Advertisement

ಮಧ್ಯಪ್ರದೇಶದಲ್ಲಿ ಮೋದಿ ವರ್ಸಸ್‌ ರಾಹುಲ್‌ – “ಬಡತನ” ವಿಚಾರದಲ್ಲಿ ಪರಸ್ಪರ ವಾಗ್ಯುದ್ಧ

10:07 PM Nov 09, 2023 | Team Udayavani |

ನವದೆಹಲಿ: ಚುನಾವಣೆಗೆ ಸಜ್ಜಾಗಿರುವ ಮಧ್ಯಪ್ರದೇಶದಲ್ಲಿ ಗುರುವಾರ ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ರ್ಯಾಲಿ ನಡೆಸಿದ್ದು, ಪ್ರಚಾರದ ವೇಳೆ ಪರಸ್ಪರರ ವಿರುದ್ಧ ವಾಕ್ಸಮರ ನಡೆಸಿದ್ದಾರೆ.

Advertisement

ಛತಾರ್ಪುರದಲ್ಲಿ ರ್ಯಾಲಿ ನಡೆಸಿ ಮಾತನಾಡಿದ ಪ್ರಧಾನಿ ಮೋದಿ,”ಕನಿಷ್ಠ 100 ವರ್ಷಗಳಾದರೂ ಕಾಂಗ್ರೆಸ್‌ ಅನ್ನು ಅಧಿಕಾರದಿಂದ ದೂರವಿಡಿ. ಏಕೆಂದರೆ, ದೇಶದ ಪ್ರಗತಿಯನ್ನು ರಿವರ್ಸ್‌ ಗೇರ್‌ನಲ್ಲಿ ಕೊಂಡೊಯ್ಯುವುದರಲ್ಲಿ ಕಾಂಗ್ರೆಸ್‌ ಪರಿಣತಿ ಹೊಂದಿದೆ. ಉತ್ತಮ ಆಡಳಿತವನ್ನೂ ಕಾಂಗ್ರೆಸ್‌ ಕೆಟ್ಟ ಆಡಳಿತವಾಗಿ ಬದಲಿಸುತ್ತದೆ. ಕಾಂಗ್ರೆಸ್‌ಗೆ ಭಾರತ ಎಂದರೆ ದೆಹಲಿಯಲ್ಲೇ ಆರಂಭವಾಗಿ ದೆಹಲಿಯಲ್ಲೇ ಕೊನೆಗೊಳ್ಳುವಂಥದ್ದು. ಆ ಪಕ್ಷದ ನಾಯಕರು ತಮ್ಮ ವಿದೇಶಿ ಸ್ನೇಹಿತರನ್ನು ದೆಹಲಿಯ ಸ್ಲಂಗಳಿಗೆ ಕರೆದೊಯ್ದು ಅಲ್ಲಿನ ಬಡತನವನ್ನು ತೋರಿಸಿ ಫೋಟೋ ಸೆಷನ್‌ ಮಾಡಿಸುತ್ತಾರೆ. ಬೆಳ್ಳಿಯ ಚಮಚವನ್ನೇ ಬಾಯಲ್ಲಿಟ್ಟುಕೊಂಡು ಹುಟ್ಟಿರುವ ಕಾಂಗ್ರೆಸ್‌ ನಾಯಕರಿಗೆ ಬಡತನ ಎನ್ನುವುದು ಪ್ರವಾಸದಂತೆ ಗೋಚರಿಸುತ್ತದೆ’ ಎಂದು ಟೀಕಿಸಿದ್ದಾರೆ.

