Advertisement

ಶಿಕ್ಷಣ-ಸಂಸ್ಕೃತಿ-ಪ್ರೋತ್ಸಾಹವೇ ಕೇಂದ್ರದ ಧ್ಯೇಯ

04:58 PM Apr 26, 2022 | Team Udayavani |

ತರೀಕೆರೆ: ಜನಸಾಮಾನ್ಯರಿಗೆ ಮುಟ್ಟುವಂತಹ ಕೆಲಸಗಳನ್ನು ಹಮ್ಮಿಕೊಳ್ಳಬೇಕು ಎಂಬ ಹಂಬಲ ಮತ್ತು ಪ್ರಧಾನಿ ನರೇಂದ್ರ ಮೋದಿ ಆಶಯದಂತೆ ಇಡಿ ದೇಶದಲ್ಲಿ ತಾಲೂಕು ಮಟ್ಟದಲ್ಲಿ ಉಚಿತ ಆರೋಗ್ಯ ಶಿಬಿರಗಳನ್ನು ಆಯೋಜಿಸಲಾಗಿದೆ. ಜನರಿಗೆ ಉತ್ತಮ ವೈದ್ಯಕೀಯ ಸೇವೆ ಸಿಗಬೇಕು ಎನ್ನುವ ಗುರಿಯನ್ನು ಇಟ್ಟುಕೊಂಡು ಒಂದೇ ಸೂರಿನಡಿ ಜನರ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆ ನೀಡಲಾಗುತ್ತಿದೆ. ಅಭಿಯಾನಕ್ಕೆ ಸರಕಾರ ಹಣವನ್ನು ನಿಗದಿ ಮಾಡಿದೆ. ಶಿಕ್ಷಣ- ಸಂಸ್ಕೃತಿ ಮತ್ತು ಪ್ರೋತ್ಸಾಹ ನೀಡಬೇಕು ಎನ್ನುವುದು ಸರಕಾರದ ಗುರಿಯಾಗಿದೆ ಎಂದು ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ನುಡಿದರು.

Advertisement

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ತಾಲೂಕು ಆಡಳಿತದಿಂದ ಏರ್ಪಡಿಸಿದ್ದ 75ನೇ ಸ್ವಾತ್ರಂತ್ಯದ ಅಮೃತ ಮಹೋತ್ಸವ ಅಂಗವಾಗಿ ನಡೆದ ಉಚಿತ ಆರೋಗ್ಯ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಹೆಣ್ಣು ಮಕ್ಕಳು ಆನೇಕ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಯಾವುದಾದರೂ ತೊಂದರೆಗಳಿದ್ದರೂ ಕೂಡ ಅವು ಉಲ್ಬಣವಾಗುವ ತನಕ ಹೆಣ್ಣುಮಕ್ಕಳು ಹೇಳಿಕೊಳ್ಳುವುದಿಲ್ಲ. ಗರ್ಭಕೋಶ ಮತ್ತು ಸ್ತನ ಕ್ಯಾನ್ಸರ್‌ ರೋಗಕ್ಕೆ ತುತ್ತಾಗುತ್ತಿದ್ದಾರೆ. ಇಂತಹ ಕಾಯಿಲೆಗಳು ದೊಡ್ಡ ಪ್ರಮಾಣದಲ್ಲಿವೆ. ಇದಕ್ಕೆ ಕಾರಣಗಳು ತಿಳಿಯುತ್ತಿಲ್ಲ. ವಿಶೇಷ ತಜ್ಞರು ಇದಕ್ಕೆ ಉತ್ತರಿಸಬೇಕಾಗಿದೆ ಅಥವಾ ನಾವು ಬಳಸುತ್ತಿರುವ ಆಹಾರ ಮತ್ತು ವಾತಾವರಣ ಇದಕ್ಕೆ ಕಾರಣವೇ ಎಂದು ತಿಳಿಯಬೇಕಾಗಿದೆ ಎಂದರು.

