Advertisement
2023ರ ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಪಕ್ಷವು ಘೋಷಿಸಿದ 5 ಗ್ಯಾರಂಟಿಗಳ ಕಾರಣಕ್ಕೆ ಅಭೂತಪೂರ್ವ ಜಯ ಸಾಧಿಸಿತು ಎಂದು ವಿಶ್ಲೇಷಿಸಲಾಗುತ್ತಿದೆ. ಚುನಾವಣ ಲಾಭದ ಉದ್ದೇಶದಿಂದ ನಾವು ಗ್ಯಾರಂಟಿಗಳ ಘೋಷಣೆ ಮಾಡಿದ್ದಲ್ಲ, ಇದು ನಮ್ಮ ಬದ್ಧತೆ ಮತ್ತು ಕನ್ನಡಿಗರ ಕಲ್ಯಾಣದ ಬಗೆಗಿನ ಕಾಳಜಿ. 6 ತಿಂಗಳ ಯಶಸ್ವಿ ಆಡಳಿತದ ಅನಂತರ ನಮ್ಮ ಸದುದ್ದೇಶ ಮತ್ತು ಕಾಳಜಿ ಕರ್ನಾಟಕದ ಜನತೆಗೆ ಮನವರಿಕೆಯಾಗಿದೆ. ಹಸಿವು, ಅನಕ್ಷರತೆ ಮತ್ತು ಅನಾರೋಗ್ಯದಿಂದ ಮುಕ್ತವಾದ ಜಾತಿ- ಧರ್ಮ-ಲಿಂಗ ಸಮಾನತೆಯ ಸ್ವಾಭಿಮಾನಿ ಕರ್ನಾಟಕ ನಿರ್ಮಾಣದ ಧ್ಯೇಯವನ್ನು ಇಟ್ಟುಕೊಂಡು ಸಂರಚನೆಗೊಂಡ ಯೋಜನೆಗಳು ರಾಜ್ಯದ ಮನೆ ಮನಗಳನ್ನು ತಲುಪಿವೆ.
Related Articles
Advertisement
ಪ್ರತಿನಿತ್ಯ 60 ಲಕ್ಷಕ್ಕೂ ಹೆಚ್ಚು ಮಹಿಳೆಯರು ಶಕ್ತಿ ಯೋಜನೆಯಡಿ ಉಚಿತ ಪ್ರಯಾಣದ ಸದುಪಯೋಗ ಪಡೆಯುತ್ತಿದ್ದಾರೆ. ಇದುವರೆಗೆ 2,303 ಕೋಟಿ ರೂ. ಮೌಲ್ಯದ 100 ಕೋಟಿಗೂ ಅಧಿಕ ಉಚಿತ ಟಿಕೆಟ್ ವಿತರಿಸಲಾಗಿದೆ. ಗೃಹಜ್ಯೋತಿಯಡಿ 1.56 ಕೋಟಿ ನೊಂದಾಯಿತ ಕುಟುಂಬಗಳು ಮಾಸಿಕ ಗರಿಷ್ಠ 200 ಯುನಿಟ್ ವರೆಗೆ ಉಚಿತ ವಿದ್ಯುತ್ ಪಡೆಯುತ್ತಿವೆ. ಕಳೆದ 3 ತಿಂಗಳ ಅವಧಿ ಯಲ್ಲಿ ಈ ಯೋಜನೆಗಾಗಿ 2,152 ಕೋಟಿ ರೂ. ಅನುದಾನ ಬಿಡು ಗಡೆ ಮಾಡಲಾಗಿದೆ. ಕೇಂದ್ರ ಸರ್ಕಾರದ ಅಸಹಕಾರವನ್ನು ಲೆಕ್ಕಿಸದೆ ಅನ್ನಭಾಗ್ಯ ಯೋಜನೆಯಡಿ 5 ಕೆಜಿ ಅಕ್ಕಿ ಹಾಗೂ ಅಕ್ಕಿಯ ಅಲಭ್ಯತೆಯ ಕಾರಣಕ್ಕಾಗಿ ಉಳಿದ 5 ಕೆಜಿ ಅಕ್ಕಿಗೆ ಪರ್ಯಾಯವಾಗಿ ಪ್ರತಿ ಫಲಾನುಭವಿಗೆ ತಲಾ 170 ಹಣದ ವರ್ಗಾವಣೆ ಮಾಡು ತ್ತಿದ್ದೇವೆ. 