Advertisement

ನ್ಯಾಯಬೆಲೆ ಲಗತ್ತಿಗೆ ಕೈ ಹಾಕಿದ ಶಾಸಕರು!!

06:22 PM Aug 02, 2021 | Team Udayavani |

ಸಿಂಧನೂರು: ಸರಕಾರದ ನಿಯಮದನ್ವಯ ಒಬ್ಬರಿಗೆ ಒಂದೇ ನ್ಯಾಯಬೆಲೆ ಅಂಗಡಿ ನೀಡುವ ಅವಕಾಶವಿದೆ. ಆದರೆ ತಾಲೂಕಿನಲ್ಲಿ ಐದಾರು ಅಂಗಡಿಗಳನ್ನು ಒಬ್ಬರಿಗೆ ಲಗತ್ತು ಮಾಡುವ ನಿಯಮ ಬಾಹಿರ ಕ್ರಮದ ವಿರುದ್ಧ ಶಾಸಕದ್ವಯರು ಧ್ವನಿ ಎತ್ತಿದ ಬಳಿಕ ವ್ಯಾಪಕ ಸಂಚಲನ ಮೂಡಿದೆ.

Advertisement

ನಿರುದ್ಯೋಗ ನಿವಾರಿಸುವ ನಿಟ್ಟಿನಲ್ಲಿ ವಿದ್ಯಾವಂತರಿಗೆ ನ್ಯಾಯಬೆಲೆ ಅಂಗಡಿಯ ಪ್ರಾ ಕಾರಣ (ಲೈಸೆನ್ಸ್‌) ನೀಡುವ ಪದ್ಧತಿ ಹಳಿ ತಪ್ಪಿದ ಬಗೆ ಕೊನೆಗೂ ಚರ್ಚೆಗೆ ಗ್ರಾಸವಾಗಿದೆ. ಸರಕಾರದ ನಿಯಮ ಪ್ರಕಾರ ಒಬ್ಬರಿಗೆ ಒಂದಕ್ಕಿಂತಲೂ ಹೆಚ್ಚಿಗೆ ನ್ಯಾಯಬೆಲೆ ಅಂಗಡಿಗಳ ಉಸ್ತುವಾರಿ ವಹಿಸಲು ಅವಕಾಶವೇ ಇಲ್ಲ. ಆದರೂ, ಇದನ್ನು ನಡೆಸಿಕೊಂಡು ಹೊರಟಿದ್ದ ಆಹಾರ ಇಲಾಖೆಯ ಬಣ್ಣವನ್ನು ಶಾಸಕರು ಬಯಲು ಮಾಡಿದ್ದಾರೆ.

ತಾಲೂಕಿನ 26 ಜನರಿಗೆ ಧಮಕಾ?: ತಾಲೂಕಿನಲ್ಲಿ 156 ನ್ಯಾಯಬೆಲೆ ಅಂಗಡಿಗಳಿವೆ. ಅದರಲ್ಲಿ 40 ನ್ಯಾಯಬೆಲೆ ಅಂಗಡಿಗಳು ಮಸ್ಕಿ ವಿಧಾನಸಭೆ ಕ್ಷೇತ್ರಕ್ಕೆ ಸೇರಿವೆ. ಅವಿನ್ನೂ ಮಸ್ಕಿ ತಾಲೂಕಿಗೆ ವಿಭಜನೆ ಮಾಡಿಲ್ಲ. 26 ನ್ಯಾಯಬೆಲೆ ಅಂಗಡಿಯ ಸಂಚಾಲಕರಿಗೆ ಬಹುತೇಕ ಅಂಗಡಿಗಳನ್ನು ಲಗತ್ತು ಮಾಡಲಾಗಿದೆ.

