Advertisement

ಮೋದಿ ಕೇರ್‌ ಸಹಾಯ ಉತ್ತಮವಾಗಿ ಬಳಕೆಯಾಗಲಿ

12:51 AM May 31, 2022 | Team Udayavani |

2020ರ ಆರಂಭದಿಂದಲೂ ಕಾಡುತ್ತಿರುವ ಕೊರೊನಾದಿಂದಾಗಿ ದೇಶವಾಸಿಗಳು ಪಡುತ್ತಿರುವ ಕಷ್ಟ ಅಷ್ಟಿಷ್ಟಲ್ಲ. ಆ ವರ್ಷ ಕಾಡಿದ ಮೊದಲ ಅಲೆಯಲ್ಲಿ ಕೊರೊನಾ ಬಂದವರಿಗೆ ಯಾವ ರೀತಿ ಚಿಕಿತ್ಸೆ ನೀಡಬೇಕು ಎಂಬುದೇ ವಿಜ್ಞಾನಿಗಳಿಂದ ಹಿಡಿದು ಯಾರಿಗೂ ಗೊತ್ತಿರಲಿಲ್ಲ. ಆಗ ದೇಶದಲ್ಲಿ ಅಪಾರ ಸಾವು ನೋವುಗಳನ್ನು ಕಾಣಬೇಕಾಯಿತು.

Advertisement

ಇನ್ನು ಎರಡನೇ ಅಲೆ ವೇಳೆಯಂತೂ ಮೊದಲ ಅಲೆಗಿಂತಲೂ ಹೆಚ್ಚು ಸಾವು ನೋವುಗಳನ್ನು ಇಡೀ ದೇಶ ನೋಡಿತು. ಇದಕ್ಕೆ ಕಾರಣ, ಕೊರೊನಾದ ರೂಪಾಂತರಿಯು ನೇರವಾಗಿ ಶ್ವಾಸಕೋಶಕ್ಕೇ ಸಮಸ್ಯೆ ಮಾಡಿದ್ದರಿಂದ ಉಸಿರಾಟದ ತೊಂದರೆ ಹೆಚ್ಚಾಗಿ ಕಾಣಿಸಿಕೊಂಡಿತು. ಈ ಸಮಯದಲ್ಲಿಯೂ ಮೊದಲ ಅಲೆಗಿಂತಲೂ ಹೆಚ್ಚು ಸಾವು ನೋವುಗಳನ್ನು ಇಡೀ ದೇಶ ನೋಡಿತು.

ಮನೆಗಳಲ್ಲಿ ದುಡಿಯುವವರೇ ಕೊರೊನಾಕ್ಕೆ ತುತ್ತಾದರು. ಕೆಲವು ಮನೆಗಳಲ್ಲಿ ಗಂಡ ಮತ್ತು ಹೆಂಡತಿ ಇಬ್ಬರೂ ಕೊರೊನಾಗೆ ತುತ್ತಾಗಿ ಮಕ್ಕಳಷ್ಟೇ ಉಳಿದುಕೊಂಡರು. ಇನ್ನು ಕೆಲವು ಸಂದರ್ಭಗಳಲ್ಲಿ ತಂದೆ ಅಥವಾ ತಾಯಿಯಷ್ಟೇ ಉಳಿದರು. ಅಂದರೆ, ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪ್ರಕಾರ ದೇಶದಲ್ಲಿ 1.53 ಲಕ್ಷ ಮಕ್ಕಳು ತಂದೆ ಅಥವಾ ತಾಯಿಯನ್ನು ಕಳೆದುಕೊಂಡಿದ್ದಾರೆ. 10,386 ಮಕ್ಕಳು ತಂದೆ-ತಾಯಿ ಇಬ್ಬರನ್ನೂ ಕಳೆದುಕೊಂಡಿದ್ದಾರೆ.

ಈ ಹಿಂದೆಯೇ ಕೇಂದ್ರ ಸರಕಾರ, ಇಂಥ ಮಕ್ಕಳ ನೆರವಿಗೆ ಬರುವುದಾಗಿ ಘೋಷಿಸಿತ್ತು. ಅಲ್ಲದೆ, ಇವರಿಗಾಗಿಯೇ ಒಂದು ಪೋರ್ಟಲ್‌ ತೆರೆದು ಅನಾಥ ಮಕ್ಕಳ ಬಗ್ಗೆ ಇದರಲ್ಲಿ ದಾಖಲಿಸುವಂತೆ ಸೂಚನೆ ನೀಡಿತ್ತು. ಅದರಂತೆ ಈಗ ಅನಾಥ ಮಕ್ಕಳನ್ನು ಗುರುತಿಸಿ ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ ಯೋಜನೆಯನ್ನು ಘೋಷಿಸಿದ್ದಾರೆ.