3.92 ಕೋಟಿ ಫಲಾನುಭವಿಗಳ ಖಾತೆಗೆ 2,444 ಕೋಟಿ ರೂ. ಹಣ ಜಮೆ ಮಾಡಿದ್ದೇವೆ. ಗೃಹಲಕ್ಷಿ$¾ ಯೋಜನೆಯಡಿ 99.52 ಲಕ್ಷ ನೊಂದಾಯಿತ ಮಹಿಳೆಯರ ಖಾತೆಗೆ ತಿಂಗಳಿಗೆ ತಲಾ 2,000 ರೂ. ವರ್ಗಾವಣೆ ಮಾಡುತ್ತಿದ್ದೇವೆ. ಇದಕ್ಕಾಗಿ 17,500 ಕೋಟಿ ರೂ. ಅನುದಾನ ಮೀಸಲಿರಿಸಿದ್ದು ಈ ವರೆಗೆ 11,200 ಕೋಟಿ ರೂ. ಅನುದಾನ ಸರ್ಕಾರದಿಂದ ಬಿಡುಗಡೆಯಾಗಿದೆ. ಶೀಘ್ರದಲ್ಲಿಯೇ ಯುವಕರು ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಉತ್ತಮ ಉದ್ಯೋಗವನ್ನು ಹೊಂದಲು ಸಹಕರಿಸುವ ನಿಟ್ಟಿನಲ್ಲಿ ಯುವನಿಧಿ ಯೋಜನೆಯಡಿ ಪದವೀಧರ ನಿರುದ್ಯೋಗಿಗಳಿಗೆ ಮಾಸಿಕ 3,000 ರೂ. ಹಾಗೂ ಡಿಪ್ಲೊಮಾ ಪದವೀಧರ ನಿರು ದ್ಯೋಗಿಗಳಿಗೆ ಮಾಸಿಕ 1,500 ರೂ. ನಿರುದ್ಯೋಗ ಭತ್ಯೆಯನ್ನು ನೀಡಲಿದ್ದೇವೆ. ಪ್ರಸಕ್ತ ಸಾಲಿನಲ್ಲಿ 4.5 ಲಕ್ಷ ಯುವ ಜನರಿಗೆ ಇದರಿಂದ ಅನುಕೂಲವಾಗುವ ನಿರೀಕ್ಷೆಯಿದೆ.
ಪ್ರಸಕ್ತ ಸಾಲಿನಲ್ಲಿ ನಾಡು ಭೀಕರ ಬರಕ್ಕೆ ತುತ್ತಾಗಿರುವುದರಿಂದ ಅನ್ನದಾತರ ಕಷ್ಟ ಅರಿತು ಕೃಷಿ ಭಾಗ್ಯ ಯೋಜನೆಗೆ ಮರುಚಾಲನೆ ನೀಡಲಾಗಿದೆ. ಬೆಳೆ ನಷ್ಟ ಅನುಭವಿಸಿದ ರೈತರಿಗೆ ಸಮರ್ಪಕವಾಗಿ ಬೆಳೆವಿಮೆ ತಲುಪುವಂತೆ ಕ್ರಮವಹಿಸಲಾಗಿದೆ. ಹಸಿವು, ಅಪೌಷ್ಟಿಕತೆಯನ್ನು ಹೋಗಲಾಡಿಸಲು ರಾಜ್ಯಾದ್ಯಂತ ಇಂದಿರಾ ಕ್ಯಾಂಟೀನ್ಗಳು, ಶಾಲಾ ಮಕ್ಕಳಿಗೆ ಬಿಸಿಯೂಟದ ಜೊತೆಗೆ ಹಾಲು, ಮೊಟ್ಟೆ, ಚಿಕ್ಕಿ ವಿತರಣೆ ಮಾಡಲಾಗುತ್ತಿದೆ, ಗುಣಮಟ್ಟದ ಶಿಕ್ಷಣ ಸೌಲಭ್ಯ ಕಲ್ಪಿಸಲು ಪಠ್ಯ ಪುಸ್ತಕ, ಸಮವಸ್ತ್ರ ವಿತರಣೆ, ಶಾಲೆಗಳಿಗೆ ಉಚಿತ ನೀರು ಮತ್ತು ವಿದ್ಯುತ್ ಸೌಲಭ್ಯ, ವಿದ್ಯಾರ್ಥಿನಿಯರ ಹಾಜರಾತಿ ಪ್ರಮಾಣವನ್ನು ಹೆಚ್ಚಿಸಲು ಉಚಿತ ಸ್ಯಾನಿಟರಿ ಪ್ಯಾಡ್ಗಳ ವಿತರಣೆ ಮಾಡಲಾಗುತ್ತಿದೆ, ಆಸ್ಪತ್ರೆಗಳಲ್ಲಿ ಸಾಂಕ್ರಾಮಿಕ ರೋಗಗಳು, ಹೃದಯ ಸಂಬಂಧಿ ಸಮಸ್ಯೆಗಳಿಗೆ ಸಕಾಲದಲ್ಲಿ ಗುಣಮಟ್ಟದ ಉಚಿತ ಚಿಕಿತ್ಸೆ, ಸರ್ವರಿಗೂ ಸೂರು, ಗಿಗ್ ಕಾರ್ಮಿಕರಿಗೆ ಜೀವ ವಿಮೆ ಹಾಗೂ ಅಪಘಾತ ವಿಮೆ, ಸಾರಿಗೆ ಸಿಬ್ಬಂದಿಗೆ ವಿಮೆ ಹೀಗೆ ಹಲವಾರು ಜನಪರ ಯೋಜನೆಗಳನ್ನು ರಾಜ್ಯದ ಸರ್ವಾಂಗೀಣ ಅಭಿವೃದ್ಧಿ ನಿಟ್ಟಿನಲ್ಲಿ ಅನುಷ್ಠಾನಗೊಳಿಸಿ ಮುಂದುವರಿಸಿಕೊಂಡು ಹೋಗುತ್ತಿದ್ದೇವೆ.
ಒಂದು ರಾಜ್ಯ ಆರ್ಥಿಕವಾಗಿ ಸಶಕ್ತಗೊಳ್ಳಬೇಕು ಎಂದರೆ ಜನರ ಕೈಯಲ್ಲಿ ದುಡ್ಡು ಓಡಾಡುತ್ತಿರಬೇಕು. ಬಡವನ ಕೈಗೆ ದುಡ್ಡು ಕೊಟ್ಟರೆ ದೈನಂದಿನ ಖರ್ಚಿನ ರೂಪವಾಗಿ ಹಣವನ್ನು ವ್ಯಯಿಸುತ್ತಾನೆ. ಇದರಿಂದ ಜನರ ಮಧ್ಯೆ ಹಣದ ಓಡಾಟ ಹೆಚ್ಚಾಗುತ್ತದೆ. “ಶಕ್ತಿ’ಯಿಂದ ಮಹಿಳೆಯರ ಓಡಾಟ ಹೆಚ್ಚಿದ್ದರಿಂದ, “ಗೃಹಲಕ್ಷಿ$¾’ಯು ಕೈಯಲ್ಲಿರುವುದರಿಂದ ಸಹಜವಾಗಿಯೇ ಮಾರುಕಟ್ಟೆ, ವ್ಯಾಪಾರದಲ್ಲಿ ಅವರ ತೊಡಗಿಸಿಕೊಳ್ಳುವಿಕೆ ಹೆಚ್ಚಾಗಿದೆ. ಕೋವಿಡ್ ನಂತರ ಮಂಕಾಗಿದ್ದ ಸಂತೆ-ಮಾರುಕಟ್ಟೆಗಳು ಇಂದು ಜನಜಂಗುಳಿಯಿಂದ ತುಂಬಿವೆ. ಮಹಿಳೆಯರ ಬದುಕು ಅಡುಗೆ ಮನೆಗೆ ಸೀಮಿತವಾಗದೆ ಅನ್ಯ ಊರು, ಪಟ್ಟಣಗಳನ್ನು ನೋಡುತ್ತ ಬದುಕಿನ ವಿಸ್ತಾರತೆಯನ್ನು ಕಂಡುಕೊಳ್ಳುತ್ತಿದ್ದಾರೆ.
