Advertisement

Karnataka: ತಿಂಗಳು ಆರು, ಸಾಧನೆಗಳು ಹಲವಾರು

12:26 AM Nov 29, 2023 | Team Udayavani |

ಸದ್ಬಳಕೆ ಮಾಡಿಕೊಳ್ಳುವ ಮಂದಿಗೆ ನಮ್ಮ ಯೋಜನೆಗಳು ವರವಾಗಿ ಪರಿಣಮಿಸಿವೆ. ಆದರೆ ಶ್ರಮ ವಹಿಸದೆ ಕಳ್ಳ ಮಾರ್ಗದಲ್ಲಿ ಸಂಪಾದನೆ ಮಾಡುವ, ಯೋಜನೆಗಳನ್ನು ದುರ್ಬಳಕೆ ಮಾಡುವ, ದುಂದುವೆಚ್ಚ ಮಾಡುವ, ಕೆಲವು ಸೋಮಾರಿ ಜನ ಮಾತ್ರ “ಬಿಟ್ಟಿ ಭಾಗ್ಯ” ಎಂದು ದೂಷಿಸುತ್ತ ಕಾಲಹರಣ ಮಾಡುತ್ತಿದ್ದಾರೆ.

Advertisement

2023ರ ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಪಕ್ಷವು ಘೋಷಿಸಿದ 5 ಗ್ಯಾರಂಟಿಗಳ ಕಾರಣಕ್ಕೆ ಅಭೂತಪೂರ್ವ ಜಯ ಸಾಧಿಸಿತು ಎಂದು ವಿಶ್ಲೇಷಿಸಲಾಗುತ್ತಿದೆ. ಚುನಾವಣ ಲಾಭದ ಉದ್ದೇಶದಿಂದ ನಾವು ಗ್ಯಾರಂಟಿಗಳ ಘೋಷಣೆ ಮಾಡಿದ್ದಲ್ಲ, ಇದು ನಮ್ಮ ಬದ್ಧತೆ ಮತ್ತು ಕನ್ನಡಿಗರ ಕಲ್ಯಾಣದ ಬಗೆಗಿನ ಕಾಳಜಿ. 6 ತಿಂಗಳ ಯಶಸ್ವಿ ಆಡಳಿತದ ಅನಂತರ ನಮ್ಮ ಸದುದ್ದೇಶ ಮತ್ತು ಕಾಳಜಿ ಕರ್ನಾಟಕದ ಜನತೆಗೆ ಮನವರಿಕೆಯಾಗಿದೆ. ಹಸಿವು, ಅನಕ್ಷರತೆ ಮತ್ತು ಅನಾರೋಗ್ಯದಿಂದ ಮುಕ್ತವಾದ ಜಾತಿ- ಧರ್ಮ-ಲಿಂಗ ಸಮಾನತೆಯ ಸ್ವಾಭಿಮಾನಿ ಕರ್ನಾಟಕ ನಿರ್ಮಾಣದ ಧ್ಯೇಯವನ್ನು ಇಟ್ಟುಕೊಂಡು ಸಂರಚನೆಗೊಂಡ ಯೋಜನೆಗಳು ರಾಜ್ಯದ ಮನೆ ಮನಗಳನ್ನು ತಲುಪಿವೆ.