ಮೋದಿ ಕೇರ್‌ನ ಮೂಲಕ ಅನಾಥ ಮಕ್ಕಳಿಗೆ ಪ್ರತೀ ತಿಂಗಳು 4 ಸಾವಿರ ರೂ. ಸಹಾಯಧನ ನೀಡಲಾಗುತ್ತದೆ. ಇದನ್ನು ಅವರ ಮೂಲಸೌಕರ್ಯ ಅಗತ್ಯಗಳಿಗೆ ಬಳಸಿಕೊಳ್ಳಬಹುದು. ಇದರ ಜತೆಗೆ ಶಾಲೆಗೆ ಹೋಗಲು ಹಣಕಾಸು ಸಹಾಯ, ಉನ್ನತ ಶಿಕ್ಷಣಕ್ಕಾಗಿ ಸ್ಕಾಲರ್‌ಶಿಪ್‌ ಮತ್ತು 5 ಲಕ್ಷ ರೂ.ವರೆಗೆ ಉಚಿತ ವೈದ್ಯಕೀಯ ವಿಮೆಯನ್ನೂ ನೀಡಲಾಗುತ್ತದೆ.

Advertisement

ಒಂದು ವೇಳೆ ಈ ಮಗು ವೃತ್ತಿಪರ ಕೋರ್ಸ್‌ ಮತ್ತು ಉನ್ನತ ಶಿಕ್ಷಣಕ್ಕೆ ಶೈಕ್ಷಣಿಕ ಸಾಲ ಬೇಕಾದರೂ ಅದಕ್ಕೂ ಮೋದಿ ಕೇರ್‌ ಮೂಲಕವೇ ಸಹಾಯ ಸಿಗುತ್ತದೆ. ಅಲ್ಲದೆ, ಕೊರೊನಾ ಅವಧಿಯಲ್ಲಿ ಪೋಷಕರನ್ನು ಕಳೆದುಕೊಂಡ 18-23 ವರ್ಷದೊಳಗಿನ ಯುವಕರಿಗೂ ಸಹಾಯ ಸಿಗಲಿದ್ದು, ಇವರಿಗೆ ಮಾಸಿಕ ಸಹಾಯಧನ ಮತ್ತು 23 ವರ್ಷ ಪೂರೈಸುತ್ತಿದ್ದಂತೆ 10 ಲಕ್ಷ ರೂ. ಸಿಗಲಿದೆ.

ಕೊರೊನಾ ಅನಂತರದ ವಿದ್ಯಮಾನಗಳನ್ನು ಗಮನಿಸಿದರೆ, ಈ ಸೌಲಭ್ಯಗಳು ಅಗತ್ಯವಾಗಿ ಬೇಕಾದವುಗಳೇ ಆಗಿವೆ. ಏಕೆಂದರೆ ಇಂಥ ಸಂದರ್ಭದಲ್ಲಿ ಅನಾಥ ಮಕ್ಕಳ ಸಹಾಯಕ್ಕೆಂದು ಬರುವವರ ಸಂಖ್ಯೆ ತೀರಾ ಕಡಿಮೆ. ಈಗಂತೂ ಕೊರೊನಾ ನೋವಿಲ್ಲದ ಮನೆಯನ್ನು ಹುಡುಕುವುದೇ ಕಷ್ಟ ಎಂಬ ಸ್ಥಿತಿ ಇದೆ. ಸರಕಾರವೇ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕವಾಗಿ ಅವರ ಸಹಾಯಕ್ಕೆ ಹೋಗುತ್ತಿರುವುದು ಸ್ವಾಗತಾರ್ಹ ಹೆಜ್ಜೆಯಾಗಿದೆ. ಇದರ ಜತೆಯಲ್ಲೇ ಇಂಥ ಮಕ್ಕಳಿಗೆ ಮುಂದಿನ ದಿನಗಳಲ್ಲಿ ಉದ್ಯೋಗ ಸೌಲಭ್ಯವನ್ನು ನೀಡಿದರೆ ಇನ್ನಷ್ಟು ಸಹಾಯವಾಗಬಹುದು. ತಂದೆ ಅಥವಾ ತಾಯಿ ಕಳೆದುಕೊಂಡ ಮಕ್ಕಳ ನೆರವಿಗೆ ಹೋದರೆ ಇನ್ನಷ್ಟು ಸಹಾಯ ಮಾಡಿದಂತೆ ಆಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next