ಉಚಿತ ವಿದ್ಯುತ್ ಸೌಕರ್ಯದಿಂದ ಪ್ರತಿ ಕುಟುಂಬಗಳು ಲವಲವಿಕೆಯ ಗೂಡುಗಳಾಗಿವೆ. ಮಕ್ಕಳು ಹೆಚ್ಚು ಹೊತ್ತು ಓದುತ್ತಿದ್ದಾರೆ. ಪೋಷಕರು ಸಣ್ಣ-ಪುಟ್ಟ ಸ್ವಯಂ ಉದ್ಯೋಗದಲ್ಲಿ ತೊಡಗಿಸಿಕೊಳ್ಳುವ ಮೂಲಕ ಆದಾಯವನ್ನು ಗಳಿಸುತ್ತಿದ್ದಾರೆ. ಟಿವಿ, ರೆಡಿಯೋ ಮೂಲಕ ಹೊರ ಪ್ರಪಂಚದಲ್ಲಿ ಏನಾಗುತ್ತಿದೆ ಎಂಬುದನ್ನು ಕಂಡುಕೊಳ್ಳುತ್ತಿದ್ದಾರೆ. ಒಂದಲ್ಲ ಒಂದು ರೀತಿಯಲ್ಲಿ ಗ್ಯಾರಂಟಿ ಯೋಜನೆಗಳ ಮುಖೇನ ತಮ್ಮ ಬದುಕನ್ನು ಉತ್ತಮವಾಗಿಸಿಕೊಳ್ಳುವುದರತ್ತ ಚಿತ್ತ ಹರಿಸಿದ್ದಾರೆ, ಅಭಿವೃದ್ಧಿಯ ಪಥದತ್ತ ಹೆಜ್ಜೆ ಹಾಕುತ್ತಿದ್ದಾರೆ. ಗಂಡು-ಹೆಣ್ಣು ಎಂಬ ಭೇದವಿಲ್ಲದೆ, ಜಾತಿ-ಧರ್ಮ ಎಂಬ ಕಟ್ಟಳೆಗಳಿಲ್ಲದೆ ಪರಸ್ಪರ ವ್ಯಾಪಾರ-ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ರಾಜ್ಯದ ಆರ್ಥಿಕತೆಯನ್ನು ಹಿಗ್ಗಿಸುತ್ತಿದ್ದಾರೆ.
ಸದ್ಬಳಕೆ ಮಾಡಿಕೊಳ್ಳುವ ಮಂದಿಗೆ ನಮ್ಮ ಯೋಜನೆಗಳು ವರವಾಗಿ ಪರಿಣಮಿಸಿವೆ. ಆದರೆ ಶ್ರಮ ವಹಿಸದೆ ಕಳ್ಳ ಮಾರ್ಗದಲ್ಲಿ ಸಂಪಾದನೆ ಮಾಡುವ, ಯೋಜನೆಗಳನ್ನು ದುರ್ಬಳಕೆ ಮಾಡುವ, ದುಂದುವೆಚ್ಚ ಮಾಡುವ, ಕೆಲವು ಸೋಮಾರಿ ಜನಗಳು ಮಾತ್ರ “ಬಿಟ್ಟಿ ಭಾಗ್ಯ’ ಎಂದು ದೂಷಿಸುತ್ತ ಕಾಲಹರಣ ಮಾಡುತ್ತಿದ್ದಾರೆ. ಇಂತಹ ಮನಸ್ಥಿತಿಯವರ ದಾರಿ ತಪ್ಪಿಸುವ ಮಾತುಗಳಿಗೆ ಕಿವಿಯಾಗದೆ ಉತ್ತಮ ಬದುಕು ಕಟ್ಟಿಕೊಳ್ಳುವ ನಿಟ್ಟಿನಲ್ಲಿ ನಮ್ಮ ಜನತೆ ಹೆಜ್ಜೆ ಇರಿಸುತ್ತಿರುವುದನ್ನು ನೋಡಿದಾಗ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದ ನಮಗೆ ಸಾರ್ಥಕ್ಯಭಾವ ಮೂಡಿದೆ.