ಪ್ರಧಾನಿ ಮೋದಿಯವರ ಈ ಆರೋಪಗಳಿಗೆ ಮಧ್ಯಪ್ರದೇಶದ ಅಶೋಕನಗರದಲ್ಲಿ ಪ್ರಚಾರ ರ್ಯಾಲಿಯಲ್ಲಿ ತಿರುಗೇಟು ನೀಡಿದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, “ಒಂದು ಕಡೆ ಪ್ರಧಾನಿ ಮೋದಿಯವರು ದೇಶದಲ್ಲಿ ಒಂದೇ ಒಂದು ಜಾತಿಯಿರುವುದು, ಅದು “ಬಡತನ’ ಎಂಬ ಜಾತಿ ಎಂದು ಹೇಳಿದ್ದರು. ಮತ್ತೂಂದು ಕಡೆ, ಅವರೇ, ನಾನು ಒಬಿಸಿ ಎಂದು ಹೇಳಿಕೊಂಡು ತಿರುಗಾಡುತ್ತಾರೆ. ನಾನು ಲಕ್ಷಾಂತರ ಯುವಕರನ್ನು ಭೇಟಿಯಾಗಿದ್ದೇನೆ. ನಿರುದ್ಯೋಗಿ ಯುವಕರಲ್ಲಿ ಅವರ ಜಾತಿ ಕೇಳಿದರೆ, ಅವರೆಲ್ಲರೂ ದಲಿತ, ಒಬಿಸಿ ಅಥವಾ ಆದಿವಾಸಿ ಎನ್ನುತ್ತಾರೆ. ದೇಶದಲ್ಲಿ ಒಬಿಸಿಗಳ ಸಂಖ್ಯೆ ಶೇ.50ರಷ್ಟಿದ್ದರೆ, ಸರ್ಕಾರ ನಡೆಸುವುದರಲ್ಲೂ ಅವರ ಪಾಲು ಸಮಾನವಾಗಿರಬೇಕಲ್ಲವೇ’ ಎಂದು ಪ್ರಶ್ನಿಸಿದ್ದಾರೆ. ಇದೇ ವೇಳೆ, ಸಂಸದರು ಮತ್ತು ಶಾಸಕರು ಸರ್ಕಾರ ನಡೆಸುತ್ತಾರೆ ಎಂಬ ತಪ್ಪು ತಿಳಿವಳಿಕೆ ಇದೆ. ಆದರೆ, ಭಾರತ ಸರ್ಕಾರವನ್ನು ಈಗ ನಡೆಸುತ್ತಿರುವುದು ಪ್ರಧಾನಿ ಮೋದಿ ಮತ್ತು 90 ಅಧಿಕಾರಿಗಳು ಎಂದೂ ಅವರು ಹೇಳಿದ್ದಾರೆ.

ಕಾರ್ಯಕರ್ತರ ನಡುವೆ ಘರ್ಷಣೆ:
ಹೈದರಾಬಾದ್‌ನಲ್ಲಿ ಗುರುವಾರ ಬಿಆರ್‌ಎಸ್‌ ಮತ್ತು ಕಾಂಗ್ರೆಸ್‌ ಕಾರ್ಯಕರ್ತರ ನಡುವೆ ಘರ್ಷಣೆ ಏರ್ಪಟ್ಟಿದೆ. ಎರಡೂ ಕಡೆಯವರು ಕಲ್ಲುತೂರಾಟ ನಡೆಸಿದ್ದರಿಂದ ಇಬ್ಬರು ಪೊಲೀಸ್‌ ಅಧಿಕಾರಿಗಳು ಹಾಗೂ ಕೆಲವು ಕಾಂಗ್ರೆಸ್‌ ಕಾರ್ಯಕರ್ತರು ಗಾಯಗೊಂಡಿದ್ದಾರೆ.

