Advertisement

ಕೆಂಪೇಗೌಡರ ಆಶಯ ಈಡೇರಿಸುತ್ತಿರುವ ಪ್ರಧಾನಿ ಮೋದಿ: ನಳಿನ್‍ಕುಮಾರ್ ಕಟೀಲ್

03:35 PM Jun 27, 2022 | Team Udayavani |

ಬೆಂಗಳೂರು: ಜಗತ್ತಿನ ಇತಿಹಾಸದ ಪುಟದಲ್ಲಿ ಮೊದಲ ಸ್ಥಾನದಲ್ಲಿ ಕಾಣುವ ನಗರಗಳಲ್ಲಿ ಬೆಂಗಳೂರು ಕೂಡ ಒಂದು. ಜಗತ್ತು ಬೆಂಗಳೂರನ್ನು ಗುರುತಿಸಲು ಅಗತ್ಯವಾದ ಪರಿಕಲ್ಪನೆಯನ್ನು ಕೆಂಪೇಗೌಡರು ನೀಡಿದ್ದಾರೆ. ಪ್ರಜಾಪ್ರಭುತ್ವದ ಆಶಯದಲ್ಲಿ ಅವರು ಆಡಳಿತ ನಡೆಸಿದ್ದರು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

Advertisement

ಬೆಂಗಳೂರು ಮಹಾನಗರ ವತಿಯಿಂದ “ಬೆಂಗಳೂರು ನಿರ್ಮಾತೃ ನಾಡಪ್ರಭು ಶ್ರೀ ಕೆಂಪೇಗೌಡ ಜಯಂತಿ” ಆಚರಣೆಯನ್ನು ಸೋಮವಾರ ಬೆಂಗಳೂರು ನಗರ ಕಾರ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಮಾತನಾಡಿ, ಸಾಮಾಜಿಕ ನ್ಯಾಯದ ಚಿಂತನೆ ಅವರಲ್ಲಿತ್ತು. ಕುಡಿಯುವ ನೀರಿಗೆ ಅವರು ಆದ್ಯತೆ ನೀಡಿ ಹತ್ತಾರು ಕೆರೆಗಳನ್ನು ಅವರು ನಿರ್ಮಿಸಿದ್ದರು. ಹತ್ತಾರು ದೇವಸ್ಥಾನಗಳ ಪುನರ್ ನಿರ್ಮಾಣ ಮತ್ತು ಜೀರ್ಣೋದ್ಧಾರದ ಮೂಲಕ ಬೆಂಗಳೂರನ್ನು ಸಾಂಸ್ಕೃತಿಕ ನಗರವನ್ನಾಗಿ ಅವರು ಪರಿವರ್ತಿಸಿದ್ದರು ಎಂದರು.

ಕೆಂಪೇಗೌಡರ ಕನಸುಗಳನ್ನು ನಗರೋತ್ಥಾನದ ಮೂಲಕ ಪ್ರಧಾನಿ ನರೇಂದ್ರ ಮೋದಿಯವರು ನನಸಾಗಿ ಮಾಡುತ್ತಿದ್ದಾರೆ. ಮನೆಮನೆಗೆ ಗಂಗೆ ಕೊಡುವ ಯೋಜನೆಯನ್ನು  ಮೋದಿಯವರು ಈಡೇರಿಸುತ್ತಿದ್ದಾರೆ ಎಂದು ವಿವರಿಸಿದರು. ಸಾಮಾಜಿಕ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಬುಡಕಟ್ಟು ಸಮುದಾಯದ ದ್ರೌಪದಿ ಮುರ್ಮು ಅವರನ್ನು ಮೋದಿಯವರು ಆಯ್ಕೆ ಮಾಡಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದರು. ‘ಭವ್ಯ ಕಾಶಿ, ದಿವ್ಯ ಕಾಶಿ’ ಯೋಜನೆಯನ್ನೂ ಅನುಷ್ಠಾನಕ್ಕೆ ತಂದಿದ್ದಾರೆ ಎಂದರು.

ಬೆಂಗಳೂರಿನ ಕನಸನ್ನು ದೇಶದೆಲ್ಲೆಡೆ ನರೇಂದ್ರ ಮೋದಿಯವರು ನನಸಾಗಿ ಮಾಡುತ್ತಿದ್ದಾರೆ. ಕೆಂಪೇಗೌಡರ ನೆನಪನ್ನು ಶಾಶ್ವತವಾಗಿ ಮಾಡಲು ದೊಡ್ಡ ವಿಗ್ರಹ ನಿರ್ಮಾಣಕ್ಕೆ ಮುಂದಾದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಅಭಿನಂದಿಸಿದರು.

ರಾಜ್ಯ ಉಪಾಧ್ಯಕ್ಷರಾದ ನಿರ್ಮಲ್ ಕುಮಾರ್ ಸುರಾಣ, ವಿಧಾನಪರಿಷತ್ ಸದಸ್ಯ ಹಾಗೂ ರಾಜ್ಯ ಕಾರ್ಯದರ್ಶಿ ತುಳಸಿ ಮುನಿರಾಜು ಗೌಡ, ಬೆಂಗಳೂರು ಕೇಂದ್ರ ಜಿಲ್ಲಾ ಅಧ್ಯಕ್ಷ ಮಂಜುನಾಥ್, ಬೆಂಗಳೂರು ಉತ್ತರ ಜಿಲ್ಲಾ ಅಧ್ಯಕ್ಷ ಬಿ.ನಾರಾಯಣ್, ಜಿಲ್ಲಾ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next