ನಮ್ಮ ಗ್ಯಾರಂಟಿ ಯೋಜನೆಗಳು ಜನರ ನಡುವೆ ಹುಟ್ಟಿಕೊಂಡ ಮಹತ್ವಾಕಾಂಕ್ಷಿ ಯೋಜನೆಗಳಾಗಿವೆ. ಜಾತಿ-ಧರ್ಮ ಆಧಾರಿತ ದ್ವೇಷದ ರಾಜಕಾರಣ, ರಾಷ್ಟ್ರಪ್ರೇಮ-ರಾಷ್ಟ್ರೀಯತೆಯ ದುರ್ಬಳಕೆ, ಸರ್ವಾಧಿಕಾರಿ ಆಡಳಿತ, ಆಹಾರ ಪದ್ಧತಿ ಆಧಾರದಲ್ಲಿ ತುಷ್ಟೀಕರಣ, ಮೌಡ್ಯ-ಕಂದಾಚಾರಗಳ ವಿಜೃಂಭಣೆ, ಮಹಿಳೆಯರನ್ನು ವಿದ್ಯೆ-ಉದ್ಯೋಗದಿಂದ ವಂಚಿಸಿ ಮನೆಯೊಳಗೆ ಕೂಡಿಹಾಕುವ ಹುನ್ನಾರ ಮೊದಲಾದ ಸಮಾಜಘಾತುಕ ಚಿಂತನೆಗಳೇ ಆಡಳಿತದ ಮಾದರಿಯಾಗಿದ್ದ ಕಾಲದಲ್ಲಿ ಸಮಾಜವನ್ನು ಸರಿಯಾದ ದಿಕ್ಕಿಗೆ ಕೊಂಡೊಯ್ಯುವ ಅನಿವಾರ್ಯತೆ ಸೃಷ್ಟಿಯಾಗಿತ್ತು. ಮಹಿಳೆಯರು ಎದುರಿಸುತ್ತಿರುವ ಸವಾಲುಗಳಿಗೆ, ನಿರುದ್ಯೋಗಿ ಯುವಜನರ ಹತಾಶೆಗೆ, ಶಿಕ್ಷಣ ಮುಂದುವರೆಸಲಾಗದ ಹೆಣ್ಣುಮಗಳ ಅಸಹಾಯಕತೆಗೆ, ಬೆಲೆಯೇರಿಕೆಯಿಂದ ನೊಂದ ಬಡಜನರ ಕಷ್ಟಕ್ಕೆ ಪರಿಹಾರ ಒದಗಿಸಲಾಗದ ಸರಕಾರ ಅವರ ತಲೆಗೆ ಜಾತಿ-ಧರ್ಮದ ನಶೆ ಏರಿಸಿ ಅವರ ಎದುರು ಕಲ್ಪಿತ ಶತ್ರುವನ್ನು ಸೃಷ್ಟಿಸಿ ಗಮನವನ್ನು ಬೇರೆಡೆ ಸೆಳೆಯುವ ಪ್ರಯತ್ನವನ್ನು ಮಾಡಿತ್ತು. ಈ ಸಂದರ್ಭದಲ್ಲಿ ರಾಹುಲ್‌ ಗಾಂಧಿ ಅವರು ಕೈಗೊಂಡ “ಭಾರತ್‌ ಜೋಡೊ ಯಾತ್ರೆ’ ದೇಶದ ಅಂತರಂಗದಲ್ಲಿರುವ ಇನ್ನೊಂದು ಲೋಕವನ್ನು ನೋಡಲು ಪ್ರೇರೆಪಿಸಿತು.

ಭಾರತ್‌ ಜೋಡೊ ಯಾತ್ರೆಯಲ್ಲಿ ಜನರ ಜತೆ ಹೆಜ್ಜೆ ಹಾಕುವಾಗ ದೇಶದ ಸಾಮಾನ್ಯ ಜನ ಎದುರಿಸುತ್ತಿರುವ ಕಷ್ಟ-ಕಾರ್ಪಣ್ಯಗಳು, ಉಳ್ಳವರಿಂದ ನಡೆಯುತ್ತಿರುವ ದಬ್ಟಾಳಿಕೆಗಳ ಸೂಕ್ಷ್ಮ ಒಳನೋಟಗಳು, ಸಮಾಜವನ್ನು ಹಿಮ್ಮುಖವಾಗಿ ಚಲಿಸುವಂತೆ ಬಲತ್ಕರಿಸುತ್ತಿರುವ ಹುನ್ನಾರಗಳು ಅರಿವಾದವು. ಶ್ರಮಿಕರ ದುಡಿಮೆಯ ಒಂದು ಪಾಲನ್ನು ಭವಿಷ್ಯಕ್ಕಾಗಿ ಕೂಡಿಡುವಂತೆ ಸಹಾಯ ಮಾಡಿದರೆ, ಮಹಿಳೆಯರ ಕೈಯಲ್ಲಿ ದುಡ್ಡಿಟ್ಟು, ಮನೆಯಿಂದ ಹೊರಬಂದು ಓಡಾಡುವಂತೆ ಮಾಡಿದರೆ, ಸಾಮರ್ಥ್ಯಕ್ಕೆ ತಕ್ಕ ಒಳ್ಳೆಯ ಉದ್ಯೋಗವನ್ನು ಹುಡುಕಿಕೊಳ್ಳಲು ಯುವ ಜನತೆಗೆ ಸಹಾಯ ಮಾಡಿದರೆ ರಾಜ್ಯದ ಬಹುತೇಕ ಜನರ ಸಂಕಷ್ಟಗಳು ನಿವಾರಣೆಗೊಳ್ಳಬಹುದು ಎಂಬುದು ನಮ್ಮ ಹಂಚಿಕೆಯಾಗಿತ್ತು. ಇಂತಹ ಸಮಾಜಮುಖೀ ಚಿಂತನೆಗಳೇ ಗೃಹಜ್ಯೋತಿ, ಗೃಹಲಕ್ಷಿ$¾, ಅನ್ನಭಾಗ್ಯ, ಶಕ್ತಿ ಮತ್ತು ಯುವನಿಧಿಯಾಗಿ ಮಾರ್ಪಾಡುಗೊಂಡವು. ಹೀಗಾಗಿಯೇ ಇಂದು ಎಲ್ಲ ಗ್ಯಾರಂಟಿ ಯೋಜನೆಗಳು ಮತ್ತು ಸರ್ಕಾರದ ಕಾರ್ಯಕ್ರಮಗಳು ಜಾತಿ, ಧರ್ಮ, ಲಿಂಗ ಬೇಧವಿಲ್ಲದೆ ಎಲ್ಲ ಜನರನ್ನು ಸಮಾನವಾಗಿ ತಲುಪಲು ಸಾಧ್ಯವಾಗಿದೆ.

