Advertisement

ಸಣ್ಣ ಪುಟ್ಟ ಸಮಸ್ಯೆಗಳೇ ನೀರು ಪೂರೈಕೆಗೆ ಕಂಟಕ

03:38 PM Apr 25, 2022 | Team Udayavani |

ಗುಳೇದಗುಡ್ಡ: ತಾಲೂಕಿನಲ್ಲಿ ಈ ಹಿಂದಿನಂತೆ ನೀರಿನ ಸಮಸ್ಯೆ ಕಂಡುಬರುತ್ತಿಲ್ಲ. ಆದರೆ, ಸಣ್ಣ ಪುಟ್ಟ ಸಮಸ್ಯೆಗಳೇ ನೀರು ಪೂರೈಕೆಗೆ ತೊಂದರೆಯಾಗುತ್ತಿವೆ. ಬೋರವೆಲ್‌ ಕೈ ಕೊಟ್ಟರೇ ತೆಗ್ಗಿ ಜನರಿಗೆ ಸಂಕಟ ತಪ್ಪಿದ್ದಲ್ಲ ಎನ್ನುವಂತಾಗಿದೆ.

Advertisement

ತಾಲೂಕಿನಲ್ಲಿ ಸುಮಾರು 35 ಗ್ರಾಮಗಳಿದ್ದು, 12 ಗ್ರಾಮ ಪಂಚಾಯತಿಗಳಿವೆ. ಅದರಲ್ಲಿ ಆರು ಪಂಚಾಯಿತಿಯ ಹಳ್ಳಿಗಳಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಜಾರಿಯಲ್ಲಿದೆ. ತಾಲೂಕಿನಲ್ಲಿ ಅಲ್ಲಲ್ಲಿ ನೀರಿನ ಸಮಸ್ಯೆ ಕಂಡು ಬರುತ್ತಿದೆ. ಆದರೆ, 3-4 ವರ್ಷಗಳ ಹಿಂದೆ ಕಂಡು ಬರುತ್ತಿದ್ದ ನೀರಿನ ಹಾಹಾಕಾರ ಈಗಿಲ್ಲ.

ತಾಲೂಕಿನ ಪಾದಾನಕಟ್ಟಿ, ಹಳದೂರ, ಕೋಟೆಕಲ್‌, ಲಾಯದಗುಂದಿ, ಆಸಂಗಿ, ಇಂಜಿನವಾರಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಮಲಪ್ರಭಾ ಘಟಪ್ರಭಾ ನದಿಗಳ ಮೂಲಕ ಇನ್ನೂ ಕೆಲ ಗ್ರಾಮಗಳಲ್ಲಿ ಬೋರವೆಲ್‌ ಮುಖಾಂತರ ನೀರಿನ ಸಂಪರ್ಕ ಕೊಡಲಾಗುತ್ತಿದೆ. ಆದರೆ, ಕೆಲ ಸಣ್ಣ ಪುಟ್ಟ ಸಮಸ್ಯೆಗಳೇ ನೀರು ಪೂರೈಕೆಗೆ ತೊಂದರೆಯಾಗುತ್ತಿದೆ. ಇದರಿಂದ ಆಗಾಗ ನೀರಿನ ಸಮಸ್ಯೆ ಕಂಡು ಬರುತ್ತಿದೆ. ಇದನ್ನು ಹೊರತು ಪಡಿಸಿದರೆ ಈಗ ಉತ್ತಮ ಎನ್ನಬಹುದು.

