Advertisement

ಪ. ಪಂ.ನಿಂದ 7 ಲಕ್ಷ ರೂ. ಮೀಸಲು

09:38 PM May 16, 2019 | Team Udayavani |

ಬೆಳ್ತಂಗಡಿ: ಮಳೆಗಾಲ ಎದುರಿಸಲು ತಾಲೂಕು ಆಡಳಿತದಿಂದ ಸಕಲ ಸಿದ್ಧತೆ ನಡೆಸಲಾಗುತ್ತಿದ್ದು, ಈಗಾಗಲೇ ತಹಶೀಲ್ದಾರ್‌ ಸಮ್ಮುಖದಲ್ಲಿ ಎಲ್ಲ ಅಧಿಕಾರಿ ವರ್ಗದೊಂದಿಗೆ ಒಂದು ಸುತ್ತಿನ ಪೂರ್ವಭಾವಿ ಸಭೆ ನಡೆಸಲಾಗಿದೆ.

Advertisement

ಮಾನ್ಸೂನ್‌ ಮುನ್ನೆಚ್ಚರಿಕೆಯಾಗಿ ನಗರ ಹಾಗೂ ತಾಲೂಕು ವ್ಯಾಪ್ತಿಯಲ್ಲಿ ಅಪಾಯ ಕಾರಿ ಪ್ರದೇಶವನ್ನು ಗುರುತಿಸುವ ಕೆಲಸ ನಡೆಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅಪಾಯಕಾರಿ ಪ್ರದೇಶದಲ್ಲಿರುವವರ ಮಾಹಿತಿ ಕಲೆಹಾಕುವ ವ್ಯವಸ್ಥೆ ಮಾಡಲಾಗಿದ್ದು, ಸರಕಾರಿ ಮೇಲಧಿಕಾರಿ ಯಿಂದ ಹಿಡಿದು ಡಿ ದರ್ಜೆ ನೌಕರರ ವರೆಗೆ ಇಲಾಖೆಯಲ್ಲಿ ಮಾಹಿತಿ ಸಂಗ್ರಹಿಸಿಡಲಾಗಿದೆ. ಯಾವುದೇ ಅಧಿಕಾರಿ ಹೆಡ್‌ಕ್ವಾಟ್ರಸ್‌ ಬಿಡದಂತೆ ಸೂಚಿಸಲಾಗಿದ್ದು, ಜೂನ್‌ ಮೊದಲ ವಾರದೊಳಗೆ ತಂಡ ರಚಿಸಲಾಗುತ್ತದೆ ಎಂದು ತಹಶೀಲ್ದಾರ್‌ ತಿಳಿಸಿದ್ದಾರೆ.

ಚಾರ್ಮಾಡಿಯಲ್ಲಿ ಕ್ರೇನ್‌ ನಿಯೋಜನೆ
ಚಾರ್ಮಾಡಿ ಪ್ರದೇಶದಲ್ಲಿ ಸಣ್ಣ ರಸ್ತೆಯಾಗಿರುವುದರಿಂದ 3 ಕ್ರೇನ್‌ ನಿಯೋಜಿಸಲಾಗುತ್ತದೆ. ಅಪಘಾತ ಸಂದರ್ಭ ಅರ್ಧ ಗಂಟೆಯೊಳಗೆ ತಲುಪುವಂತೆ ಕ್ರಮ ಕೈಗೊಳ್ಳುವ ಚಿಂತನೆ ನಡೆಸಲಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ಸ್ಥಳೀಯವಾಗಿ ಹಿಟಾಚಿ, ಕ್ರೇನ್‌ ಮಾಲಕರ ಕುರಿತು ಮಾಹಿತಿ ಪಡೆಯಲಾಗಿದೆ.

6 ಟ್ರೀ ಕಟ್ಟಿಂಗ್‌ಗೆ ಯಂತ್ರ
ಮಳೆಗಾಲಕ್ಕೂ ಮುನ್ನ ರಸ್ತೆ ಅಂಚಿ ನಲ್ಲಿರುವ ಅಪಾಯಕಾರಿ ಮರ ತೆರವು ಹಾಗೂ ಕಟಾವಿಗೆ ಅರಣ್ಯ ಇಲಾಖೆ ಹಾಗೂ ಮೆಸ್ಕಾಂ ಇಲಾಖೆ ಸ್ಪಂದಿಸಿದೆ. ತಾಲೂಕು ಆಡಳಿತದಲ್ಲಿ 2 ಯಂತ್ರಗಳಿದ್ದು, ಅರಣ್ಯ ಅಧಿಕಾರಿಗಳ ತಂಡದಲ್ಲಿ 2, ಅಗ್ನಿಶಾಮಕ ಇಲಾಖೆಯಲ್ಲಿ 2 ಮರ ಕಟಾವು ಯಂತ್ರ ಇರಿಸಲಾಗಿದೆ. 1 ಬೋಟ್‌ ಇದ್ದು, ಸುಸ್ಥಿತಿಯಲ್ಲಿ ಇಡಲು ಸೂಚಿಸಲಾಗಿದೆ.