ರಾಷ್ಟ್ರಕವಿ ಕುವೆಂಪು ಅವರ “ಸರ್ವ ಜನಾಂಗದ ಶಾಂತಿಯ ತೋಟ’ದ ನಿರ್ಮಾಣ ರಾಹುಲ್‌ ಗಾಂಧಿಯಂತಹ ಸಹೃದಯ ನಾಯಕರಿಂದ ಮಾತ್ರ ಸಾಧ್ಯ ಎಂಬ ವಿಶ್ವಾಸವನ್ನು ಕನ್ನಡಿಗರು ಮನ ವರಿಕೆ ಮಾಡಿಕೊಂಡಿದ್ದಾರೆ ಎಂಬುದಕ್ಕೆ ಕರ್ನಾಟಕ ವಿಧಾನಸಭೆ ಚುನಾವಣೆಯ ಫಲಿತಾಂಶವೇ ಸಾಕ್ಷಿಯಾಗಿದೆ. ಕರ್ನಾಟಕದ ಗ್ಯಾರಂಟಿ ಯೋಜನೆಗಳು ಮಾದರಿ ಯೋಜನೆಗಳಾಗಿ ಪರಿಣಮಿಸಿವೆ. ಇಂದಿನ ಕರ್ನಾಟಕದ ಗೆಲುವು, ನಾಳಿನ “ಇಂಡಿಯಾ’ದ ಗೆಲುವಾಗಿ ಪರಿವರ್ತನೆಗೊಳ್ಳಲಿದೆ.

