Advertisement

ಯಡಿಯೂರಪ್ಪ ಸಮ್ಮುಖದಲ್ಲೇ ತೇರದಾಳ ಬಿಜೆಪಿ ಭಿನ್ನಮತ ಸ್ಫೋಟ

08:44 PM Apr 13, 2022 | Team Udayavani |

ರಬಕವಿ-ಬನಹಟ್ಟಿ : ತೇರದಾಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಕಾರ್ಯಕರ್ತರ ದಂಡು ಬೆಳಗಾವಿಯ ಖಾಸಗಿ ಹೊಟೇಲ್‌ನಲ್ಲಿ ಬುಧವಾರ ನಡೆದ ಬಿಜೆಪಿ ಕೋರ್ ಕಮಿಟಿಯಲ್ಲಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗು ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಹಾಗು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ಬರುವ ಚುನಾವಣೆಯಲ್ಲಿ ಸ್ಥಳೀಯರಿಗೆ ಟಿಕೆಟ್ ನೀಡಬೇಕೆಂದು ಒತ್ತಾಯಿಸಲು ತೆರಳಿದ್ದ ವೇಳೆ ಕಾರ್ಯಕರ್ತರೊಂದಿಗೆ ಹಾಲಿ ಶಾಸಕ ಸಿದ್ದು ಸವದಿ ನಡೆಸಿದ ಮಾತು ವಾಗ್ವಾದಕ್ಕೆ ತಿರುಗಿದ್ದು,ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Advertisement

ನಡೆದಿದ್ದೇನು: ಹಳೆಯ ಕಾರ್ಯಕರ್ತರ ಮೇಲೆ ದೌರ್ಜನ್ಯ ಹಾಗು ಪಕ್ಷನಿಷ್ಠೆಆಗಿ ದುಡಿದ ಮುಖಂಡರಿಗೆ ನ್ಯಾಯ ಒದಗಿಸಬೇಕೆಂದು ಕೋರಿ ತೇರದಾಳ ಕ್ಷೇತ್ರದಿಂದ ತೇರದಾಳದ ಬಸವರಾಜ ಬಾಳಿಕಾಯಿ, ಬನಹಟ್ಟಿಯ ಭೀಮಶಿ ಮಗದುಮ್, ಮಹಾಲಿಂಗಪೂರದ ಶೇಖರ ಅಂಗಡಿ, ರಬಕವಿಯ ಬಸವರಾಜ ದಲಾಲ, ಆಸಂಗಿಯ ಹರ್ಷವರ್ಧನ ಪಟವರ್ಧನ ಸೇರಿದಂತೆ 30 ಕ್ಕೂ ಅಧಿಕ ಕಾರ್ಯಕರ್ತರು ತೆರಳಿದ್ದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ಮನವಿ ಅರ್ಪಿಸುವ ಸಂದರ್ಭದಲ್ಲಿ ಹಾಲಿ ಶಾಸಕ ಸಿದ್ದು ಸವದಿಯವರೊಂದಿಗೆ ಮಾತಿನ ವಾಗ್ವಾದ ನಡೆದು ಏಕವಚನಗಳ ಮಾತಿನ ಪ್ರಯೋಗದಿಂದ ಇರುಸು-ಮುರುಸಾಗಲು ಕಾರಣವಾಯಿತು.

ಕ್ಷೇತ್ರದಲ್ಲಿ ಬಿಜೆಪಿ ಪಕ್ಷ ಕಟ್ಟುವ ಸಂದರ್ಭ ಸಾಕಷ್ಟು ಪ್ರಕರಣಗಳನ್ನು ಮೈಮೇಲೆ ಹಾಕಿಕೊಂಡು ಶ್ರಮಿಸಿದ್ದೇವೆ. ಪಕ್ಷದ ಮುಖಂಡರೊಂದಿಗೆ ಸಾಧಕ-ಬಾಧಕಗಳ ಚರ್ಚೆ ಮುಕ್ತವಾಗಿದೆ. ಕಾರ್ಯಕರ್ತರ ಆಹ್ವಾನ ನಿಮಿತ್ತ ತೆರಳಿದ್ದೇವು. ಆ ಸಂದರ್ಭ ವಿನಾಕಾರಣ ಶಾಸಕ ಸವದಿಯವರು ಮನಬಂದಂತೆ ಅಶ್ಲೀಲ ಪದಬಳಕೆ ಮಾಡಿ ಕಾರ್ಯಕರ್ತರನ್ನು ಅವಮಾನಿಸಿದ್ದಾರೆ ಎಂದು ಬಸವರಾಜ ಬಾಳಿಕಾಯಿ ದೂರಿದರು.

