Advertisement

ಪ್ಲಾಸ್ಲಿಕ್ ಮುಕ್ತ ಪರಿಸರದ ಜಾಗೃತಿಗಾಗಿ ಕೆರೆ ಹಬ್ಬ ನೆಪ: ಶಾಸಕ ಹಾಲಪ್ಪ

04:01 PM Mar 12, 2022 | Suhan S |

ಸಾಗರ: ಕೆರೆಹಬ್ಬ ಸಾಂಕೇತಿಕ ಮಾತ್ರ. ಕೆರೆಹಬ್ಬದ ಸಂದರ್ಭದಲ್ಲಿ ಜನರಲ್ಲಿ ಪರಿಸರ ಸ್ವಚ್ಛತೆ, ಪ್ಲಾಸ್ಲಿಕ್ ಮುಕ್ತ ಪರಿಸರ ಹಾಗೂ ಜಲಮೂಲ ಉಳಿಸುವ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಶಾಸಕ, ಎಂಎಸ್‌ಐಎಲ್ ಅಧ್ಯಕ್ಷ ಎಚ್.ಹಾಲಪ್ಪ ಹರತಾಳು ತಿಳಿಸಿದರು.

Advertisement

ಇಲ್ಲಿನ ಗಣಪತಿ ಕೆರೆ ಅಂಗಳದಲ್ಲಿ ಹಮ್ಮಿಕೊಳ್ಳಲಾಗಿದ್ದ ಕೆರೆ ಸ್ವಚ್ಛತೆ ಕುರಿತ ಕಾರ್ಯಕ್ರಮದಲ್ಲಿ ತಾವೇ ಸ್ವತಃ ಪಾಲ್ಗೊಂಡು ಮಾತನಾಡಿದ ಅವರು, ಗಣಪತಿ ಕೆರೆ ನಗರದ ಜಲನಾಡಿಯಾಗಿದ್ದು, ಜಲಮೂಲ ಸಂರಕ್ಷಿಸಿಕೊಳ್ಳುವ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಬೇಕು. ಒಂದು ಕಾಲದಲ್ಲಿ ಕೊಳಚೆ ನೀರು, ಪಾತಾಳಗಂಗೆ, ಹೂಳಿನಿಂದ ಮುಚ್ಚಿ ಹೋಗಿದ್ದ ಗಣಪತಿ ಕೆರೆ ಈಗ ಶುಭ್ರವಾಗಿ ನಳನಳಿಸುತ್ತಾ ಇದೆ. ಕಳೆದ ಎರಡು ವರ್ಷಗಳಿಂದ ಕೆರೆಹಬ್ಬ ಹೆಸರಿನಲ್ಲಿ ಗಣಪತಿ ಕೆರೆ ಸ್ವಚ್ಛತಾ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದ್ದು, ಕೆರೆಯಲ್ಲಿ ಈಗ ನೀರುನಾಯಿಗಳು ಸಹ ಕಾಣಿಸಿಕೊಂಡಿದೆ. ಇದರಿಂದಾಗಿ ಗಣಪತಿ ಕೆರೆ ಶುದ್ಧವಾಗಿದೆ ಎಂದು ಗೊತ್ತಾಗುತ್ತಿದೆ ಎಂದರು.

ಗಣಪತಿ ಕೆರೆ ಸುತ್ತಲೂ ವಾಕಿಂಗ್ ಟ್ರ್ಯಾಕ್ ನಿರ್ಮಿಸುವ ನಿಟ್ಟಿನಲ್ಲಿ ಕಾಮಗಾರಿ ನಡೆಯುತ್ತಿದೆ. ಕೆರೆಗೆ ಕೊಳಚೆ ನೀರು ಸೇರದಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಕೆರೆಯೊಳಗಿನ ಹೂಳು ತೆಗೆಯುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಒಟ್ಟಾರೆ ಇತಿಹಾಸ ಪ್ರಸಿದ್ಧವಾದ ಗಣಪತಿ ಕೆರೆಯನ್ನು ಪುನರುಜ್ಜೀವನಗೊಳಿಸುವ ನಿಟ್ಟಿನಲ್ಲಿ ಹಮ್ಮಿಕೊಂಡ ಕೆರೆ ಸ್ವಚ್ಛತಾ ಕಾರ್ಯದಲ್ಲಿ ಸಾರ್ವಜನಿಕರು, ಸಂಘಸಂಸ್ಥೆಗಳು, ವಿದ್ಯಾರ್ಥಿಗಳು ಸ್ವಯಂಪ್ರೇರಿತವಾಗಿ ಪಾಲ್ಗೊಳ್ಳುತ್ತಿರುವುದು ಕೆರೆ ಮಹತ್ವ ಎಲ್ಲರಿಗೂ ಅರ್ಥವಾಗಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ ಎಂದರು.

ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್, ಉಪಾಧ್ಯಕ್ಷ ವಿ.ಮಹೇಶ್, ಸದಸ್ಯರಾದ ಟಿ.ಡಿ.ಮೇಘರಾಜ್, ಬಿ.ಎಚ್.ಲಿಂಗರಾಜ್, ಸವಿತಾ ವಾಸು, ಗಣೇಶಪ್ರಸಾದ್, ಅರವಿಂದ ರಾಯ್ಕರ್, ಪೌರಾಯುಕ್ತ ರಾಜು ಡಿ. ಬಣಕಾರ್, ಸಹಾಯಕ ಕಾರ್ಯಪಾಲಕ ಅಭಿಯಂತರ ಎಚ್.ಕೆ.ನಾಗಪ್ಪ ಇನ್ನಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next