Advertisement

ಆಧುನಿಕತೆ ಮತ್ತು ಮಾನಸಿಕ ನೆಮ್ಮದಿ

11:57 PM Dec 08, 2019 | Sriram |

ಆಧುನಿಕತೆ ಬೆಳೆದಂತೆ, ತಂತ್ರಜ್ಞಾನ ಮುಂದುವರಿದಂತೆ ಮಾನಸಿಕ ನೆಮ್ಮದಿ ಎನ್ನುವುದು ಮರೀಚಿಕೆಯಾಗುತ್ತಿದೆ. ಎಲ್ಲವೂ ಬೆರಳ ತುದಿಯಲ್ಲೇ ದೊರೆಯುತ್ತದೆ ಎನ್ನುವುದೇನೋ ನಿಜ. ಆದರೆ ಅದರ ಜತೆ ನಮ್ಮತನವನ್ನು ಕಳೆದುಕೊಳ್ಳುತ್ತಿದ್ದೇವೆ. ತಂತ್ರಜ್ಞಾನದ ಭರಾಟೆಯಲ್ಲಿ ಕಳೆದು ಕೊಳ್ಳುವ ಮುನ್ನ ನಮ್ಮನ್ನು ನಾವೇ ಕಂಡುಕೊಳ್ಳಬೇಕಿದೆ.

Advertisement

ನಮ್ಮ ಜೀವನದಲ್ಲಿ ಹಲವು ಘಟನೆಗಳು ನಡೆಯುತ್ತವೆ. ನಾವು ಹುಟ್ಟಿದಂದಿನಿಂದ ಜೀವನದ ಪ್ರತಿಯೊಂದು ಹಂತದಲ್ಲೂ ಹಲವು ಪಾಠ ಕಲಿಯುತ್ತೇವೆ. ಶಿಶುವಿನಿಂದ ಹಿಡಿದು ನಮ್ಮ ವ್ಯಕ್ತಿತ್ವ ವಿಕಸನ ಆಗುವವರೆಗೆ ಪ್ರತಿಯೊಂದು ಹಂತದಲ್ಲೂ ನಾವು ಜಾಗರೂಕತೆಯಿಂದ ಇರಬೇಕಾಗುತ್ತದೆ.

ಸೌಲಭ್ಯಗಳ ದುರುಪಯೋಗ
ತಾನಿರುವಲ್ಲಿಯೇ ದೇಶ ವಿದೇಶಗಳಲ್ಲಿ ನಡೆಯುವ ಪ್ರಮುಖ ವಿಷಯಗಳನ್ನು ಕ್ಷಣಾರ್ಧದಲ್ಲಿ ಸ್ಮಾಟ್‌ ಫೋನ್‌ ಮೂಲಕ ತಿಳಿಯುತ್ತೇವೆ. ವಾರಗಟ್ಟಲೆ ಪತ್ರಕ್ಕಾಗಿ ಕಾಯುವ ಪ್ರಮೇಯವೇ ಇಂದಿಲ್ಲ. ವಾಟ್ಸಾéಪ್‌, ಫೇಸ್‌ಬುಕ್‌, ಟ್ವೀಟರ್‌ಗಳ ಮೂಲಕ ಸಂದೇಶ ತ್ವರಿತವಾಗಿ ರವಾನೆಯಾಗುತ್ತಿದೆ. ಶಾಪಿಂಗ್‌ ಮಾಲ್‌ಗೆ ತೆರಳದೆ ಆನ್‌ಲೈನ್‌ನಲ್ಲಿ ಬೇಕಾದ ವಸ್ತುವನ್ನು ನಮ್ಮ ಮನೆಗೇ ತರಿಸಿಕೊಳ್ಳುವಷ್ಟು ನಾವು ಮುಂದುವರಿದಿದ್ದೇವೆ. ಆದರೆ ವಿಜ್ಞಾನ, ತಂತ್ರಜ್ಞಾನ ಎಷ್ಟೇ ಮುಂದುವರಿದಿದ್ದ‌ರೂ ಮನುಷ್ಯನ ಮಾನಸಿಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಿದೆ. ಸೌಲಭ್ಯಗಳನ್ನು ದುರುಪಯೋಗ ಪಡಿಸಿಕೊಳ್ಳುವ ಮೂಲಕ ತೃಪ್ತಿಪಡುತ್ತೇವೆ.