Advertisement

ಪ್ರತಿನಿತ್ಯ 60 ಲಕ್ಷಕ್ಕೂ ಹೆಚ್ಚು ಮಹಿಳೆಯರು ಶಕ್ತಿ ಯೋಜನೆಯಡಿ ಉಚಿತ ಪ್ರಯಾಣದ ಸದುಪಯೋಗ ಪಡೆಯುತ್ತಿದ್ದಾರೆ. ಇದುವರೆಗೆ 2,303 ಕೋಟಿ ರೂ. ಮೌಲ್ಯದ 100 ಕೋಟಿಗೂ ಅಧಿಕ ಉಚಿತ ಟಿಕೆಟ್‌ ವಿತರಿಸಲಾಗಿದೆ. ಗೃಹಜ್ಯೋತಿಯಡಿ 1.56 ಕೋಟಿ ನೊಂದಾಯಿತ ಕುಟುಂಬಗಳು ಮಾಸಿಕ ಗರಿಷ್ಠ 200 ಯುನಿಟ್‌ ವರೆಗೆ ಉಚಿತ ವಿದ್ಯುತ್‌ ಪಡೆಯುತ್ತಿವೆ. ಕಳೆದ 3 ತಿಂಗಳ ಅವಧಿ ಯಲ್ಲಿ ಈ ಯೋಜನೆಗಾಗಿ 2,152 ಕೋಟಿ ರೂ. ಅನುದಾನ ಬಿಡು ಗಡೆ ಮಾಡಲಾಗಿದೆ. ಕೇಂದ್ರ ಸರ್ಕಾರದ ಅಸಹಕಾರವನ್ನು ಲೆಕ್ಕಿಸದೆ ಅನ್ನಭಾಗ್ಯ ಯೋಜನೆಯಡಿ 5 ಕೆಜಿ ಅಕ್ಕಿ ಹಾಗೂ ಅಕ್ಕಿಯ ಅಲಭ್ಯತೆಯ ಕಾರಣಕ್ಕಾಗಿ ಉಳಿದ 5 ಕೆಜಿ ಅಕ್ಕಿಗೆ ಪರ್ಯಾಯವಾಗಿ ಪ್ರತಿ ಫಲಾನುಭವಿಗೆ ತಲಾ 170 ಹಣದ ವರ್ಗಾವಣೆ ಮಾಡು ತ್ತಿದ್ದೇವೆ. 3.92 ಕೋಟಿ ಫಲಾನುಭವಿಗಳ ಖಾತೆಗೆ 2,444 ಕೋಟಿ ರೂ. ಹಣ ಜಮೆ ಮಾಡಿದ್ದೇವೆ. ಗೃಹಲಕ್ಷಿ$¾ ಯೋಜನೆಯಡಿ 99.52 ಲಕ್ಷ ನೊಂದಾಯಿತ ಮಹಿಳೆಯರ ಖಾತೆಗೆ ತಿಂಗಳಿಗೆ ತಲಾ 2,000 ರೂ. ವರ್ಗಾವಣೆ ಮಾಡುತ್ತಿದ್ದೇವೆ. ಇದಕ್ಕಾಗಿ 17,500 ಕೋಟಿ ರೂ. ಅನುದಾನ ಮೀಸಲಿರಿಸಿದ್ದು ಈ ವರೆಗೆ 11,200 ಕೋಟಿ ರೂ. ಅನುದಾನ ಸರ್ಕಾರದಿಂದ ಬಿಡುಗಡೆಯಾಗಿದೆ. ಶೀಘ್ರದಲ್ಲಿಯೇ ಯುವಕರು ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಉತ್ತಮ ಉದ್ಯೋಗವನ್ನು ಹೊಂದಲು ಸಹಕರಿಸುವ ನಿಟ್ಟಿನಲ್ಲಿ ಯುವನಿಧಿ ಯೋಜನೆಯಡಿ ಪದವೀಧರ ನಿರುದ್ಯೋಗಿಗಳಿಗೆ ಮಾಸಿಕ 3,000 ರೂ. ಹಾಗೂ ಡಿಪ್ಲೊಮಾ ಪದವೀಧರ ನಿರು ದ್ಯೋಗಿಗಳಿಗೆ ಮಾಸಿಕ 1,500 ರೂ. ನಿರುದ್ಯೋಗ ಭತ್ಯೆಯನ್ನು ನೀಡಲಿದ್ದೇವೆ. ಪ್ರಸಕ್ತ ಸಾಲಿನಲ್ಲಿ 4.5 ಲಕ್ಷ ಯುವ ಜನರಿಗೆ ಇದರಿಂದ ಅನುಕೂಲವಾಗುವ ನಿರೀಕ್ಷೆಯಿದೆ.