ಬಹುಗ್ರಾಮ ಯೋಜನೆ: ಬಹುಗ್ರಾಮ ಕುಡಿಯುವ ನೀರಿನ ಯೋಜನೆಯು, ಕೋಟೆಕಲ್‌, ಪರ್ವತಿ, ಲಾಯದಗುಂದಿ, ನಾಗರಾಳ ಎಸ್‌.ಪಿ., ಹಳದೂರ, ಹಾನಾಪುರ ಎಸ್‌.ಪಿ. ಈ ಪಂಚಾಯಿತಿಗಳಿಗೆ ನೀರು ಪೂರೈಸಲಾಗುತ್ತಿದೆ. ಈ ಯೋಜನೆ ವ್ಯಾಪ್ತಿಯಲ್ಲಿ ಸರಿಯಾಗಿ ನೀರು ಶುದ್ಧೀಕರಣಗೊಂಡಿರುವುದಿಲ್ಲ. ಘಟಕದಲ್ಲಿನ ಟ್ಯಾಂಕ್‌ ಸರಿಯಾಗಿ ಸ್ವತ್ಛಗೊಳಿಸುತ್ತಿಲ್ಲ. ಅಲ್ಲದೇ ಮಲಪ್ರಭೆಯಿಂದ ನೀರು ಎತ್ತಿ ಸಂಗ್ರಹಿಸುವ ದೊಡ್ಡ ಪ್ರಮಾಣದ ಕೆರೆಯನ್ನು ಸಮರ್ಪಕವಾಗಿ ಸ್ವತ್ಛಗೊಳಿಸಿಲ್ಲ. ಈ ಯೋಜನೆ ಜಾರಿಯಲ್ಲಿರುವ ಗ್ರಾಮಗಳಲ್ಲಿ ಸಮರ್ಪಕ ಪೈಪ್‌ಲೈನ್‌ ಮಾಡದಿರುವುದಕ್ಕೆ ನೀರು ಪೋಲಾಗುತ್ತಿದೆ ಎಂಬುದು ಜನರ ದೂರು.

ಮಲಪ್ರಭಾ ನದಿಯಿಂದ ನೀರು ಸಂಗ್ರಹಿಸಿ ಶುದ್ಧೀಕರಿಸಲು ಆಸಂಗಿ ಗ್ರಾಮದ ಹತ್ತಿರ ಮಾಡಿರುವ ಶುದ್ಧೀಕರಣ ಘಟಕದ ಕೆಲವು ಕಡೆಗಳಲ್ಲಿ ಪೈಪ್‌ಗ್ಳು ಲೀಕ್‌ ಆಗಿವೆ. ಅಲ್ಲದೇ ಶುದ್ಧೀಕರಣಗೊಂಡ ನಂತರ ತ್ಯಾಜ್ಯ ನೀರನ್ನು ಸರಿಯಾಗಿ ಹಳ್ಳಕ್ಕೆ ಸೇರಿಸುವ ಕೆಲಸ ಮಾಡಿಲ್ಲ. ಇದರಿಂದ ಶುದ್ಧೀಕರಣಗೊಂಡ ನೀರನ್ನು ಸಂಗ್ರಹಿಸುವ ಟ್ಯಾಂಕ್‌ ಸುತ್ತಲು ಬಂದು ನಿಲ್ಲುತ್ತಿದೆ. ಬ್ಯಾಕ್‌ ವಾಶ್‌ ಟ್ಯಾಂಕ್‌ ಸ್ವತ್ಛಗೊಳಿಸಲು ಸರಿಯಾದ ಉಪಕರಣಗಳಿಲ್ಲ.