ಇತ್ತೀಚಿನ ದಿನಗಳಲ್ಲಿ ಭೂಮಿ ಮತ್ತು ವಾತಾವರಣ ಕಲುಷಿತವಾಗಿದೆ. ಹಿಂದಿನ ದಿನಗಳಲ್ಲಿ ನಮ್ಮ ಹಿರಿಯರು ಸಾವಯವ ಕೃಷಿಗೆ ಹೆಚ್ಚು ಒತ್ತು ನೀಡಿದ್ದರು. ಜೊತೆಗೆ ಇಳುವರಿ ಕಡಿಮೆಯಾದರು ಕೂಡ ಉತ್ತಮ ಗುಣಮಟ್ಟದ ಆಹಾರ ಪದಾರ್ಥ ದೊರೆಯುತ್ತಿತ್ತು. ಆದರೆ ನಾವಿಂದು ರಾಸಾಯನಿಕ ಕೃಷಿಗೆ ಹೆಚ್ಚು ಒತ್ತು ನೀಡಿದ್ದೇವೆ. ಇದರಿಂದಾಗಿ ಭೂಮಿ ಮತ್ತು ಪರಿಸರದ ಮೇಲೆ ಪ್ರಭಾವ ಬೀರಿದೆ. ರಾಸಾಯನಿಕ ಔಷಧಿಗಳು ಮತ್ತು ರಸಗೊಬ್ಬರಗಳ ಬಳಕೆ ಇದಕ್ಕೆ ಕಾರಣ. ಇಡೀ ದೇಶಕ್ಕೆ ಹಸಿರು ಕ್ರಾಂತಿಯನ್ನು ಮಾಡಿದ ಪಂಜಾಬ್‌ ಮತ್ತು ಚಂಡೀಗಢದಲ್ಲಿ ಮನೆಗೊಬ್ಬರು ರೋಗಿ ಸಿಗುತ್ತಿದ್ದಾರೆ. ಇದಕ್ಕೆ ನಾವು ಬಳಸುತ್ತಿರುವ ಆಹಾರ ಕಾರಣ. ಇದರಿಂದ ನಾವು ಹೊರಬರಬೇಕಾದಲ್ಲಿ ನಾವು ಜೈವಿಕ ಹಾಗೂ ಸಾವಯವ ಪದ್ಧತಿಯಲ್ಲಿ ಆಹಾರವನ್ನು ಬೆಳೆದು ಅವುಗಳನ್ನು ಉಪಯೋಗಿಸಬೇಕಾಗಿದೆ ಎಂದರು.

ಸರ್ಕಾರ ಆಯುಷ್ಮಾನ್‌ ಭಾರತ್‌ ಯೋಜನೆಯಲ್ಲಿ 5 ಲಕ್ಷದ ತನಕ ಉತ್ತಮ ಗುಣಮಟ್ಟದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬಹುದಾಗಿದೆ. ತರೀಕೆರೆ ಸಾರ್ವಜನಿಕ ಆಸ್ಪತ್ರೆಯಲ್ಲಿ ನಿಮಿಷಕ್ಕೆ 500 ಲೀಟರ್‌ ಆಮ್ಲಜನಕವನ್ನು ಉತ್ಪಾದನಾ ಘಟಕವನ್ನು ಸ್ಥಾಪನೆ ಮಾಡಲಾಗಿದೆ. ಇಲ್ಲಿಯ ತನಕ ಇದಕ್ಕಾಗಿ 1.37 ಕೋಟಿ ವೆಚ್ಚವನ್ನು ಮಾಡಲಾಗಿದೆ ಎಂದರು.

Advertisement

ತಾಯಿ ಮತ್ತು ಮಗುವಿನ ಆರೋಗ್ಯವನ್ನು ಕಾಪಾಡಲು ಪಟ್ಟಣದಲ್ಲಿ 100 ಹಾಸಿಗೆಯ ತಾಯಿ- ಮಗು ಆಸ್ಪತ್ರೆಗೆ ಮಂಜೂರಾತಿ ನೀಡಲಾಗಿದೆ. ಸರಕಾರ ಎಲ್ಲಾ ರೀತಿಯ ಅನುಮೋದನೆಯನ್ನು ನೀಡಿದೆ. ಕೋವಿಡ್‌ ನಂತರ ನಾವು ಆಕ್ಸಿಜನ್‌ಗಾಗಿ ಪರದಾಟ ನಡೆಸಿದ್ದೆವು. ಜಿಲ್ಲಾ ಆಸ್ಪತ್ರೆಯಲ್ಲಿ ನಿಮಿಷಕ್ಕೆ 1000 ಲೀಟರ್‌ ಮತ್ತು ತರೀಕೆರೆಯಲ್ಲಿ 500 ಲೀಟರ್‌ ಸಾಮರ್ಥ್ಯದ ಆಕ್ಸಿಜನ್‌ ಘಟಕ ಸ್ಥಾಪಿಸಲಾಗಿದೆ. 4 ವೆಂಟಿಲೇಟರ್‌ ಘಟಕಗಳು ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಸದ್ಯದಲ್ಲೇ 22 ವೆಂಟಿಲೇಟರ್‌ ಘಟಕವನ್ನು ಸ್ಥಾಪನೆ ಮಾಡಲಾಗುವುದು ಎಂದರು.

