Advertisement

ಕೋವಿಡ್ ಹೆಚ್ಚಳಕ್ಕೆ ಮೋದಿ ಕಾರಣ

08:48 AM May 20, 2020 | Suhan S |

ಇಳಕಲ್ಲ: ಜಗತ್ತಿನಲ್ಲಿ ಕೋವಿಡ್ ರೋಗ ಆರಂಭ ಆಗಿದ್ದನ್ನು ಅರಿತು ಯಾವುದೇ ಮುಂದಾಲೋಚನೆಗಳಿಲ್ಲದೇ ಹೊರಗಿನವರನ್ನು ದೇಶದೊಳಗೆ ವೈದ್ಯಕೀಯ ತಪಾಸಣೆಗೆ ಒಳ ಪಡಿಸದೇ ಬಿಟ್ಟಿರುವು ದರಿಂದಲೇ ಇಂದು ದೇಶದಲ್ಲಿ 1 ಲಕ್ಷದ ವರಗೆ ಕೋವಿಡ್ ಸೋಂಕಿತರು ಹೆಚ್ಚಾಗಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರೇ ನೇರ ಕಾರಣ ಎಂದು ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಆರೋಪಿಸಿದರು.

Advertisement

ಮಂಗಳವಾರ ತಮ್ಮ ನಿವಾಸದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸರಕಾರ ಹಾಗೂ ಅಧಿಕಾರಿಗಳು ಬೇರೆ ರಾಜ್ಯದಿಂದ ವಲಸಿ ಬಂದ ಕಾರ್ಮಿಕರನ್ನು ಸರಿಯಾಗಿ ತಪಾಸಣೆ ನಡೆಸದೇ ನಿರ್ಲಕ್ಷ್ಯದಿಂದಾಗಿ ರಾಜ್ಯದಲ್ಲಿ ಕೋವಿಡ್  ಒಂದು ಸಾವಿರ ಗಡಿ ದಾಟುವಂತಾಗಿದೆ. ಯಾವ ಮುಂದಾಲೋಚನೆಯಿಲ್ಲದೇ ವಿರೋಧ ಪಕ್ಷದವರೊಂದಿಗೆ ಸಮಾಲೋಚನೆ ನಡೆಸದೇ ಲಾಕ್‌ ಡೌನ್‌ ಸಡಿಲಿಸಿ ಎಲ್ಲ ವ್ಯವಹಾರಕ್ಕೂ ಆಸ್ಪದ ನೀಡಿದ್ದರಿಂದ ಕೋವಿಡ್ ಹೆಚ್ಚಳವಾಗಿದೆ. ಸಂಕಷ್ಟಿತರಿಗೆ ಸರಕಾರದಿಂದ ಸರಿಯಾದ ಸೌಲಭ್ಯ ಒದಗಿಸಿ ಇನ್ನಷ್ಟು ದಿವಸ ಲಾಕ್‌ಡೌನ್‌ ಮುಂದುವರೆಸಿದ್ದರೇ ಇಂತಹ ಪರಿಸ್ಥಿತಿ ಉದ್ಭವಿಸುತ್ತಿರಲಿಲ್ಲ ಆಕ್ರೋಶ ವ್ಯಕ್ತಪಡಿಸಿದರು.

ದೇಶದಲ್ಲಿ ಕೋವಿಡ್ ದಂತ ಸಂಕಷ್ಟದ ಸಮಯದಲ್ಲೂ ಶಾಸಕರಿಂದ ಹಿಡಿದು ಮುಖ್ಯಮಂತ್ರಿಗಳ ವರೆಗೆ ಸಾರ್ವಜನಿಕರಲ್ಲಿ ಚಂದಾ ಎತ್ತುತ್ತಿರುವುದು ನಾಚಿಕೆ ತರಿಸುವಂತಾಗಿದೆ. ಕೇಂದ್ರ ಹಾಗೂ ರಾಜ್ಯಗಳಲ್ಲಿ ತಮ್ಮದೇ ಆದ ಸರಕಾರವಿದ್ದರೂ ಬಡವರ, ನಿರ್ಗತಿಕರ ಹಾಗೂ ಕೂಲಿ ಕಾರ್ಮಿಕರ ಬಗ್ಗೆ ಕಿಂಚಿತ್ತು ಯೋಚಿಸದೇ ಕೇವಲ ಅನ್ಯಭಾಗ್ಯದ ಅಕ್ಕಿಯೊಂದು ನೀಡಿ ಕೈತೊಳೆದುಕೊಂಡಿದ್ದಾರೆ. ಸರಕಾರದ ಹಾಗೂ ಸಂಘ ಸಂಸ್ಥೆಯವರು ನೀಡುವ ಕಿಟ್‌ಗಳ ಮೇಲೂ ಕೆಲವು ಬಿಜೆಪಿ ಶಾಸಕರು ತಮ್ಮ ತಮ್ಮ ಭಾವಚಿತ್ರಗಳನ್ನು ಅಂಟಿಸಿ ಜನರಿಗೆ ವಿತರಿಸಿ ಕ್ಷುಲ್ಲಕ ರಾಜಕೀಯ ಮಾಡಿದ್ದಾರೆ ಎಂದು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್‌ ಧುರೀಣ ಅರುಣ ಬಿಜ್ಜಲ, ನಗರಸಭೆ ಸದಸ್ಯ ಅಮೃತ ಬಿಜ್ಜಲ ಹಾಗೂ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next