ರ್ಯಾಲಿಗೆ ಬೈಕ್‌ನಲ್ಲಿ ಹೊರಟ ಕವಿತಾ!
ತೆಲಂಗಾಣದಲ್ಲಿ ರ್ಯಾಲಿಯೊಂದಕ್ಕೆ ಬಿಆರ್‌ಎಸ್‌ ನಾಯಕಿ, ಎಂಎಲ್‌ಸಿ ಕೆ.ಕವಿತಾ ಅವರು ಬೈಕ್‌ನಲ್ಲಿ ಹಿಂಬದಿ ಸವಾರರಾಗಿ ತೆರಳಿದ ಘಟನೆ ನಡೆದಿದೆ. ಸಂಚಾರ ದಟ್ಟಣೆ ಅತಿಯಾಗಿದ್ದ ಕಾರಣ ಅವರು ಪಕ್ಷದ ಕಾರ್ಯಕರ್ತರೊಬ್ಬರ ಬೈಕ್‌ ಏರಿ, ರ್ಯಾಲಿಗೆ ತೆರಳಿರುವ ವಿಡಿಯೋ ವೈರಲ್‌ ಆಗಿದೆ.

Advertisement

ವಾಹನದಿಂದ ಕೆಳಗುರುಳಿದ ಕೆಟಿಆರ್‌
ತೆಲಂಗಾಣದ ನಿಜಾಮಾಬಾದ್‌ನಲ್ಲಿ ರೋಡ್‌ಶೋ ನಡೆಸುವ ವೇಳೆ ತೆರೆದ ವಾಹನದ ಮೇಲಿಂದ ಬಿಆರ್‌ಎಸ್‌ ಕಾರ್ಯಾಧ್ಯಕ್ಷ ಕೆ.ಟಿ.ರಾಮರಾವ್‌ ಸೇರಿ ಅನೇಕ ನಾಯಕರು ಕೆಳಕ್ಕೆ ಉರುಳಿಬಿದ್ದ ಘಟನೆ ಗುರುವಾರ ನಡೆದಿದೆ. ವ್ಯಾನ್‌ ಚಾಲಕ ಏಕಾಏಕಿ ಬ್ರೇಕ್‌ ಹಾಕಿದಾಗ, ಬಿಆರ್‌ಎಸ್‌ ನಾಯಕರು ವಾಲಿಕೊಂಡು ನಿಂತಿದ್ದ ರೈಲಿಂಗ್‌ ತುಂಡಾಗಿ ಬಿದ್ದಿದ್ದೇ ಈ ಘಟನೆಗೆ ಕಾರಣ. ಅದೃಷ್ಟವಶಾತ್‌ ಯಾರಿಗೂ ಯಾವುದೇ ಗಾಯಗಳಾಗಿಲ್ಲ. ಈ ನಡುವೆ, ತೆಲಂಗಾಣ ಸಿಎಂ ಕೆ. ಚಂದ್ರಶೇಖರ್‌ ರಾವ್‌ ಗುರುವಾರ ಕಮರೆಡ್ಡಿ ಮತ್ತು ಗಜ್ವೇಲ್‌ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದಾರೆ.

ರಾಮಾಯಣದ ಕಾಲದಿಂದಲೂ ಇಲ್ಲಿ “ಸತ್ಯಕ್ಕೆ ಜಯ. ಸುಳ್ಳಿಗೆ ಸೋಲು” ಎಂಬ ಸಂಪ್ರದಾಯ ಅನುಸರಿಸಿಕೊಂಡು ಬರಲಾಗುತ್ತಿದೆ. ಈ ಸಂಪ್ರದಾಯವನ್ನು ಮಧ್ಯಪ್ರದೇಶದ ಮತದಾರರು ಮುರಿಯಬಾರದು.
– ಪ್ರಿಯಾಂಕಾ ವಾದ್ರಾ, ಕಾಂಗ್ರೆಸ್‌ ನಾಯಕಿ

