Advertisement

ಮಿಸ್‌ ಯೂ ಫ್ರೆಂಡ್‌

10:10 PM May 09, 2019 | mahesh |

ಅದು ಪದವಿ ಜೀವನದ ಮುಕ್ತಾಯ. ಮುಕ್ತಾಯವೇ ಮುಂದಿನ ಹೊಸತನದ ಆರಂಭ. ಅಂದು 2017 ಮೇ ನನ್ನ ಪದವಿ ಜೀವನ ಮುಗಿದು ಗುರುಗಳ ಸಲಹೆಯಂತೆ ನನ್ನ ಇಷ್ಟದ ವಿಷಯವಾದ ಅರ್ಥಶಾಸ್ತ್ರ ಸ್ನಾತಕೋತ್ತರ ಅಧ್ಯಯನಕ್ಕೆಂದು ಮಡಿಕೇರಿಯಿಂದ ಮಂಗಳೂರು ವಿಶ್ವವಿದ್ಯಾನಿಲಯ ಕ್ಯಾಂಪಸ್‌ ಮಂಗಳಗಂಗೋತ್ರಿಗೆ ತೆರಳಿದೆ.

Advertisement

ಅದೇನೋ ಹೊಸತನ, ಹೊಸಜನ. ನನ್ನವರೂ ಯಾರೂ ಇಲ್ಲದ ಭಾವ, ಏಕಾಂಗಿಯಾಗಿ ನಾನು ಅಲ್ಲಿಗೆ ಬಂದರೆ ಮನದಲ್ಲಿ ಏನೋ ಭಯ, ಆದರೂ ಕಲಿಯಬೇಕೆಂಬ ಹಂಬಲ ನನ್ನನ್ನು ಅಲ್ಲಿ ಸ್ಥಿರವಾಗಿ ನಿಲ್ಲಿಸಿತ್ತು.

ನಾನು ಮೂಲತಃ ಕನ್ನಡ ಮಾಧ್ಯಮದ ಪುಟ್ಟ ಗ್ರಾಮದ ಹುಡುಗನಾಗಿದ್ದೆ. ಮೊದಲನೆ ಭಾರಿ ಮನೆಬಿಟ್ಟು ಬಹುದೂರದ ಹಾಸ್ಟೆಲ್‌ನಲ್ಲಿ ಇನ್ನು ಜೀವನ, ಇದನ್ನೂ ಊಹಿಸಿಯೇ ಇರಲಿಲ್ಲ ಬಿಡಿ. ಹಾಗೋ ಹೀಗೋ ಮೊದಲ ತರಗತಿ ಪ್ರಾರಂಭವಾಯಿತು. ಅಕ್ಕಪಕ್ಕದ ಜಿಲ್ಲೆಯವರೂ, ರಾಜ್ಯದವರು ಪರಿಚಿತರಾದರು.

ನಮ್ಮ ತರಗತಿಯಲ್ಲಿ ಒಬ್ಬ ವಿದೇಶಿ ವಿದ್ಯಾರ್ಥಿ! ಆತನನ್ನು ಕಂಡು ಅಚ್ಚರಿ, ಮಾತನಾಡಿಸಬೇಕೆಂಬ ಹಂಬಲ. ಆದರೆ ಹೇಗೆ ? ನನಗೆ ಇಂಗ್ಲಿಶ್‌ ಜ್ಞಾನ ಅಷ್ಟಕ್ಕಷ್ಟೆ ಆಗಿತ್ತು. ಕೊನೆಗೆ ಹೇಗೋ ಮಾತನಾಡಲು ಪ್ರಾರಂಭಿಸಿದೆ, ಆತನ ಹೆಸರು ಡೇನಿಸ್‌ ಮ್ಯಾಥ್ಯೂ ಸಿಲಾಯೊ. ದೇಶ ಆಫ್ರಿಕಾದ ತಾಂಜಾನಿಯಾ.

ದಿನಗಳು, ವಾರಗಳು ಕಳೆದವು. ನಮ್ಮಲ್ಲಿ ಸ್ನೇಹ ಬೆಳೆಯಿತು. ಅದೆಷ್ಟೋ ವಿಷಯಗಳನ್ನು ವಿನಿಮಯ ಮಾಡಿಕೊಂಡೆವು. ನಮ್ಮಿಬ್ಬರ ಊರಿನ, ದೇಶದ ಬಗ್ಗೆ ತಿಳಿದುಕೊಳ್ಳುತ್ತ ಸಾಗಿದೆವು. ನನಗೆ ಖುಷಿಯೋ ಖುಷಿ. ವಿದೇಶಿ ಪ್ರಜೆಯೊಬ್ಬ ಸ್ನೇಹಿತನಾಗಿ ಅದರಲ್ಲೂ ತರಗತಿಯ ಸಹಪಾಠಿಯಾಗಿದ್ದಾನೆಂದು. ನಾವಿಬ್ಬರು ಮುಂದಿನ ಬೆಂಚಿನಲ್ಲಿ ಅಕ್ಕಪಕ್ಕ ಕುಳಿತುಕೊಳ್ಳುತ್ತಿದ್ದೆವು. ಆತ ನನ್ನ ಜೀವನಕ್ಕೆ ಬೇಕಾದ ಅದೆಷ್ಟೋ ವಿಷಯಗಳನ್ನು ಕಲಿಸಿದ.