ಪ್ರಸಕ್ತ ಸಾಲಿನಲ್ಲಿ ನಾಡು ಭೀಕರ ಬರಕ್ಕೆ ತುತ್ತಾಗಿರುವುದರಿಂದ ಅನ್ನದಾತರ ಕಷ್ಟ ಅರಿತು ಕೃಷಿ ಭಾಗ್ಯ ಯೋಜನೆಗೆ ಮರುಚಾಲನೆ ನೀಡಲಾಗಿದೆ. ಬೆಳೆ ನಷ್ಟ ಅನುಭವಿಸಿದ ರೈತರಿಗೆ ಸಮರ್ಪಕವಾಗಿ ಬೆಳೆವಿಮೆ ತಲುಪುವಂತೆ ಕ್ರಮವಹಿಸಲಾಗಿದೆ. ಹಸಿವು, ಅಪೌಷ್ಟಿಕತೆಯನ್ನು ಹೋಗಲಾಡಿಸಲು ರಾಜ್ಯಾದ್ಯಂತ ಇಂದಿರಾ ಕ್ಯಾಂಟೀನ್‌ಗಳು, ಶಾಲಾ ಮಕ್ಕಳಿಗೆ ಬಿಸಿಯೂಟದ ಜೊತೆಗೆ ಹಾಲು, ಮೊಟ್ಟೆ, ಚಿಕ್ಕಿ ವಿತರಣೆ ಮಾಡಲಾಗುತ್ತಿದೆ, ಗುಣಮಟ್ಟದ ಶಿಕ್ಷಣ ಸೌಲಭ್ಯ ಕಲ್ಪಿಸಲು ಪಠ್ಯ ಪುಸ್ತಕ, ಸಮವಸ್ತ್ರ ವಿತರಣೆ, ಶಾಲೆಗಳಿಗೆ ಉಚಿತ ನೀರು ಮತ್ತು ವಿದ್ಯುತ್‌ ಸೌಲಭ್ಯ, ವಿದ್ಯಾರ್ಥಿನಿಯರ ಹಾಜರಾತಿ ಪ್ರಮಾಣವನ್ನು ಹೆಚ್ಚಿಸಲು ಉಚಿತ ಸ್ಯಾನಿಟರಿ ಪ್ಯಾಡ್‌ಗಳ ವಿತರಣೆ ಮಾಡಲಾಗುತ್ತಿದೆ, ಆಸ್ಪತ್ರೆಗಳಲ್ಲಿ ಸಾಂಕ್ರಾಮಿಕ ರೋಗಗಳು, ಹೃದಯ ಸಂಬಂಧಿ ಸಮಸ್ಯೆಗಳಿಗೆ ಸಕಾಲದಲ್ಲಿ ಗುಣಮಟ್ಟದ ಉಚಿತ ಚಿಕಿತ್ಸೆ, ಸರ್ವರಿಗೂ ಸೂರು, ಗಿಗ್‌ ಕಾರ್ಮಿಕರಿಗೆ ಜೀವ ವಿಮೆ ಹಾಗೂ ಅಪಘಾತ ವಿಮೆ, ಸಾರಿಗೆ ಸಿಬ್ಬಂದಿಗೆ ವಿಮೆ ಹೀಗೆ ಹಲವಾರು ಜನಪರ ಯೋಜನೆಗಳನ್ನು ರಾಜ್ಯದ ಸರ್ವಾಂಗೀಣ ಅಭಿವೃದ್ಧಿ ನಿಟ್ಟಿನಲ್ಲಿ ಅನುಷ್ಠಾನಗೊಳಿಸಿ ಮುಂದುವರಿಸಿಕೊಂಡು ಹೋಗುತ್ತಿದ್ದೇವೆ.

ಒಂದು ರಾಜ್ಯ ಆರ್ಥಿಕವಾಗಿ ಸಶಕ್ತಗೊಳ್ಳಬೇಕು ಎಂದರೆ ಜನರ ಕೈಯಲ್ಲಿ ದುಡ್ಡು ಓಡಾಡುತ್ತಿರಬೇಕು. ಬಡವನ ಕೈಗೆ ದುಡ್ಡು ಕೊಟ್ಟರೆ ದೈನಂದಿನ ಖರ್ಚಿನ ರೂಪವಾಗಿ ಹಣವನ್ನು ವ್ಯಯಿಸುತ್ತಾನೆ. ಇದರಿಂದ ಜನರ ಮಧ್ಯೆ ಹಣದ ಓಡಾಟ ಹೆಚ್ಚಾಗುತ್ತದೆ. “ಶಕ್ತಿ’ಯಿಂದ ಮಹಿಳೆಯರ ಓಡಾಟ ಹೆಚ್ಚಿದ್ದರಿಂದ, “ಗೃಹಲಕ್ಷಿ$¾’ಯು ಕೈಯಲ್ಲಿರುವುದರಿಂದ ಸಹಜವಾಗಿಯೇ ಮಾರುಕಟ್ಟೆ, ವ್ಯಾಪಾರದಲ್ಲಿ ಅವರ ತೊಡಗಿಸಿಕೊಳ್ಳುವಿಕೆ ಹೆಚ್ಚಾಗಿದೆ. ಕೋವಿಡ್‌ ನಂತರ ಮಂಕಾಗಿದ್ದ ಸಂತೆ-ಮಾರುಕಟ್ಟೆಗಳು ಇಂದು ಜನಜಂಗುಳಿಯಿಂದ ತುಂಬಿವೆ. ಮಹಿಳೆಯರ ಬದುಕು ಅಡುಗೆ ಮನೆಗೆ ಸೀಮಿತವಾಗದೆ ಅನ್ಯ ಊರು, ಪಟ್ಟಣಗಳನ್ನು ನೋಡುತ್ತ ಬದುಕಿನ ವಿಸ್ತಾರತೆಯನ್ನು ಕಂಡುಕೊಳ್ಳುತ್ತಿದ್ದಾರೆ.