ಬಿಜೆಪಿ ಅಧಿಕಾರಕ್ಕೇರಿದರೆ ಮುಂದಿನ 5 ವರ್ಷಗಳೊಳಗೆ ಛತ್ತೀಸ್‌ಗಡದಲ್ಲಿ ನಕ್ಸಲ್‌ವಾದವನ್ನು ನಿರ್ಮೂಲನೆ ಮಾಡಲಾಗುವುದು. ಇದಕ್ಕಾಗಿ ಜನ ಡಬಲ್‌ ಎಂಜಿನ್‌ ಸರ್ಕಾರವನ್ನು ಅಧಿಕಾರಕ್ಕೆ ತರಬೇಕು.
– ಅಮಿತ್‌ ಶಾ, ಕೇಂದ್ರ ಗೃಹ ಸಚಿವ

“ಮೋದಿ ಬಾಂಬ್‌”ಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್‌!
ಚುನಾವಣೆಯ ಕಣ ರಂಗೇರಿರುವ ನಡುವೆಯೇ ಪಂಚರಾಜ್ಯಗಳಲ್ಲಿ ದೀಪಾವಳಿಯ ಸಂಭ್ರಮವೂ ಮನೆಮಾಡಿದೆ. ರಾಜಸ್ಥಾನದಲ್ಲಂತೂ ಪ್ರಧಾನಿ ಮೋದಿಯವರ ಹೆಸರಿನ ಪಟಾಕಿಗಳೂ ಸದ್ದು ಮಾಡಲಾರಂಭಿಸಿವೆ. ಜೋಧ್‌ಪುರದಲ್ಲಿ “ಮೋದಿ ಬಾಂಬ್‌’ ಪಟಾಕಿಗೆ ಭಾರಿ ಬೇಡಿಕೆ ಸೃಷ್ಟಿಯಾಗಿದೆ. ಪ್ಯಾಕೆಟ್‌ಗೆ 150ರೂ.ಗಳಿಂದ 500ರೂ.ವರೆಗೆ “ನಮೋ’ ಮತ್ತು “ಮೋದಿ’ ಹೆಸರಿನ ಪಟಾಕಿಗಳು ಬಿಕರಿಯಾಗುತ್ತಿವೆ. ಇತರೆ ಪಟಾಕಿಗಳಿಗಿಂತ ಕಡಿಮೆ ರಾಸಾಯನಿಕ ಹಾಕಿರುವ ಕಾರಣ, ವ್ಯಾಪಾರಿಗಳು ಕೂಡ ಮೋದಿ ಪಟಾಕಿಗಳಿಗೆ ಹೆಚ್ಚಿನ ಪ್ರಚಾರ ನೀಡುತ್ತಿದ್ದಾರಂತೆ!

ಮಂದಿರ ಇಲ್ಲಿ ಚುನಾವಣೆ ವಿಷಯವಲ್ಲ
ಅಯೋಧ್ಯೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ಶ್ರೀ ರಾಮಮಂದಿರವನ್ನು ಬಿಜೆಪಿ ನಾಯಕರೆಲ್ಲರೂ ಪಂಚರಾಜ್ಯ ಚುನಾವಣೆಯಲ್ಲಿ ಚುನಾವಣಾ ವಿಷಯವನ್ನಾಗಿ ಬಳಸಿಕೊಳ್ಳುತ್ತಿದ್ದಾರೆ. ಹಾಗಾದರೆ, ರಾಮಮಂದಿರದೊಂದಿಗೆ ಲಿಂಕ್‌ ಇರುವ ರಾಜಸ್ಥಾನದ ಭರತ್‌ಪುರ ಜಿಲ್ಲೆಯ ಬಾನ್ಸಿ ಪಹಾಡ್‌ಪುರ ಗ್ರಾಮದಲ್ಲಿ ಚುನಾವಣೆ ಮೇಲೆ “ಮಂದಿರ’ ಪ್ರಭಾವ ಬೀರಲಿದೆಯೇ? ಇಲ್ಲ ಎನ್ನುತ್ತಿವೆ ವರದಿಗಳು.

