Advertisement

ರಾಜ್ಯದಲ್ಲಿ ಹಿಂಗಾರು ಮಳೆಯ ಅಬ್ಬರ

10:47 PM Oct 20, 2019 | Lakshmi GovindaRaju |

ಬೆಂಗಳೂರು: ಹಿಂಗಾರು ಮಾರುತಗಳ ಭರ್ಜರಿ ಪ್ರವೇಶ ದಿಂದ ಕಳೆದೆರಡು ದಿನಗಳಿಂದ ರಾಜ್ಯಾದ್ಯಂತ ಮಳೆ ಅಬ್ಬರಿ ಸುತ್ತಿದೆ. ಇನ್ನೂ ಮೂರ್‍ನಾಲ್ಕು ದಿನಗಳು ಇದೇ ವಾತಾವರಣ ಮುಂದುವರಿಯುವ ಸಾಧ್ಯತೆ ಇದೆ.

Advertisement

ಆಂಧ್ರಪ್ರದೇಶ ಮತ್ತು ತಮಿಳುನಾಡು ಕರಾವಳಿಯಲ್ಲಿ ವಾಯುಭಾರ ಕುಸಿತ, ಮಹಾರಾಷ್ಟ್ರದ ವಿದರ್ಭ ಮತ್ತು ಕರ್ನಾಟಕದ ಉತ್ತರ ಒಳನಾಡು ಮಧ್ಯೆ ಕಡಿಮೆ ಒತ್ತಡದ ತಗ್ಗು (ಟ್ರಫ್)ಗಳು ಉಂಟಾಗಿರುವುದು ಹಾಗೂ ಈಶಾನ್ಯ ಮಾರುತಗಳ ಪ್ರವೇಶದಿಂದ ರಾಜ್ಯದಲ್ಲಿ ಮಳೆಯಾಗುತ್ತಿದೆ. ಮುಂದಿನ ಮೂರು ದಿನಗಳು ಮಳೆ ಅಬ್ಬರ ಮತ್ತಷ್ಟು ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆಯ ಬೆಂಗಳೂರು ಪ್ರಾದೇಶಿಕ ಕಚೇರಿ ತಿಳಿಸಿದೆ.

ರಾಜ್ಯದ ಕರಾವಳಿ, ಉತ್ತರ ಮತ್ತು ದಕ್ಷಿಣ ಒಳನಾಡಿನಲ್ಲಿ 21ರಿಂದ 23ರವರೆಗೆ ಬಹುತೇಕ ಎಲ್ಲ ಜಿಲ್ಲೆಗಳ ಆಯ್ದ ಪ್ರದೇಶಗಳಲ್ಲಿ ಗುಡುಗು ಸಹಿತ ಭಾರಿ ಮಳೆ ಆಗಲಿದೆ. ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡದಲ್ಲಿ ಹಾಗೂ ಬೆಳಗಾವಿಯಲ್ಲಿ 24 ಮತ್ತು 25ರಂದು ಅತಿ ಭಾರೀ ಮಳೆಯ ನಿರೀಕ್ಷೆ ಇದೆ. ಈ ಜಿಲ್ಲೆಗಳಲ್ಲಿ ಕಿತ್ತಳೆ ಬಣ್ಣದ ಮುನ್ನೆಚ್ಚರಿಕೆ ನೀಡಲಾಗಿದೆ. ಒಂದೇ ದಿನದಲ್ಲಿ 115.6ರಿಂದ 204.4 ಮಿ.ಮೀ.ಮಳೆಯಾಗುವ ಸಂಭವ ಇರುವ ಪ್ರದೇಶದಲ್ಲಿ ಈ ಎಚ್ಚರಿಕೆ ನೀಡಲಾಗುತ್ತದೆ.

