Advertisement

Gujarat: ಹಾಸ್ಟೆಲ್‌ಯೊಳಗೆ ನಮಾಜ್‌ ಮಾಡುತ್ತಿದ್ದ ವಿದ್ಯಾರ್ಥಿಗಳ ಮೇಲೆ ಹಲ್ಲೆಗೈದ ಗುಂಪು

12:10 PM Mar 17, 2024 | Team Udayavani |

ಅಹಮದಾಬಾದ್: ಹಾಸ್ಟೆಲ್‌ನಲ್ಲಿ ನಮಾಜ್‌ ಮಾಡುತ್ತಿದ್ದ ವಿದ್ಯಾರ್ಥಿಗಳ ಮೇಲೆ ಗುಂಪೊಂದು ದಾಳಿ ಮಾಡಿ, ಥಳಿಸಿರುವ ಘಟನೆ ಗುಜರಾತ್ ನಲ್ಲಿ ಶನಿವಾರ(ಮಾ.16 ರಂದು) ನಡೆದಿರುವುದು ವರದಿಯಾಗಿದೆ.

Advertisement

ಏನಿದು ಘಟನೆ: ಕ್ಯಾಂಪಸ್‌ನಲ್ಲಿ ಮಸೀದಿ ಇಲ್ಲದ ಕಾರಣಕ್ಕೆ ಗುಜರಾತ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿರುವ ಆಫ್ರಿಕಾ‌, ಅಫ್ಘಾನಿಸ್ತಾನ ಮತ್ತು ಉಜ್ಬೇಕಿಸ್ತಾನದ ವಿದ್ಯಾರ್ಥಿಗಳು ಹಾಸ್ಟೆಲ್‌ನಲ್ಲೇ ರಂಜಾನ್‌ ವಿಶೇಷ ಪ್ರಾರ್ಥನೆ (ತರಾವೀಹ್) ಮಾಡಿದ್ದಾರೆ. ಇದನ್ನರಿತ ಗುಂಪೊಂದು ಹಾಸ್ಟೆಲ್‌ ನೊಳಗೆ ನುಗ್ಗಿದೆ. ಭದ್ರತಾ ಸಿಬ್ಬಂದಿಯನ್ನು ತಳ್ಳಿಕೊಂಡು ಕೋಲು ಮತ್ತು ಚಾಕುಗಳನ್ನು ಹಿಡಿದುಕೊಂಡು ಹಾಸ್ಟೆಲ್‌ ಕೋಣೆಗೆ ನುಗ್ಗಿ, ನಮಾಜ್‌ ಮಾಡುತ್ತಿದ್ದ ವಿದ್ಯಾರ್ಥಿಗಳನ್ನು ಥಳಿಸಿ, ಕೋಣೆಯನ್ನು ಧ್ವಂಸ ಮಾಡಿ, ಧಾರ್ಮಿಕ ಘೋಷಣೆಗಳನ್ನು ಕೂಗಿದ್ದಾರೆ. ಹಾಸ್ಟೆಲ್‌ನಲ್ಲಿ ನಮಾಜ್ ಮಾಡಲು ಯಾರು ಅನುಮತಿಸಿದರು ಎಂದು ಕೇಳಿ ವಿದ್ಯಾರ್ಥಿಗಳ ಮೇಲೆ ಹಲ್ಲೆಗೈದಿದ್ದಾರೆ.

ಘಟನೆಯಲ್ಲಿ ಅಫ್ಘಾನಿಸ್ತಾನ, ಶ್ರೀಲಂಕಾ ಮತ್ತು ತುರ್ಕಮೆನಿಸ್ತಾನ್‌ನ ತಲಾ ಒಬ್ಬರು ಮತ್ತು ಆಫ್ರಿಕನ್ ದೇಶಗಳ ಒಟ್ಟು ಐದು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.

“ಕೋಣೆಯೊಳಗೆ ನಮ್ಮ ಮೇಲೆ ಹಲ್ಲೆ ನಡೆಸಿದರು, ಅವರು ನಮ್ಮ ಲ್ಯಾಪ್‌ಟಾಪ್‌ಗಳು, ಫೋನ್‌ಗಳು ಮತ್ತು ಬೈಕ್‌ಗಳಿಗೆ ಹಾನಿ ಮಾಡಿದ್ದಾರೆ” ಎಂದು ಹಲ್ಲೆಗೊಳಗಾದ ವಿದ್ಯಾರ್ಥಿಯೊಬ್ಬರು ಹೇಳಿದ್ದಾರೆ.

ಘಟನೆಯ ಅರ್ಧ ಗಂಟೆಯ ನಂತರ ಪೊಲೀಸರು ಬಂದಿದ್ದಾರೆ. ಅಷ್ಟರೊಳಗೆ ಗುಂಪು ಸ್ಥಳದಿಂದ ಪರಾರಿ ಆಗಿದೆ. ಗಾಯಗೊಂಡ ವಿದ್ಯಾರ್ಥಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿ ತಿಳಿಸಿದೆ.

Advertisement

ವಿದ್ಯಾರ್ಥಿಗಳ ಲ್ಯಾಪ್‌ ಟಾಪ್‌, ಮೊಬೈಲ್‌ ಹಾಗೂ ಹಾಸ್ಟೆಲ್‌ ಗೆ ಕಲ್ಲೆಸಿದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಸದ್ಯ ಘಟನೆಯ ಬಗ್ಗೆ ಆಕ್ರೋ ವ್ಯಕ್ತವಾಗಿದ್ದು, ರಾಜ್ಯ ಗೃಹ ಸಚಿವ ಹರ್ಷ ಸಾಂಘವಿ ಅವರು ಈ ಬಗ್ಗೆ ಗುಜರಾತ್‌ನ ಉನ್ನತ ಪೊಲೀಸ್ ಅಧಿಕಾರಿಗಳೊಂದಿಗೆ ಮಾತನಾಡಿದ್ದಾರೆ. ಆರೋಪಿಗಳನ್ನು ಆದಷ್ಟು ಬೇಗ ಬಂಧಿಸಲು ಮತ್ತು ನ್ಯಾಯಯುತ ತನಿಖೆಯನ್ನು ನಡೆಸಲು ಅವರಿಗೆ ನಿರ್ದೇಶನ ನೀಡಿದ್ದಾರೆ ಎಂದು ವರದಿಯಾಗಿದೆ.

ಹೈದರಾಬಾದ್ ಸಂಸದ ಮತ್ತು ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಘಟನೆಯನ್ನು ಖಂಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಮಧ್ಯಸ್ಥಿಕೆ ವಹಿಸುತ್ತಾರೆಯೇ ಎಂದು ಪ್ರಶ್ನಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next