Advertisement

ಕರಾವಳಿಯ ಸಾಂಸ್ಕೃತಿಕ ವೈವಿಧ್ಯಕ್ಕೆ ವೇದಿಕೆಯಾದ ಮೋದಿ ರೋಡ್‌ ಶೋ

12:11 AM Apr 15, 2024 | Team Udayavani |

ಮಂಗಳೂರು: ನಗರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ರೋಡ್‌ ಶೋ ಸಾಗಿದ ಹಾದಿಯುದ್ದಕ್ಕೂ ಕರಾವಳಿಯ ವಿವಿಧ ಜಾನಪದ – ಸಾಂಸ್ಕೃತಿಕ ವೈವಿಧ್ಯಗಳನ್ನು ಪರಿಚಯಿಸುವ ಮೋದಿ ಅಭಿಮಾನಿಗಳ ಪ್ರಯತ್ನ ಯಶಸ್ವಿಯಾಗಿದೆ.

Advertisement

ಲೇಡಿಹಿಲ್‌ನ ಬ್ರಹ್ಮಶ್ರೀ ನಾರಾಯಣ ಗುರು ವೃತ್ತದಿಂದ ಆರಂಭಗೊಂಡು ಮಂಜೇಶ್ವರ ಗೋವಿಂದ ಪೈ ವೃತ್ತ (ನವಭಾರತ್‌ ವೃತ್ತದ) ವರೆಗೂ ವಿವಿಧ ಜಂಕ್ಷನ್‌, ಪ್ರಮುಖ ಸ್ಥಳಗಳಲ್ಲಿ ಮೋದಿಯವರ ರೋಡ್‌ ಶೋ ವಾಹನಕ್ಕೆ ನೇರವಾಗಿ ಕಾಣುವಂತೆ ನಿರ್ಮಿಸಿದ ವೇದಿಕೆಗಳಲ್ಲಿ ಕಲಾವಿದರು ಪ್ರದರ್ಶನ ನೀಡಿದರು. ರೋಡ್‌ ಶೋನಲ್ಲಿ ಸಾಗುತ್ತಿರುವಾಗಲೇ ಮೋದಿಯವರು ಇವೆಲ್ಲವನ್ನೂ ಕಣ್ತುಂಬಿಕೊಂಡರು.ಮೋದಿವರು ಆರಂಭದಲ್ಲಿ ನಾರಾಯಣಗುರು ವೃತ್ತದ ಬಳಿ ಆಗಮಿಸತ್ತಲೇ ಶಂಖನಾದ, ಚೆಂಡೆ, ಜಾಗಟೆಯೊಂದಿಗೆ ವೇದಘೋಷಗಳು ಮೊಳಗಿದವು.

ಲಾಲ್‌ಬಾಗ್‌ನಲ್ಲಿ ಹುಲಿ ವೇಷದ ಅಬ್ಬರ
ಲಾಲ್‌ಬಾಗ್‌ ವೃತ್ತದಲ್ಲಿ ಬಳ್ಳಾಲ್‌ ಬಾಗ್‌ ಫ್ರೆಂಡ್ಸ್‌ ವತಿಯಿಂದ ಹುಲಿವೇಷ ಕುಣಿತದ ಅಬ್ಬರವಿತ್ತು. ಹುಲಿ ವೇಷಧಾರಿಗಳ ಮೈಮೇಲಿನ ಬಣ್ಣದಲ್ಲಿ ರಚಿಸಲಾಗಿದ್ದ ನರೇಂದ್ರ ಮೋದಿ, ಕಮಲದ ಹೂವು, ಕ್ಯಾ| ಬ್ರಿಜೇಶ್‌ ಚೌಟ, ಶ್ರೀರಾಮಚಂದ್ರನ ಚಿತ್ರದ ಜತೆಗೆ “ದಕ್ಷಿಣ ಕನ್ನಡ ಹಿಂದುತ್ವದ ಭದ್ರಕೋಟೆ’ ಎನ್ನುವ ಬರಹಗಳು ರಾರಾಜಿಸುತ್ತಿದ್ದವು. ಮೋದಿಯವರು ಆಗಮಿಸುತ್ತಿದ್ದಂತೆ ತಾಸೆಯ ಪೆಟ್ಟಿಗೆ ಕುಣಿತ ಜೋರಾಗಿತ್ತು. ಮೋದಿಯವರ ಜತೆಗಿದ್ದ ಭದ್ರತಾ ಪಡೆಯವರಿಗೂ ಇದೊಂದು ಆಕರ್ಷಣೆಯಾಗಿತ್ತು.