ಇದೇ ಸಂದರ್ಭದಲ್ಲಿ ತೇರದಾಳ ಶಾಸಕ ಸಿದ್ದು ಸವದಿ ಮಾತನಾಡಿ, ಪಕ್ಷದ್ರೋಹಿಗಳ ಗುಂಪು ಪಕ್ಷದ ಅಂಗಳಕ್ಕೆ ಬಂದಿತ್ತು. ಜೆಡಿಎಸ್ ಪಕ್ಷದಲ್ಲಿದ್ದು, ಬಿಜೆಪಿಯಲ್ಲಿದ್ದೇನೆಂದು ನಾಟಕವಾಡುವದು ಎಷ್ಟು ಸರಿ? ಕಳೆದ 2013 ರಲ್ಲಿ ಕೆಜೆಪಿ ಪಕ್ಷದಿಂದ ಸ್ಪರ್ಧಿಸಿ ಅಲ್ಪಮತಗಳ ಅಂತರದ ಸೋಲಿಗೆ ಕಾರಣವಾದವನು ಅರ್ಹತೆಯಿಲ್ಲದೆ ಬಂದಿದ್ದಾರೆ.

Advertisement

ಉಂಡ ಮನೆಗೆ ಜಂತಿ ಎಣಿಸುವ ಜಾಯಮಾನದವರಾಗಿದ್ದು, ಪಕ್ಷದಿಂದಲೇ ಬಿಡಿಸಿಸಿ, ಕೆಎಂಎಫ್ ಸೇರಿದಂತೆ ಇತರೆ ಹುದ್ದೆಗಳನ್ನು ಅಲಂಕರಿಸಿ ಇದೀಗ ವಿರೋಧವಾಗುತ್ತಿದ್ದಾರೆ. ಸ್ಥಳೀಯ ಕಾರ್ಯಕರ್ತರು ಇವರಿಗೆ ಛೀಮಾರಿ ಹಾಕಿದ್ದು, ಹೈಕಮಾಂಡ್ ಮುಂದೆ ನೈತಿಕತೆಯಿಲ್ಲದಿದ್ದರೂ ಮೊಂಡತನ ಪ್ರದರ್ಶಿಸಿದ್ದಾರೆ.

ನಾನೇ ಪಕ್ಷದ ಅಭ್ಯರ್ಥಿ: ಹಿತಶತ್ರುಗಳಂತೆ ಬೆನ್ನಿಗೆ ಚೂರಿ ಹಾಕುವವರ ವಿರುದ್ಧ ಎಚ್ಚರವಾಗಿದ್ದೇನೆ. ಕ್ಷೇತ್ರದ ಮುಖಂಡರು, ಕಾರ್ಯಕರ್ತರ ಪಡೆಯ ಒತ್ತಾಯದಿಂದ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವದಷ್ಟೇ ಅಲ್ಲದೆ ಹಳೆಯ ಗೆಲುವಿನ ನನ್ನ ದಾಖಲೆಯನ್ನು ನಾನೇ ಮುರಿಯುತ್ತೇನೆ. ಇಂತಹ ಕೊಳತೆ ರೆಜೆಕ್ಟೆಡ್ ಗೂಡ್ಸ್ ನಂತೆ ಇವೆ. ಹತಾಶೆ ಭಾವನೆಯಿಂದ ಪಕ್ಷದ ಮುಖಂಡರ ಮುಂದೆ ಬಂದು ನಿಂತಿದ್ದಾರೆಂದು ಸವದಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next