ಉ.ಕ.ಭಾಗದಲ್ಲಿ ಭಾರೀ ಮಳೆ: ಮಹಾರಾಷ್ಟ್ರದ ಕೊಂಕಣ ಭಾಗ ಮತ್ತು ಗಡಿ ಭಾಗದಲ್ಲಿ ಮತ್ತೆ ಮಳೆ ಅಬ್ಬರ ಶುರು ವಾಗಿದ್ದು, ದೂಧಗಂಗಾ ನದಿ ನೀರಿನ ಮಟ್ಟದಲ್ಲಿ ಭಾರೀ ಪ್ರಮಾಣದಲ್ಲಿ ಏರಿಕೆ ಕಂಡು ಬಂದಿದೆ. ಇದರಿಂದಾಗಿ ಕಾರದಗಾ-ಭೋಜ ಸೇತುವೆ ಜಲಾವೃತಗೊಂಡಿದೆ.

ಚಿಕ್ಕೋಡಿ ತಾಲೂಕಿನ ಬೇಡಕಿಹಾಳ ಗ್ರಾಮದಲ್ಲಿ ನೀರು ಆಸ್ಪತ್ರೆಗೆ ನುಗ್ಗಿದ್ದು, ಪೊಲೀಸ್‌ ಮತ್ತು ಅಗ್ನಿಶಾಮಕದಳದ ಸಿಬ್ಬಂದಿಗಳು ರೋಗಿಗಳನ್ನು ರಕ್ಷಣೆ ಮಾಡಿ ಚಿಕ್ಕೋಡಿ ಆಸ್ಪತ್ರೆಗೆ ದಾಖಲಿಸಿದರು. ಆಸ್ಪತ್ರೆಗೆ ಭೇಟಿ ನೀಡಿದ ಸಚಿವೆ ಶಶಿಕಲಾ ಜೊಲ್ಲೆ, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಇದೇ ವೇಳೆ, ಎಂ.ಕೆ.ಹುಬ್ಬಳ್ಳಿಯ ಗದ್ದಿಕೆರೆಯ ದಡದ ಮೇಲಿನ ಸಂಪಗಾವ-ಪಟ್ಟಿಹಾಳ-ಎಂ.ಕೆ.ಹುಬ್ಬಳ್ಳಿ ರಸ್ತೆ ಬಿರುಕು ಬಿಟ್ಟಿದ್ದರಿಂದ ರೈತರಲ್ಲಿ ಮತ್ತು ಕೆರೆ ಕೆಳಭಾಗದ ನಿವಾಸಿಗಳಲ್ಲಿ ಆತಂಕ ಎದುರಾಗಿದೆ.

Advertisement

ನಿಪ್ಪಾಣಿ ತಾಲೂಕಿನ ಆಡಿ ಗ್ರಾಮದಲ್ಲಿ ಮಳೆ ನೀರಿನ ರಭಸಕ್ಕೆ 3 ಕಾರು ಹಾಗೂ 8 ಬೈಕ್‌ಗಳು ಕೊಚ್ಚಿ ಹೋಗಿವೆ. 25ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಕೊಚ್ಚಿ ಹೋದ ಬೈಕ್‌ಗಳನ್ನು ಹುಡುಕಲು ಜನರು ಪರದಾಡಿದರು. ಕಾರುಗಳು ಚರಂಡಿಯಲ್ಲಿ ಪಲ್ಟಿ ಹೊಡೆದಿವೆ. ಗ್ರಾಮದ ಹನು ಮಾನ ದೇವಸ್ಥಾನಕ್ಕೂ ಮಳೆ ನೀರು ನುಗ್ಗಿ, ಅವಾಂತರ ಸೃಷ್ಟಿಸಿದೆ.