ನೃತ್ಯ ಭಜನೆ- ಭರತನಾಟ್ಯ
ಮುಂದಕ್ಕೆ ಬಳ್ಳಾಲ್‌ಬಾಗ್‌ನ ಫುಡ್‌ಲ್ಯಾಂಡ್‌ ಹೋಟೆಲ್‌ ಬಳಿ ಕುಣಿತ ಭಜನೆ ತಂಡದಿಂದ ಶ್ರೀರಾಮನ ಹಾಡುಗಳಿಗೆ ಹೆಣ್ಮಕ್ಕಳು ನೃತ್ಯ ಮಾಡುತ್ತಾ ಭಜನೆ ಮಾಡಿದರು. ಬಳ್ಳಾಲ್‌ಬಾಗ್‌ ಜಂಕ್ಷನ್‌ ಬಳಿ ಚೆಂಡೆ ತಂಡವೊಂದರಿಂದ ಪ್ರದರ್ಶನ ನಡೆಯಿತು. ಕೊಡಿಯಾಲಗುತ್ತು ಪತ್ತುಮುಡಿ ಕ್ರಾಸ್‌ ರಸ್ತೆಯಲ್ಲಿ ಸನಾತನ ನಾಟ್ಯಾಲಯದ ವಿದ್ಯಾರ್ಥಿನಿಯರಿಂದ ದೇಶ ಭಕ್ತಿಗೀತೆಗಳಿಗೆ ಭರತನಾಟ್ಯ ಪ್ರದರ್ಶನ ನೆರವೇರಿತು.

ಚೆಂಡೆ ಫ್ಯೂಷನ್‌-ಯಕ್ಷಗಾನ
ಬೆಸೆಂಟ್‌ ಜಂಕ್ಷನ್‌ನಲ್ಲಿ ವಯಲಿನ್‌-ಚೆಂಡೆಯ ಫ್ಯೂಷನ್‌ ಪ್ರದರ್ಶನ ನಡೆಯಿತು. ಪಿವಿಎಸ್‌ ಬಳಿ ಮಕ್ಕಳು ಶ್ರೀರಾಮ, ಶ್ರೀಕೃಷ್ಣ, ಶಿವ-ಪಾರ್ವತಿ ಮೊದಲಾದ ವೇಷ ತೊಟ್ಟ ಪುಟಾಣಿ ಮಕ್ಕಳು ಮೋದಿ ಸಾಗಿ ಬರುವಾಗ “ಜೈ ಶ್ರೀರಾಮ್‌’ ಘೋಷಣೆ ಕೂಗಿದರು. ನವಭಾರತ್‌ ಜಂಕ್ಷನ್‌ನಲ್ಲಿ ಸಿದ್ಧಪಡಿಸಲಾದ ವೇದಿಕೆಯಲ್ಲಿ ಯಕ್ಷಗಾನ ಪ್ರದರ್ಶನ ನಡೆಯಿತು. ದೇವಿ ಮಹಾತೆ¾ಯ ಮಹಿಷಾಸುರ ಪ್ರಸಂಗದ ಚಿತ್ರಣವಿತ್ತು.
ರೋಡ್‌ ಶೋ ಜೊತೆ ಪ್ರಧಾನಿಯವರಿಗೆ ಕರಾವಳಿಯ ವೈವಿಧ್ಯವನ್ನು ಪರಿಚಯಿಸುವ ಉದ್ದೇಶ ದಿಂದ ಮೋದಿ ಅಭಿಮಾನಿಗಳು ಇಂತಹ ದೊಂದು ವಿಶೇಷ ವ್ಯವಸ್ಥೆ ಮಾಡಿದ್ದರು. ಪ್ರದರ್ಶನದ ಬಗ್ಗೆ ಸಂಬಂಧಪಟ್ಟವರಲ್ಲಿ ಮನವಿಯನ್ನೂ ಮಾಡಿ ಕೊಂಡಿದ್ದರು. ಪ್ರಧಾನಿಯವರ ಭದ್ರತೆ ನೋಡಿಕೊಳ್ಳುವ ವಿಶೇಷ ಭದ್ರತಾ ತಂಡ (ಎಸ್‌ಪಿಜಿ)ವೂ ಇವುಗಳಿಗೆ ಅನುಮತಿ ನೀಡಿದ ಕಾರಣ ಇದೊಂದು “ವಿಶಿಷ್ಟ ರೋಡ್‌ ಶೋ’ ಆಗಿ ಮಾರ್ಪಾಡಾಯಿತು.