ಈಜುಗಾರರ ತಂಡ ರಚನೆ
ತಾಲೂಕು ವ್ಯಾಪ್ತಿಯಲ್ಲಿರುವ ಈಜು ಗಾರರ ತಂಡವನ್ನು ರಚಿಸಲಾಗುವು ದರೊಂದಿಗೆ ಹೊರ ವಲಯಗಳಲ್ಲಿರುವ ಪರಿಣತರ ಮಾಹಿತಿ ಪಡೆಯಲಾಗಿದೆ. ತುರ್ತು ವಿಕೋಪ ಸಂದರ್ಭ ಮಂಗ ಳೂರು ಪ್ರಕೃತಿ ವಿಕೋಪ ತಂಡ (ಎನ್‌ಡಿಆರ್‌ಎಫ್‌) ದಿಂದಲೂ ಸಹಾಯ ಪಡೆಯ ಲಾಗುತ್ತದೆ. ಜಿಲ್ಲಾಧಿಕಾರಿ ಅನುಮತಿ ಪಡೆದು ಸಹಾಯ ಕೋರಲಾಗುತ್ತದೆ. ವೇಣೂರು ಫಲ್ಗುಣಿ ನದಿ ಸಮೀಪವೂ ಬೋಟ್‌ ನಿಯೋಜಿಸಲಾಗುತ್ತಿದೆ. ಸರ ಕಾರಿ ವಾಹನದಲ್ಲಿ ಹಗ್ಗ ಮತ್ತು ಕತ್ತಿ ಇಟ್ಟು ಕೊಳ್ಳಲು ಸೂಚಿಸಲಾಗಿದೆ.

Advertisement

ವಯರ್‌ಲೆಸ್‌ ಕನೆಕ್ಟಿವಿಟಿ
ನೆಟ್‌ವರ್ಕ್‌ ಇಲ್ಲದ ಪ್ರದೇಶಗಳಲ್ಲಿ ಸಿಬಂದಿಗೆ ವಯರ್‌ಲೆಸ್‌ ಕನೆಕ್ಟಿವಿಟಿಗೆ ಕ್ರಮ ಕೈಗೊಳ್ಳಲಾಗಿದೆ. ಜೀಪ್‌ನಲ್ಲಿ ಹಾಗೂ ಕಂಟ್ರೋಲ್‌ ರೂಮ್‌ನಲ್ಲಿ ವ್ಯವಸ್ಥೆ ಮಾಡಲಾದ್ದು, ಚಾರ್ಮಾಡಿ ಪ್ರದೇಶದಲ್ಲಿ ಹೆಚ್ಚುವರಿಯಾಗಿ ಪೊಲೀಸ್‌ ರಿಪೀಟರ್‌ ಅಳವಡಿಸಲು ಮನವಿ ಮಾಡಲಾಗಿದೆ. ಇನ್ನುಳಿದಂತೆ ತಾಲೂಕು ವ್ಯಾಪ್ತಿಯಲ್ಲಿ ಟವರ್‌ ನಿರ್ವಹಣೆ ಮಾಡುವವರ ವಿಳಾಸ ಹಾಗೂ ಯಾವ ಕಂಪೆನಿ ಟವರ್‌ ಎಂಬ ಮಾಹಿತಿ ತಾ.ಪಂ.ಗೆ ನೀಡುವಂತೆ ಸೂಚಿಸಲಾಗಿದೆ.

ವೈದ್ಯಕೀಯ ನಿರ್ವಹಣೆ
ಆರೋಗ್ಯ ಇಲಾಖೆ ಹಾಗೂ ಪಶು ವೈದ್ಯಕೀಯ ಅಧಿಕಾರಿಗಳಿಗೆ ಔಷಧ ಸಂಗ್ರಹ ಹಾಗೂ ಅವಶ್ಯ ಔಷಧಗಳ ಸರಬರಾಜು ಮಾಡಿಡುವಂತೆ ಈಗಾಗಲೇ ಸೂಚಿಸಲಾಗಿದೆ. ಸಿಬಂದಿ ಕಾರ್ಯಪ್ರವೃತ್ತರಾಗಿರಲು ಆದೇಶ ಹೊರಡಿಸಲಾಗಿದೆ.

