Advertisement

ಗುಂಡ್ಲುಪೇಟೆ ಮಾದರಿ ಕ್ಷೇತ್ರವಾಗಿಸುವುದೇ ಗುರಿ

03:38 PM Jun 04, 2023 | Team Udayavani |

ಚಾಮರಾಜನಗರ: ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುವುದು ನನ್ನ ಉದ್ದೇಶವಾಗಿದೆ ಎಂದು ನೂತನ ಶಾಸಕ ಎಚ್‌.ಎಂ. ಗಣೇಶ್‌ ಪ್ರಸಾದ್‌ ಹೇಳಿದರು.

Advertisement

ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಶನಿವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ, ತಂದೆಯವರು ನಿಧನರಾದ ಬಳಿಕ ತಾಯಿಯವರು ರಾಜಕಾರಣಕ್ಕೆ ಅನಿವಾರ್ಯವಾಗಿ ಬರಬೇಕಾಯಿತು. ಅವರು ಒಂದು ಬಾರಿ ಶಾಸಕಿಯಾಗಿದ್ದರು. ಅವರ ಆರೋಗ್ಯದಲ್ಲಿ ಏರುಪೇರಿನ ಕಾರಣ ವೈದ್ಯರು ವಿಶ್ರಾಂತಿ ತೆಗೆದು ಕೊಳ್ಳುವಂತೆ ಸೂಚಿಸಿದರು. ಹೀಗಾಗಿ ನಾನು ರಾಜಕಾರಣಕ್ಕೆ ಕಾಲಿಟ್ಟೆ. ಚುನಾವಣೆಯಲ್ಲಿ ಸ್ಪರ್ಧಿಸಿದೆ. ಕ್ಷೇತ್ರದ ಜನ ನನ್ನ ಮೇಲೆ ಅಪಾರ ನಿರೀಕ್ಷೆ ಇಟ್ಟು ಮೊದಲ ಸ್ಪರ್ಧೆಯಲ್ಲೇ ಭಾರಿ ಬಹುಮತ ನೀಡಿ ಗೆಲ್ಲಿಸಿದ್ದಾರೆ ಅವರ ನಿರೀಕ್ಷೆಗೆ ಚ್ಯುತಿ ಬರದಂತೆ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.

ಜನರ ಒತ್ತಾಯದ ಮೇರೆಗೆ ರಾಜಕೀಯಕ್ಕೆ: ನಮ್ಮ ತಂದೆಯವರಿಗೂ ಮನೆಯವರು ರಾಜಕಾರಣಕ್ಕೆ ಬರುವುದು ಇಷ್ಟವಿರಲಿಲ್ಲ. ಮನೆಯಲ್ಲಿ ರಾಜಕೀಯದ ಬಗ್ಗೆ ಮಾತು ಸಹ ಆಡುತ್ತಿರಲಿಲ್ಲ. ನಾನು ಬಿಕಾಂ ಪದವಿ ಮುಗಿಸಿ ಬ್ಯುಸಿನೆಸ್‌ ನಲ್ಲಿ ತೊಡಗಿಸಿಕೊಂಡಿದ್ದೆ. ಅದರಲ್ಲೇ ಮುಂದುವರೆಯಲಿ ಎಂಬುದು ತಂದೆಯವರ ಆಸೆಯಾಗಿತ್ತು. ಆದರೆ ಬದಲಾದ ಸನ್ನಿವೇಶದಲ್ಲಿ ಕ್ಷೇತ್ರದ ಜನರ ಒತ್ತಾಯದ ಮೇರೆಗೆ ನಾನು ರಾಜಕೀಯಕ್ಕೆ ಬರಬೇಕಾಯಿತು ಎಂದು ಹೇಳಿದರು.