Advertisement

ಇಂಗ್ಲಿಷ್‌ ಕಲಿಯಲು ಕಷ್ಟಪಡುತ್ತಿದ್ದ ನನಗೆ ಆತ ಹೇಳಿದ್ದು ಇಷ್ಟೇ Don’t Worry ಎಂದು. ಆತ ದಿನಂಪ್ರತಿ ನನ್ನೊಡನೆ ಮಾತನಾಡುತ್ತಿದ್ದ. ನಾನು ಅವನಿಗೆ ಪ್ರೊಫೆಸರ್‌ ಮತ್ತು ತರಗತಿಯ ಇತರ ಸಹಪಾಠಿಗಳ ಕನ್ನಡದ ಮಾತನ್ನು ಅವನಿಗೆ ಇಂಗ್ಲಿಷ್‌ಗೆ ಅನುವಾದ ಮಾಡಿ ಹೇಳುತ್ತಿದ್ದೆ.

ನನಗೆ ಅರ್ಥಶಾಸ್ತ್ರದ ಬಗ್ಗೆ ಅನೇಕ ವಿಷಯ ಕಲಿಸಿದ. ಅವರ ಭಾಷೆ, ಆಚಾರ, ಆಹಾರದ ಬಗ್ಗೆ ತಿಳಿಸಿದ. ಅವನ ಮಾತೃಭಾಷೆ “ಸ್ವಹಿಲಿ’ಯ ಕೆಲವು ಪದಗಳನ್ನು ಹೇಳಿಕೊಟ್ಟ. ನಾನು ಅವನಿಗೆ ಕನ್ನಡದ ಕೆಲವು ಪದಗಳು ಹೇಳಿಕೊಟ್ಟಿದ್ದೆ. ಆತನ ಸ್ನೇಹ ಹೃದಯಕ್ಕೆ ಬಹಳ ಹತ್ತಿರವಾಗ ತೊಡಗಿತ್ತು. ನಾವಿಬ್ಬರು ಸಿಟಿ ಸೆಂಟರ್‌, ಮಾಲ್, ಬೀಚ್‌, ದೇವಾಲಯಗಳನ್ನು ಸುತ್ತಿದೆವು.

ಮತ್ತೂಂದು ಅಚ್ಚರಿಯ ಸಂಗತಿಯೆಂದರೆ ಆತನ ವಯಸ್ಸು 32. ಮದುವೆಯಾಗಿ ಒಂದು ಮಗುವಿನ ತಂದೆ ಆತ, ಮೂರು ವಾರದ ಮಗುವನ್ನು ಬಿಟ್ಟು ಕಲಿಕೆಯ ಉದ್ದೇಶದಿಂದ ಭಾರತಕ್ಕೆ ಬಂದಿದ್ದ. ಆತನ ಹಂಬಲ, ಶಿಕ್ಷಣ ಪಡೆಯುವ ತವಕ ನಮ್ಮ ತರಗತಿಯ ಎಲ್ಲರಿಗೂ ಸ್ಫೂರ್ತಿದಾಯಕ ವಿಷಯವಾಗಿತ್ತು. ದೇಶ-ಭಾಷೆ ಬೇರೆಯಾದರೂ ಆತನ ಮುಗ್ಧತೆ, ಒಳ್ಳೆಯ ಮನಸ್ಸು, ಸಮಾನತೆಯ ಭಾವ ಅವನಿಗಿಂತ 10 ವರ್ಷ ಚಿಕ್ಕವಯಸ್ಸಿನ ನನ್ನನ್ನು ಆತನ ಸ್ನೇಹಿತನಾಗುವಂತೆ ಮಾಡಿತ್ತು.

ಈಗ ನಮ್ಮ ಎರಡು ವರ್ಷದ ಸ್ನಾತಕೋತ್ತರ ತರಗತಿ ಈ ತಿಂಗಳಲ್ಲಿ ಮುಗಿಯುತ್ತಿದೆ. ಆತ ಆತನ ದೇಶಕ್ಕೆ ತೆರಳುತ್ತಿದ್ದಾನೆ. ನಾನು ನನ್ನೂರಿಗೆ ಪ್ರಯಾಣ ಬೆಳೆಸಬೇಕಾಗಿದೆ. ಮುಂದೆ ನಾನು-ಅವನು ಭೇಟಿಯಾಗಲು ಅದೆಷ್ಟು ಸಮಯ ಕಾಯಬೇಕಾಗಿದೆಯೋ ಗೊತ್ತಿಲ್ಲ. ಅವನನ್ನು ಮಿಸ್‌ ಮಾಡಿಕೋಳ್ಳುತ್ತಿದ್ದೇನೆ. ಹೃದಯ ಭಾರವಾಗುತ್ತಿದೆ. ಸಾವಿರಾರು ಕಿಲೋಮೀಟರ್‌ ಅಂತರದಲ್ಲಿ ನನ್ನ ಅವನ ಜೀವನ. ಭಾವಪೂರ್ಣ ವಿದಾಯದೊಂದಿಗೆ ಆತನನ್ನು ಬೀಳ್ಕೊಡಬೇಕಾಗಿದೆ. ಆತನ ಸ್ನೇಹ ನೆನಪು ಸದಾ ನನ್ನ ಹೃದಯದಲ್ಲಿದೆ.

ತಿಮ್ಮಯ್ಯ ಮೋನಿ, ಅರ್ಥಶಾಸ್ತ್ರ- ದ್ವಿತೀಯ ಎಂ. ಎ. ಮಂಗಳೂರು ವಿ. ವಿ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next