ಚರಂಡಿ ಹೂಳೆತ್ತಲು ಟೆಂಡರ್‌
ನಗರ ಪ್ರದೇಶದಲ್ಲಿ ಚರಂಡಿ ಹೂಳೆತ್ತುವ ಕೆಲಸಕ್ಕೆ ಪ. ಪಂ.ನಿಂದ ಟೆಂಡರ್‌ ಕರೆಯಲಾಗಿದೆ. ಮೇ 28ರಿಂದ ಕಾಮಗಾರಿ ಆರಂಭಗೊಳ್ಳಲಿದೆ. ಪಟ್ಟಣದ ವ್ಯಾಪ್ತಿಯ 11 ವಾರ್ಡ್‌ನ ಚರಂಡಿ ಹೂಳೆತ್ತಲು 4.90 ಲಕ್ಷ ರೂ. ಹಾಗೂ ರಾಷ್ಟ್ರೀಯ ಹೆದ್ದಾರಿ ಚರಂಡಿ ದುರಸ್ತಿಗೆ 2.40 ಲಕ್ಷ ರೂ. ಮೀಸಲಿಡಲಾಗಿದೆ. ಈಗಾಗಲೇ ಪೌರ ಕಾರ್ಮಿಕರ ಮೂಲಕ ಚರಂಡಿ ಹಾಗೂ ರಸ್ತೆ ಬದಿಯ ಪ್ಲಾಸ್ಟಿಕ್‌ ತ್ಯಾಜ್ಯ ವಿಲೇವಾರಿಗೆ ಸೂಚಿಸಲಾಗಿದೆ ಎಂದು ಬೆಳ್ತಂಗಡಿ ಪ.ಪಂ. ಎಂಜಿನಿಯರ್‌ ಮಹಾವೀರ ಆರಿಗ ಹಾಗೂ ಪಟ್ಟಣ ಪಂಚಾಯತ್‌ ಮುಖ್ಯಾಧಿಕಾರಿ ಅರುಣ್‌ ಬಿ. ತಿಳಿಸಿದ್ದಾರೆ.

ಮಕ್ಕಳ ಮೇಲೆ ನಿಗಾ
ನೆರೆ ಪ್ರದೇಶ ಹಾಗೂ ಮಳೆ ಅತೀವವಾಗಿ ಸುರಿದರೆ ಆ ಪ್ರದೇಶದ ಶಾಲೆಗೆ ರಜೆ ನೀಡುವ ಅವಕಾಶ ತಾಲೂಕು ಆಡಳಿತಕ್ಕೆ ನೀಡಲಾಗಿದೆ. ಈ ನಿಟ್ಟಿನಲ್ಲಿ ಶಾಲಾ ಎಸ್‌ಡಿಎಂಸಿ ಜತೆ ಸಂಪರ್ಕದಲ್ಲಿರುವಂತೆ ಮುಖ್ಯ ಶಿಕ್ಷಕರಿಗೆ ಸೂಚಿಸಲಾಗುತ್ತದೆ. ಅಂಗನವಾಡಿ ಕೇಂದ್ರಗಳ ಕುರಿತಾಗಿಯೂ ನಿಗಾ ವಹಿಸುವಂತೆ ಸಿಡಿಪಿಒಗೆ ಸೂಚಿಸಲಾಗಿದೆ. ಶಿಥಿಲಾವಸ್ಥೆಯಲ್ಲಿರುವ ಅಂಗನವಾಡಿ ಮಕ್ಕಳನ್ನು ಸ್ಥಳೀಯ ಸರಕಾರಿ ಕಟ್ಟಡಗಳಿಗೆ ವರ್ಗಾಯಿಸಲು ಕ್ರಮ ಕೈಗೊಳ್ಳಲಾಗಿದೆ.

ವಾರದೊಳಗೆ ತಂಡ ರಚನೆ
ವಾರದೊಳಗೆ ಮಳೆಗಾಲ ಮುನ್ನೆಚ್ಚರಿಕೆಯಾಗಿ ತಂಡ ರಚಿಸಲಾಗುತ್ತಿದ್ದು, ಈ ಹಿಂದೆ ನೆರೆ ಉಂಟಾಗಿರುವ ಪ್ರದೇಶಗಳಲ್ಲಿ ಗಂಜಿ ಕೇಂದ್ರ ತೆರೆಯಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ. ಇಲಾಖೆ ಅಧಿಕಾರಿಗಳೊಂದಿಗೆ ಸಭೆ ಕರೆಯಲಾಗಿದ್ದು, ಮಳೆಗಾಲ ಆರಂಭಕ್ಕೆ ತಾಲೂಕು ಆಡಳಿತದಿಂದ ಅಗತ್ಯ ಕ್ರಮ ಕೈಗೊಳ್ಳಲಾಗಿದೆ.
– ಗಣಪತಿ ಶಾಸ್ತ್ರಿ ತಹಶೀಲ್ದಾರ್‌

24×7 ಸಹಾಯವಾಣಿ
ತುರ್ತು ಸಂದರ್ಭ ತಾ.ಪಂ.ನ ಸಹಾಯವಣಿ ಸಂಖ್ಯೆ 0825 6232047, ಪಟ್ಟಣ ಪಂಚಾಯತ್‌ನ 0825 6234596 ದೂರವಾಣಿ ದಿನದ 24 ಗಂಟೆ ಸಂಪರ್ಕಕ್ಕೆ ಲಭ್ಯವಾಗಲಿದೆ.

-  ಚೈತ್ರೇಶ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next