Advertisement

ಬದುಕನ್ನೇ ಪ್ರಶ್ನಿಸುವ,ಕೆಣಕುವ ಮೂಕಜ್ಜಿ

01:21 PM Dec 12, 2020 | Suhan S |

ಯಾವುದೇ ಮಹಾ ಕಾದಂಬರಿ ಅಥವಾ ನಾಟಕ ಕೇವಲ ಕಥೆಯಾಗಿರುವುದಿಲ್ಲ. ಬದಲಾಗಿ ಅದು ಮನುಷ್ಯ ಜೀವನದ ವಿವಿಧ ಪದರಗಳನ್ನು ಭೇದಿಸುತ್ತದೆ. ಅಷ್ಟೇ ಅಲ್ಲ ಅವನ್ನು ಪ್ರಶ್ನಿಸುತ್ತದೆ, ಕೆಣಕುತ್ತದೆ.

Advertisement

ಕೃತಿಯನ್ನು ಓದಿದಾತನ ಮನಸ್ಸಿನಲ್ಲಿ ಅನೇಕ ತರಂಗಗಳು ಏಳುತ್ತವೆ. ಹೀಗೆ ಅದು ನಮ್ಮ ಬದುಕಿನಮೇಲೆ ಮತ್ತಷ್ಟು ಬೆಳಕನ್ನು ಚೆಲ್ಲುತ್ತದೆ. ಈ ದೃಷ್ಟಿಯಲ್ಲಿನೋಡಿದಾಗ ಸಿಡ್ನಿಯಲ್ಲಿ ಇತ್ತೀಚೆಗೆ ತೆರೆಕಂಡ ಶಿವರಾಮಕಾರಂತರ ಕಾದಂಬರಿಯನ್ನು ಆಧರಿಸಿದ “ಮೂಕಜ್ಜಿಯ ಕನಸುಗಳು’ ಸಿನೆಮಾ ಪ್ರೇಕ್ಷಕರ ಮೇಲೆ ಅಚ್ಚಳಿಯದ ಪರಿಣಾಮ ಬೀರಿತು.

1968ರಲ್ಲಿ ಹೊರಬಂದ ಈ ಕಾದಂಬರಿಯನ್ನು ಕೂಡಲೇ ಓದಿದ ಜ್ಞಾಪಕ. ಆದರೆ ಈಗ ಅದರ ವಿವರಗಳುಹೆಚ್ಚು ನೆನಪಿಲ್ಲ. ಅನಂತರ 1977ರಲ್ಲಿ ಇದೇ ಕಾದಂಬರಿಕಾರಂತರಿಗೆ ಜ್ಞಾನ ಪೀಠ ಪ್ರಶಸ್ತಿಯನ್ನು ತಂದುಕೊಟ್ಟಿತು.ಸಿಡ್ನಿಯಲ್ಲಿ ನ. 22ರಂದು ರವಿವಾರ ಅನಿವಾಸಿ ಕಲಾತಂಡಇದರ ಪ್ರದರ್ಶನವನ್ನು ಏರ್ಪಡಿಸಿದ್ದರು.ಸಿನೆಮಾದಲ್ಲಿ ಹೊರಹೊಮ್ಮುವ ವೈಚಾರಿಕತೆ ಅಚ್ಚರಿ ತರುವಂಥದ್ದು. ನಿರ್ದೇಶಕರಾದ ಪಿ. ಶೇಷಾದ್ರಿಯವರು ಕಾದಂಬರಿಯ ವಿವಿಧ ನೆಲೆಗಳನ್ನು ಅರ್ಥೈಸುವಲ್ಲಿ ಸಫ‌ಲರಾಗಿದ್ದಾರೆ ಎಂಬುದು ಖಚಿತ. ಇದರ ನಿರ್ಮಾಣ ಹೊಣೆ ಹೊತ್ತದ್ದು ನವ್ಯ ಚಿತ್ರ ಕ್ರಿಯೇಷನ್ಸ್. ಮಾನವ ಜೀವನ ಸಂಕೀರ್ಣವಾದದ್ದು. ಸುಲಭ ಸಮೀಕರಣಕ್ಕೆ ಸಿಗುವುದಿಲ್ಲ. ಮುಂಚೆ ಹೇಳಿದಂತೆ ಅದರಲ್ಲಿ ಪದರಗಳು ಅನೇಕ. ಗಂಡು ಹೆಣ್ಣುಗಳ ಸಂಬಂಧ, ಪ್ರೀತಿ, ಪ್ರೇಮ, ಕಾಮ, ಬಯಕೆ ಎಲ್ಲವೂ ಒಂದೆಡೆ ಹುದುಗಿ ಹೋಗಿವೆ. ಮತ್ತೂಂದೆಡೆ ನಮ್ಮಲ್ಲಿ ನಂಬಿಕೆ, ದೇವರು, ಅವತಾರ, ಆಚಾರ , ವ್ಯವಹಾರ ಇವೆಲ್ಲ ಬೇರೂರಿ ಹೋಗಿವೆ. ರಾಮಾಯಣ, ಮಹಾಭಾರತಗಳು ನಮಗೆ ಆಧಾರವಾಗಿ ಹೋಗಿವೆ. ವೇದ, ಶಾಸ್ತ್ರ, ಪುರಾಣ ಇವುಗಳ ನೆರಳಿನಲ್ಲಿ ನಾವು ನಮ್ಮದೇ ಪದ್ಧತಿಗಳನ್ನು ರೂಢಿಸಿಕೊಂಡಿದ್ದೇವೆ.

