೆಗಳು ಸುರಿದ ಪರಿಣಾಮ ರೈತರ ಜಮೀನಿಗೆ ನೀರಿನ ಬೇಡಿಕೆ ಕಡಿಮೆಯಾಗಿದೆ. ಈ ನಡುವೆ ಆಲಮಟ್ಟಿ ಲಾಲ ಬಹದ್ದೂರಶಾಸ್ತ್ರಿ ಜಲಾಶಯ ವ್ಯಾಪ್ತಿಯ ಆಲಮಟ್ಟಿ ಬಲದಂಡೆ ಶಾಖಾ ಕಾಲುವೆ, ಆಲಮಟ್ಟಿ ಎಡದಂಡೆ ಶಾಖಾ ಕಾಲುವೆ, ತಿಮ್ಮಾಪುರ ಏತನೀರಾವರಿ ಯೋಜನೆ, ಮುಳವಾಡ ಏತನೀರಾವರಿ ಯೋಜನೆ, ರೊಳ್ಳಿ-ಮನ್ನಿಕೇರಿ ಏತನೀರಾವರಿ ಯೋಜನೆ ಸೇರಿದಂತೆ ಜಲಾಶಯ ವ್ಯಾಪ್ತಿಯ ಎಲ್ಲ ಕಾಲುವೆಗಳಲ್ಲಿನ ಹೂಳು ಹಾಗೂ ಗಿಡಗಂಟಿ ತೆರವುಗೊಳಿಸುವ ಕಾಮಗಾರಿಗಳು ಶರವೇಗದಲ್ಲಿ ನಡೆದಿವೆ. ಕಾಲುವೆಗಳ ವಿಶೇಷ ದುರಸ್ತಿ ಕಾಮಗಾರಿಗಳು ಶರವೇಗದಲ್ಲಿ ನಡೆದಿರುವುದರಿಂದ ಸಕಾಲದಲ್ಲಿ ಕಾಲುವೆಗೆ ನೀರು ಹರಿಸಲು ಕೆಬಿಜೆನ್ನೆಲ್‌ ಅಧಿಕಾರಿಗಳು ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ ಎಂದು ಕೆಬಿಜೆನ್ನೆಲ್‌ ಮೂಲಗಳಿಂದ ತಿಳಿಸಿವೆ.

ಆತಂಕ: ಕೃಷ್ಣಾ ನದಿಯ ಎಡ ಹಾಗೂ ಬಲಬದಿಯಲ್ಲಿರುವ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಯ ಗ್ರಾಮೀಣ ಜನರಿಗೆ ನೆರೆ ಹಾವಳಿ ಬಗ್ಗೆ ಆತಂಕ ಉಂಟಾಗಿದೆ. ಒಟ್ಟಾರೆ ಕೃಷ್ಣಾ ನದಿ ಪಕ್ಕದಲ್ಲಿರುವ ಗ್ರಾಮೀಣ ಪ್ರದೇಶ ಮತ್ತು ಕೃಷಿ ಜಮೀನಿನೊಳಗೆ ನೀರು ನುಗ್ಗದಂತೆ ಮುಂಜಾಗ್ರತಾ ಕ್ರಮಕೈಗೊಳ್ಳಬೇಕೆಂದು ನದಿ ತೀರದ ನಾಗರಿಕರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next