Advertisement

ಮುರುಡಿಗಿಲ್ಲ ನೀರು: ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮುರುಡಿ ಗ್ರಾಮಕ್ಕೆ ಅನ್ವಯಿಸಿದರೂ ಕಳೆದ 3-4 ವರ್ಷಗಳಿಂದ ನೀರು ಕೊಟ್ಟಿಲ್ಲ. ಬೊರವೆಲ್‌ ನೀರನ್ನೇ ಜನರು ಬಳಸುತ್ತಿದ್ದಾರೆ. ಗ್ರಾಮದಲ್ಲಿ ಸಮರ್ಪಕ ಪೈಪ್‌ಲೈನ್‌ ಇಲ್ಲದಿರುವುದರಿಂದ ಬಹುಗ್ರಾಮ ಯೋಜನೆ ಇದ್ದು ಇಲ್ಲದಂತಾಗಿದೆ. ಆ ನೀರನ್ನೇ ಇಲಾಖೆ ಟ್ಯಾಂಕ್‌ಗೆ ಬಿಡುತ್ತಿದೆ. ಆದರೆ, ಟ್ಯಾಂಕ್‌ ದುರಸ್ತಿ ಇದ್ದ ಕಾರಣ ನೀರು ಸೋರಿಕೆಯಾಗುತ್ತಿದೆ. ಗ್ರಾಮದಲ್ಲಿ ಶುದ್ಧೀಕರಣ ಘಟಕ ಇದ್ದರೂ ಇಲ್ಲದಂತಾಗಿದೆ. ಕೊಳವೆಬಾವಿ ಕೈ ಕೊಟ್ಟರೇ ತೆಗ್ಗಿ ಗ್ರಾಮಕ್ಕೆ ಸಂಕಟ: ತೆಗ್ಗಿ ಗ್ರಾಮಕ್ಕೆ ಸದ್ಯ ಬೊರವೆಲ್‌ ಆಸರೆಯಾಗಿದೆ. ತೆಗ್ಗಿ ಗ್ರಾಮಕ್ಕೆ 5 ಕಿ.ಮೀ ದೂರದಲ್ಲಿರುವ ಬೇಡರಬೂದಿಹಾಳ ಗ್ರಾಮದ ಹತ್ತಿರ ಇರುವ ಬೋರವೆಲ್‌ ಮುಖಾಂತರ ನೀರು ಪೂರೈಸಲಾಗುತ್ತಿದೆ. ಆದರೆ, ಈ ನೀರು ಜನರಿಗೆ ಸಾಕಾಗುವುದಿಲ್ಲ. ದನಕರುಗಳಿಗೆ ಎಲ್ಲಿಂದ ನೀರು ತರಬೇಕೆಂಬ ಚಿಂತೆ ಗ್ರಾಮಸ್ಥರ ಕಾಡುತ್ತಿದೆ. ತೆಗ್ಗಿ ಗ್ರಾಮದಲ್ಲಿ ಸುಮಾರು 1300ಕ್ಕೂ ಹೆಚ್ಚು ಜನಸಂಖ್ಯೆ ಇದ್ದು, ಒಂದೇ ಬೋರವೆಲ್‌ನಿಂದ ನೀರು ಕೊಡಲಾಗುತ್ತಿದೆ. ಆ ಬೋರವೆಲ್‌ ಕೈ ಕೊಟ್ಟರೇ ಜನರಿಗೆ ಸಂಕಟ ತಪ್ಪಿದ್ದಲ್ಲ.

ಜೆಜೆಎಂ ಅಡಿಯಲ್ಲಿ ಟೆಂಡರ್‌ ಕರೆಯಲಾಗಿದೆ. ಈ ಯೋಜನೆ ಅಡಿಯಲ್ಲಿ ನೀರು ಸಂಗ್ರಹಿಸುವ ಕೆರೆ ಸ್ವತ್ಛಗೊಳಿಸುವುದು, ಟ್ಯಾಂಕ್‌ ನಿರ್ಮಾಣ, ಪೈಪ್‌ಲೈನ್‌ ಸೇರಿದಂತ ಕೆಲಸ ಮಾಡಲಾಗುತ್ತದ. ಸಬ್ಬಲಹುಣಸಿ, ಇಂಜಿನವಾರಿಯಲ್ಲಿ ಟ್ಯಾಂಕ್‌ ನಿರ್ಮಿಸಲಾಗುವುದು. ಮಲಪ್ರಭಾ ನದಿಗೆ ಬೆಣ್ಣಿ ಹಳ್ಳದ ನೀರು ಸೇರುವುದರಿಂದ ನೀರು ರಾಡಿಯಾಗಿರುತ್ತದೆ. ನೀರನ್ನು ಲ್ಯಾಬ್‌ನಲ್ಲೂ ಟೆಸ್ಟಿಂಗ್‌ ಮಾಡಿಸುತ್ತ ಬಂದಿದ್ದೇವೆ. ರಾಡಿ ಬಂದಾಗ ಕೆಲವು ಸಲ ನೀರು ರಾಡಿಯಾಗಿರುತ್ತದೆ. ಟ್ಯಾಂಕ್‌ ಸ್ವತ್ಛಗೊಳಿಸಲು ಸಹ ನಾವು ಸೂಚಿಸಿದ್ದೇವೆ. ಮುರುಡಿಯಲ್ಲಿ ಟ್ಯಾಂಕ್‌ಗೆ ನೀರು ಬಿಡುತ್ತಿದ್ದೇವೆ. ನೀರು ಸೋರಿಕೆಯಾಗುತ್ತಿದ್ದು, ಟ್ಯಾಂಕ್‌ ರಿಪೇರಿ ಮಾಡಿಸಲು ಪಂಚಾಯಿತಿಯವರಿಗೆ ತಿಳಿಸಿದ್ದೇವೆ. –ಎನ್‌.ಎಸ್‌. ಪತಂಗಿ, ಸಹಾಯಕ ಇಂಜಿನಿಯರಿಂಗ್‌-2

ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ವಿಭಾಗ ಬಾದಾಮಿ ಟ್ಯಾಂಕ್‌ ಸ್ವತ್ಛಗೊಳಿಸುತ್ತ ಬಂದಿದ್ದೇವೆ. ಶುದ್ಧೀಕರಣ ಘಟಕದಲ್ಲಿ ಪ್ರತಿ ಹಂತದಲ್ಲೂ ನೀರನ್ನು ಪರೀಕ್ಷೆಸುತ್ತಿದ್ದೇವೆ. ಲ್ಯಾಬ್‌ಗ ತಿಂಗಳಿಗೊಮ್ಮೆ ಪರೀಕ್ಷೆಗೆ ಕಳಿಸುತ್ತೇವೆ. ಕ್ಲೋರಿನ್‌, ಬ್ಲಿಚಿಂಗ್‌ ಪೌಡರ್‌ ಹಾಕುತ್ತೇವೆ. ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ವಿಭಾಗ ಬಾದಾಮಿಯವರು ಮಾರ್ಗಸೂಚಿ ಪ್ರಕಾರವೇ ನೀರು ಶುದ್ಧೀಕರಣ ಮಾಡಿ, ಜನರಿಗೆ ನೀರು ಬಿಡುತ್ತಿದ್ದೇವೆ. –ಎಸ್‌.ಎನ್‌.ಕುರಿ, ಸೈಟ್‌ ಇಂಜಿನಿಯರ್‌ ಕನ್ಸಲ್‌ಟಂಟ್ಸ್‌

ಸದ್ಯ ತೆಗ್ಗಿ ಗ್ರಾಮಕ್ಕೆ ಒಂದು ಬೋರವೆಲ್‌ ಮುಖಾಂತರ ನೀರು ಕೊಡುತ್ತಿದ್ದೇವೆ. ಗ್ರಾಮಕ್ಕೆ ನೀರು ಪೂರೈಸಲು ಬೇಡರಬೂದಿಹಾಳ ಗ್ರಾಮದ ಹತ್ತಿರ ಬೋರವೆಲ್‌ ಕೊರೆಯಿಸಿದ್ದು, ಪೈಪ್‌ಲೈನ್‌ ಮಾಡಿ ನೀರು ಕೊಡಲಾಗುವುದು.  –ನಾಗಪ್ಪ ಮನಗೂಳಿ, ಕೆಲವಡಿ

ಗ್ರಾಪಂ ಅಧ್ಯಕ್ಷ ಮುರುಡಿ ಗ್ರಾಮದಲ್ಲಿ 3-4 ವರ್ಷಗಳಿಂದ ಸರಿಯಾಗಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ನೀರು ಸಿಕ್ಕಿಲ್ಲ. ಗ್ರಾಮದಲ್ಲಿ ಸರಿಯಾಗಿ ಪೈಪ್‌ಲೈನ್‌ ಮಾಡಿಲ್ಲ. ಕೂಡಲೇ ಪಂಚಾಯಿತಿಯವರು ಶುದ್ಧೀಕರಣ ಘಟಕ ಆರಂಭಿಸಿ, ಜನರಿಗೆ ನೀರು ನೀಡಬೇಕು.  –ಬಸವರಾಜ ದಳವಾಯಿ, ಮುರುಡಿ ಗ್ರಾಮಸ್ಥ

-ಮಲ್ಲಿಕಾರ್ಜುನ ಕಲಕೇರಿ

Advertisement

Udayavani is now on Telegram. Click here to join our channel and stay updated with the latest news.

Next