Advertisement

ಮೋದಿ, ಮೋದಿ ಅಬ್ಬರ
ಸಾಮಾನ್ಯವಾಗಿ ನಗರದಲ್ಲಿನ ದಸರಾ ಮೆರವಣಿಗೆ ಸೃಷ್ಟಿಸುತ್ತಿದ್ದ ವೈಭವವನ್ನೇ ರವಿವಾರ ಪ್ರಧಾನಿ ನರೇಂದ್ರ ಮೋದಿ ರೋಡ್‌ ಶೋ ಸಹ ಸೃಷ್ಟಿಸಿದ್ದು ಸುಳ್ಳಲ್ಲ.

ದಸರಾ ಮೆರವಣಿಗೆ ಹೋಲುವ ರೀತಿಯಲ್ಲೇ ಝಗಮಗಿಸುವ ದೀಪಗಳನ್ನು ಮಾರ್ಗದಲ್ಲಿ ಅಳವಡಿ ಸಲಾಗಿತ್ತು. ಇದರಿಂದ ರೋಡ್‌ ಶೋ ಕಳೆ ಹೆಚ್ಚಿತು. ರಸ್ತೆಯ ಎರಡೂ ಬದಿಯಲ್ಲಿ ಭದ್ರತಾ ದೃಷ್ಟಿಯಿಂದ ಹಾಕಿದ್ದ ಕಬ್ಬಿಣದ ತಡೆಬೇಲಿ ಹಿಂದೆ ನಿಂತ ಜನರು ಸ್ಮಾರ್ಟ್‌ ಫೋನ್‌ಗಳಲ್ಲಿ ಮೋದಿ ಫೋಟೊ, ಸೆಲ್ಫಿ ವಿತ್‌ ಮೋದಿಯ ಮೊರೆ ಹೋದರೆ ಕಾರ್ಯಕರ್ತರು, ಅಭಿಮಾನಿಗಳು ಹುಚ್ಚೆದ್ದು “ಮೋದಿ ಮೋದಿ’ ಘೋಷಣೆ ಕೂಗಿ ಸಂಭ್ರಮಿಸಿದರು. “ನಾನು ಮೋದಿ ಪರಿವಾರ್‌’, ದೇಶಕ್ಕೆ ಮೋದಿ ಜಿಲ್ಲೆಗೆ ಕ್ಯಾಪ್ಟನ್‌ ಇತ್ಯಾದಿ ಘೋಷಣೆಯಿದ್ದ ಫಲಕಗಳನ್ನೂ ನೂರಾರು ಕಾರ್ಯಕರ್ತರು ಅಲ್ಲಲ್ಲಿ ಹಿಡಿದು ತಮ್ಮ ಅಭಿಮಾನವನ್ನು ತೋರ್ಪಡಿಸಿದರು.