ಅವರು ತಮಗೆ ಸಿಕ್ಕಿರುವ ಲೈಸೆನ್ಸ್‌ ಜತೆಗೆ ಅಕ್ಕಪಕ್ಕದ ಊರಿನ ಉಸ್ತುವಾರಿಯನ್ನು ವಹಿಸಿಕೊಂಡಿದ್ದಾರೆ. ಪಂಪನಗೌಡ ಗುಂಡಾ ಅವರಿಗೆ ಒಂದು ನ್ಯಾಯಬೆಲೆ ಅಂಗಡಿ ಪರವಾನಗಿ ಇದ್ದರೆ, ಅವರಿಗೆ ಎರಡು ಅಂಗಡಿಗಳನ್ನು ಲಗತ್ತು ನೀಡಲಾಗಿದೆ. ರಾಜಶೇಖರ ತುರುವಿಹಾಳ ಎಂಬುವರಿಗೆ ನಾಲ್ಕು ಅಂಗಡಿಗಳನ್ನು ವಹಿಸಲಾಗಿದೆ. ಶರಣಪ್ಪ ಉಪ್ಪಲದೊಡ್ಡಿ ಅವರಿಗೆ ಒಂದರ ಜತೆಗೆ ಮತ್ತೂಂದು ಅಂಗಡಿ ಲಗತ್ತಿಸಲಾಗಿದೆ. ವೀರಭದ್ರಯ್ಯ ಹಸ್ಮಕಲ್‌ ಅವರಿಗೂ ಮತ್ತೂಂದು ಅಂಗಡಿ ಹೆಚ್ಚುವರಿ ನೀಡಲಾಗಿದೆ.

ಮಹ್ಮದ್‌ ಅಲಿ ಬಳಗಾನೂರು ಅವರಿಗೆ ಹೆಚ್ಚುವರಿ ಎರಡು ನ್ಯಾಯಬೆಲೆ ಅಂಗಡಿಗಳಿವೆ. ಸಿದ್ದನಗೌಡ ಜಾಲವಾಡಗಿ, ಭೀಮನಗೌಡ ಬಾದರ್ಲಿ, ಸುರೇಶ ಪಾಟೀಲ್‌ ಚಿಂತಮಾನದೊಡ್ಡಿ, ಸುಖಮುನಿಯಪ್ಪ ಜವಳಗೇರಾ, ನರಸಣ್ಣ ಮಾಡಸಿರವಾರ, ಬಸಮ್ಮ 7ನೇ ಮೈಲ್‌ ಕ್ಯಾಂಪ್‌, ಮಂಜುಳಾ ದೇವಿ ಕ್ಯಾಂಪ್‌, ದುರ್ಗಾಪ್ರಸಾದ್‌ ಹಂಚಿನಾಳ ಕ್ಯಾಂಪ್‌, ಪ್ರಭುರಾಜ್‌ ಹಂಚಿನಾಳ ಕ್ಯಾಂಪ್‌, ಗುಂಡಪ್ಪ ಚಿಕ್ಕಬೇರಿY, ಗೋಪಾಲರಾವ್‌ ಲಕ್ಷ್ಮಿಕ್ಯಾಂಪ್‌, ರಾಮಕೃಷ್ಣ ದುರ್ಗಾ ಕ್ಯಾಂಪ್‌, ಟಿಎಪಿಸಿಎಂಎಸ್‌ಗೆ ಒಂದಕ್ಕಿಂತ ಹೆಚ್ಚು ಅಂಗಡಿಗಳಲ್ಲಿ ಪಡಿತರ ಆಹಾರ ದಾಸ್ತಾನು ವಿತರಣೆಗೆ ಅವಕಾಶ ನೀಡಲಾಗಿದೆ ಎಂದು ಆಹಾರ ಇಲಾಖೆ ಅಧಿಕಾರಿಗಳೇ ಮಾಹಿತಿ ಒದಗಿಸಿದ್ದಾರೆ.