ಚಿತ್ರದ ನಾಯಕಿ ಪಾತ್ರದ ಮೂಕಜ್ಜಿ ಇವೆಲ್ಲವನ್ನೂ ಪ್ರಶ್ನಿಸುತ್ತಾ, ಕೆಣಕುತ್ತಾ ಹೋಗುತ್ತಾಳೆ. ಇದನ್ನೇ ತನ್ನ ಗುರಿಎನಿಸಿಕೊಂಡ ಸಿನೆಮಾ “ಮೂಕಜ್ಜಿಯ ಕನಸುಗಳು’ ನಮ್ಮವಿಚಾರಗಳ ತಳಪಾಯವನ್ನೇ ತಲೆಕೆಳಗು ಮಾಡುತ್ತದೆ.ಉದಾಹರಣೆಗೆ ಗಂಡನಿಂದ ಶರೀರ ಸುಖ ಪಡೆಯಲಾಗದಹೆಣ್ಣು ಮತ್ತೂಬ್ಬ ಗಂಡಿನಿಂದ ಅದನ್ನು ಪಡೆಯುವುದರಲ್ಲಿ ತಪ್ಪೇನಿಲ್ಲ. ಅದು ಸ್ವಾಭಾವಿಕ ಎಂದಾಗ ನಮ್ಮಲ್ಲಿ ತಲೆತಲಾಂತರದಿಂದ ಬಂದ ನಂಬಿಕೆಗೆ ಕೊಡಲಿ ಏಟು ಬೀಳುತ್ತದೆ.

ಅನಂತರ ಆ ಹೆಣ್ಣು ತನ್ನ ಗಂಡನೊಡನೆಯೇ ರಾಜಿ ಮಾಡಿಕೊಂಡಾಗ ಸಮಾಜದ ಒಂದುಅನಿವಾರ್ಯತೆಯತ್ತ ಕೈ ಮಾಡಿ ತೋರಿಸುತ್ತದೆ. ಇವೆಲ್ಲ ಏನೇ ಆದರೂ ಜೀವನ ಒಂದು ನಾಟಕ. ನಾವು ಒಂದೆರಡು ದಿನ ಇದರಲ್ಲಿ ನಟಿಸಿ ಮುಗಿದಾಗ ಮತ್ತೆಪಂಚ ಭೂತಗಳಲ್ಲಿ ಲೀನವಾಗುತ್ತೇವೆ. ಇದೆ ಪರಮ ಸತ್ಯಎನ್ನುವುದನ್ನು ಎತ್ತಿತೋರಿಸುತ್ತದೆ ಈ ಚಿತ್ರ.  ನಿರ್ದೇಶಕರು ಅಲ್ಲಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಂಡಿದ್ದಾರೆ. ತಮ್ಮದೇ ತುಸು ಸನ್ನಿವೇಶಗಳನ್ನು ತುಂಬಿದ್ದಾರೆ. ಭೂಮಿಯನ್ನು ಅಗೆದಾಗ ಸಿಗುವ ಚಿನ್ನದ ಸರ, ಅದರ ಸುತ್ತ ಹೆಣೆಯಲಾದ ಕತೆ, ಅಲ್ಲಿ ಹೆಡೆ ಎತ್ತುವ ನಮ್ಮ ನಂಬಿಕೆಗಳು ಇವೆಲ್ಲ ನಿರ್ದೇಶಕರ ಕಲ್ಪನೆಗಳು.ಆದರೆ ಇವುಗಳಿಂದ ಮೂಲ ಉದ್ದೇಶಕ್ಕೆ ಎಲ್ಲಿಯೂ ಭಂಗ ಬರುವುದಿಲ್ಲ. ಕಾದಂಬರಿಯ ಮೂಲ ಉದ್ದೇಶವನ್ನು ಚಿತ್ರ ಯಥಾವತ್ತಾಗಿ ಪ್ರತಿಬಿಂಬಿಸಿತು. ಭೂತಕಾಲ, ವರ್ತಮಾನದ ವಿಷಯಗಳನ್ನು ಒಮ್ಮೆಗೇ ಗ್ರಹಿಸುವ ಮೂಕಜ್ಜಿ ಕಾಲ, ದೇಶಗಳ ಚೌಕಟ್ಟನ್ನು ಮೀರಿ ಅತೀಂದ್ರಿಯಳಾಗುತ್ತಾಳೆ. ಅವಳ ಭೂತಕನ್ನಡಿಯಲ್ಲಿ ಇತಿಹಾಸವೇ ಪ್ರತ್ಯಕ್ಷವಾಗುತ್ತದೆ.

