ಹೊಸದಿಲ್ಲಿ: ಅಪರೂಪವೆಂಬಂತೆ 25 ವರ್ಷಗಳ ಕಾಲ ನನೆಗುದಿಗೆ ಬಿದ್ದಿದ್ದ ಮಸೂದೆಯೊಂದು ಆಡಳಿತ ಮತ್ತು ಪ್ರತಿಪಕ್ಷಗಳ ಒಮ್ಮತದಿಂದ ಅನುಮೋದನೆ ಪಡೆದು ಕಾಯ್ದೆಯಾಗಿ ರೂಪುಗೊಂಡಿದೆ. ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಸಾಂವಿಧಾನಿಕ ಮಾನ್ಯತೆ ನೀಡುವ ಸಲುವಾಗಿ ಸಂವಿಧಾನದ 123ನೇ ತಿದ್ದುಪಡಿಗೆ ಲೋಕಸಭೆಯಲ್ಲಿ ಹಾಜರಿದ್ದ ಎಲ್ಲ ಸದಸ್ಯರೂ ಮತ ಹಾಕಿದ್ದು, ಇದು ಮೂರನೇ ಎರಡರಷ್ಟು ಬಹುಮತದೊಂದಿಗೆ ಅನುಮೋದನೆ ಪಡೆದಿದೆ.
ಇನ್ನು ಮುಂದೆ ಈ ಆಯೋಗಕ್ಕೆ ಸಿವಿಲ್ ಕೋರ್ಟ್ ದರ್ಜೆಯ ಸ್ಥಾನಮಾನ ಸಿಗಲಿದ್ದು, ಮೀಸಲಾತಿಗೆ ಸಂಬಂಧಿಸಿ ಯಾವುದೇ ಸಮಸ್ಯೆಗಳನ್ನು ಈ ಆಯೋಗವೇ ತೀರ್ಮಾನಿಸಬಹುದಾಗಿದೆ. ಸಚಿವ ತಾವರ್ ಚಂದ್ ಗೆಹೊಟ್, ಗುರು ವಾರ ಮಸೂದೆ ಮಂಡಿಸಿ, ರಾಜ್ಯಸಭೆಯಲ್ಲಿ ಆಗಿರುವ ತಿದ್ದುಪಡಿಗಳನ್ನು ತಿರಸ್ಕರಿಸುವಂತೆ ಮನವಿ ಮಾಡಿದರು. 5 ಗಂಟೆ ಕಾಲ 32 ಸದಸ್ಯರು ಮಾತನಾಡಿದರು. ಆಡಳಿತ ಪಕ್ಷದ ಜತೆಗೆ ಕಾಂಗ್ರೆಸ್, ಟಿಆರ್ಎಸ್, ಟಿಡಿಪಿ, ಬಿಜೆಡಿ, ಜೆಡಿಎಸ್ ಸೇರಿದಂತೆ ಎಲ್ಲ ಪಕ್ಷಗಳು ಮಸೂದೆಗೆ ಬೆಂಬಲ ನೀಡಿದವು.
ಚರ್ಚೆಯಲ್ಲಿ ಪಾಲ್ಗೊಂಡ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು, ಯಾವುದೇ ರಾಜ್ಯಗಳು ಶೇ.50ಕ್ಕಿಂತ ಹೆಚ್ಚು ಮೀಸಲಾತಿ ನೀಡಬಾರದು ಎಂದರು. ಇದಕ್ಕೆ ಕರ್ನಾಟಕವನ್ನೇ ಉದಾಹರಣೆಯಾಗಿ ನೀಡಿದ ಅವರು, ಮುಸ್ಲಿಂ ಮತ್ತು ಅಲೆ ಮಾರಿ ಪಂಗಡಗಳಿಗೂ ಶೇ.50ರ ಒಳಗೇ ಮೀಸಲಾತಿ ನೀಡಲಾಗಿದೆ ಎಂದರು.
ವಿ.ಪಿ. ಸಿಂಗ್ ಅವರ ಕಾಲದಲ್ಲಿ ಆಗಿದ್ದ ಮಂಡಲ್ ಆಯೋಗದ ಮುಂದುವರಿದ ರೂಪವೇ ಈ ರಾಷ್ಟ್ರೀಯ ಹಿಂದುಳಿದ ವರ್ಗ ಗಳ ಆಯೋಗ. ಈ ಹಿಂದೆ ಇದಕ್ಕೆ ಯಾವುದೇ ಸಾಂವಿಧಾನಿಕ ಮಾನ್ಯತೆ ಇರಲಿಲ್ಲ. ಹೀಗಾಗಿ ಇದರ ನಿರ್ಧಾರಗಳನ್ನು ಪ್ರಶ್ನಿಸಿ ಕೋರ್ಟ್ ಮೊರೆ ಹೋಗಲಾಗುತ್ತಿತ್ತು. ಇದೀಗ ಇದಕ್ಕೇ ಸಾಂವಿಧಾನಿಕ ಮಾನ್ಯತೆ ನೀಡಿರುವುದರಿಂದ ಹೆಚ್ಚಿನ ಅಧಿಕಾರ ಸಿಗಲಿದೆ.
ಮನೆಗಳಿಗೆ ಲೋಗೋ: ಪ್ರಧಾನಮಂತ್ರಿ ಆವಾಸ್ ಯೋಜನೆ (ಪಿಎಂ ಎವೈ)ಯ ನೆರವಿ ನಿಂದ ನಿರ್ಮಿಸಲಾಗುವ ಎಲ್ಲ ಮನೆಗಳಲ್ಲೂ ಪಿಎಂಎವೈ ಲೋಗೋ ಅಳವಡಿಸಬೇಕು ಎಂದು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸಲಹೆ ನೀಡಿದೆ.
ಕರ್ನಾಟಕ ರೈಲ್ವೆ ಲೈನ್
ಕರ್ನಾಟಕಕ್ಕೆ 16 ಸೇರಿದಂತೆ ದೇಶಾದ್ಯಂತ 200 ರೈಲ್ವೆ ಲೈನ್ ಕಾಮಗಾರಿಗಳು ವಿವಿಧ ಹಂತದಲ್ಲಿವೆ ಎಂದು ಸಚಿವ ಪಿಯೂಷ್ ಗೋಯಲ್ ಲೋಕ ಸಭೆಗೆ ಮಾಹಿತಿ ನೀಡಿದ್ದಾರೆ.