ನಾರಾಯಣಗುರು
ವೃತ್ತದಿಂದ ಗೋವಿಂದ ಪೈ ವೃತ್ತಕ್ಕೆ
ಬಿಲ್ಲವ ಮತದಾರರ ಪ್ರಾಬಲ್ಯದ ಹಿನ್ನೆಲೆಯಲ್ಲಿ ಎಚ್ಚರಿಕೆಯಿಂದ ಹೆಜ್ಜೆ ಇಟ್ಟಿರುವ ಬಿಜೆಪಿ ರೋಡ್‌ ಶೋದ ಆರಂಭವನ್ನು ನಾರಾಯಣ ಗುರು ವೃತ್ತದಿಂದ ಯೋಜಿಸಿತ್ತು. ರೋಡ್‌ ಶೋ ಮುಗಿದದ್ದು ನವಭಾರತ ವೃತ್ತ ಅಥವಾ ಡಾ| ಮಂಜೇಶ್ವರ ಗೋವಿಂದ ಪೈ ವೃತ್ತದಲ್ಲಿ.

ಸುಮಾರು 45 ನಿಮಿಷ ಕಾಲ ನಡೆದ ರೋಡ್‌ ಶೋ ಲಾಲ್‌ಬಾಗ್‌ ವೃತ್ತ, ಬಲ್ಲಾಳ್‌ಬಾಗ್‌ ಜಂಕ್ಷನ್‌, ಬೆಸೆಂಟ್‌ ಜಂಕ್ಷನ್‌, ಪಿವಿಎಸ್‌ ಮೂಲಕ ಗೋವಿಂದ ಪೈ ವೃತ್ತಕ್ಕೆ ಬಂದು ಸೇರಿತು. ಅಲ್ಲಿ ವಾಹನದಿಂದ ಇಳಿದ ಮೋದಿಯವರು ತಮ್ಮ ಕಾರೇರಿ ವಿಮಾನ ನಿಲ್ದಾಣಕ್ಕೆ ತೆರಳಿದರು. ಹಾಗೆ ತೆರಳುವಾಗಲೂ ದಾರಿಯುದ್ದಕ್ಕೂ ಕಾರಿನ ಬಾಗಿಲಿನಲ್ಲಿ ನಿಂತು ಜನರಿಗೆ ಕೈ ಬೀಸುತ್ತ ಸಾಗಿದರು.

ಅಲ್ಲಲ್ಲಿ ಸಣ್ಣ ಸಣ್ಣ ವೇದಿಕೆಗಳನ್ನು ನಿರ್ಮಿಸಿ, ಭರತನಾಟ್ಯ, ಯಕ್ಷಗಾನ, ಕಂಬಳ ಇತ್ಯಾದಿ ಕುರಿತು ಪ್ರದರ್ಶನಗಳನ್ನು ಏರ್ಪಡಿಸಲಾಗಿದ್ದುದನ್ನೂ ಮೋದಿ ಕುತೂಹಲದಿಂದ ವೀಕ್ಷಿಸಿದರು.

ಚುರುಕಿನ ಯೋಧರ ಸುರಕ್ಷೆ
ಮೋದಿಯವರ ರೋಡ್‌ ಶೋ ವಾಹನ ಸಾಗುವಾಗ ಅದರ ಪಕ್ಕದಲ್ಲಿ ಎಸ್‌ಪಿಜಿ ವಿಶೇಷ ಭದ್ರತಾ ತಂಡದ ಯೋಧರು ಸುತ್ತಲೂ ಚುರುಕಿನ ಕಣ್ಗಾವಲು ಇರಿಸಿದ್ದರು. ಜನರು ಪುಷ್ಪವೃಷ್ಟಿ ಮಾಡುವಾಗ ಅಥವಾ ಫೋಟೊ ತೆಗೆಯುವಾಗ ಯಾವುದೇ ಅಹಿತಕರ ಘಟನೆ ನಡೆಯದಂತೆ ಗಮನಿಸುತ್ತಲೇ ವಾಹನದ ಜತೆ ಜತೆಗೆ ಸಾಗುತ್ತಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next