Advertisement

ಈ ಪಾತ್ರವನ್ನು ನಿರ್ವಹಿಸಿರುವ ಖ್ಯಾತ ನಟಿ ಬಿ. ಜಯಶ್ರೀ ಅವರು ಅಮೋಘವಾದ ಅಭಿನಯ ನೀಡಿದ್ದಾರೆ. ತಮಗಾಗಿಯೇ ಕಡೆದ ಪಾತ್ರವಿದು ಎನಿಸುವಂತೆ ಸಹಜ ಅಭಿನಯ ಅವರದ್ದು. ಅಲ್ಲದೆ ಮಿಕ್ಕ ಪಾತ್ರಗಳಲ್ಲಿ ಕಂಡು ಬರುವ ಮಿಕ್ಕ ನಟ ನಟಿಯರು ಇದರ ಯಶಸ್ಸಿಗೆ ಕಾರಣರಾಗಿದ್ದಾರೆ.

ಸುಬ್ಬರಾಯನಾಗಿ ಅರವಿಂದ್‌ ಕುಪ್ಲಿಕರ್‌, ತಿಪ್ಪಜ್ಜಿಯಾಗಿ ರಾಮೇಶ್ವರಿ ವರ್ಮಾ, ಸೀತಾ ಆಗಿ ನಂದಿನಿ ವಿಠಲ್ ನಾಗಿ ಯಾಗಿ ಪ್ರಗತಿ ಪ್ರಭು, ರಾಮಣ್ಣನಾಗಿ ಪ್ರಭುದೇವ, ಸೀನಪ್ಪನಾಗಿ ಪ್ರದೀಪ್‌ ಚಂದ್ರ, ಅನಂತರಾಯನಾಗಿ ಸಿದ್ದಾರ್ಥ ಮಧ್ಯಮಿಕಾ, ಬಾಲಕಿಯಾಗಿ ಶ್ಲಾಘಾ ಅವರನ್ನು ಹೆಸರಿಸಬಹುದು. ಚಿತ್ರದ ಹೊರಾಂಗಣವನ್ನು ಅತ್ಯಂತ ಸಮರ್ಪಕವಾಗಿ ಆರಿಸಲಾಗಿದೆ. ಇದರ ಉದ್ದಕ್ಕೂ ಅಜ್ಜಿಯ ಹಿಂದಿರುವ ಮಹಾವೃಕ್ಷ ಇದರ ಒಂದು ಪಾತ್ರವೇ ಆಗಿಹೋಗಿದೆ.ಇದರಲ್ಲಿ ಒಂದು ಮಾತು “ಈ ಮರಕ್ಕೆ ನನ್ನ ನಾಕರಷ್ಟು ವಯಸ್ಸಾಗಿದೆ. ನಾನು ಮಾತನಾಡ್ತೀನಿ. ಅದು ಮಾತನಾಡೋಲ್ಲ’ ನಮ್ಮ ದೀರ್ಘ‌ ಇತಿಹಾಸ, ನಂಬಿಕೆ, ಆಕಾರ ಇವುಗಳಿಗೆ ಈ ವೃಕ್ಷ ಉಪಮೆಯಾಗಿದೆ ಎನ್ನಬೇಕು.