ಶಾಸಕ ಡಿ.ಎಸ್. ಸುರೇಶ್‌ ಮಾತನಾಡಿ, ಮನುಷ್ಯನಲ್ಲಿ ಹಣವಿದ್ದರೆ ಏನಾದರೂ ಕೊಂಡುಕೊಳ್ಳಲು ಸಾಧ್ಯ. ಆದರೆ ಆರೋಗ್ಯವನ್ನು ಕೊಂಡುಕೊಳ್ಳಲು ಸಾಧ್ಯವಿಲ್ಲ. ನಮ್ಮ ಆರೋಗ್ಯವನ್ನು ನಾವು ಕಾಪಾಡಿಕೊಳ್ಳಬೇಕು ಎಂಬ ಕಾರಣಕ್ಕೆ ಎಲ್ಲರಿಗೂ ಆರೋಗ್ಯ ತಪಾಸಣೆ ನಡೆಯಬೇಕು ಎಂದು ಸರಕಾರ ಉಚಿತ ಆರೋಗ್ಯ ಮೇಳವನ್ನು ಆಯೋಜನೆ ಮಾಡಿದೆ ಎಂದರು.

ಕೋವಿಡ್‌ ಸಮಯದಲ್ಲಿ ರಕ್ತ ಪರೀಕ್ಷೆ ಜನರು ಹೊರ ಊರುಗಳಿಗೆ ಹೋಗಬೇಕಾಗಿತ್ತು. ಇದನ್ನು ಅರಿತು ಶಾಸಕರ ಅನುದಾನದಲ್ಲಿ 15 ಲಕ್ಷ ವೆಚ್ಚದಲ್ಲಿ ರಕ್ತ ಪರೀಕ್ಷಾ ಕೇಂದ್ರವನ್ನು ಸ್ಥಾಪಿಸಲಾಗಿದೆ. 406 ಕೋಟಿ ವೆಚ್ಚದಲ್ಲಿ 55 ಕೆರೆಗಳಿಗೆ ಭದ್ರಾ ಉಪಕಣಿವೆ ಯೋಜನೆಯಲ್ಲಿ ಪೈಪ್‌ಲೈನ್‌ ಮೂಲಕ ನೀರು ಹರಿಸುವ ಕಾಮಗಾರಿ ಆರಂಭವಾಗಿದೆ ಎಂದರು.

ಸಭೆಯನ್ನುದ್ದೇಶಿಸಿ ಜಿಲ್ಲಾಧಿಕಾರಿ ಕೆ.ಎಸ್. ರಮೇಶ್‌, ಸಿಇಒ ಜಿ.ಪ್ರಭು ಮಾತನಾಡಿದರು. ಸಭೆಯಲ್ಲಿ ಉಪವಿಭಾಗಾಧಿಕಾರಿ ಸಿದ್ಧಲಿಂಗ ರೆಡ್ಡಿ, ತಹಶೀಲ್ದಾರ್‌ ಮಹೇಂದ್ರ, ಅಜ್ಜಂಪುರ ತಹಶೀಲ್ದಾರ್‌ ವಿಶ್ವೇಶ್ವರ ರೆಡ್ಡಿ, ಇಒ ಟಿ.ಎಸ್.ಗಣೇಶ್‌, ವೈದ್ಯರಾದ ಡಾ| ಅಶ್ವಥ್‌, ಡಾ| ಭರತ್‌, ಡಿಸಿಎಫ್‌ ಶರಣಬಸಪ್ಪ, ತಾಲೂಕು ವೈದ್ಯಾಧಿಕಾರಿ ಡಾ| ಚಂದ್ರಶೇಖರ್‌, ಪುರಸಭೆ ಅದ್ಯಕ್ಷ ಟಿ.ಎಂ. ರಂಗನಾಥ್‌ ಇನ್ನಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next