ಮಕ್ಕಳಲ್ಲಿ ಸಂಸ್ಕೃತಿ,
ಆದರ್ಶದ ಕೊರತೆ
ಕೆಲ ವರ್ಷಗಳ ಹಿಂದಿನ ಮಾತು. ಬೇರೆ ಚಾನೆಲ್‌ಗ‌ಳ ಹಾವಳಿ ಇಲ್ಲದೆ ಕೇವಲ ದೂರದರ್ಶನದಲ್ಲಿ ಮಾತ್ರ ವಾರಕ್ಕೊಮ್ಮೆ ಸಿನಿಮಾ ಪ್ರಸಾರವಾಗುತ್ತಿತ್ತು. ಆಗ ಎಲ್ಲರೂ ಮಾನಸಿಕವಾಗಿ ಸದೃಢರಾಗಿ ಇರುತ್ತಿದ್ದರು. ಯಾವುದೇ ಒತ್ತಡ ಇರುತ್ತಿರಲಿಲ್ಲ. ಇಂದಿನಂತೆ ನೂರಾರು ಆ್ಯಪ್‌, ಸ್ಮಾರ್ಟ್‌ ಫೋನ್‌ಗಳ ಹಾವಳಿ ಇರಲಿಲ್ಲ. ಆದರೆ ಇಂದು ಪರಿಸ್ಥಿತಿ ಹಾಗಿಲ್ಲ. ತಾಯಿ ತನ್ನ ಕೆಲಸ ಬಿಟ್ಟು ಟಿವಿ ಮುಂದೆ ಕೂರುತ್ತಿದ್ದರೆ, ತಂದೆ ಲ್ಯಾಪ್‌ಟಾಪ್‌ನಲ್ಲಿ ಮಗ್ನರಾಗಿರುತ್ತಾರೆ. ಹೀಗಾದಾಗ ಮಕ್ಕಳಿಗೆ ಸಂಸ್ಕೃತಿ, ದೇಶದ ಹಿರಿಮೆ, ಆದರ್ಶ ಬೋಧಿಸುವುದಕ್ಕೆ ಇವರಿಗೆ ಸಮಯ ಎಲ್ಲಿಂದ ಬರಬೇಕು? ಈಗ ಕುಳಿತಲ್ಲೇ ಕೆಲಸ ಮಾಡುವುದರಿಂದ ದೈಹಿಕ ಶ್ರಮ ಇಲ್ಲದೆ ಬೊಜ್ಜಿನ ಸಮಸ್ಯೆಯೂ ಉಂಟಾಗಿದೆ. ಅಪ್ಪ, ಅಮ್ಮ, ಸುತ್ತಮುತ್ತಲಿನ ವಾತಾವರಣ ಅನುಸರಿಸುತ್ತಿರುವ ಮಗುವು ಅವರಿಂದ ಏನೂ ಪಡೆಯಲು ಸಾಧ್ಯವಿಲ್ಲ. ಮೊಬೈಲ್‌ ಬಳಕೆಯ ಅರಿವಿಲ್ಲದೆ ಮಗು ಗೇಮ್‌ ಆಡಲು ಹೋಗಿ ರೇಡಿಯಂ ಕಿರಣಗಳಿಗೆ ತುತ್ತಾಗಿ ನೆನಪಿನ ಶಕ್ತಿ ಕಳೆದುಕೊಳ್ಳುತ್ತದೆ. ಕೆಲವು ಧಾರಾವಾಹಿಗಳನ್ನು ನೋಡಿ ಅದನ್ನು ಅನುಕರಿಸಲು ಹೋಗಿ ಹಲವು ಮಕ್ಕಳು ಜೀವ ಕಳೆದುಕೊಂಡಿರುವ ಉದಾಹರಣೆಯೂ ನಮ್ಮಲ್ಲಿದೆ.