ಕೇತ್ರದಲ್ಲಿ ಶೇ.40ಕ್ಕೂ ಹೆಚ್ಚಿನ ಭ್ರಷ್ಟಾಚಾರ: ಚುನಾವಣೆ ಮುಗಿದಿದೆ. ಪಕ್ಷ ರಾಜಕಾರಣ ಬಿಟ್ಟು ಅಭಿವೃದ್ಧಿಯತ್ತ ಗಮನ ಹರಿಸಿದ್ದೇನೆ.ಕಳೆದ ಐದು ವರ್ಷಗಳಲ್ಲಿ ಕೇತ್ರದಲ್ಲಿ ಶೇ.40ಕ್ಕೂ ಹೆಚ್ಚಿನ ಭ್ರಷ್ಟಾಚಾರ ನಡೆದಿದೆ. ಮೊದಲು ಇದನ್ನು ತೊಡೆದು ಹಾಕುವ ನಿಟ್ಟಿನಲ್ಲಿ ಅಧಿಕಾರಿಗಳ ಸಭೆ ಕರೆದು ಎಚ್ಚರಿಕೆ ನೀಡಿದ್ದೇನೆ. ಜನರಿಗೆ ತೊಂದರೆ ಕೊಡಬೇಡಿ. ಅಧಿಕೃತ ಶುಲ್ಕ ತೆಗೆದುಕೊಂಡು, ಜನರನ್ನು ಅಲೆಸದೇ ಕೆಲಸ ಮಾಡಿಕೊಡಿ. ಭ್ರಷ್ಟಾಚಾರದಿಂದ ಬೇಸತ್ತ ಜನರು, ಬದಲಾವಣೆ ಬಯಸಿ ಜನ ನನ್ನನ್ನು ಗೆಲ್ಲಿಸಿದ್ದಾರೆ. ಭ್ರಷ್ಟಾಚಾರ ಮಾಡಿದರೆ ನನಗೂ ಕೆಟ್ಟ ಹೆಸರು, ನಿಮಗೂ ಕೆಟ್ಟ ಹೆಸರು ಬರುತ್ತದೆ ಎಂದು ಎಚ್ಚರಿಸಿದ್ದೇನೆ ಎಂದರು.

ಬಾಕಿ ಉಳಿದಿರುವ ಕೆರೆಗಳಿಗೆ ನೀರು ತುಂಬಿಸುವುದು, ವಿದ್ಯುತ್‌ ಕಾಮಗಾರಿಗಳ ಪೂರ್ಣಗೊಳಿಸುವಿಕೆ, ವಿದ್ಯುತ್‌ ಕಂಬಗಳ ಬದಲಾವಣೆ, ಪಟ್ಟಣದ ಸ್ವಚ್ಚತೆಗೆ ಆದ್ಯತೆ ನೀಡುತ್ತೇನೆ, ಪಟ್ಟಣದಲ್ಲಿ ಟ್ರಾಫಿಕ್‌ ಸಮಸ್ಯೆ ನಿವಾರಿಸುವುದಕ್ಕೆ ಗಮನ ಹರಿಸುತ್ತೇನೆ ಎಂದು ಗಣೇಶ್‌ ತಿಳಿಸಿದರು.

Advertisement

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ದೇವರಾಜು ಕಪ್ಪಸೋಗೆ, ಪ್ರಧಾನ ಕಾರ್ಯದರ್ಶಿ ಗೌಡಹಳ್ಳಿ ಮಹೇಶ್‌ ಇದ್ದರು.

ಬೇಗೂರಿನಲ್ಲಿ ಟ್ರಾಮಾ ಸೆಂಟರ್‌ ನಿರ್ಮಾಣ: ಗುಂಡ್ಲುಪೇಟೆ ಮೈಸೂರು ರಾ.ಹೆದ್ದಾರಿಯಲ್ಲಿ ಅಪಘಾತಗಳು ಹೆಚ್ಚು ನಡೆಯುತ್ತಿವೆ. ಹಾಗಾಗಿ ಗುಂಡ್ಲುಪೇಟೆ ತಾಲೂಕಿನ ಬೇಗೂರಿನಲ್ಲಿ ಒಂದು ಟ್ರಾಮಾ ಸೆಂಟರ್‌ (ಅಪಘಾತ ಚಿಕಿತ್ಸಾ ಕೇಂದ್ರ) ಸ್ಥಾಪನೆಯಾಗಬೇಕಾಗಿದೆ. ಈ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿಗಳ ಜೊತೆ ಮಾತನಾಡಿದ್ದೇನೆ ಎಂದರು. ಇದಲ್ಲದೇ ಗುಂಡ್ಲುಪೇಟೆ ತಾಲೂಕು ಆಸ್ಪತ್ರೆಯಲ್ಲಿ ಒಂದು ಪೊಲೀಸ್‌ ಚೌಕಿ ನಿರ್ಮಿಸಲಾಗುವುದು ಎಂದರು.