ಕಳೆದ ಮೂರು ದಶಕಗಳಿಂದಲೂ ಈ ಗ್ರಾಮದ ಗುಲಾಬಿ ಶಿಲೆಗಳನ್ನು ಅಯೋಧ್ಯೆಯ ಮಂದಿರ ನಿರ್ಮಾಣಕ್ಕಾಗಿ ಸರಬರಾಜು ಮಾಡಲಾಗುತ್ತಿದೆ. ಈ ಗ್ರಾಮ ಪೂರ್ತಿ ಇಂಥ ಶಿಲೆಗಳಿಂದಲೇ ಸುತ್ತುವರಿದಿದೆ. ರಾಮಮಂದಿರದಿಂದಾಗಿಯೇ ನಮ್ಮ ಗ್ರಾಮವು ವಿಶ್ವ ಭೂಪಟದಲ್ಲಿ ಗುರುತಿಸಿಕೊಂಡಿತು. ಅಷ್ಟೇ ಅಲ್ಲ, ಸ್ಥಳೀಯರಿಗೆ ಆದಾಯದ ಮೂಲವೂ ಆಯಿತು ಎನ್ನುವ ಗ್ರಾಮಸ್ಥರು, ಹಾಲಿ ವಿಧಾನಸಭೆ ಚುನಾವಣೆಯ ಮೇಲೆ ಇದು ಪ್ರಭಾವ ಬೀರಲಿದೆಯೇ ಎಂದು ಪ್ರಶ್ನಿಸಿದರೆ, “ಇಲ್ಲ’ ಎನ್ನುತ್ತಾರೆ. ಬಯಾನಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಚ್ಚು ಸಿಂಗ್‌ ಬನ್ಸಿವಾಲ್‌ ಅವರು ತಮ್ಮ ಪ್ರಚಾರದುದ್ದಕ್ಕೂ ರಾಮಮಂದಿರವನ್ನು ಉಲ್ಲೇಖೀಸುತ್ತಲೇ ಇದ್ದಾರೆ.

ಆದರೆ, ಗ್ರಾಮಸ್ಥರು ಮಾತ್ರ, “ರಾಮಮಂದಿರವು ನಂಬಿಕೆಯ ಪ್ರಶ್ನೆಯೇ ಹೊರತು ಚುನಾವಣಾ ವಿಷಯವಲ್ಲ’ ಎನ್ನುತ್ತಾರೆ. ಅಲ್ಲದೇ, ಈ ಬಾರಿ ಟಿಕೆಟ್‌ ಸಿಗಲಿಲ್ಲ ಎಂಬ ಕಾರಣಕ್ಕೆ ಕಳೆದ ಬಾರಿ ಬಿಜೆಪಿಯಿಂದ ಕಣಕ್ಕಿಳಿದು ಸೋತಿದ್ದ ರೀತು ಬನಾವತ್‌ ಈಗ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಇದು ಈ ಕ್ಷೇತ್ರದಲ್ಲಿ ಬಿಜೆಪಿಗೆ ಹೊಡೆತ ನೀಡುವ ಸಾಧ್ಯತೆಯಿದೆ. ಅಲ್ಲದೇ, ಕಳೆದ ಬಾರಿ ಸಚಿನ್‌ ಪೈಲಟ್‌ ಸಿಎಂ ಆಗುತ್ತಾರೆಂಬ ವಿಶ್ವಾಸದಿಂದ ಗುಜ್ಜರ್‌ ಸಮುದಾಯದ ಅನೇಕರು ಕಾಂಗ್ರೆಸ್‌ಗೆ ಬೆಂಬಲ ನೀಡಿದ್ದರು. ಈ ಬಾರಿ ಗುಜ್ಜರ್‌ ಮತಗಳು ಕಾಂಗ್ರೆಸ್‌ನ ಕೈತಪ್ಪುವ ಸಾಧ್ಯತೆಯೂ ಹೆಚ್ಚಿದೆ.

Advertisement

Udayavani is now on Telegram. Click here to join our channel and stay updated with the latest news.

Next