ಮಲಪ್ರಭಾ ನದಿಯ ನವಿಲುತೀರ್ಥ ಜಲಾ ಶಯದಿಂದ ಸಂಜೆಯ ವೇಳೆಗೆ 12 ಸಾವಿರ ಕ್ಯೂಸೆಕ್‌ ನೀರು ಬಿಟ್ಟಿದ್ದರಿಂದ ಮುನವಳ್ಳಿಯ ಹಳೆಯ ಸೇತುವೆ ಜಲಾ ವೃತವಾಗಿದೆ. ಸವದತ್ತಿ ತಾಲೂಕಿನ ಇನಾಮ ಹೊಂಗಲದ ರಸ್ತೆಗೆ ನಿರ್ಮಿ ಸಿದ ಪರ್ಯಾಯ ರಸ್ತೆಯ ಮೇಲೆ ನೀರು ಹರಿಯುತ್ತಿದ್ದು, ಸುತ್ತಮುತ್ತಲ ಗ್ರಾಮಗಳ ನಡುವಿನ ಸಂಪರ್ಕ ಕಡಿತ ಗೊಂಡಿದೆ. ಪರ್ಯಾಯ ರಸ್ತೆ ಕುಸಿದು ಉಸುಕಿನ ಸಮೇತ ಲಾರಿ ನೀರು ಪಾಲಾಗಿದ್ದು, ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ವಿಜಯಪುರ ಜಿಲ್ಲೆಯಲ್ಲಿ ಡೋಣಿ ನದಿ ಉಕ್ಕಿ ಹರಿಯುತ್ತಿದ್ದು, ತಾಳಿಕೋಟೆ ತಾಲೂಕಿನ ಕಲ್ಲ ದೇವನಹಳ್ಳಿ ಬಳಿ ಸೇತುವೆ ಮೇಲೆ ಬೈಕ್‌ನಲ್ಲಿ ತೆರಳುತ್ತಿದ್ದಾಗ ಕೊಚ್ಚಿ ಹೋಗುತ್ತಿದ್ದ ಇಬ್ಬರು ಯುವಕರು ಈಜಿ ದಡ ಸೇರಿದ್ದಾರೆ. ಎರಡು ದಿನಗಳಿಂದ ಮಡಿ ಕೇರಿ, ಭಾಗಮಂಡಲ ಮತ್ತು ವಿರಾಜಪೇಟೆಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ಅ.23 ರವರೆಗೆ ಕೊಡಗಿನಲ್ಲಿ ಆರೆಂಜ್‌ ಅಲರ್ಟ್‌ ಮತ್ತು ಅ.23ರಿಂದ 24 ರವರೆಗೆ ಎಲ್ಲೋ ಅಲರ್ಟ್‌ ಘೋಷಿಸಲಾಗಿದೆ.

ತಾಯಿ, ಮಗನ ರಕ್ಷಿಸಿದ ಗ್ರಾಮಸ್ಥರು: ಶಿವಮೊಗ್ಗ ಜಿಲ್ಲೆಯಾದ್ಯಂತ ಮಳೆಯಾಗುತ್ತಿದೆ. ಆನಂದಪುರ ಸಮೀಪದ ಹೊಸೂರು ಗ್ರಾ.ಪಂ.ವ್ಯಾಪ್ತಿಯ ಹಂದಿಗನೂರಿನಲ್ಲಿ ನಾಗರತ್ನ ಹಾಗೂ ಮಗ ಮನೋಜ್‌ ಹೊಳೆಯನ್ನು ದಾಟುವಾಗ ನೀರಿಗೆ ಸಿಲುಕಿದ್ದು, ಗ್ರಾಮಸ್ಥರು ಇವರನ್ನು ರಕ್ಷಣೆ ಮಾಡಿದ್ದಾರೆ. ತಮ್ಮ ಮನೆಯ ಎತ್ತುಗಳನ್ನು ಮೇಯಿಸಲು ಹೋಗಿದ್ದು, ಮಧ್ಯಾಹ್ನ ಎತ್ತುಗಳೊಂದಿಗೆ ಹೊಳೆ ದಾಟಿಸುತ್ತಿದ್ದಂತೆ ಅಪಾರ ನೀರು ಬಂದಿದ್ದು, ದಾಟಲಾಗದೆ ಹೊಳೆಯ ಪಕ್ಕದಲ್ಲಿರುವ ಮರದಲ್ಲಿ ಆಶ್ರಯ ಪಡೆದು, ರಕ್ಷಣೆಗಾಗಿ ಕೂಗಿಕೊಂಡರು. ಸ್ಥಳೀಯ ಗ್ರಾಮಸ್ಥರು ಆಗಮಿಸಿ, ಅವರನ್ನು ರಕ್ಷಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next