ಚಿತ್ರದಲ್ಲಿ ಬರುವ ಸಂಭಾಷಣೆಗಳೂ ಯಥಾವತ್ತಾಗಿವೆ. “ರಾಮಾಯಣ ಮಹಾಭಾರತ ಯಾವುದನ್ನೂ ನಾನು ನಂಬೋದಿಲ್ಲ. ಆದರೆ ಅವುಗಳಿಂದ ಬರುವ ಸಂದೇಶಕ್ಕೆ ಬೆಲೆ ಕೊಡ್ತೀನಿ’ ಎನ್ನುವಂತಹ ಮಾತುಗಳು ಕೇಳಿಬರುತ್ತಲೇಇರುತ್ತವೆ. ಕುಂದಾಪುರ, ಬ್ರಹ್ಮಾವರ ಮತ್ತು ಪರಿಸರದ ಭಾಷೆಯ ಸೊಗಡು ಇಲ್ಲಿಯೂ ಮೂಡಿಬಂದಿದೆ. ಪ್ರವೀಣ್‌ ಘೋಡ್ಕಿಂಡಿ ಅವರ ಹಿನ್ನೆಲೆ ಸಂಗೀತ ಚಿತ್ರದ ಭಾವನೆಯನ್ನು ತೀವ್ರಗೊಳಿಸುತ್ತದೆ.

ಮೂಕಜ್ಜಿಯ ಕನಸುಗಳು ಕನ್ನಡದ ಶ್ರೇಷ್ಠ ಚಿತ್ರಗಳಾದ ಸಂಸ್ಕಾರ, ಕಾಡು, ಹಂಸಗೀತೆ, ಕಾನೂರು ಹೆಗ್ಗಡತಿ ಸಾಲಿನಲ್ಲಿ ನಿಲ್ಲುತ್ತದೆ. ಅಲ್ಲದೇ ಭಾರತೀಯ ಗಣ್ಯ ಚಿತ್ರಗಳ ಪಂಕ್ತಿಯಲ್ಲಿಯೂ ಇದಕ್ಕೆ ಸ್ಥಾನ ಖಂಡಿತ. ಇತ್ತೀಚೆಗೆ ನಾವು ಆಸ್ಟ್ರೇಲಿಯಾದ ಬಹುಭಾಷಾ ಟಿವಿ ಕೇಂದ್ರವಾದ SBS ಮತ್ತು Netfilx ಜ್ಡಿ ಗಳಲ್ಲಿ ನೋಡುವ ಮಹತ್ವದ ಅಂತಾರಾಷ್ಟ್ರೀಯ ಸಿನೆಮಾಗಳ ಸರಿಸಮವಾಗಿ ನಿಲ್ಲುತ್ತದೆ. ಪ್ರದರ್ಶನದ ಮಾರನೇ ದಿನ ವರ್ಚುವಲ್‌ ಮೂಲಕ Zoom ನಲ್ಲಿ ನಡೆದ ವಿಚಾರ ವಿನಿಮಯ ಕಾರ್ಯಕ್ರಮದಲ್ಲಿ ನಿರ್ದೇಶಕ ಶೇಷಾದ್ರಿ ಮತ್ತು ಪ್ರಮುಖ ಪಾತ್ರಧಾರಿ ಬಿ. ಜಯಶ್ರೀ ಭಾಗವಹಿಸಿದ್ದರು.

ಸಿಡ್ನಿಯ ಹಲವಾರು ಮಂದಿ ಹಾಜರಿದ್ದು, ಅವರಿಬ್ಬರನ್ನು ಅನೇಕಾನೇಕ ಪ್ರಶ್ನೆಗಳನ್ನು ಕೇಳಿದ್ದು ಸಿನೆಮಾದ ಯಶಸ್ಸಿಗೆ ಸಾಕ್ಷಿ. ಪ್ರದರ್ಶನವನ್ನು ಏರ್ಪಡಿಸಿದ ಅನಿವಾಸ ಕಲಾತಂಡದ ಕಾರ್ಯ ಪ್ರಶಂಸನೀಯ.

 

-ಸಿಡ್ನಿ ಶ್ರೀನಿವಾಸ್‌

Advertisement

Udayavani is now on Telegram. Click here to join our channel and stay updated with the latest news.

Next