ಸಣ್ಣ ಕೈಗಾರಿಕೆ ಅಗತ್ಯ: ಕ್ಷೇತ್ರದಲ್ಲಿ ನಿರುದ್ಯೋಗ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಗಾರ್ಮೆಂಟ್ಸ್‌ ಸಮುತ್ಛಯ, ಸಣ್ಣ ಕೈಗಾರಿಕೆ, ಗುಡಿ ಕೈಗಾರಿಕೆಗಳ ಸ್ಥಾಪನೆ ಮಾಡಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಕ್ಷೇತ್ರ ಅರಣ್ಯದಂಚಿನಲ್ಲಿರುವುದರಿಂದ ಮಾನವ ಪ್ರಾಣಿ ಸಂಘರ್ಷ ತಡೆಯಲು ಕ್ರಮ ಕೈಗೊಳ್ಳುವೆ, ಅಕ್ರಮ ಗಣಿಗಾರಿಕೆಗೆ ಅವಕಾಶ ನೀಡುವುದಿಲ್ಲ, ವಸತಿ ರಹಿತರಿಗೆ ಮನೆಗಳ ನಿರ್ಮಾಣ, ಶಾಲಾ ಕೊಠಡಿಗಳ ದುರಸ್ತಿಗೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಎಚ್‌ಎಸ್‌ಎಂ 100 ಅಂಕ, ನನಗೆ 70 ಅಂಕ: ಅಭಿವೃದ್ಧಿ ವಿಷಯದಲ್ಲಿ ನಿಮ್ಮ ತಂದೆಗೆ ಹೋಲಿಸಿದರೆ ನಿಮಗೆ ಎಷ್ಟು ಅಂಕ ಕೊಟ್ಟು ಕೊಳ್ಳುತ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಗಣೇಶ್‌ ಪ್ರಸಾದ್‌, ನಮ್ಮ ತಂದೆಯವರ ಮಟ್ಟ ಮುಟ್ಟಲು ನನಗೆ ಸಾಧ್ಯವಿಲ್ಲ. ಅಭಿವೃದ್ಧಿಯಲ್ಲಿ ಅವರಿಗೆ 100 ಅಂಕ ಕೊಟ್ಟರೆ, ನಾನು 60-70 ಅಂಕ ಗಳಿಸಲು ಪ್ರಯತ್ನ ಮಾಡುತ್ತೇನೆ. ಮಹದೇವಪ್ರಸಾದ್‌ ಅವರ ಮುನ್ನೋಟ, ಯೋಜನೆಗಳು ದೊಡ್ಡದಾಗಿದ್ದವು. ನಾನು ಅವರಂತೆ ಕೆಲಸ ಮಾಡಲು ಶ್ರಮಿಸುತ್ತೇನೆ ಎಂದರು. ಜಿಲ್ಲೆಗೆ ಸಚಿವ ಸ್ಥಾನ ನೀಡುವುದು ಮುಖ್ಯಮಂತ್ರಿಯವರಿಗೆ ಬಿಟ್ಟ ವಿಚಾರ. ನಾನು ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಬಯಸುವುದಿಲ್ಲ. ಕ್ಷೇತ್ರದ ಜನರು ನನ್ನನ್ನು ಎಂಎಲ್‌ಎ ಮಾಡಿದ್ದಾರೆ. ಅವರ ನಿರೀಕ್ಷೆಯಂತೆ ಕೆಲಸ ಮಾಡುವುದು, ಅವರಿಗೆ ಸುಲಭವಾಗಿ ಲಭ್ಯವಾಗುವುದೇ ನನ್ನ ಉದ್ದೇಶ. ಹಾಗಾಗಿ ನಿಗಮ ಮಂಡಳಿ ಸ್ಥಾನ ಬೇಡ ಎಂದರು.

ಗ್ರಾಮ ವಾಸ್ತವ್ಯದಿಂದ ಸಮಸ್ಯೆಗಳು ಬಗೆಹರಿಯುವುದಿಲ್ಲ. ಹಾಗಾಗಿ ಗ್ರಾಮ ವಾಸ್ತವ್ಯದ ಅಗತ್ಯವಿಲ್ಲ. ಕ್ಷೇತ್ರದ ಪ್ರತಿಯೊಂದು ಗ್ರಾಮಗಳ ಮುಖಂಡರ ಪರಿಚಯ ಇರುತ್ತದೆ. ಅವರು ತಮ್ಮ ಗ್ರಾಮದ ಪ್ರಮುಖ ಸಮಸ್ಯೆಗಳನ್ನು ಹೇಳುತ್ತಾರೆ. ಅದನ್ನು ಬಗೆಹರಿಸಬೇಕು. ನಾವು ಒಂದು ರಾತ್ರಿ ತಂಗಿದ ಮಾತ್ರಕ್ಕೆ ಎಲ್ಲ ಸಮಸ್ಯೆಗಳೂ ಬಗೆಹರಿಯುವುದಿಲ್ಲ ಎಂದು ಗಣೇಶ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next