ಉಚಿತ ವಿದ್ಯುತ್‌ ಸೌಕರ್ಯದಿಂದ ಪ್ರತಿ ಕುಟುಂಬಗಳು ಲವಲವಿಕೆಯ ಗೂಡುಗಳಾಗಿವೆ. ಮಕ್ಕಳು ಹೆಚ್ಚು ಹೊತ್ತು ಓದುತ್ತಿದ್ದಾರೆ. ಪೋಷಕರು ಸಣ್ಣ-ಪುಟ್ಟ ಸ್ವಯಂ ಉದ್ಯೋಗದಲ್ಲಿ ತೊಡಗಿಸಿಕೊಳ್ಳುವ ಮೂಲಕ ಆದಾಯವನ್ನು ಗಳಿಸುತ್ತಿದ್ದಾರೆ. ಟಿವಿ, ರೆಡಿಯೋ ಮೂಲಕ ಹೊರ ಪ್ರಪಂಚದಲ್ಲಿ ಏನಾಗುತ್ತಿದೆ ಎಂಬುದನ್ನು ಕಂಡುಕೊಳ್ಳುತ್ತಿದ್ದಾರೆ. ಒಂದಲ್ಲ ಒಂದು ರೀತಿಯಲ್ಲಿ ಗ್ಯಾರಂಟಿ ಯೋಜನೆಗಳ ಮುಖೇನ ತಮ್ಮ ಬದುಕನ್ನು ಉತ್ತಮವಾಗಿಸಿಕೊಳ್ಳುವುದರತ್ತ ಚಿತ್ತ ಹರಿಸಿದ್ದಾರೆ, ಅಭಿವೃದ್ಧಿಯ ಪಥದತ್ತ ಹೆಜ್ಜೆ ಹಾಕುತ್ತಿದ್ದಾರೆ. ಗಂಡು-ಹೆಣ್ಣು ಎಂಬ ಭೇದವಿಲ್ಲದೆ, ಜಾತಿ-ಧರ್ಮ ಎಂಬ ಕಟ್ಟಳೆಗಳಿಲ್ಲದೆ ಪರಸ್ಪರ ವ್ಯಾಪಾರ-ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ರಾಜ್ಯದ ಆರ್ಥಿಕತೆಯನ್ನು ಹಿಗ್ಗಿಸುತ್ತಿದ್ದಾರೆ.

ಸದ್ಬಳಕೆ ಮಾಡಿಕೊಳ್ಳುವ ಮಂದಿಗೆ ನಮ್ಮ ಯೋಜನೆಗಳು ವರವಾಗಿ ಪರಿಣಮಿಸಿವೆ. ಆದರೆ ಶ್ರಮ ವಹಿಸದೆ ಕಳ್ಳ ಮಾರ್ಗದಲ್ಲಿ ಸಂಪಾದನೆ ಮಾಡುವ, ಯೋಜನೆಗಳನ್ನು ದುರ್ಬಳಕೆ ಮಾಡುವ, ದುಂದುವೆಚ್ಚ ಮಾಡುವ, ಕೆಲವು ಸೋಮಾರಿ ಜನಗಳು ಮಾತ್ರ “ಬಿಟ್ಟಿ ಭಾಗ್ಯ’ ಎಂದು ದೂಷಿಸುತ್ತ ಕಾಲಹರಣ ಮಾಡುತ್ತಿದ್ದಾರೆ. ಇಂತಹ ಮನಸ್ಥಿತಿಯವರ ದಾರಿ ತಪ್ಪಿಸುವ ಮಾತುಗಳಿಗೆ ಕಿವಿಯಾಗದೆ ಉತ್ತಮ ಬದುಕು ಕಟ್ಟಿಕೊಳ್ಳುವ ನಿಟ್ಟಿನಲ್ಲಿ ನಮ್ಮ ಜನತೆ ಹೆಜ್ಜೆ ಇರಿಸುತ್ತಿರುವುದನ್ನು ನೋಡಿದಾಗ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದ ನಮಗೆ ಸಾರ್ಥಕ್ಯಭಾವ ಮೂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next