ಹಿಂದೆ ಮನೆಯಲ್ಲಿ ಇರುವ ಸದಸ್ಯರ ನಡುವೆ ಅನುಬಂಧ, ಪ್ರೀತಿ, ವಾತ್ಸಲ್ಯ ಇರುತ್ತಿತ್ತು. ಅವರ ಬೇಡಿಕೆ, ಆಕಾಂಕ್ಷೆ ಒಂದೇ ಇರುತ್ತಿತ್ತು. ಪ್ರತಿಯೊಂದು ಹಂತದಲ್ಲೂ ಹಿರಿಯರ, ಅಪ್ಪ-ಅಮ್ಮನ ವಾತ್ಸಲ್ಯ ಇರುತ್ತಿತ್ತು. ಉತ್ತಮ ಪುಸ್ತಕ ಓದುವ ಹವ್ಯಾಸ, ಆರೋಗ್ಯ, ನೆಮ್ಮದಿಯ ಬದುಕು ಸಮಾಜಮುಖೀ ಕಾರ್ಯದಲ್ಲಿ ಯಾವುದೇ ಕಾರ್ಯಕ್ಕೂ ಹಿಂಜರಿಯದೆ ಸಹಾಯ ಮಾಡುತ್ತಿದ್ದರು. ಈಗ ಅದೆಲ್ಲವೂ ಮರೀಚಿಕೆಯಾಗಿದೆ.

Advertisement

ಗಳಿಕೆಯೇ ಅವಿಭಾಜ್ಯ ಅಂಗವಲ್ಲ
ಜೀವನದಲ್ಲಿ ಕಾರು, ಮಹಡಿ ಮನೆ, ಆಳುಕಾಳು, ಬಂಗಾರ ಇದ್ದರೆ ಮಾತ್ರ ಮಾನಸಿಕ ನೆಮ್ಮದಿ ಎಂಬ ತಪ್ಪು ಕಲ್ಪನೆ ಇದೆ. ಅದು ಎಷ್ಟೇ ಇದ್ದರೂ ಅದನ್ನು ಅನುಭವಿಸುವ ಅರ್ಹತೆಯೂ ಪಡೆದಿರಬೇಕು. ಚಿಂತೆಯೆಂಬ ಚಿತೆಯಿಂದಾಗಿ ಮೃದುವಾದ ಹಾಸಿಗೆಯಲ್ಲಿ ಮಲಗಿದ್ದರೂ ನಿದ್ರೆ ಬಾರದೆ ನಿದ್ರೆ ಮಾತ್ರೆ ತೆಗೆದುಕೊಂಡು ಮಲಗುವ ಅನಿವಾರ್ಯತೆ ಎದುರಾಗಿದೆ. ಬದುಕಿರುವ ತನಕವೂ ಆರೋಗ್ಯ ಇದ್ದರೆ ಅದಕ್ಕಿಂತ ದೊಡ್ಡ ಸಂಪತ್ತು ಮತ್ತೇನೂ ಇಲ್ಲ. ಬದುಕಿಗಾಗಿ ದುಡ್ಡಿನ ಆವಶ್ಯಕತೆ ಇದೆಯೇ ಹೊರತು ಬದುಕಿನ ಅವಿಭಾಜ್ಯ ಅಂಗವೇ ದುಡ್ಡಿನ ಗಳಿಕೆ ಅಲ್ಲ. ಎಷ್ಟೇ ಇದ್ದರೂ ಒಂದು ದಿನ ಬರಿಗೈಯಲ್ಲಿ ಹೋಗಬೇಕು. ನಮ್ಮಲ್ಲಿಯೇ ಇರುವ ಪ್ರೀತಿ ಬಿಟ್ಟು ಉಳಿದೆಲ್ಲೆಡೆ ಹುಡುಕುವುದು ತಪ್ಪು. ಮನಸ್ಸಿನ ನಿಯಂತ್ರಣ, ಅದರೊಂದಿಗೆ ಸಂಗೀತದ ನಿನಾದ, ಮಕ್ಕಳೊಡನೆ ಮುದ್ದಾದ ಮಾತು, ಆಟಪಾಠ ಎಲ್ಲವೂ ನೆಮ್ಮದಿಯ ಬದುಕಿಗೆ ಅವಶ್ಯ ಎನ್ನುವುದನ್ನು ಅರಿಯೋಣ.

-   ಜಯಾನಂದ ಅಮೀನ್‌, ಬನ್ನಂಜೆ

Advertisement

Udayavani is now on Telegram. Click here to join our channel and stay updated with the latest news.

Next