Advertisement

ಕೇರಳಕ್ಕೆ ಮುಂಗಾರು ಪ್ರವೇಶ

01:43 AM Jun 09, 2019 | Sriram |

ನವದೆಹಲಿ: ಮುಂಗಾರು ಮಾರುತಗಳು ಅಂತೂ ಶನಿವಾರ ಕೇರಳದ ಕರಾವಳಿಗೆ ಅಪ್ಪಳಿಸಿವೆ. ಒಂದು ವಾರ ವಿಳಂಬವಾಗಿ ಮಾನ್ಸೂನ್‌ ಆಗಮಿಸಿದೆ ಎಂದು ಹವಾಮಾನ ಇಲಾಖೆ ಪ್ರಧಾನ ನಿರ್ದೇಶಕ ಮೃತ್ಯುಂಜಯ ಮಹಾಪಾತ್ರ ಖಚಿತಪಡಿಸಿದ್ದಾರೆ.

Advertisement

ಜೂನ್‌ 10ರ ವೇಳೆಗೆ ಕರ್ನಾಟಕಕ್ಕೂ ಮುಂಗಾರು ಕರಾವಳಿ ಮೂಲಕ ಪ್ರವೇಶಿಸುವ ಸಾಧ್ಯತೆ ಇದೆ. ಕೇರಳಕ್ಕೆ ಮುಂಗಾರು ಪ್ರವೇಶಿಸಿದ್ದರು ಮಾನ್ಸೂನ್‌ ಮಾರುತ ಪ್ರಬಲವಾಗಿಲ್ಲ. ಹೀಗಾಗಿ ಎರಡು ದಿನ ತಡವಾಗುವ ಸಂಭವ ಇದೆ. ಈವರೆಗಿನ ಕೊರತೆಯನ್ನು ಇದು ನೀಗಿಸಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ದೇಶಾದ್ಯಂತ ಜನರು ಕುಡಿಯುವ ನೀರಿಗೂ ತತ್ವಾರ ಅನುಭವಿಸುತ್ತಿರುವ ಹಾಗೂ ಕೃಷಿ ವಲಯ ಸಂಕಷ್ಟದಲ್ಲಿರುವ ಮಧ್ಯೆಯೇ ಮಾನ್ಸೂನ್‌ ಮಾರುತಗಳು ಆಗಮಿಸಿರುವುದು ಜನರಲ್ಲಿ ಸಂತಸವನ್ನು ಮೂಡಿಸಿದೆ. ದೇಶದ ದಕ್ಷಿಣ ಮತ್ತು ಪಶ್ಚಿಮ ರಾಜ್ಯಗಳಲ್ಲಿ ನದಿ ಹಾಗೂ ಆಣೆಕಟ್ಟೆಗಳಲ್ಲಿ ನೀರಿನ ಪ್ರಮಾಣ ಭಾರಿ ಕುಸಿತ ಕಂಡಿತ್ತು.

ಇತರೆಡೆಯೂ ವಿಳಂಬ: 2016 ರಲ್ಲೂ ಜೂನ್‌ 8 ರಂದೇ ಕೇರಳಕ್ಕೆ ಮಾನ್ಸೂನ್‌ ಅಪ್ಪಳಿಸಿತ್ತು. ಈ ಬಾರಿ ಒಂದು ವಾರ ತಡವಾಗಿರುವುದರಿಂದ ದೇಶದ ಇತರ ಭಾಗಗಳಿಗೂ ಮಾನ್ಸೂನ್‌ ವಿಳಂಬವಾಗಲಿದೆ. ಮುಂಬೈನಲ್ಲಿ ಜೂನ್‌ 14ರ ವೇಳೆಗೆ ಮಳೆಯಾಗಲಿದ್ದು, ದೆಹಲಿಗೆ ಜುಲೈ 1-2 ಕ್ಕೆ ಮಾನ್ಸೂನ್‌ ಪ್ರವೇಶಿಸಲಿದೆ. ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಉಷ್ಣ ಮಾರುತಗಳ ಪ್ರಭಾವ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮಧ್ಯ ಪ್ರದೇಶ, ರಾಜಸ್ಥಾನ ಮತ್ತು ಮಹಾರಾಷ್ಟ್ರದ ವಿದರ್ಭ ಪ್ರಾಂತ್ಯದಲ್ಲಿ ಇನ್ನೂ ಕೆಲವು ದಿನಗಳವರೆಗೆ ಉಷ್ಣ ಮಾರುತಗಳು ಬೀಸಲಿವೆ.

ದೇವರ ನಾಡಲ್ಲಿ ಅಲರ್ಟ್‌
ಕೇರಳದ ಬಹುತೇಕ ಭಾಗಗಳಲ್ಲಿ ಈಗಾಗಲೇ ಭಾರಿ ಮಳೆಯಾಗುತ್ತಿದೆ. ಇಲ್ಲಿನ 4 ಜಿಲ್ಲೆಗಳಲ್ಲಿ ಜೂನ್‌ 10ರ ವರೆಗೂ ಭಾರೀ ಮಳೆಯಾಗಲಿರುವ ಹಿನ್ನೆಲೆಯಲ್ಲಿ ರೆಡ್‌ ಅಲರ್ಟ್‌ ಘೋಷಿಸಲಾಗಿದೆ. ಕೇರಳ, ಲಕ್ಷದ್ವೀಪ ಮತ್ತು ಅಂಡಮಾನ್‌-ನಿಕೋಬಾರ್‌ ದ್ವೀಪಗಳಲ್ಲಿ ಧಾರಾಕಾರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಕೇರಳದ ಕೊಲ್ಲಂ ಮತ್ತು ಅಳಪ್ಪುಳ ಜಿಲ್ಲೆಗಳಲ್ಲಿ ಜೂ.9ಕ್ಕೆ ಆರೆಂಜ್‌ ಅಲರ್ಟ್‌ ಘೋಷಿಸಲಾಗಿದೆ. ಅಂದರೆ ಈ ಭಾಗದಲ್ಲಿ ವಿಪರೀತ ಮಳೆಯಾಗಲಿದ್ದು, ಮುನ್ನೆಚ್ಚರಿಕೆ ವಹಿಸುವ ಅಗತ್ಯವಿರುತ್ತದೆ. ಅದೇ ರೀತಿ, ತಿರುವನಂತಪುರಂ, ಕೊಲ್ಲಂ, ಅಳಪ್ಪುಳ ಮತ್ತು ಎರ್ನಾಕುಲಂ ಜಿಲ್ಲೆಗಳಲ್ಲಿ ಜೂ.10ಕ್ಕೆ ಆರೆಂಜ್‌ ಅಲರ್ಟ್‌ ಘೋಷಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next