Advertisement

ರಾಜಕೀಯ ಪ್ರಭಾವದ ಶಂಕೆ: ತಾಲೂಕಿನಲ್ಲಿ 50ಕ್ಕೂ ಹೆಚ್ಚು ಅಂಗಡಿಗಳನ್ನು ಬೇಕಿದ್ದವರಿಗೆ ಮಾತ್ರ ಲಗತ್ತು ಮಾಡಿ ಪಡಿತರ ಹಂಚಿಕೆಗೆ ಅವಕಾಶ ನೀಡಲಾಗಿದೆ. ಇದರ ಬೆನ್ನ ಹಿಂದೆ ರಾಜಕೀಯ ಪ್ರಭಾವ ಕೆಲಸ ಮಾಡಿದೆ ಎನ್ನುವ ಮಾತು ಕೇಳಿ ಬರುತ್ತಿದೆ. ಎರಡ್ಮೂರು ದಶಕಗಳಿಂದಲೂ ಆಹಾರ ಇಲಾಖೆಯೊಂದಿಗೆ ಪ್ರಭಾವ ಹೊಂದಿದ ಶಕ್ತಿಗಳು ವ್ಯವಸ್ಥೆಯನ್ನು ನಡೆಸಿಕೊಂಡು ಬಂದಿವೆ. ಇದೀಗ ನೇರವಾಗಿ ಒಬ್ಬರಿಗೆ ಒಂದೇ ಅಂಗಡಿ ಉಸ್ತುವಾರಿ ನೀಡಬೇಕೆಂಬ ಸಿಂಧನೂರು ಶಾಸಕ ವೆಂಕಟರಾವ್‌ ನಾಡಗೌಡ ಹಾಗೂ ಮಸ್ಕಿ ಶಾಸಕ ಆರ್‌.ಬಸನಗೌಡ ಅವರ ಸೂಚನೆಯನ್ನು ಅನುಷ್ಠಾನಗೊಳಿಸಲು ಅಧಿಕಾರಿಗಳು ಕಸರತ್ತು ನಡೆಸಿದ್ದಾರೆ.

ಮೂಲ ಅಂಗಡಿಕಾರರು ಎಲ್ಲಿ?: 50ಕ್ಕೂ ಹೆಚ್ಚು ಅಂಗಡಿಗಳ ನ್ಯಾಯಬೆಲೆ ಅಂಗಡಿ ವಿತರಣೆ ಪರವಾನಗಿ ಪಡೆದ ವ್ಯಕ್ತಿಗಳು ಈವರೆಗೂ ತಮ್ಮ ಕೆಲಸ ಆರಂಭಿಸಿಲ್ಲ. ಅವರು ಆರಂಭಿಸಲಿಕ್ಕೂ ಸಾರ್ವಜನಿಕ ದೂರು ಹಾಗೂ ಪ್ರಭಾವಗಳು ಕೈಬಿಡುತ್ತಿಲ್ಲವೆಂಬ ದೂರುಗಳಿವೆ. ನ್ಯಾಯಬೆಲೆ ಅಂಗಡಿಗಳಿಗೆ ಪ್ರಾಕಾರಣ ಅಧಿಕಾರ ನೀಡುವ ಕೆಲಸ ಜಿಲ್ಲಾಧಿಕಾರಿಗಳ ವ್ಯಾಪ್ತಿಗೆ ಒಳಪಟ್ಟಿದೆ. ನ್ಯಾಯಬೆಲೆ ಅಂಗಡಿಗಳು ಕೂಡ ರಾಜಕೀಯ ದಾಳವಾಗುತ್ತಿರುವ ಪರಿಣಾಮ ಹದಗೆಟ್ಟಿರುವ ಈ ವ್ಯವಸ್ಥೆಗೆ ಇದೀಗ ಚಿಕಿತ್ಸೆ ನೀಡುವ ಪ್ರಯತ್ನ ಆರಂಭವಾಗಿವೆ.

*ಯಮನಪ್ಪ ಪವಾರ

Advertisement

Udayavani is now on Telegram. Click here to join our channel and stay updated with the latest news.

Next